ಅಭಿಜೀತ್‌ ದಿಪ್ಕೆ ಕುಟುಂಬದ ಆರ್ಥಿಕ ಮೂಲ ತನಿಖೆಗೆ ಆರ್‌ಟಿಐ ಕಾರ್ಯಕರ್ತ ಆಗ್ರಹ
x

ಸಿಜೆಪಿ ವಿರುದ್ಧ ತನಿಖೆಗೆ ಒತ್ತಾಯ; ದಿಪ್ಕೆ ತಂದೆ ಆಸ್ತಿ ಬಗ್ಗೆ ಪ್ರಶ್ನೆ

ಅಭಿಜೀತ್‌ ದಿಪ್ಕೆ ಕುಟುಂಬದ ಆರ್ಥಿಕ ಮೂಲ ತನಿಖೆಗೆ ಆರ್‌ಟಿಐ ಕಾರ್ಯಕರ್ತ ಆಗ್ರಹ

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ತಂದೆಯ ಆಸ್ತಿ, ವಿದೇಶಿ ಶಿಕ್ಷಣ ವೆಚ್ಚ, 1 ಕೋಟಿ ರೂ. ದೇಣಿಗೆ ಹಾಗೂ ಪಕ್ಷದ ನೋಂದಣಿ ಕುರಿತು ಆರ್‌ಟಿಐ ಕಾರ್ಯಕರ್ತ ತನಿಖೆಗೆ ಆಗ್ರಹಿಸಿದ್ದಾರೆ.


Click the Play button to hear this message in audio format

ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ತಂದೆಯ ಆರ್ಥಿಕ ಸ್ಥಿತಿ ಹಾಗೂ ಸಿಜೆಪಿಗೆ ಘೋಷಿಸಲಾದ 1 ಕೋಟಿ ರೂ. ಕಾನೂನು ನೆರವು ನಿಧಿಯ ಬಗ್ಗೆ ತನಿಖೆ ನಡೆಸುವಂತೆ ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿ ತಿವಾರಿ ಮಹಾರಾಷ್ಟ್ರ ಸರ್ಕಾರ, ಚುನಾವಣಾ ಆಯೋಗ ಹಾಗೂ ಕೇಂದ್ರ ಜಿಎಸ್‌ಟಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಅಮಿ ತಿವಾರಿ ಅವರ ಆರೋಪದ ಪ್ರಕಾರ, ಅಭಿಜೀತ್ ದಿಪ್ಕೆ ಅವರ ತಂದೆ ಭಗವಾನ್‌ರಾವ್ ದಿಪ್ಕೆ ಅವರು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (MIDC)ದಲ್ಲಿ ಕಿರಿಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಸರ್ಕಾರಿ ನೌಕರರ ವೇತನದಲ್ಲಿಯೇ ತಮ್ಮ ಮಕ್ಕಳಿಗೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ನೀಡಲು ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ತಮ್ಮ ದೂರಿನಲ್ಲಿ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಶಂಕೆ ಇದ್ದರೆ ಸೂಕ್ತ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

1 ಕೋಟಿ ರೂ. ಕಾನೂನು ನೆರವು ನಿಧಿ ಕುರಿತು ಪ್ರಶ್ನೆ

ಜುಲೈ 20ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆ ಬಳಿಕ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿರುವ ಸಿಜೆಪಿ ಪ್ರತಿಭಟನಾಕಾರರ ಪರ ಕಾನೂನು ಹೋರಾಟ ನಡೆಸಲು ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ 1 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದ್ದರು.

ಈ ಘೋಷಣೆಯ ಬೆನ್ನಲ್ಲೇ ಅಮಿ ತಿವಾರಿ ಅವರು ಚುನಾವಣಾ ಆಯೋಗ ಹಾಗೂ ಕೇಂದ್ರ ಜಿಎಸ್‌ಟಿ ಇಲಾಖೆಗೆ ಪತ್ರ ಬರೆದು, ಸಿಜೆಪಿ ನೋಂದಾಯಿತ ರಾಜಕೀಯ ಪಕ್ಷವೇ ಎಂಬುದನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಸಿಜೆಪಿ ನೋಂದಾಯಿತ ಪಕ್ಷವೇ?

ಜನಪ್ರತಿನಿಧಿತ್ವ ಕಾಯ್ದೆ-1951ರ ಸೆಕ್ಷನ್ 29A ಅಡಿಯಲ್ಲಿ ಸಿಜೆಪಿ ನೋಂದಾಯಿತ ರಾಜಕೀಯ ಪಕ್ಷವಾಗಿಲ್ಲದಿದ್ದರೆ, ರಾಜಕೀಯ ಪಕ್ಷದ ಹೆಸರಿನಲ್ಲಿ ದೇಣಿಗೆ ಸ್ವೀಕರಿಸುವುದು ಹಾಗೂ ನಿಧಿ ಸಂಗ್ರಹಿಸುವ ಪ್ರಕ್ರಿಯೆಯನ್ನು ಪರಿಶೀಲಿಸಬೇಕೆಂದು ತಿವಾರಿ ಆಗ್ರಹಿಸಿದ್ದಾರೆ.

ಅಲ್ಲದೆ, ಕಪಿಲ್ ಸಿಬಲ್ ಘೋಷಿಸಿರುವ 1 ಕೋಟಿ ರೂ. ಕಾನೂನು ನೆರವು ನಿಧಿಗೆ ಅನ್ವಯಿಸುವ ತೆರಿಗೆ ನಿಯಮಗಳು ಹಾಗೂ ಜಿಎಸ್‌ಟಿ ಸಂಬಂಧಿತ ಅಂಶಗಳನ್ನೂ ಕೇಂದ್ರ ಜಿಎಸ್‌ಟಿ ಇಲಾಖೆ ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ವಿರುದ್ಧದ ಹೇಳಿಕೆಗಳಿಗೂ ಆಕ್ಷೇಪ

ಅಮಿ ತಿವಾರಿ ಅವರು ತಮ್ಮ ದೂರಿನಲ್ಲಿ, ಆರಂಭದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಆರಂಭವಾದ ಸಿಜೆಪಿ ಚಳವಳಿ ನಂತರ ರಾಜಕೀಯ ಸ್ವರೂಪ ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಯ ವೇಳೆ ಕೆಲವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿರುವ ಅವರು, ಈ ವಿಚಾರದಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪ್ರಕರಣದ ಮುಂದಿನ ಬೆಳವಣಿಗೆಗೆ ಕುತೂಹಲ

ಆರ್‌ಟಿಐ ಕಾರ್ಯಕರ್ತನ ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ, ಚುನಾವಣಾ ಆಯೋಗ ಹಾಗೂ ಕೇಂದ್ರ ಜಿಎಸ್‌ಟಿ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿವೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ. ಸಿಜೆಪಿ ನೋಂದಣಿ, ನಿಧಿ ಸಂಗ್ರಹ ಹಾಗೂ ಅದರ ಆರ್ಥಿಕ ವ್ಯವಹಾರಗಳ ಕುರಿತು ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

Read More
Next Story