
Workers Protest | ಖಾಸಗಿ ಕಂಪನಿ ಕಾರ್ಮಿಕರ ಬೃಹತ್ ಪ್ರತಿಭಟನೆ; ಉದ್ವಿಗ್ನ ಪರಿಸ್ಥಿತಿ, ಲಘು ಲಾಠಿ ಪ್ರಹಾರ
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕನಿಷ್ಠ ವೇತನ ಮತ್ತು ಕೆಲಸದ ಅವಧಿ ನಿಗದಿಗೆ ಆಗ್ರಹಿಸಿ ಖಾಸಗಿ ಕಂಪನಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದೆ.
ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಮೋಟಾಹಾಲ್ಡು ಪ್ರದೇಶದಲ್ಲಿ ಸೋಮವಾರ ಖಾಸಗಿ ಕಂಪನಿಯ ನೂರಾರು ಉದ್ಯೋಗಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ನಡೆದಿದೆ.
ಉದ್ವಿಗ್ನಗೊಂಡ ಪ್ರತಿಭಟನೆ
ಕೈಗಾರಿಕಾ ಘಟಕದ ಗೇಟ್ ಮುಂದೆ ಕಾರ್ಮಿಕರು ಧರಣಿ ಕುಳಿತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರತಿಭಟನೆಗೆ ಬೆಂಬಲ ನೀಡಲು ಬಂದಿದ್ದ ಯುವ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಜನಸಂದಣಿಯನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರ್ಮಿಕರ ಪ್ರಮುಖ ಬೇಡಿಕೆಗಳು:
• ಕಾರ್ಮಿಕರು ತಿಂಗಳಿಗೆ ಕನಿಷ್ಠ 20,000 ರೂ. ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
• ಕೆಲಸದ ಅವಧಿ: ದಿನಕ್ಕೆ ಕಡ್ಡಾಯವಾಗಿ 8 ಗಂಟೆಗಳ ಕೆಲಸದ ಅವಧಿ ನಿಗದಿಪಡಿಸಬೇಕು.
• ಶೋಷಣೆಗೆ ಮುಕ್ತಿ: ನಿಗದಿತ ಅವಧಿಗಿಂತ ಹೆಚ್ಚು ಕಾಲ ಕೆಲಸ ಮಾಡಿಸಿಕೊಂಡರೂ ಹೆಚ್ಚುವರಿ ವೇತನ ನೀಡುತ್ತಿಲ್ಲ ಎಂದು ಕಾರ್ಮಿಕರು ದೂರಿದ್ದಾರೆ.
• ಮಹಿಳಾ ಕಾರ್ಮಿಕರ ಆಕ್ರೋಶ: ಕಂಪನಿಯ ಆಡಳಿತ ಮಂಡಳಿಯು ಕುಡಿಯುವ ನೀರು ಮತ್ತು ಶೌಚಾಲಯ ಬಳಕೆಯಂತಹ ಕನಿಷ್ಠ ಸೌಲಭ್ಯಗಳಿಗೂ ನಿರ್ಬಂಧ ಹೇರುತ್ತಿದೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದೆ ಎಂದು ಮಹಿಳಾ ಕಾರ್ಮಿಕರು ಅಮಾನವೀಯ ವರ್ತನೆಯ ಆರೋಪ ಮಾಡಿದ್ದಾರೆ.
• ಉದ್ಯೋಗ ಭದ್ರತೆ: ಯಾವುದೇ ಕಾರಣ ನೀಡದೆ ಕೆಲಸದಿಂದ ತೆಗೆದುಹಾಕಲಾದ ಕಾರ್ಮಿಕರನ್ನು ತಕ್ಷಣವೇ ಮರುನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಮಧ್ಯಸ್ಥಿಕೆ ವಹಿಸಿದ ಶಾಸಕರು
ಸ್ಥಳೀಯ ಶಾಸಕ ಮೋಹನ್ ಸಿಂಗ್ ಬಿಷ್ಟ್ ಸ್ಥಳಕ್ಕೆ ಭೇಟಿ ನೀಡಿ, ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಸಂಧಾನ ನಡೆಸಲು ಪ್ರಯತ್ನಿಸಿದರು. "ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಪರಿಗಣಿಸುವಂತೆ ಕಂಪನಿಗೆ ಸೂಚಿಸಿದ್ದೇನೆ ಮತ್ತು ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೂ ಮಾತನಾಡಲಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಮಾತುಕತೆಗಳು ನಡೆಯುತ್ತಿವೆಯಾದರೂ, ಇನ್ನು ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

