
ಗಾಢ ನಿದ್ರೆಯಲ್ಲಿದ್ದಾಗಲೇ ಬಂದಪ್ಪಳಿಸಿದ ಸಾವು: ಸ್ಲೀಪರ್ ಬಸ್ ಬೆಂಕಿಗಾಹುತಿ- 7 ಜನ ಸಜೀವ ದಹನ
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ರಿಷಿಕೇಶದಿಂದ ಇಂದೋರ್ಗೆ ತೆರಳುತ್ತಿದ್ದ ಸ್ಲೀಪರ್ ಬಸ್ ಹಾಗೂ ಟ್ರೈಲರ್ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಸ್ಲೀಪರ್ ಬಸ್ ಹಾಗೂ ಟ್ರೈಲರ್ (ದೊಡ್ಡ ಟ್ರಕ್) ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ನಂತರ ಎರಡೂ ವಾಹನಗಳಲ್ಲಿ ಭೀಕರವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಏಳು ಜನ ಪ್ರಯಾಣಿಕರು ಸಜೀವ ದಹನವಾಗಿದ್ದು, 22ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
ರಾಜಸ್ಥಾನದ ದೌಸಾ ಬಳಿ ಈ ಹರಕು ಕರಕಲಾಗಿಸುವ ಘಟನೆ ನಡೆದಿದೆ. ಉತ್ತರಾಖಂಡದ ರಿಷಿಕೇಶದಿಂದ ಮಧ್ಯಪ್ರದೇಶದ ಇಂದೋರ್ಗೆ ಅತಿ ವೇಗವಾಗಿ ತೆರಳುತ್ತಿದ್ದ ಬಸ್, ತಡರಾತ್ರಿ ಸುಮಾರು 2:30 ರ ಸುಮಾರಿಗೆ ನಿಯಂತ್ರಣ ತಪ್ಪಿ ಟ್ರೈಲರ್ಗೆ ಡಿಕ್ಕಿ ಹೊಡೆದಿದೆ.
ಗಾಢ ನಿದ್ರೆಯಲ್ಲಿದ್ದಾಗಲೇ ಬಂದಪ್ಪಳಿಸಿದ ಸಾವು!
ಅಪಘಾತದ ಭೀಕರತೆಗೆ ಬಸ್ನ ಮೇಲಿನ ಬರ್ತ್ಗಳಲ್ಲಿದ್ದ ಪ್ರಯಾಣಿಕರು ಕೆಳಗೆ ಬಿದ್ದಿದ್ದಾರೆ. ಕತ್ತಲಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲೇ ಇಡೀ ಬಸ್ ಬೆಂಕಿಯ ಕೆನ್ನಾಲಗೆಗೆ ಸಿಲುಕಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೃತಪಟ್ಟ ಬಹುತೇಕ ಪ್ರಯಾಣಿಕರು ಅಪಘಾತದ ಸಮಯದಲ್ಲಿ ಗಾಢ ನಿದ್ರೆಯಲ್ಲಿದ್ದರು. ಮೃತರ ಪೈಕಿ ಐದು ಜನರು ತೀವ್ರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರೆ, ಇಬ್ಬರು ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಗಾಯಗೊಂಡಿರುವ ಎಲ್ಲಾ 22 ಪ್ರಯಾಣಿಕರನ್ನು ತಕ್ಷಣವೇ ಚಿಕಿತ್ಸೆಗಾಗಿ ದೌಸಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಚಾಲಕನ ನಿರ್ಲಕ್ಷ್ಯವೇ?
ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ತಡರಾತ್ರಿ ಚಾಲನೆ ಮಾಡುವಾಗ ಬಸ್ ಚಾಲಕ ಆಕಸ್ಮಿಕವಾಗಿ ನಿದ್ದೆಗೆ ಜಾರಿದ್ದೇ ಈ ದುರಂತಕ್ಕೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರೊಂದಿಗೆ ಬಸ್ನ ಅತಿಯಾದ ವೇಗವೂ ಅಪಘಾತದ ತೀವ್ರತೆಯನ್ನು ಹೆಚ್ಚಿಸಿದೆ ಎನ್ನಲಾಗಿದೆ.
ಸ್ಥಳೀಯರ ಗಂಭೀರ ಆರೋಪ
ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಅಪಘಾತದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದೇ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಸ್ಗೆ ಬೆಂಕಿ ಹೊತ್ತಿಕೊಂಡ ಸುಮಾರು ಒಂದು ಗಂಟೆಯ ನಂತರ ಸಿಕ್ಕಿಬಿದ್ದ ಪ್ರಯಾಣಿಕರನ್ನು ರಕ್ಷಿಸಲಾಯಿತು ಎಂದು ಅವರು ದೂರಿದ್ದಾರೆ. ಅಷ್ಟೇ ಅಲ್ಲದೆ, ಬಸ್ನ ಸ್ಟೋರೇಜ್ ಕಂಪಾರ್ಟ್ಮೆಂಟ್ನಲ್ಲಿ (ಡಿಕ್ಕಿ) ಭಾರಿ ಪ್ರಮಾಣದಲ್ಲಿ ಸಿಗರೇಟ್ ಪ್ಯಾಕೆಟ್ಗಳನ್ನು ಸಾಗಿಸಲಾಗುತ್ತಿತ್ತು, ಇದು ಬೆಂಕಿ ಇಡೀ ಬಸ್ಗೆ ತೀವ್ರವಾಗಿ ಹರಡಲು ಪ್ರಮುಖ ಕಾರಣವಾಯಿತು ಎಂದು ಸ್ಥಳೀಯರು ಹೇಳಿದ್ದಾರೆ.
ಸದ್ಯ ಸ್ಥಳೀಯ ಆಡಳಿತ ಮತ್ತು ಪೊಲೀಸರು ಜಂಟಿಯಾಗಿ ಅಪಘಾತದ ತನಿಖೆ ನಡೆಸುತ್ತಿದ್ದು, ಮೃತರ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

