
ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷದ ನಾಯಕ ರಿತಬ್ರತ ಬಂಡೋಪಾಧ್ಯಾಯ ಹಾಗೂ ಮಾಜಿ ಸಿಎಂ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆ; ಬಂಡಾಯ ಶಾಸಕ ರಿತಬ್ರತಗೆ ಹೈಕೋರ್ಟ್ ಹಸಿರು ನಿಶಾನೆ!
ಸದ್ಯದ ಪರಿಸ್ಥಿತಿಯಲ್ಲಿ, ರಿತಬ್ರತ ಬಂಡೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಗುರುತಿಸಿದ ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಅವರ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿ ಕೃಷ್ಣ ರಾವ್ ನಿರಾಕರಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ರಾಜಕೀಯವಾಗಿ ಮತ್ತೊಂದು ಭಾರಿ ಹಿನ್ನಡೆಯಾಗಿದೆ. ಬಂಡಾಯ ಶಾಸಕ ರಿತಬ್ರತ ಬಂಡೋಪಾಧ್ಯಾಯ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಅರ್ಜಿಗೆ ಮಧ್ಯಂತರ ಪರಿಹಾರ ನೀಡಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ.
ಗುರುವಾರ (ಜೂ. 18) ಈ ಮಹತ್ವದ ತೀರ್ಪು ಪ್ರಕಟವಾಗಿದ್ದು, ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭವಾಗುತ್ತಿರುವ ಬೆನ್ನಲ್ಲೇ ರಿತಬ್ರತ ಬಂಡೋಪಾಧ್ಯಾಯ ಅವರು ತಮ್ಮ ಉನ್ನತ ಹುದ್ದೆಯನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಈ ನಿರ್ಧಾರ ಹಾದಿ ಸುಗಮಗೊಳಿಸಿದೆ. ಸುಮಾರು ಮೂರು ದಶಕಗಳ ಹಿಂದೆ ಟಿಎಂಸಿ ಪಕ್ಷ ಸ್ಥಾಪನೆಯಾದಾಗಿನಿಂದಲೂ ಇಂತಹ ಗಂಭೀರ ಆಂತರಿಕ ವಿಭಜನೆಯನ್ನು ಎಂದೂ ಎದುರಿಸಿರಲಿಲ್ಲ. ಹಾಗಾಗಿ, ಈ ತೀರ್ಪು ಮಮತಾ ಬ್ಯಾನರ್ಜಿ ನೇತೃತ್ವದ ಅಧಿಕೃತ ಬಣಕ್ಕೆ ಭಾರಿ ರಾಜಕೀಯ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ.
ಹೈಕೋರ್ಟ್ ಹಸ್ತಕ್ಷೇಪಕ್ಕೆ ನಿರಾಕರಣೆ
ಸದ್ಯದ ಪರಿಸ್ಥಿತಿಯಲ್ಲಿ, ರಿತಬ್ರತ ಬಂಡೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಗುರುತಿಸಿದ ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಅವರ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿ ಕೃಷ್ಣ ರಾವ್ ನಿರಾಕರಿಸಿದ್ದಾರೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳಿಗೂ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶನ ನೀಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಜು. 28 ಕ್ಕೆ ನಿಗದಿಪಡಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದಲೇ ಆರಂಭವಾಗುತ್ತಿದ್ದು, ಜೂ. 22 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇಂತಹ ಪ್ರಮುಖ ಶಾಸಕಾಂಗ ಪ್ರಕ್ರಿಯೆಗಳು ಮತ್ತು ಚರ್ಚೆಗಳ ಸಮಯದಲ್ಲಿ ವಿರೋಧ ಪಕ್ಷದ ನಾಯಕನ ಹುದ್ದೆ ಅತ್ಯಂತ ನಿರ್ಣಾಯಕವಾಗಿರುತ್ತದೆ.
ಟಿಎಂಸಿಯಲ್ಲಿ ವಿಭಜನೆ
2026ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಎದುರಿಸಿದ ಭಾರಿ ಸೋಲಿನ ನಂತರ ಈ ಆಂತರಿಕ ಕಚ್ಚಾಟ ತಾರಕಕ್ಕೇರಿತ್ತು. ಬಂಡೋಪಾಧ್ಯಾಯ ಮತ್ತು ಮತ್ತೊಬ್ಬ ಬಂಡಾಯ ನಾಯಕ ಸಂದೀಪನ್ ಸಹಾ ನೇತೃತ್ವದ ಭಿನ್ನಮತೀಯ ಶಾಸಕರ ಗುಂಪು ಮಮತಾ ಬ್ಯಾನರ್ಜಿ ನಾಯಕತ್ವದ ವಿರುದ್ಧ ದಂಗೆ ಎದ್ದು, ವಿಧಾನಸಭೆಯಲ್ಲಿ ಪಕ್ಷದ ಬಹುಪಾಲು ಶಾಸಕರ ಬೆಂಬಲವನ್ನು ತನ್ನದಾಗಿಸಿಕೊಂಡಿದೆ.
ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದಾಖಲೆಗಳ ಪ್ರಕಾರ, ಒಟ್ಟು 80 ಟಿಎಂಸಿ ಶಾಸಕರ ಪೈಕಿ 58 ಶಾಸಕರು ವೈಯಕ್ತಿಕವಾಗಿ ರಿತಬ್ರತ ಬಂಡೋಪಾಧ್ಯಾಯ ಅವರಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಬೋಸ್ ಅವರು ಬಂಡೋಪಾಧ್ಯಾಯ ಅವರನ್ನು ಅಧಿಕೃತವಾಗಿ ವಿರೋಧ ಪಕ್ಷದ ನಾಯಕ ಎಂದು ಗುರುತಿಸಿದ್ದರು.
ಎಲ್ಒಪಿ ಗಾದಿಗಾಗಿ ಜಗಳ
ಇನ್ನೊಂದೆಡೆ, ಮಮತಾ ಬ್ಯಾನರ್ಜಿ ನಿಷ್ಠಾವಂತರು ಹಿರಿಯ ಶಾಸಕ ಶೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ಈ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು. ವಿರೋಧ ಪಕ್ಷದ ನಾಯಕನ ಆಯ್ಕೆಯು ಕೇವಲ ಶಾಸಕಾಂಗ ವಿಭಾಗದ ಬಹುಮತದ ಬಣದ ಮೇಲಲ್ಲ, ಬದಲಿಗೆ ಮೂಲ ರಾಜಕೀಯ ಪಕ್ಷದ ತೀರ್ಮಾನದ ಮೇಲಿರುತ್ತದೆ ಎಂದು ವಾದಿಸಿ ಮಮತಾ ಬಣ ಸ್ಪೀಕರ್ ನಿರ್ಧಾರವನ್ನು ಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಆದರೆ ಸ್ಪೀಕರ್ ಮತ್ತು ಬಂಡಾಯ ಬಣದ ಪರ ವಕೀಲರು, ಎಲ್ಒಪಿ ಮಾನ್ಯತೆಯು ವಿಧಾನಸಭೆಯೊಳಗಿನ ಸಂಖ್ಯಾ ಬಲವನ್ನು ಆಧರಿಸಿರುತ್ತದೆ ಎಂದು ವಾದಿಸಿದ್ದಾರೆ. ಅಲ್ಲದೆ, ಇದು ಪಕ್ಷಾಂತರ ವಿರೋಧಿ ಕಾನೂನಿನ ಅಡಿ ಬರುವುದಿಲ್ಲ, ಕೇವಲ ಶಾಸಕಾಂಗ ನಾಯಕತ್ವಕ್ಕೆ ಸಂಬಂಧಿಸಿದ ವಿಷಯ ಎಂದು ಸ್ಪಷ್ಟಪಡಿಸಿದ್ದಾರೆ.
ಬದಲಾದ ಅಧಿಕಾರದ ಸಮತೋಲನ
ಈ ಭಿನ್ನಮತವು ಬಂಗಾಳದ ಪ್ರಮುಖ ವಿರೋಧ ಪಕ್ಷವಾದ ಟಿಎಂಸಿಯ ಅಧಿಕಾರದ ಸಮತೋಲನವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ. ಬಜೆಟ್ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷ ಸಭೆಯಲ್ಲಿ ಬಂಡೋಪಾಧ್ಯಾಯ ಬಣದ ಶಾಸಕರಿಗೆ ಆಹ್ವಾನ ನೀಡಲಾಗಿದ್ದರೆ, ಮಮತಾ ನಿಷ್ಠಾವಂತ ಶೋವಂದೇಬ್ ಚಟ್ಟೋಪಾಧ್ಯಾಯ ಸೇರಿದಂತೆ ಹಲವರನ್ನು ಹೊರಗಿಡಲಾಗಿತ್ತು.
ತಮ್ಮ ಬಣವೇ "ನಿಜವಾದ" ಟಿಎಂಸಿ ಶಾಸಕಾಂಗ ಪಕ್ಷ ಎಂದು ಬಂಡೋಪಾಧ್ಯಾಯ ಘೋಷಿಸಿದ್ದು, ಧೈರ್ಯವಿದ್ದರೆ ಬಹುಮತ ಸಾಬೀತುಪಡಿಸಿ ಎಂದು ಮಮತಾ ಬಣಕ್ಕೆ ಸವಾಲು ಹಾಕಿದ್ದಾರೆ. ಇತ್ತ ಬಂಡಾಯ ಶಾಸಕ ಸಂದೀಪನ್ ಸಹಾ, ಹೈಕೋರ್ಟ್ನ ಈ ನಿರ್ಧಾರವನ್ನು ತಮ್ಮ ಬಣಕ್ಕೆ ಸಿಕ್ಕ "ನೈತಿಕ ಗೆಲುವು" ಎಂದು ಬಣ್ಣಿಸಿದ್ದಾರೆ. ಮೂಲ ರಾಜಕೀಯ ಪಕ್ಷದ ತೀರ್ಮಾನವನ್ನು ಮೀರಿ ಶಾಸಕಾಂಗ ಬಣದ ಆಯ್ಕೆಯನ್ನು ಸ್ಪೀಕರ್ ಗುರುತಿಸಬಹುದೇ ಎಂಬ ಅಂತಿಮ ಕಾನೂನು ಪ್ರಶ್ನೆ ಇನ್ನು ಬಗೆಹರಿಯಬೇಕಾಗಿದೆ.

