ರಾಜ್ಯಪಾಲ vs ಸರ್ಕಾರ:  ಸಂಘರ್ಷ ಅಂತ್ಯ: ಕೇಂದ್ರ ವಿರುದ್ಧದ ಅಂಶ ಕೈಬಿಡಲು ಸರ್ಕಾರ ನಿರ್ಧಾರ; ಭಾಷಣಕ್ಕೆ ಗೆಹ್ಲೋಟ್‌ ಒಪ್ಪಿಗೆ
x

ರಾಜ್ಯಪಾಲ vs ಸರ್ಕಾರ: ಸಂಘರ್ಷ ಅಂತ್ಯ: ಕೇಂದ್ರ ವಿರುದ್ಧದ ಅಂಶ ಕೈಬಿಡಲು ಸರ್ಕಾರ ನಿರ್ಧಾರ; ಭಾಷಣಕ್ಕೆ ಗೆಹ್ಲೋಟ್‌ ಒಪ್ಪಿಗೆ

ರಾಜ್ಯಪಾಲರು‌ ಮತ್ತು ಸರ್ಕಾರದ ನಡುವಿನ ಸಂಘರ್ಷ ಪರಿಹಾರವಾಗಿದೆ. ಕೇಂದ್ರದ ವಿರುದ್ಧ ಇದ್ದ ಅಂಶವನ್ನು ತೆಗೆಯಲು ಸರ್ಕಾರ ನಿರ್ಧರಿಸಿದ ಬಳಿಕ ಜಂಟಿ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯಪಾಲರು ಒಪ್ಪಿದ್ದಾರೆ.


Click the Play button to hear this message in audio format

ಗುರುವಾರದಿಂದ ಆರಂಭವಾಗಲಿರುವ (ಜನವರಿ 21ರಂದು) ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಈ ಪ್ರಸಂಗ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಹಠಾತ್ ಬೆಳವಣಿಗೆಯಿಂದ ಸರ್ಕಾರ ಮುಜುಗರಕ್ಕೀಡಾಗಿದ್ದು, ಸಂವಿಧಾನಾತ್ಮಕ ಬಿಕ್ಕಟ್ಟು ತಪ್ಪಿಸಲು ರಾಜ್ಯ ಸರ್ಕಾರ ತುರ್ತು ಕಸರತ್ತು ಆರಂಭಿಸಿದೆ.

ರಾಜ್ಯಪಾಲರ ಮನವೊಲಿಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಇಂದು (ಬುಧವಾರ) ಸಂಜೆ 5. 45ಕ್ಕೆ ರಾಜಭವನಕ್ಕೆ ತೆರಳಿ ಮಹತ್ವದ ಸಂಧಾನ ಮಾತುಕತೆ ನಡೆಸಲಿದೆ.

ಏನಿದು ಬಿಕ್ಕಟ್ಟು?

ನಾಳೆ ಬೆಳಿಗ್ಗೆ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕಿದೆ. ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ ಭಾಷಣದ ಪ್ರತಿಯಲ್ಲಿನ ಕೆಲವು ಅಂಶಗಳ ಬಗ್ಗೆ ರಾಜ್ಯಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸರ್ಕಾರದ ಕೆಲವು ನೀತಿಗಳು ಅಥವಾ ಕೇಂದ್ರದ ವಿರುದ್ಧದ ಟೀಕೆಗಳಿರುವ ಸಾಲುಗಳನ್ನು ಓದಲು ಅವರು ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದು ರಾಜಭವನ ಮತ್ತು ಸರ್ಕಾರದ ನಡುವಿನ ಶೀತಲ ಸಮರ ಸ್ಫೋಟಿಸಿದೆ.

ಅಧಿವೇಶನದ ಹಿಂದಿನ ದಿನವೇ ರಾಜ್ಯಪಾಲರು ಈ ನಿಲುವು ತಳೆದಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ, ಕಾನೂನು ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರನ್ನು ಭೇಟಿಯಾಗಿ, ಇದು ಸಂವಿಧಾನಾತ್ಮಕ ಕರ್ತವ್ಯವಾಗಿದ್ದು, ಭಾಷಣ ಮಾಡುವಂತೆ ಮನವಿ ಮಾಡಲಿದ್ದಾರೆ.

ಕೇರಳದ ಹಾದಿಯಲ್ಲಿ ಕರ್ನಾಟಕ?

ಕರ್ನಾಟಕದ ಈ ಬೆಳವಣಿಗೆಯು ನೆರೆಯ ಕೇರಳದ ರಾಜಕೀಯ ಪ್ರಸಂಗವನ್ನೂ ನೆನಪಿಸುತ್ತಿದೆ. ಇತ್ತೀಚೆಗಷ್ಟೇ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಲ್ಲಿನ ಎಲ್‌ಡಿಎಫ್ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅಷ್ಟೇ ಅಲ್ಲ, ವಿಧಾನಸಭೆಯ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವಾಗ, ಸರ್ಕಾರದ ಸಿದ್ಧಪಡಿಸಿದ ಭಾಷಣದ ಪೂರ್ಣ ಪಾಠವನ್ನು ಓದದೆ, ಕೇವಲ ಮೊದಲ ಮತ್ತು ಕೊನೆಯ ಪ್ಯಾರಾವನ್ನು ಮಾತ್ರ ಓದಿ ಭಾಷಣ ಮುಗಿಸಿ ನಿರ್ಗಮಿಸಿದ್ದರು.

ಇದೀಗ ಕರ್ನಾಟಕದಲ್ಲೂ ರಾಜ್ಯಪಾಲರು ಅದೇ ಹಾದಿ ತುಳಿಯುವ ಸೂಚನೆ ನೀಡಿದ್ದಾರೆ. ರಾಜ್ಯಪಾಲರು ಭಾಷಣವನ್ನು ಸ್ಕಿಪ್ ಮಾಡಿದರೆ ಅಥವಾ ತಿದ್ದುಪಡಿ ಮಾಡಲು ಪಟ್ಟು ಹಿಡಿದರೆ, ಅದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಹೊಡೆತ ಬೀಳಲಿದೆ.

ವಿರೋಧ ಪಕ್ಷಗಳಿಗೆ ಅಸ್ತ್ರ

ಒಂದು ವೇಳೆ ಸಂಧಾನ ವಿಫಲವಾಗಿ ರಾಜ್ಯಪಾಲರು ನಾಳೆಯ ಅಧಿವೇಶನಕ್ಕೆ ಗೈರಾದರೆ ಅಥವಾ ಭಾಷಣವನ್ನು ಮೊಟಕುಗೊಳಿಸಿದರೆ, ಅದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ಪ್ರಬಲ ಅಸ್ತ್ರವಾಗಲಿದೆ. ಸರ್ಕಾರದ ಆಡಳಿತ ವೈಫಲ್ಯ ಮತ್ತು ರಾಜ್ಯಪಾಲರ ಹುದ್ದೆಗೆ ಅಗೌರವ ತೋರಲಾಗುತ್ತಿದೆ ಎಂದು ಬಿಂಬಿಸಲು ಇದು ವೇದಿಕೆಯಾಗಲಿದೆ.

Live Updates

  • 21 Jan 2026 6:32 PM IST

    ರಾಜ್ಯಪಾಲರ ಜೊತೆ ಸಂಧಾನ ಸಭೆ

    ಗುರವಾರ(ಜ.22) ಆರಂಭವಾಗಲಿರುವ ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಆಗಮಿಸಲು ನಿರಾಕರಿಸಿದ ಹಿನ್ನೆಲೆ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಸೇರಿದಂತೆ ಹಿರಿಯ ಸಚಿವರು ಸಭೆ ನಡೆಸಿದ್ದು, ರಾಜ್ಯಪಾಲರ ಮನವೊಲಿಸಲು ಮುಂದಾಗಿದ್ದಾರೆ. ನಿಯೋಗದಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್‌. ಪೊನ್ನಣ್ಣ, ಅಡ್ವೊಕೆಟ್‌ ಜನರಲ್‌ ಶಶಿಕಿರಣ ಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದಾರೆ.  

Read More
Next Story