
ಗುತ್ತಿಗೆ ನೇಮಕಾತಿ ಹೆಚ್ಚಳದ ಮೂಲಕ ಮೀಸಲಾತಿ ಹಕ್ಕು ಕಸಿಯಲಾಗುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಖಾಲಿ ಹುದ್ದೆಗಳ ಮೂಲಕ ಮೀಸಲಾತಿ ಕಸಿಯಲು ಮೋದಿ ಸರ್ಕಾರದ ಸಂಚು: ಖರ್ಗೆ ಆರೋಪ
ಸರ್ಕಾರಿ ಹುದ್ದೆಗಳನ್ನು ಖಾಲಿ ಇಡುವುದು, ಪಿಎಸ್ಯುಗಳಲ್ಲಿ ಕಾಯಂ ಉದ್ಯೋಗ ಕಡಿತ ಹಾಗೂ ಗುತ್ತಿಗೆ ನೇಮಕಾತಿ ಹೆಚ್ಚಳದ ಮೂಲಕ ಮೀಸಲಾತಿ ಹಕ್ಕು ಕಸಿಯಲಾಗುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಖಾಲಿ ಹುದ್ದೆಗಳು ಮತ್ತು ಗುತ್ತಿಗೆ ಆಧಾರಿತ ನೇಮಕಾತಿ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸಂವಿಧಾನ ನೀಡಿರುವ ಮೀಸಲಾತಿ ಹಕ್ಕುಗಳನ್ನು ‘ಹಿಂಬಾಗಿಲ’ ಮೂಲಕ ಕೊನೆಗೊಳಿಸುವ ಸಂಚು ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಸರ್ಕಾರಿ ಹುದ್ದೆಗಳನ್ನು ಉದ್ದೇಶಪೂರ್ವಕವಾಗಿ ಭರ್ತಿ ಮಾಡದೆ ಖಾಲಿ ಇಡುವ ಮೂಲಕ ಮೀಸಲಾತಿಯ ಅವಕಾಶಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
2015ರಿಂದ ಖಾಲಿ ಹುದ್ದೆಗಳ ಸಂಖ್ಯೆ ದ್ವಿಗುಣ: ಖರ್ಗೆ
2015ರಲ್ಲಿ ಕೇಂದ್ರ ಸರ್ಕಾರದಲ್ಲಿ 4.21 ಲಕ್ಷ ಹುದ್ದೆಗಳು ಖಾಲಿ ಇದ್ದವು. 2024ರ ವೇಳೆಗೆ ಈ ಸಂಖ್ಯೆ 8.24 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಖರ್ಗೆ ಹೇಳಿದ್ದಾರೆ. ರೈಲ್ವೆಯಲ್ಲಿ 2.40 ಲಕ್ಷ, ರಕ್ಷಣಾ ಇಲಾಖೆಯಲ್ಲಿ 2.41 ಲಕ್ಷ ಹಾಗೂ ಗೃಹ ಸಚಿವಾಲಯದಲ್ಲಿ 1.10 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪಿಎಸ್ಯುಗಳಲ್ಲಿ ಕಾಯಂ ಉದ್ಯೋಗ ಕಡಿತ ಆರೋಪ
ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ 5.1 ಲಕ್ಷ ಕಾಯಂ ಉದ್ಯೋಗಗಳು ಕಡಿಮೆಯಾಗಿವೆ ಎಂದು ಖರ್ಗೆ ಆರೋಪಿಸಿದ್ದಾರೆ. ಇದೇ ವೇಳೆ ಗುತ್ತಿಗೆ ಕಾರ್ಮಿಕರ ಪ್ರಮಾಣ ಶೇ.19ರಿಂದ ಶೇ.49ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಹುದ್ದೆಗಳನ್ನು ಖಾಲಿ ಇಟ್ಟರೆ ಮೀಸಲಾತಿಯಡಿ ಉದ್ಯೋಗ ಪಡೆಯುವ ಅವಕಾಶವೇ ಕಡಿಮೆಯಾಗುತ್ತದೆ. ಪಿಎಸ್ಯುಗಳನ್ನು ಮಾರಾಟ ಮಾಡಿದರೆ ಮೀಸಲಾತಿ ಆಧಾರಿತ ಉದ್ಯೋಗಗಳು ಕಡಿಮೆಯಾಗುತ್ತವೆ. ಖಾಯಂ ಉದ್ಯೋಗಗಳನ್ನು ಗುತ್ತಿಗೆ ಉದ್ಯೋಗಗಳಾಗಿ ಪರಿವರ್ತಿಸಿದರೆ ಮೀಸಲಾತಿಯ ವ್ಯಾಪ್ತಿಯೂ ಕುಗ್ಗುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಸಂವಿಧಾನ ತಿದ್ದುಪಡಿ ಅಗತ್ಯವಿಲ್ಲ: ಖರ್ಗೆ
ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಅಗತ್ಯವೇ ಇಲ್ಲ. ಮೀಸಲಾತಿ ಅನ್ವಯಿಸುವ ಉದ್ಯೋಗಗಳನ್ನೇ ಕಡಿಮೆ ಮಾಡಿದರೆ ಸಾಕು ಎಂದು ಖರ್ಗೆ ಆರೋಪಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಬಿಜೆಪಿ ನೀತಿ ಇದೀಗ ಬಹಿರಂಗವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಸರ್ಕಾರಿ ಹುದ್ದೆಗಳನ್ನು ಖಾಲಿ ಇಡುವುದು, ಪಿಎಸ್ಯುಗಳ ಖಾಸಗೀಕರಣಕ್ಕೆ ಮುಂದಾಗುವುದು ಮತ್ತು ಗುತ್ತಿಗೆ ನೇಮಕಾತಿಯನ್ನು ಹೆಚ್ಚಿಸುವುದು ಬಿಜೆಪಿಯ ನೀತಿಯಾಗಿದೆ. ಇದರ ಮೂಲಕ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇಡಬ್ಲ್ಯುಎಸ್ ವರ್ಗಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

