
ಕಲ್ವಕುಂಟ್ಲ ಕವಿತಾ ಅವರು ಶನಿವಾರ ತಮ್ಮ ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಕೆಸಿಆರ್ ಪುತ್ರಿ ಕೆ. ಕವಿತಾ
ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರು ತಮ್ಮ ಪಕ್ಷವಾದ 'ತೆಲಂಗಾಣ ರಾಷ್ಟ್ರ ಸಮಿತಿ'ಯನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವ ಉದ್ದೇಶದಿಂದ 2022ರಲ್ಲಿ 'ಭಾರತ್ ರಾಷ್ಟ್ರ ಸಮಿತಿ' (BRS) ಎಂದು ಮರುನಾಮಕರಣ ಮಾಡಿದ್ದರು.
ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್ಎಸ್ (ಭಾರತ್ ರಾಷ್ಟ್ರ ಸಮಿತಿ) ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ತೆಲಂಗಾಣ ಜಾಗೃತಿ ಸಂಘಟನೆಯ ಅಧ್ಯಕ್ಷೆ ಕಲ್ವಕುಂಟ್ಲ ಕವಿತಾ ಅವರು ಶನಿವಾರ ತಮ್ಮ ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ನಗರದ ಹೊರವಲಯದ (ಮೇಡ್ಚಲ್ ಜಿಲ್ಲೆಯ ಮುನಿರಾಬಾದ್) ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿದ ಕವಿತಾ, ತಮ್ಮ ಹೊಸ ಪಕ್ಷಕ್ಕೆ ಹಳೆಯ ಮತ್ತು ಭಾವನಾತ್ಮಕ ಹೆಸರಾದ 'ತೆಲಂಗಾಣ ರಾಷ್ಟ್ರ ಸಮಿತಿ' (TRS) ಎಂದೇ ನಾಮಕರಣ ಮಾಡಿರುವುದಾಗಿ ಪ್ರಕಟಿಸಿದ್ದಾರೆ. ಈ ಮೂಲಕ ತೆಲಂಗಾಣದ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.
ಬಿಆರ್ಎಸ್ ಜೊತೆಗಿನ ಸಂಘರ್ಷ
ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರು ತಮ್ಮ ಪಕ್ಷವಾದ 'ತೆಲಂಗಾಣ ರಾಷ್ಟ್ರ ಸಮಿತಿ'ಯನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವ ಉದ್ದೇಶದಿಂದ 2022ರಲ್ಲಿ 'ಭಾರತ್ ರಾಷ್ಟ್ರ ಸಮಿತಿ' (BRS) ಎಂದು ಮರುನಾಮಕರಣ ಮಾಡಿದ್ದರು. ಇದೀಗ ಕವಿತಾ ಅವರು ತಮ್ಮ ತಂದೆ ಕೈಬಿಟ್ಟಿದ್ದ ಅದೇ ಹಳೆಯ ಹೆಸರನ್ನು (TRS) ಮರಳಿ ಪಡೆದು ತಮ್ಮ ಹೊಸ ಪಕ್ಷಕ್ಕೆ ಇಟ್ಟುಕೊಂಡಿದ್ದಾರೆ.
ಕಾಳೇಶ್ವರಂ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಕವಿತಾ ಅವರು ತಮ್ಮ ಸೋದರಸಂಬಂಧಿಗಳಾದ ಟಿ. ಹರೀಶ್ ರಾವ್ ಮತ್ತು ಜೆ. ಸಂತೋಷ್ ಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಈ ನಾಯಕರು ಬಿಆರ್ಎಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಆಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2025ರಲ್ಲಿ ಅವರನ್ನು ಬಿಆರ್ಎಸ್ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಅಮಾನತಿನ ಬಳಿಕ ಕವಿತಾ ಅವರು ತಮ್ಮ 'ತೆಲಂಗಾಣ ಜಾಗೃತಿ ಸಂಘಟನೆ'ಯ ಮೂಲಕ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅದೇ ಸಂಘಟನೆಯ ಬಲದೊಂದಿಗೆ, ತೆಲಂಗಾಣ ಜನರ ಹಕ್ಕುಗಳ ರಕ್ಷಣೆ ಹಾಗೂ ಯುವಕರು ಮತ್ತು ಮಹಿಳೆಯರ ಕಲ್ಯಾಣದ ಉದ್ದೇಶದೊಂದಿಗೆ 'ಟಿಆರ್ಎಸ್' ಎಂಬ ಹೊಸ ಅಸ್ತ್ರದೊಂದಿಗೆ ಅವರು ಪ್ರತ್ಯೇಕವಾಗಿ ರಾಜಕೀಯ ಕಣಕ್ಕೆ ಧುಮುಕಿದ್ದಾರೆ.

