
ವಾರಾಣಸಿಯಲ್ಲಿ ಗಂಗಾ ನದಿ ನೀರಿನ ಮಟ್ಟ ಎಚ್ಚರಿಕೆ ಗಡಿ ದಾಟಿದ್ದು 70.54 ಮೀಟರ್ಗೆ ಏರಿದೆ.
ಗಂಗಾ ನೀರಿನ ಮಟ್ಟ ಏರಿಕೆ; ವಾರಾಣಸಿಯಲ್ಲಿ ಪ್ರವಾಹದ ಭೀತಿ
ವಾರಾಣಸಿ ಪೊಲೀಸ್ ಆಯುಕ್ತ ಮೋಹಿತ್ ಅಗರ್ವಾಲ್ ಮತ್ತು ಜಿಲ್ಲಾಧಿಕಾರಿ ಸತ್ಯೇಂದ್ರ ಕುಮಾರ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಗಂಗಾ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು, ಎಚ್ಚರಿಕೆ ಗಡಿಯನ್ನು ದಾಟಿದೆ. ಗುರುವಾರ ಬೆಳಗ್ಗೆ 6 ಗಂಟೆಗೆ ಕೇಂದ್ರ ಜಲ ಆಯೋಗದ ರಾಜ್ಘಾಟ್ ಗೇಜ್ ಕೇಂದ್ರದಲ್ಲಿ ನೀರಿನ ಮಟ್ಟ 70.54 ಮೀಟರ್ ದಾಖಲಾಗಿದೆ. ಎಚ್ಚರಿಕೆ ಮಟ್ಟ 70.262 ಮೀಟರ್ ಆಗಿದ್ದು, ನೀರಿನ ಮಟ್ಟ ಪ್ರತಿ ಗಂಟೆಗೆ 2 ಸೆಂ.ಮೀ. ವೇಗದಲ್ಲಿ ಏರುತ್ತಿದೆ.
ರಾಜ್ಘಾಟ್ನಲ್ಲಿ ಗಂಗೆಯ ಅಪಾಯದ ಮಟ್ಟ 71.262 ಮೀಟರ್ ಆಗಿದೆ. ಗರಿಷ್ಠ ಪ್ರವಾಹ ಮಟ್ಟ 73.901 ಮೀಟರ್ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ. ಗಂಗಾ ಮತ್ತು ವರುಣಾ ನದಿಗಳ ನೀರಿನ ಮಟ್ಟ ಏರಿಕೆಯಿಂದ ವಾರಾಣಸಿಯ ಹಲವು ಪ್ರದೇಶಗಳಲ್ಲಿ ಪ್ರವಾಹ ಹಾಗೂ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ
ವಾರಾಣಸಿ ಪೊಲೀಸ್ ಆಯುಕ್ತ ಮೋಹಿತ್ ಅಗರ್ವಾಲ್ ಮತ್ತು ಜಿಲ್ಲಾಧಿಕಾರಿ ಸತ್ಯೇಂದ್ರ ಕುಮಾರ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಎನ್ಡಿಆರ್ಎಫ್ ಬೋಟ್ನಲ್ಲಿ ನಮೋ ಘಾಟ್ನಿಂದ ತೆರಳಿದ ಅಧಿಕಾರಿಗಳು ಸಾಲಾರ್ಪುರ, ಸರೈಯಾ, ಕೋನಿಯಾ, ಪುಲ್ ಕೋಹ್ನಾ, ಧೇಲ್ವರಿಯಾ ಮತ್ತು ಸರೈ ಮೋಹನಾ ಪ್ರದೇಶಗಳನ್ನು ಪರಿಶೀಲಿಸಿದರು.
ಪರಿಹಾರ ಶಿಬಿರಗಳಲ್ಲಿ ಸೌಲಭ್ಯಕ್ಕೆ ಸೂಚನೆ
ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬೋಟ್ಗಳು ಸೇರಿದಂತೆ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಬೇಕಾದ ಸಂಪನ್ಮೂಲಗಳನ್ನು ಸಿದ್ಧವಾಗಿಡುವಂತೆ ನಿರ್ದೇಶಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪೊಲೀಸರು ಮತ್ತು ಎನ್ಡಿಆರ್ಎಫ್ ಸಿಬ್ಬಂದಿ ನಿರಂತರ ನಿಗಾ ವಹಿಸುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಸಾಲಾರ್ಪುರದ ಪ್ರಾಥಮಿಕ ಶಾಲೆ ಮತ್ತು ವಿದ್ಯಾ ವಿಹಾರ್ ಇಂಟರ್ ಕಾಲೇಜಿನಲ್ಲಿರುವ ಪರಿಹಾರ ಶಿಬಿರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಂತ್ರಸ್ತ ಕುಟುಂಬಗಳ ಅಗತ್ಯಗಳನ್ನು ಆಲಿಸಿದರು. ಶಿಬಿರಗಳಲ್ಲಿ ಆಹಾರ, ಕುಡಿಯುವ ನೀರು, ವಿದ್ಯುತ್, ಬೆಳಕು, ಸ್ವಚ್ಛತೆ, ಆರೋಗ್ಯ ಸೇವೆ ಮತ್ತು ಭದ್ರತೆ ಸಮರ್ಪಕವಾಗಿ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ವಿಶೇಷ ಗಮನ ನೀಡುವಂತೆ ಸೂಚಿಸಲಾಗಿದ್ದು, ಆರೋಗ್ಯ ತಂಡಗಳು ನಿಯಮಿತ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂದು ನಿರ್ದೇಶಿಸಲಾಗಿದೆ. ಭದ್ರತೆ ಹೆಚ್ಚಿಸಲು ಪರಿಹಾರ ಶಿಬಿರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.

