80ನೇ ಸ್ವಾತಂತ್ರ್ಯೋತ್ಸವ LIVE | ಕೆಂಪುಕೋಟೆ ಕಾರ್ಯಕ್ರಮಕ್ಕೆ ರಾಹುಲ್ ಗೈರು: ಬಿಜೆಪಿ ವಾಗ್ದಾಳಿ
x

80ನೇ ಸ್ವಾತಂತ್ರ್ಯೋತ್ಸವ LIVE | ಕೆಂಪುಕೋಟೆ ಕಾರ್ಯಕ್ರಮಕ್ಕೆ ರಾಹುಲ್ ಗೈರು: ಬಿಜೆಪಿ ವಾಗ್ದಾಳಿ

80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಐತಿಹಾಸಿಕ ಬೆಳವಣಿಗೆಯೊಂದಕ್ಕೆ ಕೆಂಪುಕೋಟೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ರಾಷ್ಟ್ರಗೀತೆ ‘ವಂದೇ ಮಾತರಂ’ ಅನ್ನು ಸಂಪೂರ್ಣವಾಗಿ ಹಾಡಲಾಯಿತು.


Click the Play button to hear this message in audio format

ಭಾರತ ಇಂದು, ಆಗಸ್ಟ್ 15ರಂದು, 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದೆ. ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಕೆಂಪುಕೋಟೆಯ ಆವರಣದಿಂದ ಪ್ರಧಾನಿ ಮೋದಿ ಸತತ 13ನೇ ಬಾರಿಗೆ ಮಾಡುತ್ತಿರುವ ಸ್ವಾತಂತ್ರ್ಯ ದಿನದ ಭಾಷಣ ಇದಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದು, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸ್ಮರಿಸಿದ್ದಾರೆ. ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದ 79 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಸಂಕಲ್ಪಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಮೊದಲ ಬಾರಿಗೆ ಪೂರ್ಣ ‘ವಂದೇ ಮಾತರಂ’ ಗಾಯನ

80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಐತಿಹಾಸಿಕ ಬೆಳವಣಿಗೆಯೊಂದಕ್ಕೆ ಕೆಂಪುಕೋಟೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಗೀತೆ ‘ವಂದೇ ಮಾತರಂ’ ಅನ್ನು ಸಂಪೂರ್ಣವಾಗಿ ಹಾಡಲಾಯಿತು.

‘ವಂದೇ ಮಾತರಂ’ ಗಾಯನದ ಬಳಿಕ ಎಂದಿನಂತೆ ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಹಾಡಲಾಯಿತು. ಈ ವರ್ಷ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆ ರಚನೆಯಾಗಿ 150 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪೂರ್ಣ ಗೀತೆಯನ್ನು ಪ್ರಸ್ತುತಪಡಿಸಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

ದೇಶದ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸುಮಾರು 5,000 ವಿಶೇಷ ಅತಿಥಿಗಳು ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ. ‘ಮೈ ಭಾರತ್’ ಸ್ವಯಂಸೇವಕರು, ಟಾಪ್ ಇಂಟರ್ನ್‌ಗಳು, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳು, ಸ್ವಚ್ಛತಾ ಕಾರ್ಮಿಕರು, ಬೀದಿ ವ್ಯಾಪಾರಿಗಳು ಹಾಗೂ ಸಾಂಪ್ರದಾಯಿಕ ಕರಕುಶಲ ವೃತ್ತಿಯಲ್ಲಿ ತೊಡಗಿರುವ ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಮೋದಿ ಭಾಷಣ 22‌ ಭಾಷೆಗಳಿಗೆ ಭಾಷಾಂತರ

ಈ ವರ್ಷದ ಆಚರಣೆಯಲ್ಲಿ ತಂತ್ರಜ್ಞಾನಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ. ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣವನ್ನು 22 ಭಾರತೀಯ ಭಾಷೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತವಾಗಿ ಭಾಷಾಂತರಿಸುವ ವ್ಯವಸ್ಥೆ ರೂಪಿಸಲಾಗಿದೆ. ಇದಕ್ಕಾಗಿ ‘ಭಾಷಿಣಿ’ ಸೇರಿದಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ.

‘ವೋಕಲ್ ಫಾರ್ ಲೋಕಲ್’ಗೆ ಒತ್ತು

ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನರು ‘ವೋಕಲ್ ಫಾರ್ ಲೋಕಲ್’ ಅಭಿಯಾನದೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೇಳಿದರು. “ನಾವು ಇತರ ರಾಷ್ಟ್ರಗಳ ಮೇಲೆ ಅವಲಂಬಿತರಾಗಿ ಉಳಿಯಲು ಸಾಧ್ಯವಿಲ್ಲ. ನಾವು ಆತ್ಮನಿರ್ಭರರಾಗಬೇಕು,” ಎಂದು ಪ್ರಧಾನಿ ಮೋದಿ ಕರೆ ನೀಡಿದರು.

“ಪ್ರತಿಯೊಬ್ಬ ಭಾರತೀಯನೂ ಈಗ ವೋಕಲ್ ಫಾರ್ ಲೋಕಲ್‌ಗೆ ಬೆಂಬಲ ನೀಡುತ್ತಿದ್ದಾರೆ. ಸ್ವದೇಶಿ ಉತ್ಪನ್ನಗಳತ್ತ ಜನರ ಒಲವು ಹೆಚ್ಚಾಗಿದೆ,” ಎಂದು ಪ್ರಧಾನಿ ಹೇಳಿದರು. ಭಾರತವನ್ನು ಆತ್ಮನಿರ್ಭರಗೊಳಿಸುವ ನಿಟ್ಟಿನಲ್ಲಿ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ಉತ್ಪಾದನೆ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

“ಇಂದು ನಾವೆಲ್ಲರೂ 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. ಇಂದು ಪ್ರತಿಯೊಂದು ಹೃದಯವೂ ‘ವಂದೇ ಮಾತರಂ’ ಘೋಷಣೆಯಿಂದ ಮೊಳಗುತ್ತಿದೆ. ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವಿದೆ, ಪ್ರತಿಯೊಂದು ಹೃದಯದಲ್ಲೂ ತ್ರಿವರ್ಣ ಧ್ವಜವಿದೆ. ಹೊಸ ಸಂಕಲ್ಪಗಳೊಂದಿಗೆ, ಉತ್ಸಾಹ ಮತ್ತು ಹುಮ್ಮಸ್ಸಿನಿಂದ ದೇಶ ಇಂದು ಮುಂದೆ ಸಾಗುತ್ತಿದೆ,” ಎಂದು ಹೇಳಿದರು.

25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ: ಮೋದಿ

ಕಳೆದ 12 ವರ್ಷಗಳಲ್ಲಿ ದೇಶದ ಅಭಿವೃದ್ಧಿ ವೇಗ ಪಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತಮ್ಮ ಸರ್ಕಾರ 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ ಎಂದು ಅವರು ತಿಳಿಸಿದರು. “ಅಭಿವೃದ್ಧಿಯ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ 140 ಕೋಟಿ ಭಾರತೀಯರನ್ನು ಈಗ ಯಾರಿಂದಲೂ ತಡೆಯಲು ಸಾಧ್ಯವಿಲ್ಲ,” ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿಯತ್ತ ದೇಶ ಮುನ್ನಡೆಯುತ್ತಿದ್ದು, ಆತ್ಮನಿರ್ಭರತೆ, ಸ್ವದೇಶಿ ಉತ್ಪನ್ನಗಳ ಬಳಕೆ, ತಂತ್ರಜ್ಞಾನ ಮತ್ತು ನವೋದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

Live Updates

  • 15 Aug 2026 2:04 PM IST

    80ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಯುವಶಕ್ತಿಗೆ ಮೋದಿ ಒತ್ತು

    ಪ್ರಧಾನಿ ನರೇಂದ್ರ ಮೋದಿ ಅವರು 80ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ದೇಶದ ಯುವಜನರನ್ನು ಕೇಂದ್ರಬಿಂದುವಾಗಿಸಿಕೊಂಡು ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಉಚಿತ ಆನ್‌ಲೈನ್ ಕೋಚಿಂಗ್, ಕೃತಕ ಬುದ್ಧಿಮತ್ತೆ (AI) ಕೌಶಲ್ಯ ತರಬೇತಿ, ದೇಶಾದ್ಯಂತ ಕ್ರೀಡಾ ಪ್ರತಿಭೆ ಹುಡುಕಾಟ ಹಾಗೂ ನಾಗರಿಕ ರಕ್ಷಣಾ ವ್ಯವಸ್ಥೆಯಲ್ಲಿ ಬದಲಾವಣೆಗಳ ಕುರಿತು ಅವರು ಘೋಷಿಸಿದರು.

    75 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಯುವಜನರನ್ನು 52 ಬಾರಿ ಉಲ್ಲೇಖಿಸಿದರು. ‘ಯುವ ಶಕ್ತಿ’, ‘ನೌಜವಾನ್’ ಹಾಗೂ ‘ಸಾಥಿಯೋ’ ಸೇರಿದಂತೆ ವಿವಿಧ ಪದಗಳ ಮೂಲಕ ದೇಶದ ಯುವಜನರನ್ನು ಉದ್ದೇಶಿಸಿ ಮಾತನಾಡಿದರು.

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ವಿವಿಧ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮೋದಿ ಘೋಷಿಸಿದರು.

    “ಕೋಚಿಂಗ್ ತರಗತಿಗಳು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆಯಾಗಿವೆ. ವಿವಿಧ ಪರೀಕ್ಷೆಗಳಿಗೆ ನಾವು ಉಚಿತ ಆನ್‌ಲೈನ್ ಕೋಚಿಂಗ್ ಒದಗಿಸುತ್ತೇವೆ” ಎಂದು ಪ್ರಧಾನಿ ಹೇಳಿದರು.

    ಮುಂದಿನ ಒಂದು ವರ್ಷದಲ್ಲಿ ಒಂದು ಕೋಟಿ ಯುವಜನರಿಗೆ ಕೃತಕ ಬುದ್ಧಿಮತ್ತೆ (AI) ಕೌಶಲ್ಯ ತರಬೇತಿ ನೀಡುವ ಯೋಜನೆಯನ್ನೂ ಮೋದಿ ಘೋಷಿಸಿದರು. ಭವಿಷ್ಯದ ಉದ್ಯೋಗ ಮಾರುಕಟ್ಟೆಗೆ ಯುವಕರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ AI ಕೌಶಲ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

    5ರಿಂದ 15 ವರ್ಷದ ಮಕ್ಕಳಿಗೆ ದೇಶವ್ಯಾಪಿ ಪ್ರತಿಭಾ ಶೋಧ

    ಕ್ರೀಡಾ ಕ್ಷೇತ್ರಕ್ಕೂ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೆಚ್ಚಿನ ಒತ್ತು ನೀಡಿದರು. ದೇಶದ ಮೂಲೆ ಮೂಲೆಗಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು 5ರಿಂದ 15 ವರ್ಷದ ಮಕ್ಕಳಿಗಾಗಿ ದೇಶವ್ಯಾಪಿ ಪ್ರತಿಭಾ ಶೋಧ ಅಭಿಯಾನ ಆರಂಭಿಸಲಾಗುವುದು ಎಂದು ಘೋಷಿಸಿದರು.

    ಇದರ ಮೂಲಕ ಕ್ರೀಡೆಯಲ್ಲಿ ಉತ್ತಮ ಸಾಮರ್ಥ್ಯ ಹೊಂದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಅವಕಾಶ ಮತ್ತು ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ.

    ಇದರ ಜೊತೆಗೆ ಮಾದಕ ವ್ಯಸನದ ವಿರುದ್ಧದ 100 ದಿನಗಳ ಅಭಿಯಾನದಲ್ಲಿ ಯುವಜನರು ಭಾಗವಹಿಸುವಂತೆ ಮೋದಿ ಕರೆ ನೀಡಿದರು. ಉತ್ಪಾದನಾ ವಲಯ, ಸೆಮಿಕಂಡಕ್ಟರ್, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಕ್ಷೇತ್ರಗಳಲ್ಲಿ ಯುವಜನರಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.

  • 15 Aug 2026 2:01 PM IST

    ‘ಭರವಸೆಗಳ ಸುರಿಮಳೆ ಸುರಿಸುವಲ್ಲಿ ಮೋದಿ ಅಸಾಧಾರಣ’: ಸಿಪಿಐ(ಎಂ) ಟೀಕೆ

    ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆಗಳನ್ನು ನೀಡುವ ವಿಚಾರದಲ್ಲಿ ‘ಅಸಾಧಾರಣ ವಿದ್ಯಮಾನ’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಟೀಕಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಮಾಡಿದ ಭಾಷಣವನ್ನು ಟೀಕಿಸಿದ ಅವರು, ವಾರ್ಷಿಕ ಎರಡು ಕೋಟಿ ಉದ್ಯೋಗ ನೀಡುವ ಹಿಂದಿನ ಭರವಸೆಯ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಬಿ, ಪ್ರಧಾನಿ ಮೋದಿ ಅವರು ಯುವಜನರನ್ನು ಗುರಿಯಾಗಿಸಿಕೊಂಡು ಒಂದು ಕೋಟಿ ಯುವಕರಿಗೆ ಉಚಿತ ಎಐ ತರಬೇತಿ ನೀಡುವುದಾಗಿ ಘೋಷಿಸಿದ್ದಾರೆ ಎಂದು ಹೇಳಿದರು.

    “ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಅವರು ಈ ಹಿಂದೆ ಭರವಸೆ ನೀಡಿದ್ದರು. ಆ ಭರವಸೆಗೆ ಏನಾಯಿತು ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು. ಭರವಸೆಗಳನ್ನು ನೀಡುವ ವಿಚಾರದಲ್ಲಿ ಪ್ರಧಾನಿ ಅಸಾಧಾರಣ ವಿದ್ಯಮಾನ. ಆದರೆ, ಭಾರತೀಯರ ಅನುಭವವೆಂದರೆ ಆ ಭರವಸೆಗಳಲ್ಲಿ ಯಾವುದೂ ಈಡೇರುವುದಿಲ್ಲ” ಎಂದು ಬೇಬಿ ಆರೋಪಿಸಿದರು.

    ಮೋದಿ ನೇತೃತ್ವದ ಸರ್ಕಾರ ತನ್ನ ಮಾತುಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಬೇಬಿ, ದೇಶದ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿಸಲು ಈ ಸರ್ಕಾರವನ್ನು ಬದಲಿಸುವುದು ಅಗತ್ಯ ಎಂದು ಹೇಳಿದರು. ಇತರ ಪಕ್ಷಗಳ ಸಹಕಾರದೊಂದಿಗೆ ಕಮ್ಯುನಿಸ್ಟ್ ಪಕ್ಷ ಈ ಜವಾಬ್ದಾರಿಯನ್ನು ನಿರ್ವಹಿಸಲು ಬದ್ಧವಾಗಿದೆ ಎಂದು ಅವರು ತಿಳಿಸಿದರು.

    ಮಹಿಳಾ ಮೀಸಲಾತಿ ಕುರಿತು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ಆರೋಪ

    ಮಹಿಳಾ ಮೀಸಲಾತಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು ಎಂಬ ಪ್ರಧಾನಿ ಮೋದಿ ಅವರ ಮನವಿಗೂ ಬೇಬಿ ಪ್ರತಿಕ್ರಿಯಿಸಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್‌ವಿಂಗಡಣೆಯೊಂದಿಗೆ ಜೋಡಿಸುವ ಯೋಜನೆ ರೂಪಿಸಿವೆ ಎಂದು ಅವರು ಆರೋಪಿಸಿದರು.

    ಮುಂಬರುವ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಮತದಾರರ ಸಾಮಾಜಿಕ ಗುಂಪುಗಳ ಸಾಂದ್ರತೆಯನ್ನು ಗುರುತಿಸಿ, ಅವರನ್ನು ವಿವಿಧ ಕ್ಷೇತ್ರಗಳಿಗೆ ಹಂಚುವ ಮೂಲಕ ಒಗ್ಗಟ್ಟಾಗಿ ಮತ ಚಲಾಯಿಸುವ ಅವಕಾಶವನ್ನು ತಡೆಯುವ ರೀತಿಯಲ್ಲಿ ‘ಗೆರಿಮ್ಯಾಂಡರಿಂಗ್’ ನಡೆಯುವ ಸಾಧ್ಯತೆ ಇದೆ ಎಂದು ಬೇಬಿ ಆರೋಪಿಸಿದರು.

  • ‘ಮೇರೆ ಪ್ಯಾರೆ ದೇಶವಾಸಿಯೋ’ ಎಂದೇ ಮೋದಿ ಮೆಚ್ಚಿನ ಸಂಬೋಧನೆ
    15 Aug 2026 1:58 PM IST

    ‘ಮೇರೆ ಪ್ಯಾರೆ ದೇಶವಾಸಿಯೋ’ ಎಂದೇ ಮೋದಿ ಮೆಚ್ಚಿನ ಸಂಬೋಧನೆ

    ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೆಂಪುಕೋಟೆಯಲ್ಲಿ ಮಾಡಿದ 13ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದೇಶದ ಜನರನ್ನು ಸಂಬೋಧಿಸಲು ‘ಮೇರೆ ಪ್ಯಾರೆ ದೇಶವಾಸಿಯೋ’ ಎಂಬ ಪದವನ್ನು ಅತಿ ಹೆಚ್ಚು ಬಾರಿ ಬಳಸಿದ್ದಾರೆ. ಸುಮಾರು 40 ಬಾರಿ ಅವರು ಈ ಸಂಬೋಧನೆಯನ್ನು ಬಳಸಿದ್ದು, ‘ಸಾಥಿಯೋ’ ಎಂಬ ಪದವನ್ನು 10 ಬಾರಿ ಉಲ್ಲೇಖಿಸಿದ್ದಾರೆ.

    ದೇಶದ ಯುವಜನರನ್ನು ಮಾದಕ ವಸ್ತುಗಳು ಸೇರಿದಂತೆ ವಿವಿಧ ವ್ಯಸನಗಳಿಂದ ಮುಕ್ತಗೊಳಿಸುವಂತೆ ಕರೆ ನೀಡುವ ವೇಳೆ ಮೋದಿ ಅವರು ‘ಮೇರೆ ಪ್ಯಾರೆ ಯುವಾ’ ಎಂಬ ಪದವನ್ನು ಒಮ್ಮೆ ಬಳಸಿದರು. ಇದೇ ವೇಳೆ ‘ದೇಶ್ ಸೇವಕ್’ ಹಾಗೂ ‘ಭಾಯಿ ಬೆಹೆನೋ’ ಎಂಬ ಸಂಬೋಧನೆಗಳನ್ನು ತಲಾ ಒಮ್ಮೆ ಬಳಸಿದ್ದಾರೆ.

    ಸ್ವಾತಂತ್ರ್ಯ ದಿನದ ಭಾಷಣಗಳಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವಾಗ ‘ದೇಶವಾಸಿಯೋ’ ಎಂಬುದು ಮೋದಿ ಅವರ ನೆಚ್ಚಿನ ಸಂಬೋಧನೆಯಾಗಿ ಮುಂದುವರಿದಿದೆ. ಕಳೆದ ವರ್ಷ ಅವರು ಈ ಪದವನ್ನು ಸುಮಾರು 50 ಬಾರಿ ಬಳಸಿದ್ದರು. 2024ರಲ್ಲಿ ಸುಮಾರು 30 ಬಾರಿ, 2023ರಲ್ಲಿ ಸುಮಾರು 15 ಬಾರಿ ಹಾಗೂ 2022ರಲ್ಲಿ 40ಕ್ಕೂ ಹೆಚ್ಚು ಬಾರಿ ಬಳಸಿದ್ದರು.

    2023ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ‘ಪರಿವಾರಜನ್’ ಎಂಬ ಪದವೇ ಮೋದಿ ಅವರ ಪ್ರಮುಖ ಸಂಬೋಧನೆಯಾಗಿತ್ತು. ಆ ಸಂದರ್ಭದಲ್ಲಿ ಸುಮಾರು 50 ಬಾರಿ ಅವರು ಈ ಪದವನ್ನು ಬಳಸಿದ್ದರು.

    ‘ಸಾಥಿಯೋ’ ಎಂಬ ಸಂಬೋಧನೆಯೂ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದೆ. 2025ರಲ್ಲಿ ಸುಮಾರು 35 ಬಾರಿ, 2024ರಲ್ಲಿ ಸುಮಾರು 30 ಬಾರಿ, 2023ರಲ್ಲಿ ಸುಮಾರು ಐದು ಬಾರಿ ಹಾಗೂ 2022ರಲ್ಲಿ ಸುಮಾರು ಎಂಟು ಬಾರಿ ಮೋದಿ ಅವರು ‘ಸಾಥಿಯೋ’ ಎಂದು ದೇಶದ ಜನರನ್ನು ಉದ್ದೇಶಿಸಿದ್ದರು.

  • ಭಾರತದ ಸ್ವಾತಂತ್ರ್ಯೋತ್ಸವಕ್ಕೆ  ಶುಭಾಶಯ ಕೋರಿದ ನೇಪಾಳ ಪ್ರಧಾನಿ ಬಲೇನ್ ಶಾ
    15 Aug 2026 1:27 PM IST

    ಭಾರತದ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿದ ನೇಪಾಳ ಪ್ರಧಾನಿ ಬಲೇನ್ ಶಾ

    ಭಾರತದ 80ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ನೇಪಾಳ ಪ್ರಧಾನಿ ಬಲೇನ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಜನತೆಗೆ ಶುಭಾಶಯ ಕೋರಿದ್ದಾರೆ. ಭಾರತ-ನೇಪಾಳ ನಡುವಿನ ಐತಿಹಾಸಿಕ ಸಂಬಂಧ, ಜನರ ನಡುವಿನ ಬಾಂಧವ್ಯ ಹಾಗೂ ಸಹಕಾರ ಮತ್ತಷ್ಟು ಬಲಗೊಳ್ಳಲಿ ಎಂದು ಅವರು ಹಾರೈಸಿದ್ದಾರೆ.

    ಬಲೇನ್ ಶಾ ಅವರ ಕಚೇರಿ ಎಕ್ಸ್‌ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ, “ಭಾರತದ 80ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ನೇಹಪರ ಭಾರತದ ಜನತೆ ಮತ್ತು ಸರ್ಕಾರಕ್ಕೆ ಹೃತ್ಪೂರ್ವಕ ಶುಭಾಶಯಗಳು” ಎಂದು ತಿಳಿಸಲಾಗಿದೆ.

    ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಲೇನ್ ಶಾ ಅವರು ಆಗಸ್ಟ್ 10ರಂದು ಭಾರತ‌ದ ನೇಪಾಳದ ರಾಯಭಾರಿ ನವೀನ್ ಶ್ರೀವಾಸ್ತವ ಅವರೊಂದಿಗೆ ಮೊದಲ ಬಾರಿ ಏಕಾಂತ ಮಾತುಕತೆ ನಡೆಸಿದ್ದರು. ವಿದೇಶಿ ರಾಜತಾಂತ್ರಿಕರೊಂದಿಗೆ ಅವರು ನಡೆಸಿದ ಮೊದಲ ವೈಯಕ್ತಿಕ ಸಭೆ ಇದಾಗಿತ್ತು.

    ಮುಂದಿನ ದಿನಗಳಲ್ಲಿ ಭಾರತ ಮತ್ತು ನೇಪಾಳದ ನಡುವಿನ ಆಳವಾದ ಐತಿಹಾಸಿಕ ಸಂಬಂಧ, ಜನರಿಂದ ಜನರಿಗೆ ಇರುವ ನಿಕಟ ಬಾಂಧವ್ಯ ಹಾಗೂ ಪರಸ್ಪರ ಸಹಕಾರ ಮತ್ತಷ್ಟು ಬಲಗೊಳ್ಳಲಿ ಎಂದು ಶಾ ಹೇಳಿದ್ದಾರೆ.

    ಇದೇ ವೇಳೆ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಕೂಡ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ್ದಾರೆ. ಭಾರತ-ನೇಪಾಳ ಸಂಬಂಧವು ಇತಿಹಾಸ ಹಾಗೂ ನಿಕಟ ಜನಸಂಪರ್ಕದ ಮೇಲೆ ಆಧಾರಿತವಾಗಿದೆ ಎಂದು ಅವರು ಹೇಳಿದ್ದಾರೆ.

    ಶುಭಾಶಯಗಳಿಗೆ ಜೈಶಂಕರ್ ಧನ್ಯವಾದ ತಿಳಿಸಿದ್ದಾರೆ. ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ಪ್ರಮುಖ ಹೂಡಿಕೆದಾರನೂ ಆಗಿದೆ. ಉಭಯ ದೇಶಗಳ ನಡುವಿನ ಮುಕ್ತ ಗಡಿ ಎರಡೂ ರಾಷ್ಟ್ರಗಳ ಕುಟುಂಬ ಹಾಗೂ ಸಾಮಾಜಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

  • 15 Aug 2026 1:19 PM IST

    ಮೋದಿ ಮಹಿಳಾ ಮೀಸಲಾತಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

    ಮಹಿಳಾ ಮೀಸಲಾತಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಮನವಿಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಎಲ್ಲ ಪಕ್ಷಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಪ್ರಧಾನಿಯವರ ಹೇಳಿಕೆ ಪ್ರಾಮಾಣಿಕವಾಗಿಲ್ಲ ಎಂದು ಆರೋಪಿಸಿದ್ದಾರೆ. 2023ರ ಸೆಪ್ಟೆಂಬರ್‌ನಲ್ಲೇ ಸಂಸತ್ತು ಸರ್ವಾನುಮತದಿಂದ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು ಅಂಗೀಕರಿಸಿತ್ತು. ಆದರೆ, 2024ರ ಲೋಕಸಭಾ ಚುನಾವಣೆಯಿಂದಲೇ ಅದು ಜಾರಿಗೆ ಬರದಂತೆ ಮೋದಿ ಸರ್ಕಾರ ನೋಡಿಕೊಂಡಿದೆ ಎಂದು ಅವರು ದೂರಿದ್ದಾರೆ.

    ಮಹಿಳಾ ಮೀಸಲಾತಿ 2029ರ ಚುನಾವಣೆಯಿಂದಲೇ ಜಾರಿಗೆ ಬರಬೇಕು ಮತ್ತು ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮೀಸಲಾತಿ ಆರಂಭಿಸಬೇಕು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

    1993ರಲ್ಲಿ ಅಂಗೀಕರಿಸಲಾದ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಗಳ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಗೆ ದಾರಿ ಮಾಡಿಕೊಡಲಾಗಿತ್ತು. ಇದರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ದೂರದೃಷ್ಟಿ ಮತ್ತು ಸಂಕಲ್ಪ ಪ್ರಮುಖ ಪಾತ್ರ ವಹಿಸಿತ್ತು ಎಂದು ರಮೇಶ್ ಹೇಳಿದ್ದಾರೆ.

    ಮಹಿಳಾ ಮೀಸಲಾತಿ ವಿಚಾರವನ್ನು ರಾಜಕೀಯ ಸಂಘರ್ಷಕ್ಕೆ ಸಿಲುಕಿಸದೆ ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿ ಇದೇ ದಿನ ಕರೆ ನೀಡಿದ್ದರೆ, ಕಾಂಗ್ರೆಸ್ ಸರ್ಕಾರದ ವಿಳಂಬದ ವಿರುದ್ಧ ಪ್ರಶ್ನೆ ಎತ್ತಿದೆ.

  • ಕೆಂಪುಕೋಟೆ ಕಾರ್ಯಕ್ರಮಕ್ಕೆ ರಾಹುಲ್ ಗೈರು: ಬಿಜೆಪಿ ವಾಗ್ದಾಳಿ
    15 Aug 2026 12:27 PM IST

    ಕೆಂಪುಕೋಟೆ ಕಾರ್ಯಕ್ರಮಕ್ಕೆ ರಾಹುಲ್ ಗೈರು: ಬಿಜೆಪಿ ವಾಗ್ದಾಳಿ

    ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಅಧಿಕೃತ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗೈರಾಗಿದ್ದಕ್ಕೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ರಾಹುಲ್ ಗಾಂಧಿ ಅವರ ಗೈರುಹಾಜರಿಯನ್ನು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರಶ್ನಿಸಿದ್ದು, ಅವರ ಮನಸ್ಥಿತಿ ‘ದಿಮಾಗಿ ನಕ್ಸಲ್’ ಪರಿಸರವನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.

    ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ರಾಹುಲ್ ಗಾಂಧಿ ಅವರ ಗೈರುಹಾಜರಿ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, “ಲೋಕಸಭೆಯ ವಿರೋಧ ಪಕ್ಷದ ನಾಯಕ ಅಥವಾ ಸಾರ್ವಜನಿಕ ಹುದ್ದೆಯಲ್ಲಿರುವ ದೇಶಭಕ್ತ ವ್ಯಕ್ತಿ ಸ್ವಯಂಪ್ರೇರಿತವಾಗಿ ಇಂತಹ ಕಾರ್ಯಕ್ರಮಕ್ಕೆ ಗೈರಾಗಬಹುದೇ?” ಎಂದು ಪ್ರಶ್ನಿಸಿದ್ದಾರೆ.

    ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಗೈರಾಗಿರುವುದು ‘ವಂದೇ ಮಾತರಂ’ಗೆ ಅಗೌರವ ತೋರಿದಂತಾಗಿದೆ ಎಂದು ಭಂಡಾರಿ ಆರೋಪಿಸಿದ್ದಾರೆ. ಅಲ್ಲದೆ, “ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಲು ಅನರ್ಹರು. ಅವರ ಮನಸ್ಥಿತಿ ‘ದಿಮಾಗಿ ನಕ್ಸಲ್’ ಪರಿಸರವನ್ನು ಪ್ರತಿಬಿಂಬಿಸುತ್ತದೆ” ಎಂದು ಟೀಕಿಸಿದ್ದಾರೆ.

    ಇನ್ನು, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸತತ ಎರಡನೇ ವರ್ಷವೂ ಕೆಂಪುಕೋಟೆಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

  • 15 Aug 2026 12:24 PM IST

    ಮಹಿಳಾ ಮೀಸಲಾತಿ ಮಸೂದೆ: ವಿಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ

    ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಮಹಿಳಾ ಮೀಸಲಾತಿ ವಿಚಾರ ರಾಜಕೀಯ “ಅಖಾಡ”ದಲ್ಲಿ ಸಿಲುಕಿದೆ ಎಂದು ಅವರು ಹೇಳಿದ್ದಾರೆ.

    ಮಹಿಳೆಯರಿಗೆ ವಿಧಾನಸಭೆಗಳು ಹಾಗೂ ಲೋಕಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಗೆ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಬೆಂಬಲ ನೀಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.

    “ರಾಷ್ಟ್ರಧ್ವಜದ ನೆರಳಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ನಮ್ಮ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ನೀಡಲು ಒಗ್ಗೂಡೋಣ. ದೇಶದ ನೀತಿಗಳನ್ನು ರೂಪಿಸುವಲ್ಲಿ ಅವರು ತಮ್ಮ ಕೊಡುಗೆ ನೀಡುವಂತಾಗಬೇಕು,” ಎಂದು ಮೋದಿ ಹೇಳಿದ್ದಾರೆ.

    ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ಎಲ್ಲಾ ಪಕ್ಷಗಳು ಮುಂದೆ ಬರಬೇಕು. ಮಸೂದೆ ಅಂಗೀಕಾರದ ಶ್ರೇಯಸ್ಸನ್ನು ರಾಜಕೀಯ ಪಕ್ಷಗಳು ಪಡೆದುಕೊಳ್ಳಬಹುದು, ಆದರೆ ಅದರ ಹಕ್ಕು ಮಹಿಳೆಯರಿಗೆ ನೀಡಬೇಕು ಎಂದು ಪ್ರಧಾನಿ ಹೇಳಿದ್ದಾರೆ.

    ಪ್ರಸ್ತಾವಿತ ತಿದ್ದುಪಡಿಯಡಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವುದರ ಜೊತೆಗೆ ಲೋಕಸಭೆಯ ಒಟ್ಟು ಸ್ಥಾನಗಳನ್ನು 543ರಿಂದ 816ಕ್ಕೆ ಹೆಚ್ಚಿಸುವ ಪ್ರಸ್ತಾವವೂ ಇದೆ. ಆದರೆ ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಸಂಖ್ಯಾಬಲವನ್ನು ಸರ್ಕಾರ ಇನ್ನೂ ಹೊಂದಿಲ್ಲ.

  • 15 Aug 2026 10:59 AM IST

    ಪಾಕೆಟ್ ಸ್ಕ್ವೇರ್‌ ಬಣ್ಣದ ಕ್ರಮದ ಬಗ್ಗೆ ಮೋದಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯ

    ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಪಾಕೆಟ್ ಸ್ಕ್ವೇರ್‌ಗಳ ಬಣ್ಣದ ಕ್ರಮದ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಭಾರತದ ಬದಲು ಪ್ರಧಾನಿ ಐರ್ಲೆಂಡ್‌ನ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದಾರೆಯೇ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರಶ್ನಿಸಿದ್ದಾರೆ.

    ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಿಳಿ ಕುರ್ತಾ ಹಾಗೂ ಚಾಕೊಲೇಟ್ ಕಂದು ಬಣ್ಣದ ಜಾಕೆಟ್ ಧರಿಸಿದ್ದರು. ಇದರೊಂದಿಗೆ ರಾಜಸ್ಥಾನಿ ಹಾಗೂ ಗುಜರಾತಿ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಂಪ್ರದಾಯಿಕ ಪೇಟ ಧರಿಸಿದ್ದರು. ಜೊತೆಗೆ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮೂರು ಪಾಕೆಟ್ ಸ್ಕ್ವೇರ್‌ಗಳನ್ನು ಧರಿಸಿದ್ದರು.

    ಈ ಪಾಕೆಟ್ ಸ್ಕ್ವೇರ್‌ಗಳು ಭಾರತದ ತ್ರಿವರ್ಣ ಧ್ವಜವನ್ನು ಪ್ರತಿನಿಧಿಸುವಂತಿದ್ದರೂ, ಅವುಗಳ ಬಣ್ಣಗಳ ಕ್ರಮ ಸರಿಯಾಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಗಮನಸೆಳೆದಿದ್ದರು.

    ಈ ವಿಚಾರವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ಚಿತ್ರ ಹಂಚಿಕೊಂಡು ವ್ಯಂಗ್ಯವಾಡಿದ್ದಾರೆ.

    ‘ಸಾಹೇಬರು ಉರ್ದುವಿನಲ್ಲಿ ತಿರಂಗಾ ಧರಿಸಿದಂತೆ ಕಾಣುತ್ತಿದೆ. ಇಲ್ಲವೇ ಭಾರತದ ಬದಲು ಐರ್ಲೆಂಡ್‌ನ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದಾರೆಯೇ?’ ಎಂದು ಖೇರಾ ಟೀಕಿಸಿದ್ದಾರೆ.

    ಐರ್ಲೆಂಡ್‌ನ ಧ್ವಜದಲ್ಲಿ ಎಡದಿಂದ ಬಲಕ್ಕೆ ಹಸಿರು, ಬಿಳಿ ಮತ್ತು ಕೇಸರಿ ಬಣ್ಣಗಳಿವೆ. ಇದೇ ಬಣ್ಣಗಳ ಕ್ರಮದೊಂದಿಗೆ ಮೋದಿ ಅವರ ಪಾಕೆಟ್ ಸ್ಕ್ವೇರ್‌ಗಳು ಕಾಣಿಸಿಕೊಂಡಿದ್ದವು ಎಂಬುದನ್ನು ಆಧರಿಸಿ ಕಾಂಗ್ರೆಸ್ ಈ ವ್ಯಂಗ್ಯ ಮಾಡಿದೆ.

  • ‘ದಿಮಾಗಿ ನಕ್ಸಲರು’ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು; ಮೋದಿ ವಿರುದ್ಧ ವಾಗ್ದಾಳಿ
    15 Aug 2026 10:49 AM IST

    ‘ದಿಮಾಗಿ ನಕ್ಸಲರು’ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು; ಮೋದಿ ವಿರುದ್ಧ ವಾಗ್ದಾಳಿ

    ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ದಿಮಾಗಿ ನಕ್ಸಲರು’ ಎಂದು ನೀಡಿದ ಹೇಳಿಕೆಗೆ ಕಾಂಗ್ರೆಸ್ ತೀವ್ರ ತಿರುಗೇಟು ನೀಡಿದೆ. ಮೋದಿ ಅವರ ಹೇಳಿಕೆ ಹತಾಶೆಯ ಸ್ಪಷ್ಟ ಸಂಕೇತ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.

    ಮೋದಿ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಮೊದಲು ‘ಅರ್ಬನ್ ನಕ್ಸಲರು’ ಎಂದು ಕರೆದಿದ್ದರು. ಇದೀಗ ಅವರನ್ನು ‘ದಿಮಾಗಿ ನಕ್ಸಲರು’ ಎಂದು ಕರೆಯುತ್ತಿದ್ದಾರೆ. ಇದು ಅವರ ಹತಾಶೆಯನ್ನು ತೋರಿಸುತ್ತದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಪ್ರಧಾನಿ ಮೋದಿ ಅವರನ್ನು ರಾಜಕೀಯದಲ್ಲಿ ‘ಮಾಸ್ಟರ್ ಅಬ್ಯೂಸರ್’ ಎಂದು ವ್ಯಂಗ್ಯವಾಗಿ ಕರೆದಿದ್ದಾರೆ. ‘ಅರ್ಬನ್ ನಕ್ಸಲರು’ ಅಥವಾ ಈಗ ಪ್ರಧಾನಿ ಕರೆಯುತ್ತಿರುವ ‘ದಿಮಾಗಿ ನಕ್ಸಲರು’ ಏನು ಒತ್ತಾಯಿಸುತ್ತಾರೋ ಅಥವಾ ಪ್ರತಿಪಾದಿಸುತ್ತಾರೋ, ಅಂತಿಮವಾಗಿ ಮೋದಿ ಅವರೇ ಅದನ್ನೇ ಮಾಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

    ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯಿಂದ ಸತತ 13ನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ನಕ್ಸಲಿಸಂ ಬಹುತೇಕ ಅಂತ್ಯಗೊಂಡಿದೆ ಎಂದು ಹೇಳಿದ್ದರು. ಆದರೆ ಎಚ್ಚರಿಕೆ ಕಡಿಮೆ ಮಾಡಬಾರದು ಎಂದು ತಿಳಿಸಿದ್ದರು.

    ಕಾಡುಗಳಲ್ಲಿ ಶಸ್ತ್ರಸಜ್ಜಿತ ನಕ್ಸಲರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ‘ದಿಮಾಗಿ ನಕ್ಸಲರು’ ಹಿಂಸೆ ಮತ್ತು ಅಶಾಂತಿ ಸೃಷ್ಟಿಸಲು ಅವಕಾಶ ಹುಡುಕುತ್ತಿದ್ದಾರೆ. ಅವರು ಸಮಾಜವನ್ನು ತಪ್ಪು ದಾರಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದರು.

    ಇಂತಹ ‘ಬೌದ್ಧಿಕ ನಕ್ಸಲರನ್ನು’ ಗುರುತಿಸಿ ಪ್ರತ್ಯೇಕಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಈ ಹೇಳಿಕೆಗೆ ಇದೀಗ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮೋದಿ ವಿರುದ್ಧ ರಾಜಕೀಯ ವಾಗ್ದಾಳಿ ನಡೆಸಿದೆ.

  • ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಆನ್‌ಲೈನ್ ಕೋಚಿಂಗ್: ಮೋದಿ
    15 Aug 2026 10:40 AM IST

    ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಆನ್‌ಲೈನ್ ಕೋಚಿಂಗ್: ಮೋದಿ

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ದೇಶದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್ ನೀಡುವ ವ್ಯವಸ್ಥೆ ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೋಚಿಂಗ್ ತರಗತಿಗಳ ಶುಲ್ಕ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಹೊರೆಯಾಗಿದೆ ಎಂದು ಹೇಳಿದರು. ಈ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಯುವಕರಿಗೆ ಉಚಿತ ಆನ್‌ಲೈನ್ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

    ಮಕ್ಕಳನ್ನು ಕೋಚಿಂಗ್‌ ತರಗತಿಗಳಿಗೆ ಕಳುಹಿಸದಿದ್ದರೆ ತಮ್ಮ ಕುಟುಂಬಕ್ಕೆ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ ಎಂಬ ಭಾವನೆ ಹಲವು ಪೋಷಕರಲ್ಲಿದೆ ಎಂದು ಮೋದಿ ಹೇಳಿದರು. ಆದರೆ ಇಂತಹ ಕುಟುಂಬಗಳಿಗೆ ಸರ್ಕಾರದ ಹೊಸ ವ್ಯವಸ್ಥೆ ನೆರವಾಗಲಿದೆ ಎಂದರು.

    ಕೋಚಿಂಗ್‌ಗಾಗಿ ಕುಟುಂಬಗಳು ಖರ್ಚು ಮಾಡುವ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸಬಹುದು. ಇದರ ಜೊತೆಗೆ ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಮತ್ತು ಅವರ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ಹೇಳಿದರು.

    ದೇಶದಲ್ಲಿ ಈಗಾಗಲೇ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್, ಉತ್ತಮ ಪ್ರತಿಭೆ ಹಾಗೂ ಪರಿಣಿತ ಶಿಕ್ಷಕರಿದ್ದಾರೆ ಎಂದು ಮೋದಿ ತಿಳಿಸಿದರು. ಈ ಎಲ್ಲ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ದೇಶದ ಯುವಕರಿಗೆ ವಿವಿಧ ಪರೀಕ್ಷೆಗಳ ಉಚಿತ ಕೋಚಿಂಗ್ ಒದಗಿಸುವ ಸಮಗ್ರ ಜಾಲವನ್ನು ನಿರ್ಮಿಸಲಾಗುವುದು ಎಂದು ಪ್ರಧಾನಿ ಘೋಷಿಸಿದರು.

Read More
Next Story