
ಸಿಖ್ಖರ ಪ್ರಮುಖ ಹಬ್ಬವಾದ 'ವೈಶಾಖಿ' ಆಚರಣೆಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಹೊತ್ತಿನಲ್ಲೇ ಈ ಶೂಟೌಟ್ ಸಂಭವಿಸಿದೆ.
ಇಟಲಿಯ ಗುರುದ್ವಾರದ ಹೊರಗೆ ಇಬ್ಬರು ಭಾರತೀಯರ ಬರ್ಬರ ಹತ್ಯೆ; ಪೂರ್ವನಿಯೋಜಿತ ಕೃತ್ಯದ ಶಂಕೆ
ಘಟನೆಯ ಪ್ರೆತ್ಯಕ್ಷ ಸಾಕ್ಷಿಯೊಬ್ಬರು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಗುಂಡು ಹಾರಿಸಿದ ವ್ಯಕ್ತಿ ಕೂಡ "ಭಾರತೀಯ"ನೇ ಆಗಿದ್ದು, ಆತ ಕೂಡ ಆಗಾಗ್ಗೆ ಇದೇ ಗುರುದ್ವಾರಕ್ಕೆ ಬರುತ್ತಿದ್ದ ಎಂದು ತಿಳಿಸಿದ್ದಾರೆ.
ಇಟಲಿಯ ಉತ್ತರ ಭಾಗದಲ್ಲಿರುವ ಗುರುದ್ವಾರವೊಂದರ ಹೊರಗೆ ಇಬ್ಬರು ಭಾರತೀಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದೊಂದು ದಿಢೀರ್ ಭುಗಿಲೆದ್ದ ಹಿಂಸಾಚಾರವಲ್ಲ, ಬದಲಾಗಿ 'ಪೂರ್ವನಿಯೋಜಿತ ಹತ್ಯೆ' ಎಂದು ತನಿಖಾಧಿಕಾರಿಗಳು ಬಲವಾಗಿ ಶಂಕಿಸಿದ್ದಾರೆ.
ಶುಕ್ರವಾರ (ಏಪ್ರಿಲ್ 17) ತಡರಾತ್ರಿ, ಅಂದರೆ ಮಧ್ಯರಾತ್ರಿಗೆ ಕೆಲವೇ ನಿಮಿಷಗಳಿರುವಾಗ ಬರ್ಗಾಮೊ ಪ್ರಾಂತ್ಯದ ಕೊವೊ ಪಟ್ಟಣದ 'ಗುರುದ್ವಾರ ಮಾತಾ ಸಾಹಿಬ್ ಕೌರ್ ಜಿ' ಆವರಣದಲ್ಲಿ ಈ ಘಟನೆ ನಡೆದಿದೆ. ಸಿಖ್ಖರ ಪ್ರಮುಖ ಹಬ್ಬವಾದ 'ವೈಶಾಖಿ' ಆಚರಣೆಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಹೊತ್ತಿನಲ್ಲೇ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯ ಪತ್ರಿಕೆಯೊಂದರ ಪ್ರಕಾರ, ಮೃತಪಟ್ಟವರನ್ನು ಕೊವೊ ನಿವಾಸಿ ರಜಿಂದರ್ ಸಿಂಗ್ (48) ಮತ್ತು ಪಕ್ಕದ ಅಗ್ನಾಡೆಲೊ ನಿವಾಸಿ ಗುರ್ಮಿತ್ ಸಿಂಗ್ (48) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿದ್ದಂತೆಯೇ ಬಂದೂಕುಧಾರಿ ದಾಳಿ ಮಾಡಿದ್ದಾನೆ.
ಪೂರ್ವನಿಯೋಜಿತ ಹತ್ಯೆಗೆ ಪುರಾವೆಗಳು
ದಾಳಿಕೋರ ನೇರವಾಗಿ ಇವರಿಬ್ಬರ ಬಳಿ ಬಂದು ಗುಂಡಿನ ಸುರಿಮಳೆಗೈದು ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಘಟನಾ ಸ್ಥಳದಲ್ಲಿ ಸುಮಾರು 10 ಗುಂಡಿನ (ಶೆಲ್) ಕವಚಗಳು ಪತ್ತೆಯಾಗಿದ್ದು, ಇದೊಂದು "ತಣ್ಣನೆಯ ರಕ್ತದ, ಪೂರ್ವನಿಯೋಜಿತ ಹತ್ಯೆ" ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಯಾವುದೇ ತಕ್ಷಣದ ಜಗಳ ಅಥವಾ ವಾಗ್ವಾದದಿಂದ ಈ ಹತ್ಯೆ ನಡೆದಿಲ್ಲ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಭಾರತೀಯನಿಂದಲೇ ದಾಳಿ?
ಘಟನೆಯ ಪ್ರೆತ್ಯಕ್ಷ ಸಾಕ್ಷಿಯೊಬ್ಬರು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಗುಂಡು ಹಾರಿಸಿದ ವ್ಯಕ್ತಿ ಕೂಡ "ಭಾರತೀಯ"ನೇ ಆಗಿದ್ದು, ಆತ ಕೂಡ ಆಗಾಗ್ಗೆ ಇದೇ ಗುರುದ್ವಾರಕ್ಕೆ ಬರುತ್ತಿದ್ದನು. ಈ ದಾಳಿಯ ವೇಳೆ ಹಾರಿದ ಗುಂಡು ತಗುಲಿ ಮೂರನೇ ವ್ಯಕ್ತಿಗೂ ಗಾಯಗಳಾಗಿವೆ ಎಂದು ಸಾಕ್ಷಿ ತಿಳಿಸಿದ್ದಾರೆ.
ಈ ಭೀಕರ ಹತ್ಯೆಯು ಸ್ಥಳೀಯ ಸಿಖ್ ಸಮುದಾಯವನ್ನು ಬೆಚ್ಚಿಬೀಳಿಸಿದೆ. ವೈಯಕ್ತಿಕ ದ್ವೇಷ ಅಥವಾ ಸ್ಥಳೀಯ ಸಿಖ್ ಸಮುದಾಯದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳೇ ಈ ಹತ್ಯೆಗೆ ಕಾರಣವೇ ಎಂಬ ಕೋನದಲ್ಲಿ ಬರ್ಗಾಮೊ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. "ಕಳೆದ 15 ವರ್ಷಗಳಿಂದ ಸಿಖ್ ಸಮುದಾಯ ಇಲ್ಲಿ ಅತ್ಯಂತ ಶಾಂತಿಯುತವಾಗಿ ಮತ್ತು ಅಚ್ಚುಕಟ್ಟಾಗಿ ನೆಲೆಸಿದೆ, ಅವರಿಂದ ಸಾರ್ವಜನಿಕವಾಗಿ ಯಾವುದೇ ತೊಂದರೆಯಾಗಿರಲಿಲ್ಲ" ಎಂದು ಕೊವೊ ಪಟ್ಟಣದ ಮೇಯರ್ ಆಂಡ್ರಿಯಾ ಕ್ಯಾಪ್ಪೆಲ್ಲೆಟ್ಟಿ ಆಘಾತ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಾವಿಯಾಗೆ (Pavia) ರವಾನಿಸಿದ್ದು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಸಾಕ್ಷಿಗಳ ವಿಚಾರಣೆ ಮುಂದುವರಿಸಿದ್ದಾರೆ.

