ಕರ್ನಾಟಕ ಸಿಎಂ ಬದಲಾವಣೆ ಸಾರ್ವಜನಿಕ ಆಕ್ರೋಶದ ಫಲ: ಪಿಎಂ ನರೇಂದ್ರ ಮೋದಿ ಆರೋಪ
x

ಕರ್ನಾಟಕ ಸಿಎಂ ಬದಲಾವಣೆ ಸಾರ್ವಜನಿಕ ಆಕ್ರೋಶದ ಫಲ: ಪಿಎಂ ನರೇಂದ್ರ ಮೋದಿ ಆರೋಪ

ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಭಿವೃದ್ಧಿಗಿಂತ ಹೆಚ್ಚಾಗಿ ಅವ್ಯವಸ್ಥೆ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.


Click the Play button to hear this message in audio format

ದೇಶದ ರಾಜಕೀಯ ವಾತಾವರಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಆ ಪಕ್ಷವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಭಿವೃದ್ಧಿಗಿಂತ ಹೆಚ್ಚಾಗಿ ಅವ್ಯವಸ್ಥೆ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಗುಜರಾತ್‌ನ ಸೂರತ್ ಮತ್ತು ದಾಮನ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸಿದ್ದಾರೆ. ಪ್ರಧಾನಿ ಮೋದಿಯವರ ಭಾಷಣದ ಕೇಂದ್ರಬಿಂದುವಾಗಿದ್ದು ಕರ್ನಾಟಕದ ರಾಜಕೀಯ ಪರಿಸ್ಥಿತಿ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾರ್ವಜನಿಕರಲ್ಲಿ ಅಗಾಧವಾದ ಅಸಮಾಧಾನ ಮತ್ತು ಆಕ್ರೋಶವಿದೆ. ಜನರ ಈ ಆಕ್ರೋಶದ ತೀವ್ರತೆಗೆ ಮಣಿದು ಕಾಂಗ್ರೆಸ್ ತನ್ನ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಹರಿಹಾಯ್ದಿದ್ದಾರೆ. ರಾಜ್ಯದಲ್ಲಿನ ಆಡಳಿತ ವೈಫಲ್ಯಗಳು ಮತ್ತು ಭಿನ್ನಮತದ ಕಾರಣದಿಂದಲೇ ಸರ್ಕಾರ ಬದಲಾವಣೆಯ ಹಂತಕ್ಕೆ ತಲುಪಿದೆ ಎಂಬ ಅರ್ಥದಲ್ಲಿ ಪ್ರಧಾನಿ ಮಾಡಿರುವ ಈ ಟೀಕೆ, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಅವ್ಯವಸ್ಥೆಯಲ್ಲಿ ಅವಕಾಶ ಹುಡುಕುವ ಕಾಂಗ್ರೆಸ್

ಕಳೆದ 12 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ತಂತ್ರವೇ ವಿಚಿತ್ರವಾಗಿದೆ. ಅವರು ಅಭಿವೃದ್ಧಿ ಅಥವಾ ಜನರ ಕಲ್ಯಾಣದ ಬಗ್ಗೆ ಯೋಚಿಸುವುದಿಲ್ಲ; ಬದಲಾಗಿ, ದೇಶದ ಆಡಳಿತ ವ್ಯವಸ್ಥೆಯಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿ, ಅದರ ಲಾಭವನ್ನು ಚುನಾವಣಾ ರಾಜಕೀಯದಲ್ಲಿ ಪಡೆಯಲು ಹವಣಿಸುತ್ತಾರೆ. ಆದರೆ, ದೇಶದ ಪ್ರಜ್ಞಾವಂತ ಜನತೆ ಕಾಂಗ್ರೆಸ್‌ನ ಈ ನಕಾರಾತ್ಮಕ ರಾಜಕೀಯವನ್ನು ಅರಿತುಕೊಂಡಿದ್ದಾರೆ ಮತ್ತು ಪದೇ ಪದೆ ತಿರಸ್ಕರಿಸುತ್ತಿದ್ದಾರೆ ಎಂದು ಹೇಳಿದರು.

ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳ ಕುರಿತು ಮಾತನಾಡಿದ ಅವರು, ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಕಾಂಗ್ರೆಸ್‌ನ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಸ್ಥಳೀಯ ಮಟ್ಟದ ಚುನಾವಣೆಗಳೇ ಇದಕ್ಕೆ ಸ್ಪಷ್ಟ ಸಾಕ್ಷಿ. ಜನರು ಕಾಂಗ್ರೆಸ್‌ನ ಆಡಳಿತ ಶೈಲಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅರಾಜಕತೆ ದೇಶಕ್ಕೆ ಬೇಡ

ಭಾರತೀಯರಿಗೆ ಅರಾಜಕತೆ, ಅನಿಶ್ಚಿತತೆ ಅಥವಾ ಹತಾಶೆ ಇಷ್ಟವಿಲ್ಲ. ದೇಶವು ಅಭಿವೃದ್ಧಿ, ಸ್ಥಿರತೆ ಮತ್ತು ಪ್ರಗತಿಯನ್ನು ಬಯಸುತ್ತದೆ. ರಾಷ್ಟ್ರವು ವೇಗವಾಗಿ ಮುನ್ನಡೆಯಲು ಬಯಸುತ್ತಿದೆ. ಆದರೆ, ಕಾಂಗ್ರೆಸ್ ತನ್ನ ಹಳೆಯ ರಾಜಕೀಯ ತಂತ್ರಗಳ ಮೂಲಕ ಜನರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದೆ. ಇಂತಹ ತಂತ್ರಗಳು ಇಂದಿನ ಆಧುನಿಕ ಭಾರತದಲ್ಲಿ ಕೆಲಸ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಗುಜರಾತ್ ಮಾದರಿಯ ಪ್ರಶಂಸೆ

ಈ ಸಂದರ್ಭದಲ್ಲಿ ಗುಜರಾತ್‌ನ ಅಭಿವೃದ್ಧಿ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿರುವ ಜನಪರ ಕೆಲಸಗಳನ್ನು ಶ್ಲಾಘಿಸಿದರು. ಗುಜರಾತ್‌ನ ಜನರು ಕಾಂಗ್ರೆಸ್‌ನ ಆಡಳಿತವನ್ನು ದಶಕಗಳ ಹಿಂದೆಯೇ ದೂರ ತಳ್ಳಿದ್ದಾರೆ. ಸುಸ್ಥಿರ ಆಡಳಿತ ಮತ್ತು ಅಭಿವೃದ್ಧಿಪರ ಚಿಂತನೆಯ ಕಾರಣದಿಂದಲೇ ಜನರು ಬಿಜೆಪಿ ಮೇಲೆ ಬಿಕೆ ಇಟ್ಟಿದ್ದಾರೆ. ಅದೇ ಮಾದರಿಯನ್ನು ದೇಶದ ಉಳಿದ ರಾಜ್ಯಗಳಲ್ಲೂ ನಾವು ಜಾರಿಗೆ ತರುತ್ತಿದ್ದೇವೆ ಎಂದರು.

Read More
Next Story