
ವಿಶ್ವಪ್ರಸಿದ್ಧ ಪಾಂಡವಾಣಿ ಜಾನಪದ ಗಾಯಕಿ, ಡಾ. ತೀಜನ್ ಬಾಯಿ
ಪ್ರಸಿದ್ಧ ಪಾಂಡವಾಣಿ ಜಾನಪದ ಗಾಯಕಿ, ಪದ್ಮವಿಭೂಷಣ ತೀಜನ್ ಬಾಯಿ ಇನ್ನಿಲ್ಲ
1956 ರಲ್ಲಿ ದುರ್ಗ್ ಜಿಲ್ಲೆಯ ಗನಿಯಾರಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ತೀಜನ್ ಬಾಯಿ, ಚಿಕ್ಕ ವಯಸ್ಸಿನಲ್ಲೇ ಮಹಾಭಾರತದ ಕಥೆಗಳನ್ನು ನಿರೂಪಿಸುವ ಉತ್ಸಾಹ ಬೆಳೆಸಿಕೊಂಡಿದ್ದರು.
ಛತ್ತೀಸ್ಗಢದ ಸಾಂಪ್ರದಾಯಿಕ ಕಥೆ ಹೇಳುವ ಕಲೆಯನ್ನು ತಮ್ಮ ಪ್ರಬಲ ಧ್ವನಿ ಮತ್ತು ಅಭಿವ್ಯಕ್ತಿ ಶೈಲಿಯ ಮೂಲಕವೇ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದ ವಿಶ್ವಪ್ರಸಿದ್ಧ ಪಾಂಡವಾಣಿ ಜಾನಪದ ಗಾಯಕಿ, ಡಾ. ತೀಜನ್ ಬಾಯಿ (70) ಅವರು ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಮೇ 27 ರಿಂದ ರಾಯಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಚಿಕಿತ್ಸೆ ಪಡೆಯುತ್ತಿದ್ದ ಅವರು, ಭಾನುವಾರ ಬೆಳಗಿನ ಜಾವ 3.15 ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಧಾನಿ ಮೋದಿ, ಸಿಎಂ ವಿಷ್ಣು ದೇವ್ ಸಾಯಿ ಸಂತಾಪ
ತೀಜನ್ ಬಾಯಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. "ಪ್ರಸಿದ್ಧ ಪಾಂಡವನಿ ಗಾಯಕಿ ತೀಜನ್ ಬಾಯಿ ಜಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಛತ್ತೀಸ್ಗಢದ ಜಾನಪದ ಕಲೆಗೆ ಜಾಗತಿಕ ಗುರುತು ನೀಡಿದ ಅವರ ಅಗಲಿಕೆ, ಕಲಾ ಜಗತ್ತಿಗೆ ಸರಿಪಡಿಸಲಾಗದ ನಷ್ಟ," ಎಂದು ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಏಮ್ಸ್ಗೆ ಭೇಟಿ ನೀಡಿ ಹಿರಿಯ ಕಲಾವಿದೆಗೆ ಗೌರವ ಸಲ್ಲಿಸಿದರು. "ಛತ್ತೀಸ್ಗಢದ ಜಾನಪದ ಸಂಸ್ಕೃತಿಯ ಅಮರ ಕಥೆಗಾರ್ತಿಯ ನಿಧನವು ಇಡೀ ರಾಜ್ಯ ಹಾಗೂ ರಾಷ್ಟ್ರದ ಸಾಂಸ್ಕೃತಿಕ ಪರಂಪರೆಗೆ ಭರಿಸಲಾಗದ ನಷ್ಟವಾಗಿದೆ," ಎಂದು ಕಂಬನಿ ಮಿಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಕೂಡ ತೀಜನ್ ಬಾಯಿ ಅವರನ್ನು 'ರಾಜ್ಯದ ಅಮೂಲ್ಯ ರತ್ನ' ಎಂದು ಬಣ್ಣಿಸಿ ಗೌರವ ಸಲ್ಲಿಸಿದ್ದಾರೆ.
ಸಂಕಷ್ಟಗಳ ನಡುವೆ ಮೂಡಿಬಂದ ಜಾಗತಿಕ ಪ್ರತಿಭೆ
1956 ರಲ್ಲಿ ದುರ್ಗ್ ಜಿಲ್ಲೆಯ ಗನಿಯಾರಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ತೀಜನ್ ಬಾಯಿ, ಚಿಕ್ಕ ವಯಸ್ಸಿನಲ್ಲೇ ಮಹಾಭಾರತದ ಕಥೆಗಳನ್ನು ನಿರೂಪಿಸುವ ಉತ್ಸಾಹ ಬೆಳೆಸಿಕೊಂಡಿದ್ದರು. ಆರಂಭದಲ್ಲಿ ಸಾಮಾಜಿಕ ವಿರೋಧ ಮತ್ತು ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ, ಅವರು ಧೃತಿಗೆಡದೆ ಸಾಂಪ್ರದಾಯಿಕ ಕಲಾ ಪ್ರಕಾರವಾದ 'ಪಾಂಡವಾಣಿ'ಯನ್ನು ದೇಶದ ಅತ್ಯಂತ ಜನಪ್ರಿಯ ಕಲೆಯನ್ನಾಗಿ ಮಾಡಿದರು. ನಾಟಕೀಯ ನಿರೂಪಣೆ, ವಿಶಿಷ್ಟ ಹಾಡುಗಾರಿಕೆ ಮತ್ತು ಸಂಗೀತದ ಪಕ್ಕವಾದ್ಯಗಳ ಮೂಲಕ ಮಹಾಭಾರತದ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸುತ್ತಿದ್ದ ಅವರು, ಕೇವಲ ಭಾರತ ಮಾತ್ರವಲ್ಲದೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜಪಾನ್, ರಷ್ಯಾ ಸೇರಿ ವಿಶ್ವದಾದ್ಯಂತ ಪ್ರದರ್ಶನ ನೀಡಿ ಜಾಗತಿಕ ಮನ್ನಣೆ ಗಳಿಸಿದ್ದರು.
ನಾಗರಿಕ ಪ್ರಶಸ್ತಿಗಳ ಗೌರವ
ಭಾರತೀಯ ಜಾನಪದ ಕಲೆಗೆ ಅವರು ನೀಡಿದ ಅಪ್ರತಿಮ ಕೊಡುಗೆ ಗುರುತಿಸಿ ಕೇಂದ್ರ ಸರ್ಕಾರವು ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅವರ ವಿಶಿಷ್ಟ ಕಲಾ ಸೇವೆ ಮತ್ತು ಸಾಂಸ್ಕೃತಿಕ ಪರಂಪರೆಗೆ ನೀಡಿದ ಕೊಡುಗೆಯನ್ನು ಇಡೀ ದೇಶ ಸ್ಮರಿಸುತ್ತದೆ.

