ಮಮತಾ ಸರ್ಕಾರಕ್ಕೆ ಸುಪ್ರೀಂ ಶಾಕ್: ಇಡಿ ಅಧಿಕಾರಿಗಳ ವಿರುದ್ಧದ FIRಗೆ ತಡೆ
x

ಮಮತಾ ಸರ್ಕಾರಕ್ಕೆ ಸುಪ್ರೀಂ ಶಾಕ್: ಇಡಿ ಅಧಿಕಾರಿಗಳ ವಿರುದ್ಧದ FIRಗೆ ತಡೆ

ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ


Click the Play button to hear this message in audio format

ಇಂದು ಗುರುವಾರ, ಜನವರಿ 15, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.



Live Updates

  • 15 Jan 2026 4:13 PM IST

    ಮಮತಾ ಸರ್ಕಾರಕ್ಕೆ ಸುಪ್ರೀಂ ಶಾಕ್: ಇಡಿ ಅಧಿಕಾರಿಗಳ ವಿರುದ್ಧದ FIRಗೆ ತಡೆ

    ಟಿಎಂಸಿ ಚುನಾವಣಾ ಪ್ರಚಾರ ನಿರ್ವಹಿಸುವ I-PAC ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದ ಬೆನ್ನಲ್ಲೇ, ಇಡಿ ಅಧಿಕಾರಿಗಳ ವಿರುದ್ಧ ಬಂಗಾಳ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಗಾಳದ ಡಿಜಿಪಿ ಮತ್ತು ಪೊಲೀಸ್ ಕಮಿಷನರ್ ಅವರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಯ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಕೇಂದ್ರ ಸಂಸ್ಥೆಗಳ ತನಿಖೆಗೆ ರಾಜಕೀಯ ಚಟುವಟಿಕೆಗಳಿಂದ ಅಡ್ಡಿಪಡಿಸುವುದು ಕಾನೂನುಬಾಹಿರ ಎಂದು ಎಚ್ಚರಿಸಿರುವ ಸುಪ್ರೀಂ ಕೋರ್ಟ್‌, "ಕೇಂದ್ರ ಸಂಸ್ಥೆಗಳು ಗಂಭೀರ ಅಪರಾಧದ ತನಿಖೆ ನಡೆಸುತ್ತಿರುವಾಗ ರಾಜಕೀಯ ಪಕ್ಷದ ಚಟುವಟಿಕೆಗಳಿಂದ ಅಡ್ಡಿಪಡಿಸಲು ಸಾಧ್ಯವೇ? ಇದು ಹೀಗೆಯೇ ಮುಂದುವರಿದರೆ ಕಾನೂನುಬಾಹಿರತೆಗೆ ದಾರಿಯಾಗುತ್ತದೆ," ಎಂದು ನ್ಯಾಯಪೀಠ ಎಚ್ಚರಿಸಿದೆ.

    ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ನಡೆದ ಗದ್ದಲದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, "ಹೈಕೋರ್ಟ್ ಏನಾದರೂ ಜಂತರ್ ಮಂತರ್ ಆಗಿ ಬದಲಾಗಿದೆಯೇ?" ಎಂದು ಪ್ರಶ್ನಿಸಿದೆ.

    ಇಡಿ ಪರ ವಾದ ಮಂಡಿಸಿದ ಹಿರಿಯ ವಕೀಲ ತುಷಾರ್ ಮೆಹ್ತಾ, "ಮಮತಾ ಬ್ಯಾನರ್ಜಿ ಅವರು I-PAC ಸಂಸ್ಥಾಪಕರ ಮನೆಯಿಂದ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋಗುವ ಮೂಲಕ 'ಕಳ್ಳತನ' ಮಾಡಿದ್ದಾರೆ. ಇದು ಸಾಕ್ಷ್ಯ ನಾಶಪಡಿಸುವ ಕೃತ್ಯ. ರಾಜ್ಯ ಪೊಲೀಸರು ಇದಕ್ಕೆ ಸಾಥ್ ನೀಡುತ್ತಿದ್ದಾರೆ," ಎಂದು ಆರೋಪಿಸಿ ಉನ್ನತ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿದರು.

    ಇದಕ್ಕೆ ಪ್ರತಿಯಾಗಿ ಮಮತಾ ಬ್ಯಾನರ್ಜಿ ಪರ ವಾದ ಮಂಡಿಸಿದ ಕಪಿಲ್ ಸಿಬಲ್, "ಚುನಾವಣೆ ಸಮೀಪಿಸುತ್ತಿರುವಾಗ ಇಡಿ ದಾಳಿ ನಡೆಸುತ್ತಿರುವುದು ರಾಜಕೀಯ ಪ್ರೇರಿತ. I-PAC ಬಳಿ ಚುನಾವಣಾ ಡೇಟಾ ಮತ್ತು ಅಭ್ಯರ್ಥಿಗಳ ಗೌಪ್ಯ ಮಾಹಿತಿ ಇರುತ್ತದೆ. ಅದನ್ನು ರಕ್ಷಿಸುವ ಹಕ್ಕು ಪಕ್ಷದ ಅಧ್ಯಕ್ಷರಿಗೆ ಇದೆ," ಎಂದು ಸಮರ್ಥಿಸಿಕೊಂಡರು.

  • 15 Jan 2026 3:54 PM IST

    ದಯಾಮರಣ ಪ್ರಕರಣ- ಮಹತ್ವದ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

    ಹದಿಮೂರು ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಅವರಿಗೆ ' ದಯಾಮರಣ' (Passive Euthanasia) ನೀಡುವ ಕುರಿತಾದ ಪೋಷಕರ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಕಾಯ್ದಿರಿಸಿದೆ. ಹರೀಶ್ ರಾಣಾ ಅವರ ಪೋಷಕರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, "ಜೀವ ಉಳಿಸುವ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ನಾವು ಪರಿಗಣಿಸುತ್ತೇವೆ" ಎಂದು ಹೇಳಿದೆ.

    ಏನಿದು ಘಟನೆ?

    ದೆಹಲಿಯ ಮಹಾವೀರ ಎನ್‌ಕ್ಲೇವ್ ನಿವಾಸಿ ಹರೀಶ್ ರಾಣಾ, 2013ರ ಆಗಸ್ಟ್ 20ರಂದು ಚಂಡೀಗಢದ ತನ್ನ ಪಿಜಿ ವಸತಿಯ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರ ಗಾಯ ಮಾಡಿಕೊಂಡಿದ್ದರು. ಅಂದಿನಿಂದ ಅಂದರೆ ಸುಮಾರು 13 ವರ್ಷಗಳಿಂದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಮಗನ ಪರಿಸ್ಥಿತಿಯನ್ನು ಕಂಡು ಕಣ್ಣೀರು ಹಾಕುತ್ತಿರುವ ಪೋಷಕರು, ಅವರಿಗೆ 'ಗೌರವಯುತ ಸಾವು' ಕಲ್ಪಿಸಿಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

    ಸುಪ್ರೀಂ ಕೋರ್ಟ್ ಹೇಳಿದ್ದೇನು?

    ನ್ಯಾಯಮೂರ್ತಿಗಳ ಪೀಠವು ಈ ವಿಚಾರದಲ್ಲಿ ಅತ್ಯಂತ ಭಾವುಕವಾಗಿ ಪ್ರತಿಕ್ರಿಯಿಸಿದ್ದು, "ಇದು ತುಂಬಾ ಸೂಕ್ಷ್ಮ ವಿಚಾರ. ಯಾರು ಬದುಕಬೇಕು ಅಥವಾ ಯಾರು ಸಾಯಬೇಕು ಎಂದು ನಿರ್ಧರಿಸಲು ನಾವು ಯಾರು? ಆದರೂ ನಾವು ಜೀವನ ಪೋಷಕ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪರಿಗಣಿಸುತ್ತೇವೆ," ಎಂದು ಹೇಳಿ ತೀರ್ಪನ್ನು ಕಾಯ್ದಿರಿಸಿದೆ.

  • 15 Jan 2026 12:26 PM IST

    ನ್ಯೂಜೆರ್ಸಿ ಭೀಕರ ಕೃತ್ಯ: ಇಬ್ಬರು ಪುಟ್ಟ ಮಕ್ಕಳನ್ನು ಕೊಂದ ಭಾರತೀಯ ಮೂಲದ ಮಹಿಳೆ ಅರೆಸ್ಟ್‌!

    ಅಮೆರಿಕದ ನ್ಯೂಜೆರ್ಸಿಯ ಹಿಲ್ಸ್‌ಬರೋದಲ್ಲಿ ವಾಸವಿದ್ದ 35 ವರ್ಷದ ಪ್ರಿಯದರ್ಶಿನಿ ನಟರಾಜನ್ ಎಂಬ ಮಹಿಳೆ, ತನ್ನ 5 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆಯು ಅನಿವಾಸಿ ಭಾರತೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ.

    ಜನವರಿ 13ರಂದು ಸಂಜೆ ಸುಮಾರು 6:45ಕ್ಕೆ ಮಕ್ಕಳ ತಂದೆ ಕೆಲಸ ಮುಗಿಸಿ ಮನೆಗೆ ಬಂದಾಗ, ಇಬ್ಬರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ 911 ತುರ್ತು ಸಂಖ್ಯೆಗೆ ಕರೆ ಮಾಡಿದ್ದಾರೆ. "ನನ್ನ ಪತ್ನಿ ಮಕ್ಕಳಿಗೆ ಏನೋ ಮಾಡಿದ್ದಾಳೆ" ಎಂದು ಅವರು ಆತಂಕದಿಂದ ಪೊಲೀಸರಿಗೆ ತಿಳಿಸಿದ್ದರು.

    ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ಉಳಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದರು. ಮನೆಯ ಬೆಡ್‌ರೂಮ್‌ನಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.

    ತನಿಖೆಯ ನಂತರ ಪೊಲೀಸರು ಪ್ರಿಯದರ್ಶಿನಿ ನಟರಾಜನ್ ಅವರನ್ನು ಬಂಧಿಸಿದ್ದಾರೆ. ಅವರ ಮೇಲೆ ಇಬ್ಬರು ಮಕ್ಕಳ ಕೊಲೆ ಮತ್ತು ಕಾನೂನುಬಾಹಿರ ಉದ್ದೇಶಕ್ಕಾಗಿ ಆಯುಧ ಇಟ್ಟುಕೊಂಡಿದ್ದ ಆರೋಪಗಳನ್ನು ಹೊರಿಸಲಾಗಿದೆ.

  • 15 Jan 2026 11:48 AM IST

    ಕೇರಳ SAI ಕೇಂದ್ರದ ಹಾಸ್ಟೆಲ್‌ನಲ್ಲಿ ಇಬ್ಬರು ಕ್ರೀಡಾ ವಿದ್ಯಾರ್ಥಿನಿಯರು ಆತ್ಮಹತ್ಯೆ

    ಕೇರಳದಲ್ಲಿ ಇಬ್ಬರು ಉದಯೋನ್ಮುಖ ಕ್ರೀಡಾಪಟುಗಳು ನಿಗೂಢವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಕೊಲ್ಲಂನ ಭಾರತದ ಕ್ರೀಡಾ ಪ್ರಾಧಿಕಾರದ (SAI) ಹಾಸ್ಟೆಲ್‌ನಲ್ಲಿ ನಡೆದ ಈ ಘಟನೆಯು ಕ್ರೀಡಾ ವಲಯದಲ್ಲಿ ತೀವ್ರ ಆಘಾತ ಮತ್ತು ಆತಂಕ ಮೂಡಿಸಿದೆ. ಮೃತಪಟ್ಟ ವಿದ್ಯಾರ್ಥಿನಿಯರು 17 ಮತ್ತು 15 ವರ್ಷ ವಯಸ್ಸಿನವರು. ಕೋಝಿಕ್ಕೋಡ್ ಮತ್ತು ತಿರುವನಂತಪುರದ ನಿವಾಸಿಗಳಾಗಿದ್ದರು.

    ಗುರುವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗಿನ ತರಬೇತಿ ಶಿಬಿರಕ್ಕೆ ಇಬ್ಬರೂ ಹಾಜರಾಗದಿದ್ದಾಗ, ಇತರ ವಿದ್ಯಾರ್ಥಿನಿಯರು ಅವರು ಉಳಿದುಕೊಂಡಿದ್ದ ಕೊಠಡಿಗೆ ಹೋಗಿ ನೋಡಿದ್ದಾರೆ. ಕೊಠಡಿಯ ಬಾಗಿಲನ್ನು ಎಷ್ಟು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಹಾಸ್ಟೆಲ್ ಅಧಿಕಾರಿಗಳು ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಇಬ್ಬರೂ ವಿದ್ಯಾರ್ಥಿನಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    15 ವರ್ಷದ ಬಾಲಕಿ ಬೇರೆ ಕೊಠಡಿಯಲ್ಲಿ ಉಳಿಯುತ್ತಿದ್ದಳು. ಆದರೆ ಬುಧವಾರ ರಾತ್ರಿ 17 ವರ್ಷದ ವಿದ್ಯಾರ್ಥಿನಿಯ ಕೊಠಡಿಗೆ ಬಂದು ಅಲ್ಲೇ ತಂಗಿದ್ದಳು ಎಂದು ತಿಳಿದುಬಂದಿದೆ. ಮುಂಜಾನೆ ವೇಳೆ ಇಬ್ಬರೂ ಇತರ ವಿದ್ಯಾರ್ಥಿಗಳ ಜೊತೆ ಮಾತನಾಡಿದ್ದರು ಎನ್ನಲಾಗಿದ್ದು, ನಂತರ ಹಠಾತ್ತಾಗಿ ಈ ನಿರ್ಧಾರಕ್ಕೆ ಬರಲು ಕಾರಣವೇನು ಎಂಬುದು ನಿಗೂಢವಾಗಿದೆ.

    ಸ್ಥಳಕ್ಕೆ ಧಾವಿಸಿರುವ ಕೊಲ್ಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಸ್ಥಳೀಯರ ವಿಚಾರಣೆ ನಡೆಸುತ್ತಿದ್ದಾರೆ. ಮೃತಪಟ್ಟ 17 ವರ್ಷದ ಬಾಲಕಿ ಅಥ್ಲೆಟಿಕ್ಸ್ (Athletics) ವಿಭಾಗದ ತರಬೇತಿ ಪಡೆಯುತ್ತಿದ್ದಳು ಮತ್ತು ಆಕೆ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಇನ್ನು 15 ವರ್ಷದ ಬಾಲಕಿ ಕಬಡ್ಡಿ (Kabaddi) ಆಟಗಾರ್ತಿಯಾಗಿದ್ದು, ಆಕೆ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

    ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಆದರೆ, ಕೊಠಡಿಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • 15 Jan 2026 11:09 AM IST

    ಟ್ರಂಪ್‌ ಸರ್ಕಾರದಿಂದ 75 ದೇಶಗಳ ವಲಸೆ ವೀಸಾ ಸ್ಥಗಿತ

    ವಲಸೆ ನೀತಿಯಲ್ಲಿ ಮಹತ್ತರ ಬದಲಾವಣೆ ತಂದಿರುವ ಟ್ರಂಪ್ ಸರ್ಕಾರ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಬರೋಬ್ಬರಿ 75 ರಾಷ್ಟ್ರಗಳ ವಲಸೆ ವೀಸಾವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಅಮೆರಿಕದಲ್ಲಿ ನೆಲೆಸುವ ಬಯಕೆ ಹೊಂದಿದ್ದ ಲಕ್ಷಾಂತರ ಮಂದಿಗೆ ಈ ನಿರ್ಧಾರ ಆಘಾತ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಸರ್ಕಾರವು ವಲಸೆ ನೀತಿಯಲ್ಲಿ ಕ್ರಾಂತಿಕಾರಕ ಮತ್ತು ಕಟ್ಟುನಿಟ್ಟಿನ ಬದಲಾವಣೆ ತಂದಿದೆ. ಜನವರಿ 21 ರಿಂದ ಜಾರಿಗೆ ಬರಲಿರುವ ಈ ಹೊಸ ಆದೇಶವು ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯದ 75 ರಾಷ್ಟ್ರಗಳ ನಾಗರಿಕರ ಮೇಲೆ ನೇರ ಪರಿಣಾಮ ಬೀರಲಿದೆ.

    ಯಾರಿಗೆ ಅನ್ವಯ?

    ಈ ನಿರ್ಬಂಧವು ಕೇವಲ ಅಮೆರಿಕದಲ್ಲಿ ಕಾಯಂ ಆಗಿ ವಾಸಿಸಲು ಮತ್ತು ಕೆಲಸ ಮಾಡಲು ಇಚ್ಛಿಸುವವರಿಗೆ (Immigrant Visas) ಮಾತ್ರ ಅನ್ವಯಿಸುತ್ತದೆ. ಪ್ರವಾಸಿಗರು (Tourists) ಅಥವಾ ತಾತ್ಕಾಲಿಕ ಕೆಲಸಗಾರರಿಗೆ (Temporary Workers) ಈ ಆದೇಶದಿಂದ ಸದ್ಯಕ್ಕೆ ವಿನಾಯಿತಿ ನೀಡಲಾಗಿದೆ.

    ಬಾಧಿತ ರಾಷ್ಟ್ರಗಳು: ಈ ಪಟ್ಟಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ರಷ್ಯಾ, ಇರಾನ್, ಅಫ್ಘಾನಿಸ್ತಾನ, ಬ್ರೆಜಿಲ್, ನೈಜೀರಿಯಾ, ಸೋಮಾಲಿಯಾ ಮತ್ತು ಥೈಲ್ಯಾಂಡ್‌ನಂತಹ ಪ್ರಮುಖ ರಾಷ್ಟ್ರಗಳಿವೆ. ಕಳೆದ ಒಂದು ವರ್ಷದಿಂದ ವಿದೇಶಿಯರಿಗೆ ಕಟ್ಟುನಿಟ್ಟಿನ ತಪಾಸಣಾ ನಿಯಮಗಳನ್ನು ಹೇರುತ್ತಿದ್ದ ಟ್ರಂಪ್ ತಂಡವು, ಈಗ ರಾಷ್ಟ್ರೀಯತೆಯ ಆಧಾರದ ಮೇಲೆ ಸಾರಾಸಗಟು ವೀಸಾ ರದ್ದತಿ ಮಾಡುವ ಮೂಲಕ ವಲಸೆ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.

    ಈ ನಿರ್ಧಾರಕ್ಕೆ ಕಾರಣವೇನು?

    ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ನೀಡಿರುವ ಪ್ರಮುಖ ಕಾರಣಗಳು ಇಲ್ಲಿವೆ:

    1. ಸರ್ಕಾರಿ ಸೌಲಭ್ಯಗಳ ದುರುಪಯೋಗ ತಡೆ: ಅಮೆರಿಕಕ್ಕೆ ಬಂದು ಅಲ್ಲಿನ ಸರ್ಕಾರದ ಕಲ್ಯಾಣ ಯೋಜನೆಗಳು ಅಥವಾ ಆರ್ಥಿಕ ಸಹಾಯದ (Welfare) ಮೇಲೆ ಅವಲಂಬಿತರಾಗುವ ಸಾಧ್ಯತೆ ಇರುವವರಿಗೆ ವೀಸಾ ನಿರಾಕರಿಸುವುದು ಹಳೆಯ ನಿಯಮ. ಈಗ ಇದೇ ಅಧಿಕಾರವನ್ನು ಬಳಸಿ 75 ರಾಷ್ಟ್ರಗಳ ಮೇಲೆ ಒಟ್ಟಾಗಿ ನಿರ್ಬಂಧ ಹೇರಲಾಗಿದೆ.

    2. ರಾಷ್ಟ್ರೀಯ ಭದ್ರತೆ: ವಲಸಿಗರ ಹಿನ್ನೆಲೆಯನ್ನು ಸರಿಯಾಗಿ ಪರೀಕ್ಷಿಸಲು ಮತ್ತು ದೇಶದ ಭದ್ರತೆಯನ್ನು ಕಾಪಾಡಲು ಈ ಕ್ರಮ ಅನಿವಾರ್ಯ ಎಂದು ಆಡಳಿತ ಮಂಡಳಿ ವಾದಿಸಿದೆ.

  • 15 Jan 2026 10:33 AM IST

    ದಯಾಮರಣ ಪ್ರಕರಣ- ಸುಪ್ರೀಂ ಕೋರ್ಟ್‌ನಿಂದ ಇಂದು ಐತಿಹಾಸಿಕ ತೀರ್ಪು!

    ಕಳೆದ 13 ವರ್ಷಗಳಿಂದ ಹಾಸಿಗೆ ಹಿಡಿದು, ಕೃತಕ ಜೀವವೈದ್ಯಕೀಯ ಸಾಧನಗಳ ಮೂಲಕ ಉಸಿರಾಡುತ್ತಿರುವ ಹರೀಶ್ ರಾಣಾ ಅವರ ಬದುಕಿನ ಬಗ್ಗೆ ಸುಪ್ರೀಂ ಕೋರ್ಟ್ ಇಂದು ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ಕುರಿತು ಅಂತಿಮ ಆದೇಶ ಹೊರಡಿಸಲಿದೆ.

    2013ರಲ್ಲಿ ಚಂಡೀಗಢದಲ್ಲಿ ನಡೆದ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಹರೀಶ್ ರಾಣಾ ಅಂದಿನಿಂದ ಇಂದಿನವರೆಗೆ 'ಕೋಮಾ' ಸ್ಥಿತಿಯಲ್ಲೇ ಇದ್ದಾರೆ. ಚಿಕಿತ್ಸೆಗೆ ಸ್ಪಂದಿಸದ, ಕೇವಲ ಯಂತ್ರಗಳ ಸಹಾಯದಿಂದ ಉಸಿರಾಡುತ್ತಿರುವ ಹರೀಶ್ ಅವರ ನೋವಿನ ಬದುಕಿಗೆ ಅಂತ್ಯ ಹಾಡಲು ಅವಕಾಶ ನೀಡಬೇಕೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಇಂದು ನಿರ್ಧಾರ ಪ್ರಕಟಿಸಲಿದೆ.

    ಹರೀಶ್ ಅವರ ಪೋಷಕರು ತಮ್ಮ ಮಗ ಅನುಭವಿಸುತ್ತಿರುವ ಅಸಹನೀಯ ನೋವನ್ನು ನೋಡಲಾಗದೆ, ಆತನಿಗೆ ನೀಡಲಾಗುತ್ತಿರುವ 'ಜೀವನ ರಕ್ಷಕ ವ್ಯವಸ್ಥೆ' (Life-support) ಹಿಂಪಡೆಯಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಒಂದು ವೇಳೆ ಕೋರ್ಟ್ ಹರೀಶ್ ಅವರ ಲೈಫ್-ಸಪೋರ್ಟ್ ತೆರವುಗೊಳಿಸಲು ಒಪ್ಪಿಗೆ ನೀಡಿದರೆ, ಇದು ಭಾರತದಲ್ಲಿ ಕಾನೂನುಬದ್ಧವಾಗಿ ಅನುಮೋದಿಸಲ್ಪಟ್ಟ ಮೊದಲ ದಯಾಮರಣ ಪ್ರಕರಣವಾಗಲಿದೆ.

  • 15 Jan 2026 10:27 AM IST

    ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಮತ ಚಲಾಯಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

    ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಗುರುವಾರ ಬೆಳಗ್ಗೆ ನಾಗ್ಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನೋಟಾ' (None of the Above) ಆಯ್ಕೆಯು ಪರೋಕ್ಷವಾಗಿ ಅಯೋಗ್ಯ ಅಭ್ಯರ್ಥಿಗಳು ಅಧಿಕಾರಕ್ಕೆ ಬರಲು ಸಹಕಾರಿಯಾಗುತ್ತದೆ ಎಂಬ ಆತಂಕಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.


  • 15 Jan 2026 10:26 AM IST

    ಇರಾನ್ ವಾಯುಪ್ರದೇಶ ಬಂದ್: ಏರ್ ಇಂಡಿಯಾದ 3 ಅಮೆರಿಕ ವಿಮಾನಗಳು ರದ್ದು

    ಇರಾನ್‌ನಲ್ಲಿ ತೀವ್ರಗೊಂಡಿರುವ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ವಿರುದ್ಧದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಲ್ಲಿನ ವಾಯುಪ್ರದೇಶವನ್ನು (Airspace) ನಾಗರಿಕ ವಿಮಾನಗಳ ಹಾರಾಟಕ್ಕೆ ನಿರ್ಬಂಧಿಸಲಾಗಿದೆ. ಇದರ ನೇರ ಪರಿಣಾಮ ಭಾರತದಿಂದ ಅಮೆರಿಕಕ್ಕೆ ತೆರಳುವ ಏರ್ ಇಂಡಿಯಾ ವಿಮಾನಗಳ ಮೇಲೆ ಬೀರಿದೆ.

  • 15 Jan 2026 10:21 AM IST

    ಪೌರಾಯುಕ್ತೆಗೆ ಧಮ್ಕಿ: ಪರಾರಿಯಾದ 'ಕೈ' ಮುಖಂಡ ರಾಜೀವ್ ಗೌಡ ಬಂಧನಕ್ಕೆ ಬಲೆ!

    ಬ್ಯಾನರ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅಶ್ಲೀಲವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಈಗ ಪೊಲೀಸರಿಗೆ ಹೆದರಿ ತಲೆಮರೆಸಿಕೊಂಡಿದ್ದಾರೆ. ಬ್ಯಾನರ್ ತೆರವುಗೊಳಿಸಿದರೆ ಕಚೇರಿಗೆ ಬೆಂಕಿ ಹಚ್ಚುತ್ತೇನೆ, ಜನರನ್ನು ಕರೆತಂದು ಚಪ್ಪಲಿಯಲ್ಲಿ ಹೊಡೆಸುತ್ತೇನೆ" ಎಂದು ರಾಜೀವ್ ಗೌಡ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

    ಪೌರಾಯುಕ್ತೆ ಅಮೃತಾ ಗೌಡ ಅವರು ನೀಡಿದ ದೂರಿನ ಮೇರೆಗೆ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ರಾಜೀವ್ ಗೌಡ ವಿರುದ್ಧ BNS ಸೆಕ್ಷನ್ 79, 132, 352, 199 ಮತ್ತು 54 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆಯೇ ಬಂಧನದ ಭೀತಿಯಿಂದ ರಾಜೀವ್ ಗೌಡ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.

Read More
Next Story