ಮುಂಬೈನಲ್ಲಿ ನಡುಕ ಹುಟ್ಟಿಸಿದ ಬಿರಿಯಾನಿ ಮತ್ತು ಕಲ್ಲಂಗಡಿ ಫೀಸ್ಟ್: ಒಂದೇ ಕುಟುಂಬದ ನಾಲ್ವರು ಬಲಿ!
x
ಬಿರಿಯಾನಿ, ಕಲ್ಲಂಗಡಿ ಸವಿದಿದ್ದ ಕುಟುಂಬ ದುರಂತ ಸಾವು

ಮುಂಬೈನಲ್ಲಿ ನಡುಕ ಹುಟ್ಟಿಸಿದ ಬಿರಿಯಾನಿ ಮತ್ತು ಕಲ್ಲಂಗಡಿ ಫೀಸ್ಟ್: ಒಂದೇ ಕುಟುಂಬದ ನಾಲ್ವರು ಬಲಿ!

ಮುಂಬೈನಲ್ಲಿ ಬಿರಿಯಾನಿ ಮತ್ತು ಕಲ್ಲಂಗಡಿ ಸೇವಿಸಿದ ಒಂದೇ ಕುಟುಂಬದ ನಾಲ್ವರು 12 ಗಂಟೆಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ.


ಶನಿವಾರ ರಾತ್ರಿ ಸಂಭ್ರಮದಿಂದ ಬಿರಿಯಾನಿ ಊಟ ಸವಿದಿದ್ದ ಆ ಕುಟುಂಬ, ಕೆಲವೇ ಗಂಟೆಗಳಲ್ಲಿ ಸ್ಮಶಾನ ಮೌನಕ್ಕೆ ಶರಣಾಗಿದೆ. ಕೇವಲ 12 ಗಂಟೆಗಳ ಅಂತರದಲ್ಲಿ ತಂದೆ-ತಾಯಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿರುವ ಘಟನೆ ಇಡೀ ಮುಂಬೈ ನಗರವನ್ನು ಆಘಾತಕ್ಕೆ ದೂಡಿದೆ.

ನಡೆದಿದ್ದೇನು?

ಸ್ಥಳೀಯ ವ್ಯಾಪಾರಿ ಅಬ್ದುಲ್ಲಾ ಅಬ್ದುಲ್ ಕಾದರ್ (40), ಅವರ ಪತ್ನಿ ನಸ್ರೀನ್ (35), ಮತ್ತು ಮಕ್ಕಳಾದ ಆಯೇಷಾ (16) ಹಾಗೂ ಜೈನಾಬ್ (13) ಶನಿವಾರ ರಾತ್ರಿ 10:30ರ ಸುಮಾರಿಗೆ ಸಂಬಂಧಿಕರೊಂದಿಗೆ ಸೇರಿ ಬಿರಿಯಾನಿ ಊಟ ಮಾಡಿದ್ದರು. ಅದಾದ ನಂತರ ಮನೆಗೆ ಮರಳಿದ ಕುಟುಂಬದವರು ರಾತ್ರಿ 1 ಗಂಟೆಯ ಸುಮಾರಿಗೆ ಸಿಹಿಗಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು.

ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಎಲ್ಲರಿಗೂ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಪರಿಸ್ಥಿತಿ ಬಿಗಡಾಯಿಸಿದಾಗ ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತು.

12 ಗಂಟೆಗಳಲ್ಲಿ ನಾಲ್ವರು ಸಾವು:

ಚಿಕಿತ್ಸೆ ಫಲಕಾರಿಯಾಗದೆ ಮೊದಲು ಕಿರಿಯ ಪುತ್ರಿ ಜೈನಾಬ್ (10:15 am) ಸಾವನ್ನಪ್ಪಿದಳು. ನಂತರ ತಾಯಿ ನಸ್ರೀನ್ ಮತ್ತು ಹಿರಿಯ ಪುತ್ರಿ ಆಯೇಷಾ ಕೊನೆಯುಸಿರೆಳೆದರು. ರಾತ್ರಿ 10:30ರ ವೇಳೆಗೆ ತಂದೆ ಅಬ್ದುಲ್ಲಾ ಕೂಡ ಮೃತಪಟ್ಟಿದ್ದು, ಇಡೀ ಕುಟುಂಬವೇ ದುರಂತ ಅಂತ್ಯ ಕಂಡಿದೆ.

ಸಾವಿಗೆ ಕಾರಣವೇನು? ತನಿಖೆ ಚುರುಕು

ಪ್ರಾಥಮಿಕವಾಗಿ ಇದು 'ಫುಡ್ ಪಾಯಿಸನಿಂಗ್' (ಆಹಾರ ವಿಷಾಹಾರ) ಎಂದು ಶಂಕಿಸಲಾಗಿದೆ. ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಈ ಬಗ್ಗೆ ತನಿಖೆ ನಡೆಸುತ್ತಿವೆ:

• ಕಲ್ಲಂಗಡಿ ಹಣ್ಣಿನ ಪರೀಕ್ಷೆ: ಕುಟುಂಬದವರು ತಿಂದು ಉಳಿಸಿದ್ದ ಕಲ್ಲಂಗಡಿ ಹಣ್ಣಿನ ತುಂಡನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

• ವಿಷಕಾರಿ ಅಂಶದ ಶಂಕೆ: ಹಣ್ಣಿನಲ್ಲಿ ಯಾವುದಾದರೂ ವಿಷಕಾರಿ ರಾಸಾಯನಿಕ ಅಥವಾ ಕಲಬೆರಕೆ ಇತ್ತೇ ಎಂಬ ಬಗ್ಗೆ ರಾಜ್ಯ ಆಹಾರ ಮತ್ತು ಔಷಧ ಇಲಾಖೆ (FDA) ತನಿಖೆ ನಡೆಸುತ್ತಿದೆ.

• ವೈದ್ಯಕೀಯ ವರದಿ: ಮೃತದೇಹಗಳ ವಿಸ್ಸೆರಾ (Viscera) ವರದಿಯನ್ನು ಕಾಯಲಾಗುತ್ತಿದ್ದು, ಹಿಸ್ಟೋಪಾಥಾಲಜಿ ಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.

"ಅವರು ಆಸ್ಪತ್ರೆಗೆ ಬಂದಾಗ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದರು ಮತ್ತು ಸಂಪೂರ್ಣ ಸುಸ್ತಾಗಿದ್ದರು. ಕಲ್ಲಂಗಡಿ ಸೇವಿಸಿದ ನಂತರ ಹೀಗಾಗಿದೆ ಎಂದು ಅವರು ತಿಳಿಸಿದ್ದರು" ಎಂದು ಕುಟುಂಬಕ್ಕೆ ಚಿಕಿತ್ಸೆ ನೀಡಿದ್ದ ಡಾ. ಜಿಯಾದ್ ಖುರೇಷಿ ತಿಳಿಸಿದ್ದಾರೆ.

Read More
Next Story