
ನೇಮಕಾತಿ ಅಕ್ರಮ ಆರೋಪದ ಹಿನ್ನೆಲೆ ಜಾರ್ಖಂಡ್ ಸರ್ಕಾರ 44 ಪರೀಕ್ಷೆ ಹಾಗೂ JSSC-CGL ರದ್ದುಪಡಿಸಿದೆ.
ಜಾರ್ಖಂಡ್ನಲ್ಲಿ 44 ನೇಮಕಾತಿ ಪರೀಕ್ಷೆ ರದ್ದು; ಇದೀಗ ಆಯ್ಕೆಯಾದವರ ಪ್ರತಿಭಟನೆ
ನೇಮಕಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಜಾರ್ಖಂಡ್ ಸರ್ಕಾರ 44 ಪರೀಕ್ಷೆಗಳನ್ನು ರದ್ದುಪಡಿಸಿದೆ. ಜೆಎಸ್ಎಸ್ಸಿ-ಸಿಜಿಎಲ್ ಮೂಲಕ ನೇಮಕಗೊಂಡ ಸುಮಾರು 2,000 ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ವಿರುದ್ಧ ಜಾರ್ಖಂಡ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ 25ನೇ ದಿನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ, ಜೆಎಂಎಂ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2014ರಿಂದ ರಾಜ್ಯ ಲೋಕಸೇವಾ ಆಯೋಗ (JPSC) ಹಾಗೂ ಹೊರಗುತ್ತಿಗೆ ಸಂಸ್ಥೆಯ ಮೂಲಕ ನಡೆದ 44 ನೇಮಕಾತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಇದರ ಜೊತೆಗೆ ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ (JSSC) ಸಂಯುಕ್ತ ಪದವಿ ಮಟ್ಟದ (CGL) ಪರೀಕ್ಷೆಯನ್ನೂ ರದ್ದುಗೊಳಿಸಲಾಗಿದೆ.
ಮುಖ್ಯ ಆಡಳಿತಾತ್ಮಕ, ತಾಂತ್ರಿಕ ಹಾಗೂ ನ್ಯಾಯಾಂಗ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳು ರದ್ದಾದ ಪಟ್ಟಿಯಲ್ಲಿವೆ. ಡ್ರಗ್ ಇನ್ಸ್ಪೆಕ್ಟರ್, ಸರ್ಕಾರಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕರು, ಹಿರಿಯ ವೈಜ್ಞಾನಿಕ ಅಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ವಲಯಾಧಿಕಾರಿಗಳ ನೇಮಕಾತಿ ಪರೀಕ್ಷೆಗಳು ಇದರಲ್ಲಿ ಸೇರಿವೆ.
ಇದರ ಜತೆಗೆ ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್), ಸಹಾಯಕ ಸರ್ಕಾರಿ ಅಭಿಯೋಜಕರು, ಡೆಪ್ಯುಟಿ ಕಲೆಕ್ಟರ್ಗಳು, ಸಹಾಯಕ ಎಂಜಿನಿಯರ್ಗಳು ಮತ್ತು ದಂತ ವೈದ್ಯರ ನೇಮಕಾತಿ ಪರೀಕ್ಷೆಗಳನ್ನೂ ರದ್ದುಪಡಿಸಲಾಗಿದೆ. ಜಾರ್ಖಂಡ್ ಸಂಯುಕ್ತ ನಾಗರಿಕ ಸೇವೆಗಳ ಪರೀಕ್ಷೆಯ ವಿವಿಧ ಹಂತಗಳೂ ಈ ನಿರ್ಧಾರದ ವ್ಯಾಪ್ತಿಗೆ ಬಂದಿವೆ.
ಪೇಪರ್ ಲೀಕ್ ತಡೆಯಲು ಖಾತರಿ ನೀಡುವಂತೆ ಆಗ್ರಹ
ಸರ್ಕಾರದ ನಿರ್ಧಾರದ ಬಳಿಕ ವಿದ್ಯಾರ್ಥಿಗಳ ಪ್ರತಿಭಟನೆಯ ಮುಂದಿನ ಹಂತದ ಬಗ್ಗೆ ಜೆಪಿಎಸ್ಸಿ-ಜೆಎಸ್ಎಸ್ಸಿ ಸುಧಾರಣಾ ಮಂಚ್ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಘಟನೆ ಸರ್ಕಾರದ ನಿರ್ಧಾರಗಳ ವ್ಯಾಪ್ತಿ ಮತ್ತು ಅವುಗಳ ಅನುಷ್ಠಾನದ ಬಗ್ಗೆ ಸ್ಪಷ್ಟತೆ ಬೇಕಿದೆ ಎಂದು ಹೇಳಿದೆ.
16 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದ ಜೆಎಲ್ಕೆಎಂ ನಾಯಕ ದೇವೇಂದ್ರ ಮಹತೋ, ಶೀಘ್ರದಲ್ಲೇ ಪ್ರತಿಭಟನೆಯ ಎರಡನೇ ಹಂತ ಆರಂಭಿಸುವುದಾಗಿ ತಿಳಿಸಿದ್ದಾರೆ. ಭವಿಷ್ಯದ ಜೆಪಿಎಸ್ಸಿ ಮತ್ತು ಜೆಎಸ್ಎಸ್ಸಿ ಪರೀಕ್ಷೆಗಳು ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮಗಳಿಂದ ಮುಕ್ತವಾಗಿರಬೇಕು ಎಂಬ ಖಾತರಿಯ ಜೊತೆಗೆ ನೇಮಕಾತಿ ಪ್ರಕ್ರಿಯೆಯ ಸಮಗ್ರ ಆಡಿಟ್ ಮತ್ತು ಮೇಲ್ವಿಚಾರಣಾ ಸಮಿತಿ ರಚನೆಗೆ ಅವರು ಒತ್ತಾಯಿಸಿದ್ದಾರೆ.
ಜೆಎಸ್ಎಸ್ಸಿ-ಸಿಜಿಎಲ್ ರದ್ದುಪಡಿಸಿದ್ದಕ್ಕೆ ನೇಮಕಗೊಂಡ ಅಭ್ಯರ್ಥಿಗಳ ಆಕ್ರೋಶ
ಇದೇ ವೇಳೆ ಜೆಎಸ್ಎಸ್ಸಿ-ಸಿಜಿಎಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೇಮಕಗೊಂಡ ಸುಮಾರು 2,000 ಅಭ್ಯರ್ಥಿಗಳು ಸರ್ಕಾರದ ನಿರ್ಧಾರ ವಿರೋಧಿಸಿ ರಾಂಚಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸಚಿವಾಲಯದಿಂದ ಬಿರ್ಸಾ ಚೌಕ್ವರೆಗೆ ಮೆರವಣಿಗೆ ನಡೆಸಿದ ಅಭ್ಯರ್ಥಿಗಳು, ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದರೆ ತನಿಖೆ ನಡೆಸುವುದಕ್ಕೆ ತಮ್ಮ ವಿರೋಧವಿಲ್ಲ, ಆದರೆ ಸಂಪೂರ್ಣ ಪರೀಕ್ಷೆಯನ್ನೇ ರದ್ದುಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನೇಮಕಗೊಂಡವರ ಪೈಕಿ ಹಲವರು ಹಣಕಾಸು, ಗೃಹ, ಸಾರಿಗೆ, ಕಾರ್ಮಿಕ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆಲವರುಜೆಎಸ್ಎಸ್ಸಿ-ಸಿಜಿಎಲ್ ಮೂಲಕ ನೇಮಕಾತಿ ದೊರೆತ ಬಳಿಕ ತಮ್ಮ ಹಿಂದಿನ ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ಯೋಗಗಳಿಗೂ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ವೇಗದ ವಿಚಾರಣೆಗೆ ಫಾಸ್ಟ್ಟ್ರ್ಯಾಕ್ ಕೋರ್ಟ್ ಪ್ರಸ್ತಾವ
ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಫಾಸ್ಟ್ಟ್ರ್ಯಾಕ್ ಕೋರ್ಟ್ ರಚಿಸುವಂತೆ ಹೈಕೋರ್ಟ್ಗೆ ಮನವಿ ಮಾಡಲು ಸರ್ಕಾರ ನಿರ್ಧರಿಸಿದೆ. ಜೆಪಿಎಸ್ಸಿ ಮತ್ತು ಜೆಎಸ್ಎಸ್ಸಿ ಎರಡೂ ಆಯೋಗಗಳಲ್ಲಿ ಆಂತರಿಕ ಜಾಗೃತತಾ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾವವೂ ಇದೆ.
ಹಿರಿಯ ಐಎಎಸ್ ಅಧಿಕಾರಿ ಅಮಿತಾಭ್ ಕೌಶಲ್ ನೇತೃತ್ವದಲ್ಲಿ ಸುಧಾರಣಾ ಸಮಿತಿಯನ್ನೂ ರಚಿಸಲಾಗಿದೆ. ಈ ಸಮಿತಿ ಎರಡು ತಿಂಗಳೊಳಗೆ ವರದಿ ಸಲ್ಲಿಸಬೇಕಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಪರಿಶೀಲಿಸಿ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಹಸ್ತಕ್ಷೇಪ ಮತ್ತು ಇತರ ದುರುಪಯೋಗಗಳನ್ನು ತಡೆಯಲು ಕ್ರಮಗಳನ್ನು ಶಿಫಾರಸು ಮಾಡಲಿದೆ.
ನೇಮಕಾತಿ ಅಕ್ರಮ ಪ್ರಕರಣದ ತನಿಖೆ ತೀವ್ರ
ಈ ನಡುವೆ ನೇಮಕಾತಿ ಅಕ್ರಮದ ತನಿಖೆಯನ್ನು ಜಾರ್ಖಂಡ್ ಸಿಐಡಿ ಮತ್ತಷ್ಟು ಚುರುಕುಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿ ಅಭಯ್ ತಿವಾರಿ ಅವರ ಪತ್ನಿ ಸುಷ್ಮಾ ಕುಮಾರಿ ಮತ್ತು ಸಹೋದರ ಅಕ್ಷಯ್ ತಿವಾರಿ ಅವರನ್ನು ವಿಚಾರಣೆ ಬಳಿಕ ಬಂಧಿಸಲಾಗಿದೆ. ಜುಲೈ 22ರಂದು ಬಂಧನಕ್ಕೊಳಗಾಗಿದ್ದ ಅಭಯ್ ತಿವಾರಿ, ಈ ಹಿಂದೆ ಟಿಡಿಪಿಎಲ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು, ಗೋದ್ಡಾ ಜಿಲ್ಲೆಯ ಪೊರಯ್ಯಾಹಾಟ್ನಲ್ಲಿ ಬ್ಲಾಕ್ ಸಪ್ಲೈ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ತನಿಖಾಧಿಕಾರಿಗಳ ಪ್ರಕಾರ, ತಿವಾರಿ 13 ವರ್ಷಗಳ ಅವಧಿಯಲ್ಲಿ ಪೊಲೀಸ್, ನೌಕಾಪಡೆ, ಭಾಭಾ ಪರಮಾಣು ಸಂಶೋಧನಾ ಕೇಂದ್ರ, ಸಿಆರ್ಪಿಎಫ್ ಮತ್ತು ನಾರ್ದರ್ನ್ ಕೋಲ್ಫೀಲ್ಡ್ಸ್ ಸೇರಿದಂತೆ ವಿವಿಧ ಸಂಸ್ಥೆಗಳ ಸುಮಾರು 12 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾನೆ. ಆತನ ಅರ್ಜಿ ನಮೂನೆಗಳು, ದಾಖಲೆಗಳು ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಅಭ್ಯರ್ಥಿಗಳ ಆಯ್ಕೆಗಾಗಿ ವಿವಿಧ ‘ದರಪಟ್ಟಿ’ಗಳನ್ನು ಬಳಸಲಾಗುತ್ತಿತ್ತು ಎಂದು ತಿವಾರಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಭ್ಯರ್ಥಿಗಳಿಂದ 2 ಲಕ್ಷ ರೂ.ನಿಂದ 70 ಲಕ್ಷ ರೂ.ವರೆಗೆ ಹಣ ಪಡೆಯಲಾಗುತ್ತಿತ್ತು ಎಂಬ ಆರೋಪವೂ ತನಿಖೆಯಲ್ಲಿದೆ. ಆದರೆ ಈ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಜೆಎಸ್ಎಸ್ಸಿ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಪತ್ತೆಯಾದ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಆಯೋಗದ ಕಾರ್ಯದರ್ಶಿ ಸುಧೀರ್ ಗುಪ್ತಾ ಅವರನ್ನೂ ಸಿಐಡಿ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಸರ್ಕಾರದ ನಿರ್ಧಾರಕ್ಕೆ ಸ್ವಾಗತ, ವಿರೋಧವೂ ವ್ಯಕ್ತ
ಕಾಂಗ್ರೆಸ್ನ ಸಚಿವರು ಮತ್ತು ಶಾಸಕರ ನಿಯೋಗ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಭೇಟಿ ಮಾಡಿ ಪರೀಕ್ಷೆಗಳ ರದ್ದತಿಯನ್ನು ಸ್ವಾಗತಿಸಿದೆ. ವಿದ್ಯಾರ್ಥಿಗಳಿಗೆ ನ್ಯಾಯಯುತ ನೇಮಕಾತಿ ಖಚಿತಪಡಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಆದರೆ ಬಿಜೆಪಿ ನಾಯಕ ಹಾಗೂ ಪ್ರತಿಪಕ್ಷ ನಾಯಕ ಬಾಬುಲಾಲ್ ಮರಾಂಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಬಿಐ ತನಿಖೆಯ ಬೇಡಿಕೆಯನ್ನು ಒಪ್ಪಿಕೊಳ್ಳದೆ ಪರೀಕ್ಷೆಗಳನ್ನು ರದ್ದುಪಡಿಸುವ ಮೂಲಕ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಸರ್ಕಾರ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ. ಸರ್ಕಾರ ಪರೀಕ್ಷೆಗಳನ್ನು ರದ್ದುಪಡಿಸಿರುವುದರಿಂದ ಪ್ರತಿಭಟನೆ ಅಂತ್ಯವಾಗುತ್ತದೆಯೇ ಅಥವಾ ಮತ್ತಷ್ಟು ತೀವ್ರಗೊಳ್ಳುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.

