
ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಉರಳಿಬಿದ್ದಿರುವ ಕಾರು
ಹಿಮಾಚಲ ಪ್ರದೇಶದಲ್ಲಿ ಭೀಕರ ದುರಂತ: ಕಂದಕಕ್ಕೆ ಉರುಳಿದ ಕಾರು, ಬೆಂಗಳೂರು ದಂಪತಿ ಸೇರಿ 8 ಮಂದಿ ಸಾವು!
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಹಿಮಾಚಲ ಪ್ರದೇಶದ ಡಲ್ಹೌಸಿಗೆ ಪ್ರವಾಸಕ್ಕೆ ಬಂದಿದ್ದ ಒಂದು ಕುಟುಂಬ ಸಚ್ ಪಾಸ್ನ ಹಿಮಾವೃತ ಪ್ರದೇಶಗಳನ್ನು ವೀಕ್ಷಿಸಲು ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಪಡೆದಿತ್ತು.
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಅತ್ಯಂತ ಕಡಿದಾದ ಹಾಗೂ ದುರ್ಗಮ ಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ದಂಪತಿ ಹಾಗೂ ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಪ್ರವಾಸಿಗರು ದುರ್ಮರಣಕ್ಕೀಡಾಗಿದ್ದಾರೆ. ಚಂಬಾ ಜಿಲ್ಲೆಯ ಚುರಾಹ್ ಉಪವಿಭಾಗದ ಬೈರಗಢ್–ಸಚ್ ಪಾಸ್–ಕಿಲ್ಲರ್ ಮಾರ್ಗದ 'ಕಾಲಾಬನ್' ಎಂಬ ಪ್ರದೇಶದ ಬಳಿ ಈ ಘಟನೆ ನಡೆದಿದೆ.
ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 500 ಮೀಟರ್ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಈ ಇಡೀ ಕುಟುಂಬದ ಸದಸ್ಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ನಡೆದಿದ್ದು ಹೇಗೆ?
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಹಿಮಾಚಲ ಪ್ರದೇಶದ ಡಲ್ಹೌಸಿಗೆ ಪ್ರವಾಸಕ್ಕೆ ಬಂದಿದ್ದ ಒಂದು ಕುಟುಂಬ ಸಚ್ ಪಾಸ್ನ ಹಿಮಾವೃತ ಪ್ರದೇಶಗಳನ್ನು ವೀಕ್ಷಿಸಲು ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಪಡೆದಿತ್ತು. ಅದೇ ಹೋಟೆಲ್ ಅಥವಾ ರೆಸಾರ್ಟ್ನಲ್ಲಿ ತಂಗಿದ್ದ ಛತ್ತೀಸ್ಗಢ ಮೂಲದ ಮತ್ತೊಂದು ಪ್ರವಾಸಿ ಕುಟುಂಬದೊಂದಿಗೂ ಇವರು ವಾಹನವನ್ನು ಹಂಚಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಬೈರಗಢ್ ಚೆಕ್ಪೋಸ್ಟ್ನಿಂದ ಸಚ್ ಪಾಸ್ನತ್ತ ಹೊರಟಿದ್ದ ಈ ವಾಹನವು ರಾತ್ರಿಯಾದರೂ ನಿಗದಿತ ಸ್ಥಳಕ್ಕೆ ತಲುಪದೆ ನಾಪತ್ತೆಯಾಗಿತ್ತು.
ಜಿಪಿಎಸ್ (GPS) ಮೂಲಕ ಪತ್ತೆಯಾದ ವಾಹನ!
ಶುಕ್ರವಾರ ರಾತ್ರಿ ಕಳೆದರೂ ಟ್ಯಾಕ್ಸಿ ಮರಳಿ ಬಾರದಿದ್ದಾಗ ಆತಂಕಗೊಂಡ ವಾಹನದ ಮಾಲೀಕರು, ತಕ್ಷಣವೇ ಜಿಪಿಎಸ್ (GPS) ಮೂಲಕ ಕಾರಿನ ಚಲನವಲನವನ್ನು ಪರಿಶೀಲಿಸಿದ್ದಾರೆ. ಆಗ ವಾಹನವು ಕಾಲಾಬನ್ ಬಳಿ ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ಸ್ತಬ್ಧವಾಗಿರುವುದು ಕಂಡುಬಂದಿದೆ. ತಕ್ಷಣವೇ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಶನಿವಾರದಂದು ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಕಾರು ಕಂದಕಕ್ಕೆ ಉರುಳಿರುವುದು ಬೆಳಕಿಗೆ ಬಂದಿದೆ.
ಮುಖ್ಯಮಂತ್ರಿಗಳ ಕಂಬನಿ
ಈ ಭೀಕರ ದುರಂತದ ಕುರಿತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಚಂಬಾ ಜಿಲ್ಲೆಯ ಕಾಲಾಬನ್ ಮತ್ತು ಶತ್ರುಂಡಿ ನಡುವೆ ಸಂಭವಿಸಿದ ಈ ಅಪಘಾತ ಅತ್ಯಂತ ಹೃದಯವಿದ್ರಾವಕವಾಗಿದೆ. ದುರ್ಗಮ ಭೌಗೋಳಿಕ ಪರಿಸ್ಥಿತಿ ಮತ್ತು ಮೊಬೈಲ್ ನೆಟ್ವರ್ಕ್ ಇಲ್ಲದ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ. ಆದಾಗ್ಯೂ ಸ್ಥಳೀಯ ಆಡಳಿತ ಮತ್ತು ಎನ್ಡಿಆರ್ಎಫ್ (NDRF) ತಂಡಗಳು ಶವಗಳ ಹೊರತೆಗೆಯುವಿಕೆಗೆ ಶ್ರಮಿಸುತ್ತಿವೆ" ಎಂದು ಅವರು ತಿಳಿಸಿದ್ದಾರೆ.
ದುರ್ಗಮ ಹಾದಿ: ರಕ್ಷಣಾ ಕಾರ್ಯಾಚರಣೆಗೆ ನೆಟ್ವರ್ಕ್ ಅಡ್ಡಿ
ಅಪಘಾತ ಸಂಭವಿಸಿದ ಸಚ್ ಪಾಸ್ ಮಾರ್ಗವು ಹಿಮಾಚಲ ಪ್ರದೇಶದ ಅತ್ಯಂತ ಅಪಾಯಕಾರಿ ಹಾಗೂ ಕಡಿದಾದ ರಸ್ತೆಗಳಲ್ಲಿ ಒಂದಾಗಿದೆ. ಇತ್ತೀಚಿನ ಹಿಮಪಾತ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಚಾಲಕನಿಗೆ ರಸ್ತೆ ಕಾಣಿಸದೆ ನಿಯಂತ್ರಣ ತಪ್ಪಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಂದಕಕ್ಕೆ ಇಳಿಯಲು ನೇರವಾದ ದಾರಿ ಇಲ್ಲದ ಕಾರಣ ಹಾಗೂ ಮೊಬೈಲ್ ಸಿಗ್ನಲ್ ಇಲ್ಲದ ಕಾರಣ ಶನಿವಾರ ತಡರಾತ್ರಿಯವರೆಗೂ ರಕ್ಷಣಾ ಕಾರ್ಯಾಚರಣೆಗೆ ಭಾರಿ ಅಡಚಣೆಯಾಗಿತ್ತು.
ಚಂಬಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಜಯ್ ಕುಮಾರ್ ಸಕ್ಲಾನಿ ನೇತೃತ್ವದಲ್ಲಿ ಸದ್ಯ ಸ್ಥಳೀಯರು ಮತ್ತು ಪರಿಣತರ ತಂಡವು ಕಂದಕದಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯವನ್ನು ಮುಂದುವರಿಸಿದ್ದು, ಮೃತರ ಸಂಪೂರ್ಣ ಗುರುತು ಪತ್ತೆ ಹಚ್ಚಲಾಗುತ್ತಿದೆ. ಪ್ರವಾಸಿಗರ ಕುಟುಂಬಸ್ಥರಿಗೆ ಈಗಾಗಲೇ ಮಾಹಿತಿ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

