
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್
ಬಂಗಾಳದಲ್ಲಿ ಟಿಎಂಸಿಗೆ ಸೋಲು; ಐ-ಪ್ಯಾಕ್ ಜೊತೆಗಿನ ಒಪ್ಪಂದ ರದ್ದುಗೊಳಿಸಿದ ಸಮಾಜವಾದಿ ಪಕ್ಷ
ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿನ ಹಿನ್ನಡೆಯ ನಂತರ, ಹೊರಗಿನವರ ಮೇಲೆ ಅವಲಂಬಿಸುವ ಬದಲು ಪಕ್ಷದ ಆಂತರಿಕ ಸಂಘಟನೆ ಮತ್ತು ಕಾರ್ಯಕರ್ತರ ಬಲವನ್ನೇ ನಂಬಿ ಚುನಾವಣೆ ಎದುರಿಸಲು ಎಸ್ಪಿ ನಾಯಕತ್ವ ನಿರ್ಧರಿಸಿದೆ.
ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಚುನಾವಣಾ ತಂತ್ರಗಾರಿಕೆ ರೂಪಿಸಲು ಪ್ರಖ್ಯಾತ ರಾಜಕೀಯ ಸಲಹಾ ಸಂಸ್ಥೆ 'ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ' ಜೊತೆ ಮಾಡಿಕೊಳ್ಳಲಿದ್ದ ಒಪ್ಪಂದದಿಂದ ಸಮಾಜವಾದಿ ಪಕ್ಷ ಹಿಂದೆ ಸರಿದಿದೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಐ-ಪ್ಯಾಕ್ ಸಲಹೆ ಪಡೆದಿದ್ದ ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಸ್ಟಾಲಿನ್ ಅವರು ಅನುಭವಿಸಿದ ಸೋಲುಗಳೇ ಈ ಮಹತ್ವದ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಐ-ಪ್ಯಾಕ್ ಜೊತೆ ಅಧಿಕೃತವಾಗಿ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಆದರೆ, ಚುನಾವಣಾ ಪ್ರಚಾರದ ನಿರ್ವಹಣೆ ಕುರಿತು ಕಳೆದ ಕೆಲವು ತಿಂಗಳುಗಳಿಂದ ಉಭಯ ಬಣಗಳ ನಡುವೆ ಚರ್ಚೆಗಳು ನಡೆಯುತ್ತಿದ್ದವು. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿನ ಹಿನ್ನಡೆಯ ನಂತರ, ಹೊರಗಿನವರ ಮೇಲೆ ಅವಲಂಬಿಸುವ ಬದಲು ಪಕ್ಷದ ಆಂತರಿಕ ಸಂಘಟನೆ ಮತ್ತು ಕಾರ್ಯಕರ್ತರ ಬಲವನ್ನೇ ನಂಬಿ ಚುನಾವಣೆ ಎದುರಿಸಲು ಎಸ್ಪಿ ನಾಯಕತ್ವ ನಿರ್ಧರಿಸಿದೆ.
ಇ.ಡಿ. ದಾಳಿಯೂ ಕಾರಣವಾಯಿತೇ?
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐ-ಪ್ಯಾಕ್ ನಿರ್ದೇಶಕ ವಿನೇಶ್ ಚಂದೇಲ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದ್ದು, ಐ-ಪ್ಯಾಕ್ನ ಕೋಲ್ಕತ್ತಾ ಕಚೇರಿ ಮೇಲೆಯೂ ದಾಳಿ ನಡೆದಿತ್ತು. ಕೋಲ್ಕತ್ತಾದಲ್ಲಿ ಇ.ಡಿ. ದಾಳಿ ನಡೆಯುತ್ತಿದ್ದ ದಿನವೇ ಲಕ್ನೋದಲ್ಲಿ ಐ-ಪ್ಯಾಕ್ ಪ್ರತಿನಿಧಿಗಳು ಸಮಾಜವಾದಿ ಪಕ್ಷದ ನಾಯಕರಿಗೆ 2027ರ ಚುನಾವಣೆ ಕುರಿತು ಪ್ರಸ್ತುತಿ ನೀಡುತ್ತಿದ್ದರು. ಈ ಬೆಳವಣಿಗೆಯಿಂದ ತೀವ್ರ ಮುಜುಗರಕ್ಕೊಳಗಾದ ಎಸ್ಪಿ ನಾಯಕರು, ಐ-ಪ್ಯಾಕ್ ಜೊತೆಗಿನ ನಿಕಟ ಸಂಪರ್ಕವು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ರಾಜಕೀಯವಾಗಿ ಮಾರಕವಾಗಬಹುದು ಎಂಬ ಆತಂಕದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಈ ಒಪ್ಪಂದ ಮುರಿದುಬಿದ್ದಿರುವ ಕುರಿತು ಎಸ್ಪಿ ಆಗಲೀ, ಐ-ಪ್ಯಾಕ್ ಆಗಲೀ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

