
ನಡ್ಡಾ ಜೊತೆಗಿನ ಸಭೆ ಫಲ ನೀಡಲಿಲ್ಲ: ನಾಲ್ಕು ಗಂಟೆ ವ್ಯರ್ಥವಾಯಿತು ಎಂದ ಸಿಜೆಪಿ ವಕ್ತಾರ ಅಶುತೋಷ್ ರಂಕಾ
ನಡ್ಡಾ ಅವರನ್ನು ಉದ್ದೇಶಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಂಕಾ, "ನಡ್ಡಾ ಅವರೇ, ಸುಳ್ಳು ಹೇಳಬೇಡಿ. ಈ ಚಳವಳಿಯ ಶಕ್ತಿಯನ್ನು ಸರ್ಕಾರ ಅರಿತ ಕ್ಷಣದಿಂದಲೇ ಹತಾಶಗೊಂಡಿದೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ನಡೆದ ಮಾತುಕತೆ ಯಾವುದೇ ಫಲ ನೀಡಲಿಲ್ಲ. ಈ ಸಭೆಯಿಂದ ನಮ್ಮ ನಾಲ್ಕು ಗಂಟೆಗಳ ಅಮೂಲ್ಯ ಸಮಯ ವ್ಯರ್ಥವಾಯಿತು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಅಶುತೋಷ್ ರಂಕಾ ಆರೋಪಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ನಡುವೆಯೇ ಸೋಮವಾರ ಸಿಜೆಪಿ ಪ್ರತಿನಿಧಿಗಳು ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಈ ಸಭೆಯ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ರಂಕಾ, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಚಳವಳಿಯ ಶಕ್ತಿ ಅರಿತು ಸರ್ಕಾರ ಹತಾಶವಾಗಿದೆ"
ನಡ್ಡಾ ಅವರನ್ನು ಉದ್ದೇಶಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಂಕಾ, "ನಡ್ಡಾ ಅವರೇ, ಸುಳ್ಳು ಹೇಳಬೇಡಿ. ಈ ಚಳವಳಿಯ ಶಕ್ತಿಯನ್ನು ಸರ್ಕಾರ ಅರಿತ ಕ್ಷಣದಿಂದಲೇ ಹತಾಶಗೊಂಡಿದೆ. ಕೊನೆಗೆ ಯಾವುದೇ ಪ್ರಯೋಜನವಾಗದ ಸಭೆಗಾಗಿ ನಮ್ಮ ಅಮೂಲ್ಯ ನಾಲ್ಕು ಗಂಟೆಗಳ ಸಮಯ ಹಾಳಾಯಿತು" ಎಂದು ಟೀಕಿಸಿದ್ದಾರೆ.
ಪ್ರತಿಭಟನೆ ಹಿಂಪಡೆಯಲು ನಡ್ಡಾ ಮನವಿ
ಸಿಜೆಪಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಪ್ರತಿಭಟನೆ ಕೊನೆಗೊಳಿಸಿ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಆಡಳಿತಕ್ಕೆ ಸಹಕರಿಸುವಂತೆ ಸಿಜೆಪಿ ಬೆಂಬಲಿಗರಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದರು.
ನೀಟ್ ವಿಚಾರದಲ್ಲಿ ಸಿಜೆಪಿ ಹೋರಾಟ ಮುಂದುವರಿಕೆ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಕಳೆದ ಹಲವು ದಿನಗಳಿಂದ ಜಂತರ್ ಮಂತರ್ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದೆ.
ಈ ಹೋರಾಟಕ್ಕೆ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಬೆಂಬಲ ಸೂಚಿಸಿದ್ದು, ಅವರು 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಬಳಿಕ ನ್ಯಾಯಾಲಯದ ಆದೇಶದಂತೆ ಜುಲೈ 18ರಂದು ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಂಸತ್ ಚಲೋ ಬಳಿಕ ರಾಜಕೀಯ ಚರ್ಚೆ ತೀವ್ರ
ಸೋಮವಾರ ನಡೆದ "ಸಂಸತ್ ಚಲೋ" ಮೆರವಣಿಗೆ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಈ ಬೆಳವಣಿಗೆಯ ನಂತರ ಕೇಂದ್ರ ಸರ್ಕಾರ ಮತ್ತು ಸಿಜೆಪಿ ನಡುವಿನ ಮಾತುಕತೆ ಆರಂಭವಾದರೂ, ಸಭೆ ಯಾವುದೇ ಸ್ಪಷ್ಟ ಫಲಿತಾಂಶ ನೀಡಿಲ್ಲ ಎಂದು ಸಿಜೆಪಿ ಹೇಳಿದೆ. ಹೀಗಾಗಿ ಹೋರಾಟ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.

