LIVE NEET PROTEST LIVE|ಪ್ರಜಾಪ್ರಭುತ್ವದಲ್ಲಿ ಭಯ ಬೇಡ- ಸಿಜೆಪಿ ಫಸ್ಟ್‌ ರಿಯಾಕ್ಷನ್‌
x

NEET PROTEST LIVE|ಪ್ರಜಾಪ್ರಭುತ್ವದಲ್ಲಿ ಭಯ ಬೇಡ- ಸಿಜೆಪಿ ಫಸ್ಟ್‌ ರಿಯಾಕ್ಷನ್‌

NEET ಪೇಪರ್ ಲೀಕ್ ಕುರಿತು ಪೋಸ್ಟ್ ಮಾಡಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಜನರಿಗೆ ಧನ್ಯವಾದ ತಿಳಿಸಿ ಪ್ರಧಾನಿ ಮೋದಿ ಮತ್ತೊಂದು ಇನ್‌ಸ್ಟಾಗ್ರಾಮ್ ರೀಲ್ ಹಂಚಿಕೊಂಡಿದ್ದಾರೆ. ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.


Click the Play button to hear this message in audio format

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಕೇಂದ್ರ ಸರ್ಕಾರದ ಕಠಿಣ ಕ್ರಮಗಳ ಕುರಿತು ತಾವು ಪೋಸ್ಟ್ ಮಾಡಿದ್ದ ವಿಡಿಯೋಗೆ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 24 ಗಂಟೆಗಳ ಅವಧಿಯಲ್ಲಿ ತಮ್ಮ ಎರಡನೇ ಇನ್‌ಸ್ಟಾಗ್ರಾಮ್ ರೀಲ್ ಹಂಚಿಕೊಂಡು ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಗುರುವಾರ ರಾತ್ರಿ ಪ್ರಧಾನಿಯವರು ಹಂಚಿಕೊಂಡಿದ್ದ ಸೆಲ್ಫಿ ಮಾದರಿಯ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಿಡುಗಡೆ ಮಾಡಿದ ಹೊಸ ಕಿರು ವಿಡಿಯೋದಲ್ಲಿ, ಜನರಿಂದ ಬಂದ ಬೆಂಬಲ, ಸಲಹೆ ಮತ್ತು ಅಭಿಪ್ರಾಯಗಳಿಗೆ ಪ್ರಧಾನಿ ಮೋದಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ವಿಡಿಯೊದಲ್ಲೇನಿದೆ?

"ಧನ್ಯವಾದಗಳು ಗೆಳೆಯರೇ. ನಿನ್ನೆ ರಾತ್ರಿ ನಿಮ್ಮೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ನನಗೆ ಸಿಕ್ಕಿತ್ತು. ನಾನು ಪೋಸ್ಟ್ ಮಾಡಿದ ವಿಡಿಯೋಗೆ ನೀವು ನೀಡಿದ ಪ್ರತಿಕ್ರಿಯೆ ಹಾಗೂ ನಿಮ್ಮ ಸಕಾರಾತ್ಮಕ ಸಲಹೆಗಳಿಗೆ ಧನ್ಯವಾದಗಳು. ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಮುಂದುವರಿಯಲಿ ಹಾಗೂ ನಮ್ಮ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಮತ್ತು ಸಕ್ರಿಯವಾಗಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು, ಧನ್ಯವಾದಗಳು ಗೆಳೆಯರೇ."

ನೀಟ್ ಪೇಪರ್ ಲೀಕ್ ಪ್ರಕರಣದ ಕುರಿತು ಮಾತನಾಡಿ, ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಬೆನ್ನಲ್ಲೇ ಈ ಸಂದೇಶ ಹೊರಬಿದ್ದಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ, ಪೇಪರ್ ಲೀಕ್ ಪ್ರಕರಣವು ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳಿಗೆ ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಬಣ್ಣಿಸಿದ್ದ ಪ್ರಧಾನಿ, ಕೇಂದ್ರ ಸಚಿವ ಸಂಪುಟದ ಮೂಲಕ ಮತ್ತಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದರು.

ಪ್ರಧಾನಿ ಮೋದಿ ಅವರು ನೀಟ್ ಪೇಪರ್ ಲೀಕ್ ಕುರಿತು ಪೋಸ್ಟ್ ಮಾಡಿದ್ದ ಮೊದಲ ಇನ್‌ಸ್ಟಾಗ್ರಾಮ್ ವಿಡಿಯೋ 300 ಮಿಲಿಯನ್ (30 ಕೋಟಿ) ವೀಕ್ಷಣೆಗಳನ್ನು ದಾಟಿದ ದಿನವೇ ಈ ಹೊಸ ಸಂದೇಶ ಬಂದಿದೆ. "ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಪೇಪರ್ ಲೀಕ್ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳು!" ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಲಾಗಿದ್ದ ಆ ವಿಡಿಯೋದಿಂದಾಗಿ ಪ್ರಧಾನಿಯವರು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಗಳಿಸಿದ್ದರು.

Live Updates

  • 25 July 2026 2:57 PM IST

    ಪ್ರಜಾಪ್ರಭುತ್ವದಲ್ಲಿ ಭಯ ಬೇಡ- ಸಿಜೆಪಿ ಫಸ್ಟ್‌ ರಿಯಾಕ್ಷನ್‌

    ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪ್ರಥಮ ಪ್ರತಿಕ್ರಿಯೆ ನೀಡಿರುವ ಕಾಕ್ರೋಚ್ ಜನತಾ ಪಾರ್ಟಿ (CJP), ಯಾರ ಮುಂದೆಯೂ ತಲೆಬಾಗದೆ ದಿಟ್ಟತನದಿಂದ ಹೋರಾಡಿದರೆ ಯಾರ ರಾಜೀನಾಮೆಯನ್ನು ಬೇಕಾದರೂ ಪಡೆಯಬಹುದು ಎಂಬುದಕ್ಕೆ ಈ ಬೆಳವಣಿಗೆಯೇ ಜೀವಂತ ಸಾಕ್ಷಿ ಎಂದು ಬಣ್ಣಿಸಿದೆ.

  • 25 July 2026 2:19 PM IST

    'ನಮಗೆ ಬೇಕಿರುವುದು ಕಟ್ಟುನಿಟ್ಟಿನ ಕ್ರಮ, ವಿಡಿಯೋಗಳಲ್ಲ'- ಮೋದಿ ವಿರುದ್ಧ ರಾಹುಲ್‌ ಕಿಡಿ

    ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದ ಪ್ರತಿಭಟನೆಯ ಭಾಗವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ ವಿದ್ಯಾರ್ಥಿಗಳ ನಿಯೋಗವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಭೇಟಿಯಾದರು.

    ವಿದ್ಯಾರ್ಥಿಗಳೊಂದಿಗೆ ನಿಂತು ಕೇಂದ್ರ ಸರ್ಕಾರದ ವಿರುದ್ಧ ದಾಳಿಯನ್ನು ಚುರುಕುಗೊಳಿಸಿದ ರಾಹುಲ್ ಗಾಂಧಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು.

    ಧರ್ಮೇಂದ್ರ ಪ್ರಧಾನ್ ಅವರನ್ನು ಶಿಕ್ಷಣ ವ್ಯವಸ್ಥೆಯ ಭ್ರಷ್ಟಾಚಾರ ಮತ್ತು ವಿನಾಶದ ಸಂಕೇತ ಎಂದು ಕರೆದ ಗಾಂಧಿ, ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವುದನ್ನು ಬಿಟ್ಟು ಬೇರೆ ಯಾವುದೂ ವಿದ್ಯಾರ್ಥಿಗಳಿಗೆ ತೃಪ್ತಿ ನೀಡುವುದಿಲ್ಲ ಎಂದು ಹೇಳಿದರು.

    ಅಲ್ಲದೆ, ಪ್ರಧಾನ್ ಅವರನ್ನು ಕೇವಲ ಮತ್ತೊಂದು ಸಚಿವಾಲಯಕ್ಕೆ ವರ್ಗಾಯಿಸುವುದು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಮ್ಮತವಿಲ್ಲ, ಅವರನ್ನು ಸರ್ಕಾರದಿಂದಲೇ ಹೊರಹಾಕಬೇಕು ಎಂದು ಅವರು ಆಗ್ರಹಿಸಿದರು.

  • 25 July 2026 12:35 PM IST

    ‘ಆಸ್ಪತ್ರೆಯಲ್ಲಿ ನನ್ನನ್ನು ಉತ್ತರ ಕೊರಿಯಾದ ಕೈದಿಯಂತೆ ನಡೆಸಿಕೊಂಡರುʼ

    ಜುಲೈ 18 ರಂದು ತಮ್ಮನ್ನು ಬಲವಂತವಾಗಿ ಸರ್ಕಾರಿ ಸ್ವಾಮ್ಯದ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ದ ನಂತರ ಕೈದಿಯಂತೆ ನಡೆಸಿಕೊಳ್ಳಲಾಯಿತು ಎಂದು ಹೋರಾಟಗಾರ ಸೋನಮ್ ವಾಂಗ್ಚುಕ್ ಆರೋಪಿಸಿದ್ದಾರೆ. 'ಕಾಕ್ರೋಚ್ ಜನತಾ ಪಾರ್ಟಿ' (CJP) ಯನ್ನು ಬೆಂಬಲಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 28 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ 59 ವರ್ಷದ ವಾಂಗ್ಚುಕ್ ಅವರನ್ನು, ವೈದ್ಯಕೀಯ ಸಲಹೆ ಮತ್ತು ದೆಹಲಿ ಹೈಕೋರ್ಟ್ ನಿರ್ದೇಶನಗಳನ್ನು ಉಲ್ಲೇಖಿಸಿ ಜುಲೈ 18 ರ ಬೆಳಿಗ್ಗೆ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದರು.

    ಅದು ಕೇವಲ ಆಸ್ಪತ್ರೆಯಾಗಿರಲಿಲ್ಲ; ಅದೊಂದು ಸೇನಾ ಶಿಬಿರವಾಗಿತ್ತು, ಜೈಲಾಗಿತ್ತು. ಬಹುಶಃ ಒಬ್ಬ ಕೈದಿಯನ್ನೂ ಸಹ ಆ ರೀತಿ ನಡೆಸಿಕೊಳ್ಳುತ್ತಿರಲಿಲ್ಲವೇನೋ, ನನ್ನನ್ನು ಆ ರೀತಿ ಇರಿಸಲಾಗಿತ್ತು ಎಂದು ಶುಕ್ರವಾರ ತಡರಾತ್ರಿ ಪೋಸ್ಟ್ ಮಾಡಲಾದ ಯೂಟ್ಯೂಬ್ ವಿಡಿಯೋದಲ್ಲಿ ಅವರು ಹೇಳಿದ್ದಾರೆ.

    ಪ್ರತಿಯೊಂದಕ್ಕೂ ನಿರ್ಬಂಧಗಳಿದ್ದವು. ನಾನು ಕೊಠಡಿಯಿಂದ ಹೊರಗೆ ಕಾಲಿಡುವಂತಿರಲಿಲ್ಲ. ನಮ್ಮ ಕೊಠಡಿಯ ಬಳಿ ಹಕ್ಕಿಯೂ ಹಾರಾಡುವಂತಿರಲಿಲ್ಲ. ಯಾರನ್ನೂ ಭೇಟಿಯಾಗಲು ಅನುಮತಿ ಇರಲಿಲ್ಲ. ಕೇವಲ ಮೂವರು ಸಂಬಂಧಿಕರಿಗೆ ಮಾತ್ರ ಉಳಿದುಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ದೆಹಲಿ ಹೈಕೋರ್ಟ್ ಅನುಮತಿಯ ನಂತರ ಮಂಗಳವಾರ ಸ್ಥಳಾಂತರಿಸಲ್ಪಟ್ಟ ಗುರುಗ್ರಾಮದ ಆಸ್ಪತ್ರೆಯ ಹಾಸಿಗೆಯಿಂದ ರೆಕಾರ್ಡ್ ಮಾಡಿದ 24 ನಿಮಿಷಗಳ ವಿಡಿಯೋದಲ್ಲಿ ಅವರು ವಿವರಿಸಿದ್ದಾರೆ.

    ಅಷ್ಟೇ ಅಲ್ಲದೆ, ತಮಗೆ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್ ಇಟ್ಟುಕೊಳ್ಳಲು ಸಹ ಅನುಮತಿ ನೀಡಲಿಲ್ಲ ಎಂದು ಲಡಾಖ್‌ನ ಈ ಹೋರಾಟಗಾರ ಪ್ರತಿಪಾದಿಸಿದ್ದಾರೆ.

  • 25 July 2026 11:25 AM IST

    ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಸಡಿಲಿಸದ ಸಿಜೆಪಿ

    ಕೇಂದ್ರ ಸರ್ಕಾರದೊಂದಿಗೆ ಮೂರನೇ ಸುತ್ತಿನ ಮಾತುಕತೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ 'ಕಾಕ್ರೋಚ್ ಜನತಾ ಪಾರ್ಟಿ' (CJP) ತನ್ನ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಸರ್ಕಾರ ಸಿದ್ಧವಿಲ್ಲದಿದ್ದರೆ, ಮುಂದಿನ ಮಾತುಕತೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಿಜೆಪಿ ಶನಿವಾರ ಬೆಳಿಗ್ಗೆ ಸ್ಪಷ್ಟಪಡಿಸಿದೆ.

    ಈ ಕುರಿತು ಎಕ್ಸ್ (ಟ್ವಿಟರ್) ತಾಣದಲ್ಲಿ ಪೋಸ್ಟ್ ಮಾಡಿರುವ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ, "ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸರ್ಕಾರ ಇದಕ್ಕೆ ಒಪ್ಪದಿದ್ದರೆ, ಮುಂದಿನ ಚರ್ಚೆಗಳಿಂದ ಯಾವುದೇ ಪ್ರಯೋಜನವಿಲ್ಲ" ಎಂದು ಹೇಳಿದ್ದಾರೆ.

    ಶುಕ್ರವಾರ ಮಧ್ಯಾಹ್ನ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಸಿಜೆಪಿ ಪ್ರತಿನಿಧಿಗಳೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದ್ದರು. ಶನಿವಾರ ಮಧ್ಯಾಹ್ನ ಮೂರನೇ ಸುತ್ತಿನ ಮಾತುಕತೆ ನಿಗದಿಯಾಗಿದ್ದು, ಬೇಡಿಕೆಗಳ ಕುರಿತು ಸರ್ಕಾರದ ನಿಲುವನ್ನು ತಿಳಿಸುವುದಾಗಿ ಸಚಿವರ ತಂಡ ಭರವಸೆ ನೀಡಿತ್ತು.

  • ಪ್ರತಿಭಟನಾ ಸ್ಥಳದಲ್ಲಿದ್ದ 2,500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆಯುಳ್ಳವರ ಪತ್ತೆ
    25 July 2026 9:03 AM IST

    ಪ್ರತಿಭಟನಾ ಸ್ಥಳದಲ್ಲಿದ್ದ 2,500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆಯುಳ್ಳವರ ಪತ್ತೆ

    ಜುಲೈ 20ರ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರದ ಬೆನ್ನಲ್ಲೇ ಭದ್ರತೆಯನ್ನು ಹೆಚ್ಚಿಸಲು ಜಂತರ್ ಮಂತರ್‌ನಲ್ಲಿ ಅಳವಡಿಸಲಾಗಿದ್ದ ದೆಹಲಿ ಪೊಲೀಸರ 'ಫೇಷಿಯಲ್ ರೆಕಗ್ನಿಷನ್ ಸಿಸ್ಟಮ್' (FRS), ಕಳೆದ ಮೂರು ದಿನಗಳಲ್ಲಿ (ಜುಲೈ 21ರಿಂದ 23ರ ಅವಧಿಯಲ್ಲಿ) ಪ್ರತಿಭಟನಾ ಸ್ಥಳದಲ್ಲಿದ್ದ ಅಪರಾಧ ಹಿನ್ನೆಲೆಯುಳ್ಳ 2,500ಕ್ಕೂ ಹೆಚ್ಚು ವ್ಯಕ್ತಿಗಳನ್ನು ಗುರುತಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿರೋಧ ಪಕ್ಷಗಳ ಬೆಂಬಲಿತ ಪ್ರತಿಭಟನೆಯಲ್ಲಿ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ನಿಯೋಜಿಸಲಾಗಿತ್ತು.

Read More
Next Story