
ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆ ಹಾಗೂ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್
ಬೆಂಗಳೂರಿನಿಂದ ಕರಾವಳಿ ಕಾವಲಿನವರೆಗೆ: ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಕನ್ನಡದ ನಂಟು
ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಇವರು, 1981ರವರೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ನಂತರ ವಿಜಯಪುರದ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು.
ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ನೇಮಕಗೊಂಡಿದ್ದಾರೆ. ಪ್ರಸ್ತುತ ನೌಕಾಪಡೆ ಮುಖ್ಯಸ್ಥರಾಗಿರುವ ದಿನೇಶ್ ಕುಮಾರ್ ತ್ರಿಪಾಠಿ ಅವರು ಮೇ 31 ರಂದು ನಿವೃತ್ತರಾಗಲಿದ್ದು, ಅದೇ ದಿನ ಸ್ವಾಮಿನಾಥನ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರ ಬಾಲ್ಯ ಮತ್ತು ಶೈಕ್ಷಣಿಕ ಜೀವನವು ಕರ್ನಾಟಕದೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಇವರು, 1981ರವರೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ನಂತರ ವಿಜಯಪುರದ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಈ ಸೈನಿಕ ಶಾಲೆಯ ಶಿಕ್ಷಣವೇ ಅವರ ಸೇನಾ ಬದುಕಿಗೆ ಬಲಿಷ್ಠ ಅಡಿಪಾಯ ಹಾಕಿಕೊಟ್ಟಿತು. ಇಂದಿಗೂ ಅವರು ಬೆಂಗಳೂರಿನ ಎನ್.ಆರ್. ಕಾಲೋನಿ ಮತ್ತು ಬಸವನಗುಡಿಯ ಗೆಳೆತನವನ್ನು ಮರೆತಿಲ್ಲ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆ ಹಾಗೂ ವಿಜಯಪುರದ ಸೈನಿಕ ಶಾಲೆ
ಅಪ್ರತಿಮ ಸಾಧನೆ, ಅಪಾರ ಅನುಭವ
1987ರ ಜುಲೈ 1ರಂದು ಭಾರತೀಯ ನೌಕಾಪಡೆಗೆ ಸೇರಿದ ಸ್ವಾಮಿನಾಥನ್, ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧತಂತ್ರದಲ್ಲಿ (Communication and Electronic Warfare) ಪರಿಣತಿ ಹೊಂದಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ಪ್ರಮುಖ ನೌಕೆಗಳ ಕಮಾಂಡಿಂಗ್
ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆ ಸೇರಿದಂತೆ ಐಎನ್ಎಸ್ ಮೈಸೂರು, ಐಎನ್ಎಸ್ ಕುಲಿಶ್, ಐಎನ್ಎಸ್ ವಿದ್ಯುತ್ ಮತ್ತು ವಿನಾಶ್ ನೌಕೆಗಳ ನೇತೃತ್ವ ವಹಿಸಿದ್ದರು. ಪ್ರಸ್ತುತ ಪಶ್ಚಿಮ ನೌಕಾ ಕಮಾಂಡ್ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ನೌಕಾಪಡೆಯ ಉಪ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಐಎನ್ಎಸ್ ಮೈಸೂರು
ಖಡಕ್ವಾಸ್ಲಾದ ಎನ್ಡಿಎ ಹಳೆ ವಿದ್ಯಾರ್ಥಿಯಾದ ಇವರು ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕದ ಪ್ರತಿಷ್ಠಿತ ನೌಕಾ ವಾರ್ ಕಾಲೇಜುಗಳಲ್ಲಿ ಉನ್ನತ ಅಧ್ಯಯನ ನಡೆಸಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿಯನ್ನೂ ಪಡೆದಿದ್ದಾರೆ.
ಪರಮ ವಿಶಿಷ್ಠ ಸೇವಾ ಪದಕಕ್ಕೆ ಭಾಜನ
ದೇಶಕ್ಕಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಅವರಿಗೆ ಪರಮ ವಿಶಿಷ್ಠ ಸೇವಾ ಪದಕ (PVSM), ಅತಿ ವಿಶಿಷ್ಠ ಸೇವಾ ಪದಕ (AVSM) ಹಾಗೂ ವಿಶಿಷ್ಟ ಸೇವಾ ಪದಕ (VSM) ನೀಡಿ ಗೌರವಿಸಲಾಗಿದೆ.
ತಂತ್ರಗಾರಿಕೆ ನಿಪುಣ
ಮಾರ್ಗದರ್ಶಿತ ಕ್ಷಿಪಣಿ ವಿಧ್ವಂಸಕ ನೌಕೆ INS ಮೈಸೂರು (D60) ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ನೌಕಾ ಕಮಾಂಡ್ ಅವರು ಪಶ್ಚಿಮ ನೌಕಾ ಕಮಾಂಡ್ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇದು ಭಾರತದ ಅತ್ಯಂತ ಪ್ರಮುಖ ತಂತ್ರಗಾರಿಕಾ ಕಮಾಂಡ್ ಆಗಿದೆ. 2006 ರಲ್ಲಿ ಶ್ರೀಲಂಕಾ ಹಾಗೂ ಮಾಲ್ಡೀವ್ಸ್ನಲ್ಲಿ ನಡೆದ ಸುನಾಮಿ ಪರಿಹಾರ ಕಾರ್ಯಾಚರಣೆಗಳಲ್ಲಿನ ಸೇವೆಗಾಗಿ ಇವರಿಗೆ ವಿಶಿಷ್ಟ ಸೇವಾ ಪದಕ (VSM) ನೀಡಿ ಗೌರವಿಸಲಾಗಿದೆ.
ರಕ್ಷಣಾ ವಲಯದಲ್ಲಿ ಹಲವು ಬದಲಾವಣೆ
ಇದೇ ಸಂದರ್ಭದಲ್ಲಿ ರಕ್ಷಣಾ ವಲಯದಲ್ಲೂ ಹಲವು ಬದಲಾವಣೆಗಳಾಗಿವೆ. ಲೆಫ್ಟಿನೆಂಟ್ ಜನರಲ್ ರಾಜಾ ಸುಬ್ರಮಣಿ ಅವರು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಮಿಲಿಟರಿ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ರಕ್ಷಣಾ ಸಚಿವಾಲಯದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಸದ್ಯ ಜನರಲ್ ಅನಿಲ್ ಚೌಹಾಣ್ ಅವರು ಸಿಡಿಎಸ್ ಆಗಿ ದೇಶದ ರಕ್ಷಣಾ ಪಡೆಗಳ ಸಮನ್ವಯದ ಜವಾಬ್ದಾರಿ ಹೊತ್ತಿದ್ದಾರೆ.

