ದೆಹಲಿ ಅಬಕಾರಿ ನೀತಿ ಪ್ರಕರಣ: ಹೈಕೋರ್ಟ್ ನ್ಯಾಯಾಧೀಶರ ವಿಚಾರಣೆ ಬಹಿಷ್ಕರಿಸಿದ ಅರವಿಂದ್ ಕೇಜ್ರಿವಾಲ್
x
ಸಂಗ್ರಹ ಚಿತ್ರ.

ದೆಹಲಿ ಅಬಕಾರಿ ನೀತಿ ಪ್ರಕರಣ: ಹೈಕೋರ್ಟ್ ನ್ಯಾಯಾಧೀಶರ ವಿಚಾರಣೆ ಬಹಿಷ್ಕರಿಸಿದ ಅರವಿಂದ್ ಕೇಜ್ರಿವಾಲ್

ಒಂದು ವೇಳೆ ಬಾಂಡ್ ಷರತ್ತು ಉಲ್ಲಂಘಿಸಿ ಕೇಜ್ರಿವಾಲ್​ ವಿಚಾರಣೆಗೆ ಗೈರಾದರೆ, ನ್ಯಾಯಾಲಯವು ಮೊದಲು ಜಾಮೀನು ಸಹಿತ ಮತ್ತು ನಂತರ ಜಾಮೀನು ರಹಿತ ವಾರಂಟ್ ಜಾರಿಗೊಳಿಸುವ ಅಧಿಕಾರ ಹೊಂದಿದೆ.


Click the Play button to hear this message in audio format

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ನ್ಯಾಯಾಧೀಶೆ ಜಸ್ಟಿಸ್ ಸ್ವರ್ಣಕಾಂತ ಶರ್ಮಾ ಅವರ ಪೀಠವನ್ನು ಬಹಿಷ್ಕರಿಸುವುದಾಗಿ ಅವರು ಘೋಷಿಸಿದ್ದು, ಅವರ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ನೇರವಾಗಿ ಪತ್ರ ಬರೆದಿದ್ದಾರೆ.

ನ್ಯಾಯಾಧೀಶರಿಗೆ ಬರೆದಿರುವ ಪತ್ರದಲ್ಲಿ ಕೇಜ್ರಿವಾಲ್, "ನಿಮ್ಮಿಂದ ನ್ಯಾಯ ಸಿಗುವ ವಿಶ್ವಾಸ ನನಗಿಲ್ಲ. ಹೀಗಾಗಿ ಗಾಂಧೀಜಿಯವರ ಸತ್ಯಾಗ್ರಹದ ಮಾರ್ಗವನ್ನು ಅನುಸರಿಸಿ, ನಿಮ್ಮ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯಲ್ಲಿ ನಾನು ಖುದ್ದಾಗಿ ಅಥವಾ ವಕೀಲರ ಮೂಲಕವೂ ಭಾಗವಹಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾಯ ಕೇವಲ ಒದಗಿಸುವುದಲ್ಲ, ಅದು ಜನರಿಗೆ ಕಾಣುವಂತೆಯೂ ಇರಬೇಕು ಎಂಬ ಮೂಲಭೂತ ತತ್ವವು ನಿಮ್ಮ ನ್ಯಾಯಾಲಯದಲ್ಲಿ ಪಾಲನೆಯಾಗುತ್ತಿಲ್ಲ ಎಂಬ ಕಠಿಣ ನಿರ್ಧಾರಕ್ಕೆ ಬಂದ ಬಳಿಕವೇ ಈ ಹೆಜ್ಜೆ ಇಟ್ಟಿರುವುದಾಗಿ ಅವರು ವಿವರಿಸಿದ್ದಾರೆ.

ಹಿತಾಸಕ್ತಿ ಸಂಘರ್ಷದ ಆರೋಪ

ನ್ಯಾಯಾಧೀಶೆ ಸ್ವರ್ಣಕಾಂತ ಶರ್ಮಾ ಅವರ ವಿರುದ್ಧ ಕೇಜ್ರಿವಾಲ್ ಹಿತಾಸಕ್ತಿ ಸಂಘರ್ಷದ ಆರೋಪ ಮಾಡಿದ್ದಾರೆ. ಜಸ್ಟಿಸ್ ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ಪ್ಯಾನೆಲ್ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಪ್ರಕರಣದಲ್ಲಿ ಸಿಬಿಐ ಪರ ವಾದಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೊಂದಿಗೆ ವೃತ್ತಿಪರ ನಂಟು ಹೊಂದಿದ್ದಾರೆ. ಜೊತೆಗೆ, ಆರ್‌ಎಸ್‌ಎಸ್-ಸಂಯೋಜಿತ 'ಅಖಿಲ ಭಾರತ ಅಧಿವಕ್ತ ಪರಿಷತ್' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಭಾಗವಹಿಸಿದ್ದರು ಎಂಬುದು ಆಪ್ ನಾಯಕನ ಪ್ರಮುಖ ಆಕ್ಷೇಪವಾಗಿದೆ.

ಹಿಂದೆ ಸರಿಯಲು ನಿರಾಕರಿಸಿದ್ದ ನ್ಯಾಯಾಧೀಶೆ

ಕೆಲವೇ ದಿನಗಳ ಹಿಂದಷ್ಟೇ, ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಜಸ್ಟಿಸ್ ಸ್ವರ್ಣಕಾಂತ ಶರ್ಮಾ ವಜಾಗೊಳಿಸಿದ್ದರು. "ನನ್ನ ಪ್ರಮಾಣವಚನ ಸಂವಿಧಾನಕ್ಕೆ ಬದ್ಧವಾಗಿದೆ. ನ್ಯಾಯವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ನಾನು ನಿರ್ಭಯವಾಗಿ, ಯಾವುದೇ ಪಕ್ಷಪಾತವಿಲ್ಲದೆ ತೀರ್ಪು ನೀಡುತ್ತೇನೆ ಮತ್ತು ಈ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ" ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದರು. ಬಲವಾದ ಪುರಾವೆಗಳಿಲ್ಲದೆ ಕೇವಲ ಆರೋಪದ ಆಧಾರದ ಮೇಲೆ ವಿಚಾರಣೆಯಿಂದ ಹಿಂದೆ ಸರಿಯುವುದು ಕರ್ತವ್ಯ ಲೋಪವಾಗುತ್ತದೆ ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದರು.

ವಾರಂಟ್ ಜಾರಿ ಭೀತಿ?

ವಿಚಾರಣೆಗೆ ಗೈರಾಗುವ ಮೂಲಕ ಕೇಜ್ರಿವಾಲ್ ಮತ್ತೊಂದು ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಹಿರಿಯ ವಕೀಲ ಸತೀಶ್ ತಮ್ತಾ ಅವರ ಪ್ರಕಾರ, ಖುಲಾಸೆಗೊಂಡ ಪ್ರಕರಣದ ಮೇಲ್ಮನವಿ ವಿಚಾರಣೆ ನಡೆಯುತ್ತಿರುವಾಗ, ಕಡ್ಡಾಯವಾಗಿ ಹಾಜರಾಗುವಂತೆ ನ್ಯಾಯಾಲಯವು ಆರೋಪಿಯಿಂದ ಬಾಂಡ್ ಬರೆಸಿಕೊಂಡಿರುತ್ತದೆ. ಒಂದು ವೇಳೆ ಬಾಂಡ್ ಷರತ್ತು ಉಲ್ಲಂಘಿಸಿ ವಿಚಾರಣೆಗೆ ಗೈರಾದರೆ, ನ್ಯಾಯಾಲಯವು ಮೊದಲು ಜಾಮೀನು ಸಹಿತ ಮತ್ತು ನಂತರ ಜಾಮೀನು ರಹಿತ ವಾರಂಟ್ ಜಾರಿಗೊಳಿಸುವ ಅಧಿಕಾರ ಹೊಂದಿದೆ.

ಆದಾಗ್ಯೂ, ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ತಮ್ಮ ಹಕ್ಕನ್ನು ಕಾಯ್ದಿರಿಸಿಕೊಂಡಿರುವುದಾಗಿ ಕೇಜ್ರಿವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ಕೇಜ್ರಿವಾಲ್ ಅವರನ್ನು ದೋಷಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಇದೀಗ ಕೇಜ್ರಿವಾಲ್ ಅವರ ಗೈರುಹಾಜರಿ ನಿರ್ಧಾರದಿಂದಾಗಿ ಪ್ರಕರಣವು ಮತ್ತಷ್ಟು ಕುತೂಹಲಘಟ್ಟಕ್ಕೆ ತಲುಪಿದೆ.

Read More
Next Story