
ರಾಹುಲ್ ಭಾಷಣಕ್ಕೆ ಪಂಜಾಬ್ ಮಾಜಿ ಸಿಎಂ ಚನ್ನಿ ಗೈರು: ಮತ್ತೆ ಭುಗಿಲೆದ್ದ ಬಣ ರಾಜಕೀಯ
ರಾಹುಲ್ ಗಾಂಧಿ ಭಾಷಣ ಮಾಡುವಾಗ ಸದನದಲ್ಲಿ ಕಡ್ಡಾಯವಾಗಿ ಉಪಸ್ಥಿತರಿರಬೇಕು ಎಂದು ಎಲ್ಲಾ ಸಂಸದರಿಗೆ ವಾಟ್ಸಾಪ್ ಸಂದೇಶ ರವಾನೆಯಾಗಿತ್ತು. ಆದಾಗ್ಯೂ, ಪಂಜಾಬ್ನ 7 ಕಾಂಗ್ರೆಸ್ ಸಂಸದರ ಪೈಕಿ ಗೈರಾದ ಏಕೈಕ ನಾಯಕ ಚರಂಜಿತ್ ಸಿಂಗ್ ಚನ್ನಿ.
ಲೋಕಸಭೆಯಲ್ಲಿ ಬುಧವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ, ಪಂಜಾಬ್ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರ ಗೈರುಹಾಜರಿ ಪಕ್ಷದ ಒಳಗಿನ ಭಿನ್ನಮತವನ್ನು ಮತ್ತೆ ಬೀದಿಗೆ ತಂದಿದೆ. ಪಂಜಾಬ್ನ ಮಾಜಿ ಮುಖ್ಯಮಂತ್ರಿ ಹಾಗೂ ಜಲಂಧರ್ ಸಂಸದ ಚರಂಜಿತ್ ಸಿಂಗ್ ಚನ್ನಿ, ರಾಹುಲ್ ಗಾಂಧಿ ಅವರ ಭಾಷಣವನ್ನು ಬಹಿಷ್ಕರಿಸಿ ಫರೀದ್ಕೋಟ್ನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.
ರಾಹುಲ್ ಗಾಂಧಿ ಭಾಷಣ ಮಾಡುವಾಗ ಸದನದಲ್ಲಿ ಕಡ್ಡಾಯವಾಗಿ ಉಪಸ್ಥಿತರಿರಬೇಕು ಎಂದು ಪಂಜಾಬ್ ಕಾಂಗ್ರೆಸ್ ಸಂಸದೀಯ ಪಡೆಯ ಮುಖ್ಯಸ್ಥ, ಅಮೃತಸರದ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಅವರು ಎಲ್ಲಾ ಸಂಸದರಿಗೆ ವಾಟ್ಸಾಪ್ ಸಂದೇಶ ರವಾನಿಸಿದ್ದರು. ಆದಾಗ್ಯೂ, ಪಂಜಾಬ್ನ 7 ಕಾಂಗ್ರೆಸ್ ಸಂಸದರ ಪೈಕಿ ಗೈರಾದ ಏಕೈಕ ನಾಯಕ ಚರಂಜಿತ್ ಸಿಂಗ್ ಚನ್ನಿ.
ಪ್ರತ್ಯೇಕ ಪ್ರತಿಭಟನೆ ನಡೆಸಿದ ಚನ್ನಿ
ಚನ್ನಿ ದೆಹಲಿಯ ಸಂಸತ್ತಿನಲ್ಲಿರುವ ಬದಲು, ಆಮ್ ಆದ್ಮಿ ಪಾರ್ಟಿ (AAP) ಸರ್ಕಾರದ ಫಾರ್ಮಸಿ ಆಫೀಸರ್ ನೇಮಕಾತಿ ಪರೀಕ್ಷೆಯ ಅಕ್ರಮವನ್ನು ಖಂಡಿಸಿ ಫರೀದ್ಕೋಟ್ನ ಬಾಬಾ ಫರೀದ್ ವಿಶ್ವವಿದ್ಯಾಲಯದ ಹೊರಗೆ ಬೃಹತ್ ಧರಣಿ ನಡೆಸಿದರು. ಮಾಜಿ ಶಾಸಕ ಕುಶಾಲ್ದೀಪ್ ಸಿಂಗ್ ಧಿಲ್ಲೋನ್ ಸೇರಿದಂತೆ ಚನ್ನಿ ಬೆಂಬಲಿತ ನಾಯಕರು ಮತ್ತು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಚನ್ನಿ ನಾಯಕತ್ವಕ್ಕೆ ಬೆಂಬಲ ಸೂಚಿಸಿದರು.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (PCC) ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಚನ್ನಿ ನಡುವೆ ತೀವ್ರ ಅಧಿಕಾರದ ತಿಕ್ಕಾಟ ನಡೆಯುತ್ತಿದೆ. ಬುಧವಾರದಂದು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಜಾ ವಾರಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರೆ, ಚನ್ನಿ ದೆಹಲಿಯಿಂದ ದೂರ ಉಳಿದು ಫರೀದ್ಕೋಟ್ನಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.
ರಹಸ್ಯ ಸಭೆಯೂ ವಿಫಲ?
ಬಣ poweರ್ಗೆ ಮುಕ್ತಾಯ ಹಾಡಲು ಮಂಗಳವಾರ ದೆಹಲಿಯಲ್ಲಿ ಚುನಾವಣಾ ತಂತ್ರಜ್ಞ ನರೇಶ್ ಅರೋರಾ ಅವರು ಚನ್ನಿ ಮತ್ತು ವಾರಿಂಗ್ ನಡುವೆ "ರಹಸ್ಯ ಸಭೆ" ಒಂದನ್ನು ಆಯೋಜಿಸಿದ್ದರು. ಆದರೆ, ಮರುದಿನವೇ ಇಬ್ಬರೂ ನಾಯಕರು ಪ್ರತ್ಯೇಕ ಪ್ರತಿಭಟನೆ ನಡೆಸುವ ಮೂಲಕ ಈ ಸಂಧಾನ ಸಭೆ ವಿಫಲವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮುಗಿಯದ 'ಕೈ' ಜಗಳ
ಜುಲೈ 1 ರಂದು ಕಾಂಗ್ರೆಸ್ ಹೈಕಮಾಂಡ್ ರಾಜಾ ವಾರಿಂಗ್ ಅವರನ್ನು ರಾಜ್ಯ ಅಧ್ಯಕ್ಷರನ್ನಾಗಿ ಮುಂದುವರಿಸಲು ತೀರ್ಮಾನಿಸಿತ್ತು. ಚನ್ನಿ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷತೆ ಮತ್ತು ಸಂಸದ ಸುಖಜೀಂದರ್ ಸಿಂಗ್ ರಂಧಾವಾ ಅವರಿಗೆ ಕೋರ್ ಕಮಿಟಿ ಜವಾಬ್ದಾರಿ ನೀಡಲಾಗಿತ್ತು. ಆದರೆ ಚನ್ನಿ ಮತ್ತು ರಂಧಾವಾ ನೇತೃತ್ವದ ನಾಯಕರ ಗುಂಪು ವಾರಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಪಟ್ಟು ಹಿಡಿದಿತ್ತು.
ಸ್ಥಿತಿ ಸರಿಪಡಿಸಲು ಪಂಜಾಬ್ ಉಸ್ತುವಾರಿ ಭೂಪೇಶ್ ಬಘೇಲ್ ಚಂಡೀಗಢದಲ್ಲಿ ಕ್ಯಾಂಪ್ ಮಾಡಿದ್ದರೆ, ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಾಯಕರನ್ನು ದೆಹಲಿಗೆ ಕರೆಸಿ ಶಿಸ್ತಿನ ಪಾಠ ಮಾಡಿದ್ದರು.

