
ಮುಸ್ಲಿಂ ಸಮುದಾಯಕ್ಕೆ ಸೇರಿದ ಭೋಜಶಾಲಾ ಸಂಕೀರ್ಣ ಹಿಂದೂ ದೇಗುಲ ಎಂದು ಘೋಷಿಸಿದ ಕೋರ್ಟ್
ಮಧ್ಯಪ್ರದೇಶದ ಧಾರ ಜಿಲ್ಲೆಯ ಭೋಜಶಾಲಾ ಸಂಕೀರ್ಣವು ಸರಸ್ವತಿ ದೇಗುಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮುಸ್ಲಿಂ ಸಮುದಾಯಕ್ಕೆ ಮಸೀದಿಗಾಗಿ ಪರ್ಯಾಯ ಭೂಮಿ ನೀಡುವಂತೆ ಸರ್ಕಾರಕ್ಕೆ ತಿಳಿಸಿದೆ.
ದಶಕಗಳ ಕಾಲ ನಡೆದ ಕಾನೂನು ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವು ವಾಗ್ದೇವಿ ಸರಸ್ವತಿ ದೇವಿಯ ಮಂದಿರ ಎಂದು ನ್ಯಾಯಾಲಯವು ಘೋಷಿಸಿದೆ. ಈ ತೀರ್ಪಿನೊಂದಿಗೆ, ಅಲ್ಲಿ ನಮಾಜ್ ಮಾಡಲು ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಅವಕಾಶವನ್ನು ರದ್ದುಪಡಿಸಲಾಗಿದೆ.
ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ತಾಣವು 1958ರ ಕಾಯಿದೆಯಡಿ ಸಂರಕ್ಷಿತ ಸ್ಮಾರಕವಾಗಿದ್ದು, ಇದರ ಧಾರ್ಮಿಕ ಸ್ವರೂಪವು ಸರಸ್ವತಿ ದೇವಿಯ ದೇವಾಲಯವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ASI ವರದಿ ತಿರಸ್ಕಾರ
ಪುರಾತತ್ವ ಇಲಾಖೆ (ASI) ಈ ಹಿಂದೆ ಸಲ್ಲಿಸಿದ್ದ ವರದಿಯು ವಿಶ್ವಾಸಾರ್ಹವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಅದನ್ನು ಪರಿಗಣಿಸಲು ನಿರಾಕರಿಸಿತು. ಆದಾಗ್ಯೂ, ಸ್ಮಾರಕದ ಸಂರಕ್ಷಣೆ ಮತ್ತು ಮೇಲ್ವಿಚಾರಣೆಯನ್ನು ಎಎಸ್ಐ ಮುಂದುವರಿಸಲಿದೆ.
ನಮಾಜ್ ಅವಕಾಶ ರದ್ದು
ಈ ಹಿಂದೆ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ನೀಡಿದ್ದ ಎಎಸ್ಐ ಸುತ್ತೋಲೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ. ಇನ್ಮುಂದೆ ಪೂರ್ಣ ಪ್ರಮಾಣದ ಪೂಜಾ ವಿಧಿವಿಧಾನಗಳಿಗೆ ಅನುವು ಮಾಡಿಕೊಡುವಂತೆ ಮತ್ತು ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಸ್ಲಿಂ ಸಮುದಾಯಕ್ಕೆ ಪರ್ಯಾಯ ವ್ಯವಸ್ಥೆ
ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳ ಕಾಳಜಿಯನ್ನು ಗಮನಿಸಿದ ನ್ಯಾಯಾಲಯ, ಮಸೀದಿ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ ಪರ್ಯಾಯ ಭೂಮಿಯನ್ನು ಕೋರಿ ಅರ್ಜಿ ಸಲ್ಲಿಸಿದರೆ, ರಾಜ್ಯ ಸರ್ಕಾರವು ಕಾನೂನಿನ ಚೌಕಟ್ಟಿನಲ್ಲಿ ಅದನ್ನು ಪರಿಶೀಲಿಸಬಹುದು ಎಂದು ತಿಳಿಸಿದೆ.
ಲಂಡನ್ನಿಂದ ಸರಸ್ವತಿ ವಿಗ್ರಹ ವಾಪಸ್?
ಲಂಡನ್ನ ಮ್ಯೂಸಿಯಂನಲ್ಲಿರುವ ವಾಗ್ದೇವಿ ಸರಸ್ವತಿ ದೇವಿಯ ವಿಗ್ರಹವನ್ನು ಮರಳಿ ಭಾರತಕ್ಕೆ ತರುವ ಕುರಿತಾದ ಮನವಿಗಳನ್ನು ಪರಿಶೀಲಿಸಿ, ತಕ್ಕ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಹಿಂದೂ ಪರ ವಕೀಲರ ಪ್ರತಿಕ್ರಿಯೆ
ಈ ತೀರ್ಪನ್ನು ಐತಿಹಾಸಿಕ ಜಯ ಎಂದು ಬಣ್ಣಿಸಿರುವ ನ್ಯಾಯವಾದಿ ವಿಷ್ಣು ಜೈನ್, "ಸಂಪೂರ್ಣ ಸಂಕೀರ್ಣವು ಹಿಂದೂ ದೇವಾಲಯ ಎಂಬ ನಮ್ಮ ಪ್ರಮುಖ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಪೂಜೆಯ ಹಕ್ಕು ಮತ್ತು ಭದ್ರತೆಗೆ ಆದೇಶ ನೀಡಿದೆ ಹಾಗೂ ಲಂಡನ್ನಿಂದ ವಿಗ್ರಹ ತರುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

