
ರಾಮ್ದೇವ್ ಅವರ ಈ ನಡೆಗೆ ಕಂಗನಾ ರಣಾವತ್ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಕಂಗನಾ-ಬಾಬಾ ರಾಮ್ದೇವ್ ನಡುವಿನ ವಾಕ್ಸಮರಕ್ಕೆ ತೆರೆ ಎಳೆದ ರಕ್ಷಾಬಂಧನ
ರಕ್ಷಾಬಂಧನದಂದು ಕಂಗನಾ ರಣಾವತ್ ಹಾಗೂ ಬಾಬಾ ರಾಮ್ದೇವ್ ನಡುವಿನ ವಾಕ್ಸಮರಕ್ಕೆ ತೆರೆ ಬಿದ್ದಿದೆ. ರಾಮ್ದೇವ್ ಸಿಹಿತಿಂಡಿ ಕಳುಹಿಸಿ ಮಾತುಕರೆಗೆ ಕರೆ ನೀಡಿದ್ದು, ಕಂಗನಾ ಸ್ವೀಕರಿಸಿದ್ದಾರೆ.
ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಮತ್ತು ಯೋಗಗುರು ಬಾಬಾ ರಾಮ್ದೇವ್ ನಡುವಿನ ಇತ್ತೀಚಿನ ಸಾರ್ವಜನಿಕ ವಾಗ್ವಾದಕ್ಕೆ ರಕ್ಷಾಬಂಧನದಂದು ತೆರೆ ಬಿದ್ದಿದೆ. Gen Z ಕುರಿತು ಕಂಗನಾ ನೀಡಿದ್ದ ಹೇಳಿಕೆಗಳಿಂದ ಆರಂಭವಾಗಿದ್ದ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ರಾಮ್ದೇವ್ ಮುಂದಾಗಿದ್ದಾರೆ.
ರಕ್ಷಾಬಂಧನದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮ್ದೇವ್, ಕಂಗನಾ ಅವರನ್ನು ತಮ್ಮ ಸಹೋದರಿ ಎಂದು ಉಲ್ಲೇಖಿಸಿ ಅವರಿಗೆ ಸಿಹಿತಿಂಡಿ ಹಾಗೂ ಉಡುಗೊರೆಯನ್ನು ಅಂಚೆ ಮೂಲಕ ಕಳುಹಿಸುವುದಾಗಿ ತಿಳಿಸಿದರು. ದೇಶದಲ್ಲಿ ಯಾವುದೇ ಕಾರಣಕ್ಕೂ ದ್ವೇಷ ಅಥವಾ ಪರಸ್ಪರ ಕೆಟ್ಟ ಭಾವನೆ ಇರಬಾರದು. ಇತ್ತೀಚೆಗೆ ತಮ್ಮ ಮತ್ತು ಕಂಗನಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂಬ ಚರ್ಚೆ ನಡೆದಿತ್ತು. ಇಂತಹ ವಿವಾದಗಳನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಿಹಿತಿಂಡಿ, ಅಣ್ಣನ ಪ್ರೀತಿ ಸ್ವೀಕರಿಸಿದ ಕಂಗನಾ
ರಾಮ್ದೇವ್ ಅವರ ಈ ನಡೆಗೆ ಕಂಗನಾ ರಣಾವತ್ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ರಕ್ಷಾಬಂಧನದ ದಿನ ಹಬ್ಬದ ಸಂದರ್ಭದಲ್ಲಿ ಎಲ್ಲ ತಪ್ಪುಗಳನ್ನು ಮರೆತು ಕ್ಷಮಿಸುವುದು ಸೂಕ್ತ ಎಂದು ಹೇಳಿರುವ ಅವರು, ತಮ್ಮ ಸಹೋದರ ಬಾಬಾ ರಾಮ್ದೇವ್ ಅವರು ವಿವಾದಕ್ಕಿಂತ ಸಂವಾದ ಮುಖ್ಯ ಎಂದು ಹೇಳಿರುವುದು ಸರಿಯಾಗಿದೆ ಎಂದು ತಿಳಿಸಿದ್ದಾರೆ.
ರಕ್ಷಾಬಂಧನದಂದು ರಾಮ್ದೇವ್ ಕಳುಹಿಸಿದ ಸಿಹಿತಿಂಡಿ ಮತ್ತು ಅಣ್ಣನ ಪ್ರೀತಿಯನ್ನು ತಾನು ಸ್ವೀಕರಿಸುವುದಾಗಿ ಕಂಗನಾ ಹೇಳಿದ್ದಾರೆ. ಜೊತೆಗೆ ಬಾಬಾ ರಾಮ್ದೇವ್ ಅವರಿಗೆ ಧನ್ಯವಾದ ತಿಳಿಸಿ, ದೇವರು ಅವರಿಗೆ ದೀರ್ಘಾಯುಷ್ಯ ನೀಡಲಿ ಎಂದು ಹಾರೈಸಿದ್ದಾರೆ.
Gen Z ಹೇಳಿಕೆಯಿಂದ ಆರಂಭವಾಗಿದ್ದ ವಾಕ್ಸಮರ
ಕಂಗನಾ ರಣಾವತ್ ಅವರು ಜೆನ್ಝಡ್ ಮತ್ತು ಯುವ ಪ್ರತಿಭಟನೆಕಾರರ ಕುರಿತು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ಅವರು ಜೆನ್ಝಡ್ ಅನ್ನು ‘ಜನರೇಷನ್ ಗಟರ್’ ಎಂದು ಕರೆದಿದ್ದರು. ಈ ಹೇಳಿಕೆಗೆ ಹಲವು ವಲಯಗಳಿಂದ ಟೀಕೆ ವ್ಯಕ್ತವಾಗಿತ್ತು.
ಬಾಬಾ ರಾಮ್ದೇವ್ ಕೂಡ ಕಂಗನಾ ಅವರ ಹೇಳಿಕೆಯನ್ನು ಪ್ರಶ್ನಿಸುವುದರ ಜೊತೆಗೆ ಅವರ ಶಿಕ್ಷಣ ಮತ್ತು ಹಿಂದಿನ ವಿಚಾರಗಳ ಕುರಿತು ಟೀಕೆ ಮಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕಂಗನಾ, ತಮ್ಮ ಯೌವನ ಅಥವಾ ಖಾಸಗಿ ಜೀವನದ ಬಗ್ಗೆ ‘ಹಗಲುಗನಸು’ ಕಾಣಬೇಡಿ ಎಂದು ರಾಮ್ದೇವ್ ಅವರಿಗೆ ತಿರುಗೇಟು ನೀಡಿದ್ದರು. ಇದೀಗ ರಕ್ಷಾಬಂಧನದಂದು ಇಬ್ಬರೂ ಪರಸ್ಪರ ಸೌಹಾರ್ದದ ಮೂಲಕ ವಿವಾದವನ್ನು ಅಂತ್ಯಗೊಳಿಸಿದ್ದಾರೆ.

