
ಕೇರಳದಲ್ಲಿ ವರುಣನ ಅಬ್ಬರ: ಭಾರಿ ಮಳೆ, ಭೂಕುಸಿತಕ್ಕೆ ಮೂವರ ಬಲಿ, ಜಲಾವೃತಗೊಂಡ ಗ್ರಾಮಗಳು
ಪತ್ತನಂತಿಟ್ಟ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲೂ ಭೂಕುಸಿತ ಉಂಟಾಗಿದ್ದು, ರಾನ್ನಿ ಹಾಗೂ ಸುತ್ತಮುತ್ತ ಭಾರೀ ಪ್ರವಾಹ ಸೃಷ್ಟಿಯಾಗಿದೆ. ನದಿಗಳ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗಿದ್ದು, ಮನೆ ಹಾಗೂ ಅಂಗಡಿಗಳು ಜಲಾವೃತಗೊಂಡಿವೆ
ಕೇರಳದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಪತ್ತನಂತಿಟ್ಟ, ಕೊಲ್ಲಂ, ಕೋಯಿಕ್ಕೋಡ್, ಮಲಪ್ಪುರಂ ಹಾಗೂ ಪಾಲಕ್ಕಾಡ್ ಜಿಲ್ಲೆಗಳಲ್ಲೂ ವರುಣನ ಆರ್ಭಟಕ್ಕೆ ಮನೆಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪೀಡಿತ ಪ್ರದೇಶಗಳ ಜನರನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ಮೊದಲೇ ರಕ್ಷಣಾ ತಂಡಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಗುಡ್ಡ ಕುಸಿತಕ್ಕೆ ಮೂವರ ದಾರುಣ ಸಾವು
ಮಳೆಯಿಂದಾಗಿ ಸಂಭವಿಸಿದ ಪ್ರತ್ಯೇಕ ಭೂಕುಸಿತ ಪ್ರಕರಣಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇಡುಕ್ಕಿ ಜಿಲ್ಲೆಯ ಕುಡಯತ್ತೂರು ಬಳಿಯ ಅಡೂರ್ಮಾಲಾದಲ್ಲಿ ಮನೆ ಕುಸಿದು ಸುಮತಿ ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಅವರ ಪತಿ ಹಾಗೂ ಮಗನನ್ನು ನೆರೆಹೊರೆಯವರು ರಕ್ಷಿಸಿ ತೊಡುಪುಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎನ್ಡಿಆರ್ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಅಧಿಕಾರಿಗಳ ಸತತ ಕಾರ್ಯಾಚರಣೆ ಬಳಿಕ ಸುಮತಿ ಅವರ ಶವ ಪತ್ತೆಯಾಗಿದೆ.
ಮತ್ತೊಂದೆಡೆ, ಕೊಟ್ಟಾಯಂ ಜಿಲ್ಲೆಯ ಪೂಂಜಾರ್ನ ಪಯ್ಯನಿತೋಟ್ಟಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿ ಜೋಸೆಫ್ ಎಂಬ ಯುವಕ ಮೃತಪಟ್ಟಿದ್ದಾನೆ. ಮಣ್ಣಿನಡಿ ಸಿಲುಕಿದ್ದ ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ. ಆತನ ತಾಯಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇನ್ನು, ಇಡುಕ್ಕಿಯ ವಾಗಮೋನ್ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತದಲ್ಲಿ ಕೊಟ್ಟಾಯಂನ ವೈಕೋಮ್ ಮೂಲದ ಪ್ರಭಾಕರನ್ ನಾಯರ್ ಎಂಬುವವರು ಮೃತಪಟ್ಟಿದ್ದಾರೆ. ಸಂಬಂಧಿಕರ ಮನೆಯಲ್ಲಿ ಮಲಗಿದ್ದಾಗ ಈ ದುರಂತ ಸಂಭವಿಸಿದ್ದು, ಕಾರ್ಯಾಚರಣೆ ಬಳಿಕ ಅವರ ಶವ ಪತ್ತೆ ಮಾಡಲಾಗಿದೆ.
ಮುಳುಗಡೆಯಾದ ರಸ್ತೆಗಳು, ಅಸ್ತವ್ಯಸ್ತಗೊಂಡ ಜನಜೀವನ
ಮಳೆಯಿಂದಾಗಿ ಇಡುಕ್ಕಿಯ ಉಪ್ಪುತರಾದಲ್ಲಿ ನಿಲ್ಲಿಸಿದ್ದ ಪೊಲೀಸ್ ಜೀಪ್ ಭೂಕುಸಿತದ ಮಣ್ಣಿಗೆ ಸಿಲುಕಿ ಜಖಂಗೊಂಡಿದೆ. ಪುಲ್ಲಕಾಯಾರ್ ನದಿ ಉಕ್ಕಿ ಹರಿಯುತ್ತಿದ್ದು, ಕೊಕ್ಕಯಾರ್ ಕೆಳಮಟ್ಟದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕಟ್ಟಪ್ಪನ-ವಾಝವರ ರಸ್ತೆಯಲ್ಲಿ ಗುಡ್ಡ ಕುಸಿದಿದ್ದರೆ, ವಂಡಿಪೆರಿಯಾರ್ನ ಚೊಟ್ಟುಪಾರ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ರಾಷ್ಟ್ರೀಯ ಹೆದ್ದಾರಿ 183 ಜಲಾವೃತವಾಗಿದೆ. ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟ, ಕಾಂಜಿರಪ್ಪಳ್ಳಿ, ಕೂಟ್ಟಿಕಲ್ ಹಾಗೂ ಎರುಮೇಲಿಯಲ್ಲಿ ಪ್ರವಾಹ ಉಂಟಾಗಿದ್ದು, ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ನಡಕ್ಕಲ್ ಮತ್ತು ಮುರಿಕ್ಕೋಲಿ ಸೇರಿ ಹಲವೆಡೆ ಮನೆಗಳ ಮೊದಲ ಮಹಡಿಯವರೆಗೆ ನೀರು ನಿಂತಿದ್ದು, ಮೇಲಿನ ಮಹಡಿಗಳಲ್ಲಿ ಸಿಲುಕಿದ್ದ ಜನರನ್ನು ಸ್ಥಳೀಯರ ನೆರವಿನೊಂದಿಗೆ ರಕ್ಷಿಸಲಾಗಿದೆ. ಮುಂಡಕ್ಕಾಯಂನಲ್ಲಿ ಮಣಿಮಾಲ ಮತ್ತು ಪುಲ್ಲಕಾಯಾರ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಸಣ್ಣ ಅಣೆಕಟ್ಟುಗಳ ಗೇಟ್ಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಚುರುಕು ಹಾಗೂ ಹವಾಮಾನ ಎಚ್ಚರಿಕೆ
ಪತ್ತನಂತಿಟ್ಟ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲೂ ಭೂಕುಸಿತ ಉಂಟಾಗಿದ್ದು, ರಾನ್ನಿ ಹಾಗೂ ಸುತ್ತಮುತ್ತ ಭಾರೀ ಪ್ರವಾಹ ಸೃಷ್ಟಿಯಾಗಿದೆ. ನದಿಗಳ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗಿದ್ದು, ಮನೆ ಹಾಗೂ ಅಂಗಡಿಗಳು ಜಲಾವೃತಗೊಂಡಿವೆ ಎಂದು ರಾನ್ನಿ ಶಾಸಕ ಪಳಕುಲಂ ಮಧು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ದೋಣಿಗಳನ್ನು ಬಳಸಲಾಗುತ್ತಿದ್ದು, ಜಿಲ್ಲೆಯಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇತ್ತ ಕೋಝಿಕ್ಕೋಡ್ನ ಚಾಲಿಯಂನಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ಮೀನುಗಾರಿಕಾ ದೋಣಿಯೊಂದರಲ್ಲಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮುಂಬರುವ ದಿನಗಳಲ್ಲಿ ಕೇರಳದ ವಿವಿಧ ಭಾಗಗಳಲ್ಲಿ ಮತ್ತಷ್ಟು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದ್ದು, ಕೆಲವು ಜಿಲ್ಲೆಗಳಿಗೆ 'ರೆಡ್' ಹಾಗೂ 'ಆರೆಂಜ್' ಅಲರ್ಟ್ ನೀಡಲಾಗಿದೆ.

