
Sabarimala Hearing |ಭಕ್ತನಿಗೆ ದೇವರ ವಿಗ್ರಹ ಮುಟ್ಟಲು ಬಿಡದಿದ್ದರೆ ಸಂವಿಧಾನ ನೆರವಿಗೆ ಬರಲ್ವೇ? ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ 9 ನ್ಯಾಯಮೂರ್ತಿಗಳ ಪೀಠ ಮಹತ್ವದ ವಿಚಾರಣೆ ನಡೆಸುತ್ತಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಮಂಗಳವಾರ (ಏಪ್ರಿಲ್ 21) ಅತ್ಯಂತ ಮಹತ್ವದ ಪ್ರಶ್ನೆಯೊಂದನ್ನು ಎತ್ತಿದೆ. "ದೇವಸ್ಥಾನಕ್ಕೆ ಹೋದ ಭಕ್ತನೊಬ್ಬನನ್ನು ವಿಗ್ರಹ ಮುಟ್ಟದಂತೆ ತಡೆದರೆ, ಆತನ ನೆರವಿಗೆ ಸಂವಿಧಾನ ಬರುವುದಿಲ್ಲವೇ?" ಎಂದು ನ್ಯಾಯಾಲಯ ಕೇಳಿದೆ.
ವಿಚಾರಣೆಯ ಹಿನ್ನೆಲೆ
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಈ ವಿಚಾರಣೆ ನಡೆಸುತ್ತಿದೆ. ಶಬರಿಮಲೆ ತಂತ್ರಿ (ಮುಖ್ಯ ಅರ್ಚಕ) ಪರ ವಾದ ಮಂಡಿಸಿದ ಹಿರಿಯ ವಕೀಲ ವಿ. ಗಿರಿ ಅವರ ವಾದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ಪ್ರಶ್ನೆಗಳನ್ನು ಕೇಳಿದೆ.
ತಂತ್ರಿಗಳ ವಾದವೇನು?
ದೇವಸ್ಥಾನದ ಆಚರಣೆಗಳು ಮತ್ತು ವಿಧಿವಿಧಾನಗಳು ಧರ್ಮದ ಅವಿಭಾಜ್ಯ ಅಂಗವಾಗಿದ್ದು, ಅವುಗಳನ್ನು ಬದಲಿಸಲು ಸಾಧ್ಯವಿಲ್ಲ. ಭಕ್ತನು ದೇವಸ್ಥಾನಕ್ಕೆ ಹೋದಾಗ ದೇವತೆಯ ಮೂಲ ಗುಣಲಕ್ಷಣಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಶಬರಿಮಲೆ ಅಯ್ಯಪ್ಪ ಸ್ವಾಮಿಯು 'ನೈಷ್ಠಿಕ ಬ್ರಹ್ಮಚಾರಿ' ಸ್ವರೂಪದಲ್ಲಿದ್ದಾನೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಆಚರಣೆಗಳು ಆ ದೇವರ ಸ್ವರೂಪಕ್ಕೆ ಪೂರಕವಾಗಿಯೇ ಇರುತ್ತವೆ ಎಂದು ವಾದಿಸಲಾಯಿತು.
ನ್ಯಾಯಾಲಯದ ಖಡಕ್ ಪ್ರಶ್ನೆ
ವಿಚಾರಣೆ ವೇಳೆ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರು "ನಾನು ಸಂಪೂರ್ಣ ನಂಬಿಕೆ ಮತ್ತು ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತೇನೆ. ನನ್ನ ಹೃದಯದಲ್ಲಿ ಯಾವುದೇ ಅಶುದ್ಧತೆ ಇರುವುದಿಲ್ಲ. ಆದರೆ ಅಲ್ಲಿ ಹೋದಾಗ, ನನ್ನ ಜನ್ಮ ಅಥವಾ ಕುಲದ ಕಾರಣ ನೀಡಿ ದೇವತೆಯನ್ನು ಮುಟ್ಟಲು ನನಗೆ ಅನುಮತಿ ಇಲ್ಲ ಎಂದು ಹೇಳಿದರೆ, ಆಗ ಸಂವಿಧಾನವು ನನ್ನ ರಕ್ಷಣೆಗೆ ಬರುವುದಿಲ್ಲವೇ? ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವೆ ಇಂತಹ ಭೇದಭಾವ ಇರಲು ಸಾಧ್ಯವೇ?" ಎಂಬ ಗಂಭೀರ ಪ್ರಶ್ನೆಯೊಂದನ್ನು ಮುಂದಿಟ್ಟರು.
ಇದಕ್ಕೆ ಉತ್ತರಿಸಿದ ವಕೀಲ ಗಿರಿ ಅವರು, "ಒಬ್ಬ ವ್ಯಕ್ತಿಯು ಅರ್ಚಕನಾಗುವುದನ್ನು ಜನ್ಮದ ಆಧಾರದ ಮೇಲೆ ಸಂಪೂರ್ಣವಾಗಿ ನಿಷೇಧಿಸಿದರೆ, ಅದನ್ನು ಸಂವಿಧಾನದ ವಿಧಿ 25(2)(ಬಿ) ಅಡಿಯಲ್ಲಿ ರಾಜ್ಯ ಸರ್ಕಾರ ಅಥವಾ ಕಾನೂನು ಗಮನಿಸಬಹುದು. ಆದರೆ ಶಬರಿಮಲೆಯ ವಿಷಯದಲ್ಲಿ ದೇವತೆಯು ಬ್ರಹ್ಮಚಾರಿ ಸ್ವರೂಪದಲ್ಲಿ ಇರುವುದರಿಂದ, ಅಲ್ಲಿನ ಆಚರಣೆಗಳು ಅದಕ್ಕೆ ತಕ್ಕಂತೆಯೇ ಇರುತ್ತವೆ" ಎಂದರು.
ಹಳೆಯ ತೀರ್ಪು ಮತ್ತು ಮರುಪರಿಶೀಲನೆ:
2018ರಲ್ಲಿ ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳ ಪೀಠವು 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಮೇಲಿದ್ದ ನಿಷೇಧವನ್ನು ರದ್ದುಗೊಳಿಸಿತ್ತು. ಇದಾದ ಒಂದು ವರ್ಷದಲ್ಲಿ ಅಂದರೆ ನವೆಂಬರ್ 2019 ರಂದು ಅಂದಿನ ಸಿಜೆಐ ರಂಜನ್ ಗೋಗೊಯ್ ನೇತೃತ್ವದ ಪೀಠವು ಈ ವಿಷಯವನ್ನು ಹೆಚ್ಚಿನ ಚರ್ಚೆಗಾಗಿ ದೊಡ್ಡ ಪೀಠಕ್ಕೆ (ಒಂಬತ್ತು ನ್ಯಾಯಮೂರ್ತಿಗಳ ಪೀಠ) ವರ್ಗಾಯಿಸಿತ್ತು.
ಪೀಠದ ಅಭಿಪ್ರಾಯ
ಧಾರ್ಮಿಕ ಆಚರಣೆಗಳು ನ್ಯಾಯಾಂಗ ಮರುಪರಿಶೀಲನೆಗೆ ಒಳಪಡಬಹುದು ಎಂದು ಏಪ್ರಿಲ್ 17ರಂದು ನ್ಯಾಯಾಲಯ ಹೇಳಿತ್ತು. ನ್ಯಾಯಾಧೀಶರು ತಮ್ಮ ವೈಯಕ್ತಿಕ ಧಾರ್ಮಿಕ ನಂಬಿಕೆಗಳಿಗಿಂತ ಮಿಗಿಲಾಗಿ ಸಾಂವಿಧಾನಿಕ ಚೌಕಟ್ಟನ್ನು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಸದ್ಯ ವಿಚಾರಣೆ ಮುಂದುವರಿದಿದ್ದು, ಈ ಸಾಂವಿಧಾನಿಕ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ಇಡೀ ದೇಶದ ಧಾರ್ಮಿಕ ಆಚರಣೆಗಳ ಮೇಲೆ ದೊಡ್ಡ ಪ್ರಭಾವ ಬೀರಲಿದೆ.

