NEET illegality: Protests intensify at Jantar Mantar, Wangchuk loses weight drastically
x

ಉಪವಾಸ ನಿರತರಾಗಿರುವ ಸೋನಮ್ ವಾಂಗ್‌ಚುಕ್ ಹಾಗೂ ಸಂಗಡಿಗರು. 

NEET ಅಕ್ರಮ: ಜಂತರ್ ಮಂತರ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ, ವಾಂಗ್‌ಚುಕ್ ತೂಕದಲ್ಲಿ ಭಾರಿ ಇಳಿಕೆ

ಉಪವಾಸ ನಿರತರಾಗಿರುವ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಕುರಿತು ವೈದ್ಯಕೀಯ ಬುಲೆಟಿನ್ ಬಿಡುಗಡೆಯಾಗಿದೆ. ಕಳೆದ ಏಳು ದಿನಗಳಲ್ಲಿ ಅವರ ದೇಹದ ತೂಕ ಸುಮಾರು 6 ಕೆಜಿಯಷ್ಟು ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


Click the Play button to hear this message in audio format

ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಸರಣಿ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (CJP) ನಡೆಸುತ್ತಿರುವ ಬೃಹತ್ ಪ್ರತಿಭಟನೆ ಭಾನುವಾರಕ್ಕೆ (ಜು. 5) 16ನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ, ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪ್ರಖ್ಯಾತ ಹವಾಮಾನ ಹಾಗೂ ಶಿಕ್ಷಣ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಇಂದಿಗೆ 8ನೇ ದಿನ ತಲುಪಿದೆ.

ವಾಂಗ್‌ಚುಕ್ ತೂಕದಲ್ಲಿ ಗಣನೀಯ ಇಳಿಕೆ

ಉಪವಾಸ ನಿರತರಾಗಿರುವ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಕುರಿತು ವೈದ್ಯಕೀಯ ಬುಲೆಟಿನ್ ಬಿಡುಗಡೆಯಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದರೂ, ಕಳೆದ ಏಳು ದಿನಗಳಲ್ಲಿ ಅವರ ದೇಹದ ತೂಕ ಸುಮಾರು 6 ಕೆಜಿಯಷ್ಟು ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ತೂಕ 60.95 ಕೆ.ಜಿಯಿದ್ದು, ವೈದ್ಯರ ಪ್ರಕಾರ ವಾಂಗ್‌ಚುಕ್ ಅವರು ಮಾನಸಿಕವಾಗಿ ಜಾಗರೂಕರಾಗಿದ್ದು, ಅವರ ಆರೋಗ್ಯದ ಮಟ್ಟ ಸದ್ಯಕ್ಕೆ ತೃಪ್ತಿಕರವಾಗಿದೆ ಎಂದಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. "ಪದೇ ಪದೇ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳು ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳ ಭವಿಷ್ಯವನ್ನು ಧ್ವಂಸಗೊಳಿಸಿವೆ" ಎಂದು ಸಿಜೆಪಿ ಗಂಭೀರವಾಗಿ ಆರೋಪಿಸಿದೆ.

'ನ್ಯಾಯಕ್ಕಾಗಿ ಕುಟುಂಬದ ಆರ್ತನಾದ'

ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಲು ನೀಟ್ (NEET) ಆಕಾಂಕ್ಷಿ ರಿಯಾ ಕುಮಾರಿ ಥಾಪಾ ಅವರ ಪೋಷಕರು ಭಾನುವಾರ ಜಂತರ್ ಮಂತರ್ ತಲುಪಿದ್ದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, "ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ರಿಯಾ ಕುಮಾರಿ ಅವರ ವೈದ್ಯರಾಗುವ ಕನಸು ಭಗ್ನಗೊಂಡಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸೇನೆಯಿಂದ ನಿವೃತ್ತರಾಗಿರುವ ರಿಯಾ ಅವರ ತಂದೆ ಪ್ರತಿಭಟನೆಯಲ್ಲಿ ಭಾಗವಹಿಸಿ, "ನಮ್ಮ ಕುಟುಂಬ ಅನುಭವಿಸಿದ ಈ ಅಪಾರ ನಷ್ಟ ಮತ್ತು ನೋವನ್ನು ದೇಶದ ಬೇರೆ ಯಾವುದೇ ಕುಟುಂಬ ಅನುಭವಿಸಬಾರದು. ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು" ಎಂದು ಕಣ್ಣೀರಿಟ್ಟಿದ್ದಾರೆ. "ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಿದ ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ನಾವು ಧೃಢವಾಗಿ ಹೋರಾಡಲಿದ್ದೇವೆ" ಎಂದು ಸಿಜೆಪಿ ಭರವಸೆ ನೀಡಿದೆ.

ಆಂದೋಲನಕ್ಕೆ ಹೆಚ್ಚಿದ ಜನಬೆಂಬಲ

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಮೇ. 3 ರ ನೀಟ್ ಪರೀಕ್ಷೆಯನ್ನು ಅಕ್ರಮಗಳ ಹಿನ್ನೆಲೆಯಲ್ಲಿ ರದ್ದುಗೊಳಿಸಿ, ಜೂ. 21 ರಂದು ಮರುಪರೀಕ್ಷೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜೂ. 20 ರಿಂದ ಆರಂಭವಾದ ಸಿಜೆಪಿ ಆಂದೋಲನಕ್ಕೆ ದೇಶದ ವಿವಿಧ ಮೂಲೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಪ್ರತಿಭಟನೆಗೆ ಬೆಂಬಲ ಘೋಷಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಜು. 7 ರಂದು ಜಂತರ್ ಮಂತರ್‌ಗೆ ತನ್ನ ಅಧಿಕೃತ ನಿಯೋಗವನ್ನು ಕಳುಹಿಸಿಕೊಡಲು ನಿರ್ಧರಿಸಿದೆ. "ಪ್ರತಿಯೊಬ್ಬ ವಿದ್ಯಾರ್ಥಿಗೂ ಪಾರದರ್ಶಕ, ನ್ಯಾಯಯುತ ಮತ್ತು ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ಪಡೆಯುವ ಹಕ್ಕಿದೆ. ಪರೀಕ್ಷೆಗಳ ಪಾವಿತ್ರ್ಯತೆ ಕಾಯ್ದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ" ಎಂದು ರೈತ ಸಂಘಟನೆ ವಿದ್ಯಾರ್ಥಿ ಯುವಜನರ ಹೋರಾಟಕ್ಕೆ ಒಗ್ಗಟ್ಟು ಪ್ರಕಟಿಸಿದೆ.

ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ ನಾಯಕ

ಮತ್ತೊಂದೆಡೆ, ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಸದಸ್ಯರು ಪ್ರತಿಭಟನಾ ಸ್ಥಳದಲ್ಲಿ ಪ್ರತ್ಯೇಕ ವೇದಿಕೆ ನಿರ್ಮಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಡ್ಯಾನಿಶ್ ಅಲಿ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು 7ನೇ ದಿನಕ್ಕೆ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದರಿಂದ, ಅವರನ್ನು ಶನಿವಾರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ವಿದ್ಯಾರ್ಥಿ ನಾಯಕರಾದ ನೇಹಾ, ಮನೀಶ್, ಹೃಷಿಕೇಶ್, ದೀಪಕ್ ಕುಮಾರ್ ವರ್ಮಾ ಮತ್ತು ಅಮೀನ್ ಅವರು ತಮ್ಮ ಪಟ್ಟನ್ನು ಸಡಿಲಿಸದೆ ಉಪವಾಸ ಮುಂದುವರಿಸಿದ್ದಾರೆ.

Read More
Next Story