ಯುವಕ ಆತ್ಮಾಹುತಿ; ನೇಪಾಳದಲ್ಲಿ ಭಾರಿ ಆಕ್ರೋಶ
x

 ಬಾಲೆನ್ ಶಾ ನೇತೃತ್ವದ ಆಡಳಿತದಲ್ಲಿ ಮಹಾನಗರ ಪಾಲಿಕೆ ಪೊಲೀಸರು ದಿನಗೂಲಿ ಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳ ವಿರುದ್ಧ ಪದೇ ಪದೇ ಕಠಿಣ ಕ್ರಮ ಕೈಗೊಳ್ಳುತ್ತಿರುವ ಆರೋಪಗಳು ಕೇಳಿಬರುತ್ತಿದ್ದು, ಈ ಘಟನೆಯು ಆ ಅಸಮಾಧಾನವನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ಯುವಕ ಆತ್ಮಾಹುತಿ; ನೇಪಾಳದಲ್ಲಿ ಭಾರಿ ಆಕ್ರೋಶ

ಕಠ್ಮಂಡುವಿನಲ್ಲಿ ಪೊಲೀಸ್ ಕ್ರಮಕ್ಕೆ ಬೇಸತ್ತು ರೈಡ್‌-ಶೇರಿಂಗ್ ಚಾಲಕ ಗಣೇಶ್ ನೇಪಾಳಿ ಆತ್ಮಾಹುತಿ ಮಾಡಿಕೊಂಡ ಘಟನೆ ನೇಪಾಳದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿದೆ.


Click the Play button to hear this message in audio format

ರೈಡ್‌-ಶೇರಿಂಗ್ ಸೇವೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕನೊಬ್ಬ ಪೊಲೀಸ್ ಕ್ರಮಕ್ಕೆ ಬೇಸತ್ತು ಆತ್ಮಾಹುತಿ ಮಾಡಿಕೊಂಡ ಘಟನೆ ನೇಪಾಳದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಬಳಿಕ ರಾಜಧಾನಿ ಕಠ್ಮಂಡುವಿನಲ್ಲಿ ನೂರಾರು ಯುವಕರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮೃತ ಯುವಕನನ್ನು ಗಣೇಶ್ ನೇಪಾಳಿ ಎಂದು ಗುರುತಿಸಲಾಗಿದೆ. ಕಳೆದ ಗುರುವಾರ ಕಠ್ಮಂಡುವಿನ ರಸ್ತೆಯೊಂದರಲ್ಲಿ ಗ್ರಾಹಕರಿಗಾಗಿ ಕಾಯುತ್ತಿದ್ದ ವೇಳೆ ಮಹಾನಗರ ಪಾಲಿಕೆ ಪೊಲೀಸರು ಅವರ ಬೈಕ್‌ನ ಚಕ್ರಕ್ಕೆ ಏಕಾಏಕಿ ವೀಲ್ ಲಾಕ್ ಹಾಕಿದ್ದಾರೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಕ್ರಮದಿಂದ ತೀವ್ರವಾಗಿ ಮನನೊಂದ ಗಣೇಶ್ ನೇಪಾಳಿ ತಮ್ಮ ದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಈ ಘಟನೆ ಬಳಿಕ ಭಾನುವಾರ ಕಠ್ಮಂಡುವಿನ ಸಿಂಘದರ್ಬಾರ್ ಕಾರ್ಯಾಲಯದ ಎದುರು ನೂರಾರು ಜನ ಪ್ರತಿಭಟನೆ ನಡೆಸಿದರು. “ಬಡವರ ಮೇಲಿನ ದೌರ್ಜನ್ಯ ನಿಲ್ಲಿಸಿ”, "ಮಾನವ ಹಕ್ಕುಗಳಿಗೆ ಗೌರವ ನೀಡಿ" ಎಂಬ ಘೋಷಣೆಗಳಿರುವ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಬಂಧನಗಳನ್ನು ನಿಲ್ಲಿಸಬೇಕು, ಬೀದಿ ವ್ಯಾಪಾರಿಗಳು ಹಾಗೂ ಸ್ಥಳಾಂತರಗೊಳ್ಳುತ್ತಿರುವ ಬಡ ಕುಟುಂಬಗಳಿಗೆ ಆಶ್ರಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮೇಯರ್ ಬಾಲೆನ್ ಶಾ ವಿರುದ್ಧ ಟೀಕೆ

2022ರಲ್ಲಿ ಕಠ್ಮಂಡು ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದ ಬಾಲೇಂದ್ರ (ಬಾಲೆನ್) ಶಾ ಅವರ ಆಡಳಿತದಲ್ಲಿ ಮಹಾನಗರ ಪಾಲಿಕೆ ಪೊಲೀಸರು ಅತಿಯಾದ ಕಠಿಣ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಅಕ್ರಮ ಒತ್ತುವರಿ ತೆರವು, ಪಾದಚಾರಿ ಮಾರ್ಗಗಳ ಸ್ವಚ್ಛತೆ, ಅನಧಿಕೃತ ಬೀದಿ ವ್ಯಾಪಾರಿಗಳ ತೆರವು ಹಾಗೂ ನದಿತೀರದ ಗುಡಿಸಲುಗಳ ತೆರವು ಕಾರ್ಯಾಚರಣೆಗಳ ವೇಳೆ ಹಲವಾರು ಬಾರಿ ಸಾರ್ವಜನಿಕರೊಂದಿಗೆ ಘರ್ಷಣೆಗಳು ನಡೆದಿವೆ. ಇದರಿಂದ ಬಡವರ ವಿರುದ್ಧ ಅಮಾನವೀಯ ವರ್ತನೆ ನಡೆಯುತ್ತಿದೆ ಎಂಬ ಟೀಕೆಗಳು ಹೆಚ್ಚಾಗಿವೆ.

ಕಾನೂನು ತಜ್ಞರ ಅಭಿಪ್ರಾಯವೇನು?

ನೇಪಾಳದ ಕಾನೂನು ತಜ್ಞರ ಪ್ರಕಾರ, ಮಹಾನಗರ ಪಾಲಿಕೆ ಪೊಲೀಸರಿಗೆ ಜನರ ಮೇಲೆ ಬಲಪ್ರಯೋಗ ಮಾಡುವ ಅಥವಾ ಗಲಭೆ ನಿಯಂತ್ರಣ ಕ್ರಮ ಕೈಗೊಳ್ಳುವ ಅಧಿಕಾರವೇ ಇಲ್ಲ.

ಹಿರಿಯ ವಕೀಲ ರಾಜು ಚಪಾಗೈನ್ ಅವರ ಪ್ರಕಾರ, ಮಹಾನಗರ ಪಾಲಿಕೆ ಪೊಲೀಸರ ಮುಖ್ಯ ಜವಾಬ್ದಾರಿ ಆಡಳಿತಾತ್ಮಕ ಕಾರ್ಯಗಳಿಗೆ ನೆರವು ನೀಡುವುದು ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸುವುದಾಗಿದೆ. ಸಂಚಾರ ಅಥವಾ ಸಾರ್ವಜನಿಕ ರಸ್ತೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದನ್ನು ನೇಪಾಳ ಪೊಲೀಸ್ ಅಥವಾ ಟ್ರಾಫಿಕ್ ಪೊಲೀಸರಿಗೆ ಒಪ್ಪಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಬೀದಿ ವ್ಯಾಪಾರಿಗಳನ್ನು ಬೆನ್ನಟ್ಟುವುದು, ಖಾಸಗಿ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವುದು ಕಾನೂನುಬಾಹಿರವಾಗಿದೆ ಎಂದು ಅವರು ಹೇಳಿದ್ದಾರೆ.

ಕಾನೂನು ಏನು ಹೇಳುತ್ತದೆ?

ನೇಪಾಳ ಸಂವಿಧಾನದ ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಮಹಾನಗರ ಪಾಲಿಕೆ ಪೊಲೀಸ್ ಪಡೆ ರಚಿಸುವ ಅಧಿಕಾರವಿದೆ. ಅದರಂತೆ 2023ರಲ್ಲಿ ಕಠ್ಮಂಡು ಮಹಾನಗರ ಪಾಲಿಕೆ ಪೊಲೀಸ್ ಕಾಯ್ದೆ ಜಾರಿಗೆ ಬಂದಿತ್ತು.

ಆದರೆ ಈ ಕಾಯ್ದೆಯಲ್ಲಿ ಮಹಾನಗರ ಪಾಲಿಕೆ ಪೊಲೀಸರಿಗೆ ಲಾಠಿಚಾರ್ಜ್ ನಡೆಸುವ ಅಥವಾ ಸಾರ್ವಜನಿಕರನ್ನು ಬಂಧಿಸುವ ಅಧಿಕಾರ ನೀಡಲಾಗಿಲ್ಲ. ನಗರಪಾಲಿಕೆ ಆಸ್ತಿಗಳ ರಕ್ಷಣೆ, ಉದ್ಯಾನವನಗಳ ಸಂರಕ್ಷಣೆ, ಸ್ವಚ್ಛತಾ ನಿಯಮಗಳ ಪಾಲನೆ ಹಾಗೂ ಸ್ಥಳೀಯ ಹಬ್ಬ-ಜಾತ್ರೆಗಳ ನಿರ್ವಹಣೆಗೆ ನೆರವು ನೀಡುವುದು ಅವರ ಪ್ರಮುಖ ಜವಾಬ್ದಾರಿಗಳಾಗಿವೆ.

ನಿವೃತ್ತ ಉಪ ಪೊಲೀಸ್ ಮಹಾನಿರೀಕ್ಷಕ ಪೂರ್ಣಚಂದ್ರ ಜೋಶಿ ಅವರ ಪ್ರಕಾರ, ಪರಿಸ್ಥಿತಿ ನಿಯಂತ್ರಣ ಮೀರಿ ಸಾರ್ವಜನಿಕ ಶಾಂತಿ ಭಂಗವಾಗುವ ಸಾಧ್ಯತೆ ಇದ್ದರೆ ಮಹಾನಗರ ಪಾಲಿಕೆ ಅಧಿಕಾರಿಗಳು ನೇಪಾಳ ಪೊಲೀಸರ ನೆರವು ಪಡೆಯಬೇಕು. ಸ್ವತಂತ್ರವಾಗಿ ಬಲಪ್ರಯೋಗ ನಡೆಸಲು ಅವರಿಗೆ ಯಾವುದೇ ಕಾನೂನುಬದ್ಧ ಅಧಿಕಾರವಿಲ್ಲ.

ಆದರೂ ಬಾಲೆನ್ ಶಾ ನೇತೃತ್ವದ ಆಡಳಿತದಲ್ಲಿ ಮಹಾನಗರ ಪಾಲಿಕೆ ಪೊಲೀಸರು ದಿನಗೂಲಿ ಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳ ವಿರುದ್ಧ ಪದೇ ಪದೇ ಕಠಿಣ ಕ್ರಮ ಕೈಗೊಳ್ಳುತ್ತಿರುವ ಆರೋಪಗಳು ಕೇಳಿಬರುತ್ತಿದ್ದು, ಈ ಘಟನೆಯು ಆ ಅಸಮಾಧಾನವನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

Read More
Next Story