
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ
ಚಂದ್ರಶೇಖರನ್ ಅವರ ಪ್ರಸ್ತುತ ಅಧಿಕಾರಾವಧಿಯು ಫೆಬ್ರವರಿ 2027 ರವರೆಗೆ ಇತ್ತು. ಆದರೆ ತಮ್ಮ ಅಧಿಕಾರಾವಧಿ ಮುಗಿದ ನಂತರ ತಾವು ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ನೀಡಿದ್ದಾರೆ. ಆಗಸ್ಟ್ 18 ರಂದು ನಡೆಯಲಿರುವ ಕಂಪನಿಯ ವಾರ್ಷಿಕ ಮಹಾಸಭೆಗೆ (AGM) ಮುನ್ನವೇ ಈ ದಿಢೀರ್ ಬೆಳವಣಿಗೆ ನಡೆದಿದೆ.
ಈ ಕುರಿತು ಹೇಳಿಕೆ ನೀಡಿರುವ ಚಂದ್ರಶೇಖರನ್, "ಟಾಟಾ ಗ್ರೂಪ್ನಲ್ಲಿ ನನ್ನ 40 ವರ್ಷಗಳ ವೃತ್ತಿಜೀವನವನ್ನು ಪೂರ್ಣಗೊಳಿಸಿದ್ದೇನೆ. ಈ ಪ್ರತಿಷ್ಠಿತ ಸಂಸ್ಥೆಗೆ ಕೊಡುಗೆ ನೀಡಲು ಸಿಕ್ಕ ಅವಕಾಶಕ್ಕೆ ನಾನು ಕೃತಜ್ಞನಾಗಿದ್ದೇನೆ. ಕಳೆದ ದಶಕದಲ್ಲಿ ಟಾಟಾ ಸನ್ಸ್ ಅನ್ನು ಮುನ್ನಡೆಸಿರುವುದು ನನಗೆ ದೊರೆತ ದೊಡ್ಡ ಗೌರವ ಮತ್ತು ಜವಾಬ್ದಾರಿಯಾಗಿದೆ" ಎಂದು ತಿಳಿಸಿದ್ದಾರೆ.
ಚಂದ್ರಶೇಖರನ್ ಅವರ ಪ್ರಸ್ತುತ ಅಧಿಕಾರಾವಧಿಯು ಫೆಬ್ರವರಿ 2027 ರವರೆಗೆ ಇತ್ತು. ಆದರೆ ತಮ್ಮ ಅಧಿಕಾರಾವಧಿ ಮುಗಿದ ನಂತರ ತಾವು ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಉತ್ತರಾಧಿಕಾರಿಯ ಆಯ್ಕೆ ಮತ್ತು ಸೂಕ್ತ ಹಸ್ತಾಂತರ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಮಂಡಳಿಯು ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿದ್ದೇನೆ ಎಂದು ತಿಳಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಕುಸಿತ
ಚಂದ್ರಶೇಖರನ್ ಅವರ ರಾಜೀನಾಮೆ ಸುದ್ದಿ ಹೊರಬಿದ್ದ ಬೆನ್ನಲ್ಲೇ ಟಾಟಾ ಸಮೂಹದ ವಿವಿಧ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಬೆಳಿಗ್ಗೆ 11:30 ರ ವೇಳೆಗೆ ಟಾಟಾ ಪವರ್ ಶೇ. 1.26, ಟಿಸಿಎಸ್ (TCS) ಶೇ. 3.9 ಹಾಗೂ ಟಾಟಾ ಸ್ಟೀಲ್ ಶೇ. 1.83 ರಷ್ಟು ಕುಸಿತ ಕಂಡಿವೆ.
ಎನ್ ಚಂದ್ರಶೇಖರನ್ ರಾಜೀನಾಮೆಗೆ ಕಾರಣವೇನು?
ಷೇರುದಾರರೊಂದಿಗಿನ ಭಿನ್ನಾಭಿಪ್ರಾಯ ಹಾಗೂ ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಅವರೊಂದಿಗಿನ ಭಿನ್ನಾಭಿಪ್ರಾಯವೇ ಈ ರಾಜೀನಾಮೆಗೆ ಮುಖ್ಯ ಕಾರಣ ಎನ್ನಲಾಗಿದೆ. ತಮ್ಮ ಪ್ರಸ್ತುತ ಅವಧಿ ಮುಗಿದ ನಂತರ (2027 ರ ನಂತರ) ಅಧಿಕಾರಾವಧಿಯನ್ನು ವಿಸ್ತರಿಸುವುದಕ್ಕೆ ಮಂಡಳಿಯ ಒಬ್ಬ ಸದಸ್ಯರು (ನೋಯೆಲ್ ಟಾಟಾ) ಬೆಂಬಲ ನೀಡಲಿಲ್ಲ. ಸರ್ವಾನುಮತದ ಬೆಂಬಲ ಸಿಗದ ಕಾರಣ ತಾವು ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಚಂದ್ರಶೇಖರನ್ ತಿಳಿಸಿದ್ದಾರೆ.
ಫೆಬ್ರವರಿ 20, 2027 ರ ನಂತರ ನನ್ನ ಅಧಿಕಾರಾವಧಿಯನ್ನು ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಲು ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಸರ್ವಾನುಮತದಿಂದ ಶಿಫಾರಸು ಮಾಡಿದ್ದವು. ಇದನ್ನು ಟಾಟಾ ಸನ್ಸ್ನ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಹಾಗೂ ಮಂಡಳಿಯು ಶಿಫಾರಸು ಮಾಡಿ ಫೆಬ್ರವರಿ 24, 2026 ರಂದು ಟಾಟಾ ಸನ್ಸ್ ಮಂಡಳಿಯ ಮುಂದೆ ಮಂಡಿಸಲಾಯಿತು. ಆದರೆ, ಮಂಡಳಿಯ ಒಬ್ಬ ಸದಸ್ಯರು ಇದನ್ನು ಬೆಂಬಲಿಸದ ಕಾರಣ ಸರ್ವಾನುಮತದ ಬೆಂಬಲ ಸಿಗಲಿಲ್ಲ, ಹೀಗಾಗಿ ನಾನು ನಿರ್ಧಾರವನ್ನು ಮುಂದೂಡಲು ನಿರ್ಧರಿಸಿದೆ ಎಂದು ತಮ್ಮ ಹೇಳಿಕೆಯಲ್ಲಿ ಅವರು ಉಲ್ಲೇಖಿಸಿದ್ದಾರೆ.
ಟಾಟಾ ಸನ್ಸ್ - ಟಾಟಾ ಟ್ರಸ್ಟ್ ನಡುವಿನ ಭಿನ್ನಾಭಿಪ್ರಾಯ
ಮಂಡಳಿಯ ಪ್ರಾತಿನಿಧ್ಯ, ಸಮೂಹದ ಕಾರ್ಯತಂತ್ರಗಳು ಮತ್ತು ಅಲ್ಪಸಂಖ್ಯಾತ ಷೇರುದಾರರಾದ ಶಾಪೂರ್ಜಿ ಪಲ್ಲೋನ್ಜಿ ಅವರ ನಿರ್ಗಮನದ ಕುರಿತು ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ ನಡುವೆ ಸೌಹಾರ್ದಯುತ ವಾತಾವರಣವಿರಲಿಲ್ಲ. ನೋಯೆಲ್ ಟಾಟಾ ಅವರು ಚಂದ್ರಶೇಖರನ್ ಮರುನೇಮಕವನ್ನು ವಿರೋಧಿಸಿದ ನಂತರ ಈ ಭಿನ್ನಾಭಿಪ್ರಾಯಗಳು ತೀವ್ರಗೊಂಡವು. ವರದಿಗಳ ಪ್ರಕಾರ, ನೋಯೆಲ್ ಟಾಟಾ ತಮ್ಮ ಮಗ ನೆವಲ್ ಟಾಟಾಗೆ ಕಂಪನಿಯಲ್ಲಿ ಪ್ರಮುಖ ಜವಾಬ್ದಾರಿ ನೀಡಲು ಬಯಸಿದ್ದಾರೆ ಎನ್ನಲಾಗಿದೆ.
40 ವರ್ಷಗಳ ದೀರ್ಘ ಪಯಣ
ಎನ್ ಚಂದ್ರಶೇಖರನ್ 1987 ರಲ್ಲಿ ಟಾಟಾ ಗ್ರೂಪ್ಗೆ ಸೇರ್ಪಡೆಗೊಂಡರು. 2009 ರಲ್ಲಿ ಟಿಸಿಎಸ್ನ ಸಿಇಒ ಆಗಿ, ನಂತರ 2017 ರಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ತಮ್ಮ ಆಡಳಿತಾವಧಿಯಲ್ಲಿ ಏರ್ ಇಂಡಿಯಾ ಅಪಘಾತ, ಟಿಸಿಎಸ್ನ ಬೆಲೆ ಒತ್ತಡ ಹಾಗೂ ಜಾಗ್ವಾರ್ ಲ್ಯಾಂಡ್ ರೋವರ್ ಮೇಲಿನ ಸೈಬರ್ ದಾಳಿಯಂತಹ ದೊಡ್ಡ ಸವಾಲುಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.
ಟಾಟಾ ಸನ್ಸ್ ಸಂಸ್ಥೆಯು ಐಟಿ ಸೇವೆಗಳು, ಸ್ಟೀಲ್, ವಿಮಾನಯಾನ, ರಕ್ಷಣೆ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಸೇರಿದಂತೆ ಹಲವು ವಲಯಗಳಲ್ಲಿ ಬೃಹತ್ ಉದ್ಯಮವನ್ನು ಹೊಂದಿರುವ ಭಾರತದ ಪ್ರಮುಖ ಪ್ರಮುಖ ಸಂಸ್ಥೆಯಾಗಿದೆ.

