8th Pay Commission Update: What stage is the process at after 6 months?
x

ಸಾಂದರ್ಭಿಕ ಚಿತ್ರ

8ನೇ ವೇತನ ಆಯೋಗದ ಅಪ್ಡೇಟ್: 6 ತಿಂಗಳ ನಂತರ ಯಾವ ಹಂತದಲ್ಲಿದೆ ಪ್ರಕ್ರಿಯೆ?

ಕೇಂದ್ರ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿಯ ರಾಷ್ಟ್ರೀಯ ಮಂಡಳಿಯು (NC-JCM) 51 ಪುಟಗಳ ವಿವರವಾದ ಮನವಿಯನ್ನು ಆಯೋಗಕ್ಕೆ ಸಲ್ಲಿಸಿದೆ.


Click the Play button to hear this message in audio format

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಭವಿಷ್ಯದ ವೇತನ ಹಾಗೂ ಭತ್ಯೆಗಳನ್ನು ನಿರ್ಧರಿಸಲು ರಚಿಸಲಾದ 8ನೇ ವೇತನ ಆಯೋಗವು ರಚನೆಯಾಗಿ ಇದೀಗ ಆರು ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಆಯೋಗವು ತನ್ನ ಆರಂಭಿಕ ಯೋಜನೆಗಳ ಹಂತವನ್ನು ದಾಟಿ, ಪ್ರಮುಖ ಸಮಾಲೋಚನೆಗಳ ಹಂತಕ್ಕೆ ಪ್ರವೇಶಿಸಿದೆ. ಈ ಆರು ತಿಂಗಳ ಪ್ರಗತಿಯ ಚಿತ್ರಣ ಇಲ್ಲಿದೆ.

ಕಳೆದ ನವೆಂಬರ್ 3, 2025 ರಂದು ಅಧಿಕೃತವಾಗಿ ರಚನೆಯಾದ ಈ ಆಯೋಗಕ್ಕೆ ಅಂತಿಮ ವರದಿ ಸಲ್ಲಿಸಲು ನೀಡಲಾದ ಸಮಯದ ಮೂರನೇ ಒಂದು ಭಾಗವು ಈಗಾಗಲೇ ಮುಗಿದಿದೆ. ಸದ್ಯ ಆಯೋಗವು ಚರ್ಚೆಗಳು, ದತ್ತಾಂಶ ಸಂಗ್ರಹಣೆ ಹಾಗೂ ಪಾಲುದಾರರ ಜೊತೆಗಿನ ಸಮಾಲೋಚನೆಗಳ ಹಂತದಲ್ಲಿದೆ. ಏಪ್ರಿಲ್ 10ರ ಆಸುಪಾಸಿನಲ್ಲಿ ಆಯೋಗವು ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದು ಮುಂಬರುವ ದಿನಗಳಲ್ಲಿ ನಡೆಯಲಿರುವ ವಿವರವಾದ ವಿಶ್ಲೇಷಣೆಗಳಿಗೆ ವೇದಿಕೆ ಸಿದ್ಧಪಡಿಸಿದೆ.

ಇದಾದ ನಂತರ ಏಪ್ರಿಲ್ 14ರಂದು, ಕೇಂದ್ರ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿಯ ರಾಷ್ಟ್ರೀಯ ಮಂಡಳಿಯು (NC-JCM) 51 ಪುಟಗಳ ವಿವರವಾದ ಮನವಿಯನ್ನು ಆಯೋಗಕ್ಕೆ ಸಲ್ಲಿಸಿದೆ. ಈ ಮನವಿಯಲ್ಲಿ ನೌಕರರ ಪ್ರಮುಖ ಬೇಡಿಕೆಗಳನ್ನು ಪ್ರಸ್ತಾಪಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಲಿದೆ. ಏಪ್ರಿಲ್ 28ರಿಂದ 30ರವರೆಗೆ ದೆಹಲಿಯಲ್ಲಿ ನಡೆದ ಆಯೋಗ ಮತ್ತು NC-JCM ಪ್ರತಿನಿಧಿಗಳ ನಡುವಿನ ಮೊದಲ ಸುತ್ತಿನ ಮಾತುಕತೆಗಳಲ್ಲಿ ವೇತನ ಶ್ರೇಣಿ, ಪಿಂಚಣಿ ಸುಧಾರಣೆಗಳು ಮತ್ತು ಸೇವಾ ನಿಯಮಗಳ ಕುರಿತು ಗಂಭೀರ ಚರ್ಚೆಗಳು ನಡೆದಿವೆ.

ಪ್ರಮುಖ ಬೇಡಿಕೆಗಳೇನು?

NC-JCM ಸಲ್ಲಿಸಿರುವ ಮನವಿಯಲ್ಲಿ ಹಲವು ಮಹತ್ವದ ಬೇಡಿಕೆಗಳನ್ನು ಮುಂದಿಡಲಾಗಿದೆ. ಕನಿಷ್ಠ ಮೂಲ ವೇತನವನ್ನು 69,000 ರೂ.ಗೆ ಏರಿಸುವುದು, 3.83 ರ ಫಿಟ್‌ಮೆಂಟ್ ಫ್ಯಾಕ್ಟರ್ ಅಳವಡಿಕೆ, ವಾರ್ಷಿಕ ವೇತನ ಹೆಚ್ಚಳವನ್ನು ಶೇ. 6ಕ್ಕೆ ಏರಿಸುವುದು ಹಾಗೂ ಕನಿಷ್ಠ ಮನೆ ಬಾಡಿಗೆ ಭತ್ಯೆಯನ್ನು (HRA) ಶೇ. 30ಕ್ಕೆ ಹೆಚ್ಚಿಸುವುದು ಇದರಲ್ಲಿ ಸೇರಿದೆ. ಜೊತೆಗೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸುವಂತೆಯೂ ಒತ್ತಾಯಿಸಲಾಗಿದೆ.

ಮುಂದಿನ ಪ್ರಮುಖ ಹಂತವಾಗಿ, ಆಯೋಗಕ್ಕೆ ಜ್ಞಾಪಕ ಪತ್ರಗಳನ್ನು ಸಲ್ಲಿಸುವ ಗಡುವನ್ನು ಮೇ 31, 2026ರವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಪಾಲುದಾರರಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮತ್ತು ಆಯೋಗದೊಂದಿಗೆ ಸಭೆ ನಡೆಸಲು ಹೆಚ್ಚಿನ ಸಮಯ ಸಿಕ್ಕಂತಾಗಿದೆ.

ದೆಹಲಿಯಲ್ಲಿನ ಚರ್ಚೆಗಳ ನಂತರ, ಆಯೋಗವು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ವಿವಿಧ ರಾಜ್ಯಗಳಿಗೆ ಭೇಟಿ ನೀಡಲು ಮುಂದಾಗಿದೆ. ಮೇ 18-19ರಂದು ಹೈದರಾಬಾದ್ (ತೆಲಂಗಾಣ), ಜೂನ್ 1ರಿಂದ 4ರವರೆಗೆ ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) ಹಾಗೂ ಜೂನ್ 8ರಂದು ಲಡಾಖ್‌ಗೆ ಭೇಟಿ ನೀಡಿ ಸಮಾಲೋಚನೆ ನಡೆಸಲು ವೇಳಾಪಟ್ಟಿ ನಿಗದಿಯಾಗಿದೆ. ಸದ್ಯದ ಮಟ್ಟಿಗೆ ಆಯೋಗದ ಕೆಲಸಗಳು ನಿಧಾನವಾಗಿ ಸಾಗುತ್ತಿದ್ದರೂ, ಮುಂಬರುವ ತಿಂಗಳುಗಳಲ್ಲಿ ದತ್ತಾಂಶ ವಿಶ್ಲೇಷಣೆ ಹಾಗೂ ಮಾತುಕತೆಗಳು ತೀವ್ರಗೊಳ್ಳಲಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ಅಂತಿಮ ನಿರ್ಧಾರಕ್ಕಾಗಿ ಇನ್ನಷ್ಟು ಕಾಯುವಿಕೆ ಅನಿವಾರ್ಯವಾಗಿದೆ.



Read More
Next Story