I-PAC Director | ಬಂಗಾಳ ಚುನಾವಣೆ ಮುಗಿದ ಬೆನ್ನಲ್ಲೇ I-PAC ನಿರ್ದೇಶಕ ವಿನೇಶ್ ಚಾಂದೆಲ್‌ಗೆ ಜಾಮೀನು!
x
ಐ-ಪ್ಯಾಕ್ (I-PAC) ಸಹ-ಸ್ಥಾಪಕ ಮತ್ತು ನಿರ್ದೇಶಕ ವಿನೇಶ್ ಚಾಂದೆಲ್‌(ಸಂಗ್ರಹ ಚಿತ್ರ)

I-PAC Director | ಬಂಗಾಳ ಚುನಾವಣೆ ಮುಗಿದ ಬೆನ್ನಲ್ಲೇ I-PAC ನಿರ್ದೇಶಕ ವಿನೇಶ್ ಚಾಂದೆಲ್‌ಗೆ ಜಾಮೀನು!

ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿತರಾಗಿದ್ದ ಐ-ಪ್ಯಾಕ್ (I-PAC) ನಿರ್ದೇಶಕ ವಿನೇಶ್ ಚಾಂದೆಲ್‌ಗೆ ಪಟಿಯಾಲ ಹೌಸ್ ನ್ಯಾಯಾಲಯ ಜಾಮೀನು ನೀಡಿದೆ.


ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್‌ನ ಚುನಾವಣಾ ತಂತ್ರಗಾರಿಕೆ ಸಂಸ್ಥೆಯಾದ ಐ-ಪ್ಯಾಕ್ (I-PAC) ಸಹ-ಸ್ಥಾಪಕ ಮತ್ತು ನಿರ್ದೇಶಕ ವಿನೇಶ್ ಚಾಂದೆಲ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಗುರುವಾರ ನಿಯಮಿತ ಜಾಮೀನು ಮಂಜೂರು ಮಾಡಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಚಾಂದೆಲ್ ಅವರ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ (ED) ವಿರೋಧಿಸದ ಕಾರಣ, ನ್ಯಾಯಾಲಯ ಅವರಿಗೆ ಈ ರಿಲೀಫ್ ನೀಡಿದೆ.

ED ನಿಲುವಿನಲ್ಲಿ ದಿಢೀರ್ ಬದಲಾವಣೆ?

ವಿಶೇಷವೆಂದರೆ, ಕಳೆದ ಏಪ್ರಿಲ್ 13ರಂದು ಬಂಗಾಳದ ಚುನಾವಣೆಗೂ ಮುನ್ನ ಚಾಂದೆಲ್ ಅವರನ್ನು ಬಂಧಿಸಿದ್ದ ಇಡಿ, ಇಂದು ಅವರ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ತನಿಖೆಯ ವೇಳೆ ಚಾಂದೆಲ್ ಅವರು "ಸ್ವಯಂಪ್ರೇರಿತ ಮತ್ತು ಉದ್ದೇಶಪೂರ್ವಕ ಸಹಕಾರ" ನೀಡಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ, ಸಾಕ್ಷ್ಯಗಳನ್ನು ನಾಶಪಡಿಸಬಾರದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸುವಂತೆ ಮನವಿ ಮಾಡಿದೆ.

ಮಾನವೀಯ ಆಧಾರದ ಮೇಲೆ ಜಾಮೀನು

ವಿನೇಶ್ ಚಾಂದೆಲ್ ಅವರು ತಮ್ಮ ತಾಯಿಯ ಅನಾರೋಗ್ಯದ (ಡಿಮೆನ್ಶಿಯಾದಿಂದ ಬಳಲುತ್ತಿದ್ದಾರೆ) ಕಾರಣ ನೀಡಿ ಮಾನವೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರಿದ್ದರು. ಈ ಹಿಂದೆ ನ್ಯಾಯಾಲಯವು ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರೂ, ಈಗ ಇಡಿ ಆಕ್ಷೇಪ ಸಲ್ಲಿಸದ ಕಾರಣ ನಿಯಮಿತ ಜಾಮೀನು ದೊರೆತಿದೆ.

ಪ್ರಕರಣದ ಹಿನ್ನೆಲೆ

ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಏಪ್ರಿಲ್ 13 ರಂದು ಚಾಂದೆಲ್ ಅವರನ್ನು ಬಂಧಿಸಲಾಗಿತ್ತು. ಐ-ಪ್ಯಾಕ್ ಸಂಸ್ಥೆಯ ಮೂಲಕ ಕೋಟ್ಯಂತರ ರೂಪಾಯಿ ಹಣದ ಅಕ್ರಮ ವರ್ಗಾವಣೆ, ನಕಲಿ ಇನ್ವಾಯ್ಸ್ ಸೃಷ್ಟಿ ಮತ್ತು ಹವಾಲಾ ಮೂಲಕ ಹಣ ರವಾನೆಯಾಗಿರುವ ಆರೋಪವನ್ನು ಇಡಿ ಹೊರಿಸಿತ್ತು.

ಈ ಬಂಧನವು ರಾಜಕೀಯ ಪ್ರೇರಿತ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಸ್ವತಃ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಐ-ಪ್ಯಾಕ್ ಕಚೇರಿ ಮೇಲೆ ಇಡಿ ದಾಳಿ ನಡೆದಾಗ ಅಲ್ಲಿಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಜಾಮೀನಿನ ಷರತ್ತುಗಳು

ನ್ಯಾಯಾಲಯವು ಚಾಂದೆಲ್‌ಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದ್ದು, ಪ್ರಕರಣದ ಯಾವುದೇ ಸಾಕ್ಷ್ಯಗಳನ್ನು ತಿರುಚಬಾರದು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಸ್ಪಷ್ಟವಾಗಿ ಸೂಚಿಸಿದೆ. ಇದರೊಂದಿಗೆ, ತನಿಖಾ ಸಂಸ್ಥೆಯು ಕೇಳುವ ಎಲ್ಲಾ ಪೂರಕ ವಿವರಗಳನ್ನು ಒದಗಿಸುವ ಮೂಲಕ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ತನಿಖಾಧಿಕಾರಿಗಳು ಕರೆದಾಗ ವಿಚಾರಣೆಗೆ ಯಾವಾಗಲೂ ಲಭ್ಯವಿರಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Read More
Next Story