
‘ಉಪ್ಪಿದಾದ MBBS’ ಮಾದರಿಯಲ್ಲಿ ನೀಟ್ ಹಗರಣ - 24 ಮಂದಿ ಬಂಧನ
ಬಿಹಾರದ ಲಖಿಸರಾಯಿಯಲ್ಲಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ ಅಭ್ಯರ್ಥಿಗಳ ಬದಲು ‘ಸಾಲ್ವರ್’ಗಳನ್ನು ಪರೀಕ್ಷೆಗೆ ಕೂರಿಸಿದ್ದ ಆರೋಪದ ಮೇಲೆ 24 ಮಂದಿಯನ್ನು ಬಂಧಿಸಲಾಗಿದೆ.
ಬಿಹಾರದ ಲಖಿಸರಾಯಿಯಲ್ಲಿ ನಡೆದ ನೀಟ್-ಯುಜಿ ಮರುಪರೀಕ್ಷೆಯ ವೇಳೆ ‘ಉಪ್ಪಿದಾದ MBBS’ ಸಿನಿಮಾವನ್ನು ನೆನಪಿಸುವ ರೀತಿಯ ಭಾರೀ ವಂಚನೆ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಪರೀಕ್ಷಾರ್ಥಿಗಳ ಬದಲು ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸಿ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯಿಸುವ ಸಂಚು ನಡೆದಿರುವ ಆರೋಪ ಕೇಳಿಬಂದಿದೆ.
ಈ ಪ್ರಕರಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಬಯೋಮೆಟ್ರಿಕ್ ಕಂಪನಿಯ ಸಿಬ್ಬಂದಿ ಸೇರಿ ಒಟ್ಟು 24 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೀಟ್ ಮರುಪರೀಕ್ಷೆಯ ವೇಳೆ ಬಯಲಾದ ಜಾಲ
ಪ್ರಶ್ನೆಪತ್ರ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ರದ್ದಾಗಿದ್ದ ನೀಟ್ (ಯುಜಿ) ಪರೀಕ್ಷೆಯ ಮರುಪರೀಕ್ಷೆ ಭಾನುವಾರ ನಡೆದಿತ್ತು. ಇದೇ ವೇಳೆ ಈ ವಂಚನೆ ಜಾಲ ಬಯಲಾಗಿದೆ. ಪೊಲೀಸರ ಪ್ರಕಾರ, ಗಯಾದ ಎಎನ್ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಅರ್ಪಿತ್ ರಾಜ್ ಈ ಜಾಲದ ಪ್ರಮುಖ ರೂವಾರಿ ಎಂದು ಶಂಕಿಸಲಾಗಿದೆ. 2024ರ ನೀಟ್ ಪ್ರಶ್ನೆಪತ್ರ ಸೋರಿಕೆ ಪ್ರಕರಣದಲ್ಲಿಯೂ ಸಿಬಿಐ ಈತನನ್ನು ವಿಚಾರಣೆ ನಡೆಸಿತ್ತು. ಪಟ್ನಾ ಮೆಡಿಕಲ್ ಕಾಲೇಜಿನ ಮೂರನೇ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಮಯಾಂಕ್ ಕಶ್ಯಪ್ನನ್ನೂ ಪೊಲೀಸರು ಬಂಧಿಸಿದ್ದಾರೆ.
ಬಯೋಮೆಟ್ರಿಕ್ ಕಂಪನಿ ಸಿಬ್ಬಂದಿಯ ಪಾತ್ರ
ತನಿಖೆಯಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಬಯೋಮೆಟ್ರಿಕ್ ಕಂಪನಿಯ 14 ಸಿಬ್ಬಂದಿಯೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮಯಾಂಕ್ ಕಶ್ಯಪ್ ಬಯೋಮೆಟ್ರಿಕ್ ಕಂಪನಿಯ ಸಿಬ್ಬಂದಿಯಂತೆ ನಟಿಸಿ ಹಸನ್ಪುರ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿದ್ದ ಎನ್ನಲಾಗಿದೆ. ಆತನ ಬಂಧನದ ಬಳಿಕ ಪೊಲೀಸರು ಲಖಿಸರಾಯಿಯ ಕೆಆರ್ಕೆ ಹೈಯರ್ ಸೆಕೆಂಡರಿ ಶಾಲೆ ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ದಾಳಿ ನಡೆಸಿದರು. ಈ ವೇಳೆ ಏಳು ಅಭ್ಯರ್ಥಿಗಳು ಹಾಗೂ ಹಲವರನ್ನು ಬಂಧಿಸಲಾಗಿದೆ.
ಪರೀಕ್ಷೆಯಲ್ಲಿ ನಿಜವಾದ ಅಭ್ಯರ್ಥಿಗಳ ಬದಲು ತರಬೇತಿ ಪಡೆದ ನಕಲಿ ಅಭ್ಯರ್ಥಿಗಳ ಕೂರಿಸುವ ಮೂಲಕ ಪರೀಕ್ಷಾ ಪ್ರಕ್ರಿಯೆಯನ್ನು ದುರ್ಬಳಕೆ ಮಾಡುವ ಯೋಜನೆ ರೂಪಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಒಳಗಿನ ಕೆಲ ಸಿಬ್ಬಂದಿ ಮತ್ತು ಹೊರಗಿನ ವ್ಯಕ್ತಿಗಳ ಸಹಾಯದಿಂದ ಈ ವಂಚನೆ ನಡೆಸಲು ಪ್ರಯತ್ನಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಬಂಧನ
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನರ್ಸಿಂಗ್ ವಿದ್ಯಾರ್ಥಿನಿ ಪೂನಂ ಕುಮಾರಿ ಮತ್ತೊಬ್ಬ ಅಭ್ಯರ್ಥಿಯ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಅದೇ ರೀತಿ ಏಮ್ಸ್ ರಾಯ್ಬರೇಲಿಯ ವಿದ್ಯಾರ್ಥಿ ಸೌರಭ್ ಝಾ, ದೆಹಲಿಯ ಶಾಹದ್ರಾ ಮೆಡಿಕಲ್ ಕಾಲೇಜಿನ ಇಂಟರ್ನ್ ಅಮನ್ ಅಗರ್ವಾಲ್ ಹಾಗೂ ನಳಂದಾ ಮೆಡಿಕಲ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿ ಸಂಜೀತ್ ಮತ್ತು ಆತನ ಸಹೋದರನನ್ನೂ ಬಂಧಿಸಲಾಗಿದೆ.
ನೀಟ್ ಪರೀಕ್ಷೆಯ ಅವಧಿಯಲ್ಲಿ ವಿದ್ಯಾರ್ಥಿಗಳು ಕ್ಯಾಂಪಸ್ ತೊರೆಯದಂತೆ ಹಲವು ವೈದ್ಯಕೀಯ ಕಾಲೇಜುಗಳು ಸೂಚನೆ ನೀಡಿದ್ದವು. ಕೆಲವು ಕಾಲೇಜುಗಳು ವಿದ್ಯಾರ್ಥಿಗಳ ಹಾಜರಾತಿ ಖಚಿತಪಡಿಸಿಕೊಳ್ಳಲು ವಿಶೇಷ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದವು. ಆದರೆ ಕೆಲ ವಿದ್ಯಾರ್ಥಿಗಳು ಅನಾರೋಗ್ಯದ ನೆಪ ಹೇಳಿ ಕಾಲೇಜುಗಳಿಂದ ಹೊರಹೋಗಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ. ಮಯಾಂಕ್ ಕಶ್ಯಪ್ ಕೂಡ ಅನಾರೋಗ್ಯದ ಕಾರಣ ನೀಡಿ ಕಾಲೇಜಿನಿಂದ ಹೊರಬಂದು ಬಳಿಕ ಲಖಿಸರಾಯಿಯಲ್ಲಿ ಬಂಧನಕ್ಕೊಳಗಾಗಿದ್ದಾನೆ.
ತನಿಖೆ ಮುಂದುವರಿಕೆ
ಈ ವಂಚನೆ ಜಾಲದ ಹಿಂದೆ ಇನ್ನೂ ಎಷ್ಟು ಮಂದಿ ಇದ್ದಾರೆ, ಎಷ್ಟು ಅಭ್ಯರ್ಥಿಗಳು ಇದರಿಂದ ಲಾಭ ಪಡೆದಿದ್ದಾರೆ ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿ ಎಷ್ಟರ ಮಟ್ಟಿಗೆ ಹಸ್ತಕ್ಷೇಪ ನಡೆದಿದೆ ಎಂಬುದರ ಕುರಿತು ಬಿಹಾರ ಪೊಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಮತ್ತೆ ವಂಚನೆ ಆರೋಪ ಕೇಳಿಬಂದಿರುವುದು ದೇಶಾದ್ಯಂತ ಆತಂಕ ಮೂಡಿಸಿದ್ದು, ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ಭದ್ರತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಉದ್ಭವಿಸಿವೆ.

