
ಹಾರ್ಮುಜ್ ಜಲಸಂಧಿ
ಟ್ರಂಪ್ಗೆ ಇರಾನ್ ನೇರ ಸವಾಲ್- ಹಾರ್ಮುಜ್ ಜಲಸಂಧಿ ವಿವಾದ ಮತ್ತಷ್ಟು ತೀವ್ರ
ಇರಾನ್ನ ಆಂತರಿಕ ರಾಜಕೀಯ ಅಧಿಕಾರ ಹೋರಾಟಗಳೇ ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಬರಲು ಪ್ರಮುಖ ಅಡ್ಡಿಯಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವ ಇಂಧನ ಮಾರುಕಟ್ಟೆಯ ಪ್ರಮುಖ ಜಲಮಾರ್ಗವಾದ 'ಹಾರ್ಮುಜ್ ಜಲಸಂಧಿ' ಯನ್ನು ಮುಕ್ತವಾಗಿರಿಸಲು ಹಾಗೂ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳನ್ನು ನಿಲ್ಲಿಸಲು ಜಾಗತಿಕ ಘೋಷಣೆ ಮಾಡಬೇಕು ಎಂಬ ಅಮೆರಿಕದ ತೀವ್ರ ಒತ್ತಡವನ್ನು ಇರಾನ್ ಸ್ಪಷ್ಟವಾಗಿ ತಿರಸ್ಕರಿಸಿದೆ.
ಜಲಸಂಧಿಯ ಮೇಲಿನ ಚಟುವಟಿಕೆಗಳು ಕೇವಲ ತನಗೆ ಮಾತ್ರ ಸಂಬಂಧಿಸಿದ್ದು ಎಂದು ಇರಾನ್ ಪ್ರತಿಪಾದಿಸಿದೆ. ಇರಾನ್ನ ಆಂತರಿಕ ರಾಜಕೀಯ ಅಧಿಕಾರ ಹೋರಾಟಗಳೇ ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಬರಲು ಪ್ರಮುಖ ಅಡ್ಡಿಯಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕದನ ವಿರಾಮ 'ಮುಗಿದಿದೆ' ಎಂದ ಟ್ರಂಪ್
ಮಧ್ಯಂತರ ಕದನ ವಿರಾಮ ಒಪ್ಪಂದವು ಮುಗಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪುನರುಚ್ಚರಿಸಿದ್ದಾರೆ. ಆದಾಗ್ಯೂ, ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡಲು ಅಮೆರಿಕ ಮಾತುಕತೆಗಳನ್ನು ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕದ ಸಂಧಾನಕಾರರಿಗೆ ಟ್ರಂಪ್ ಸೀಮಿತ ಸಮಯಾವಕಾಶ ನೀಡಿದ್ದು, ಮಾತುಕತೆ ಮುರಿದುಬಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಯುದ್ಧ ಆರಂಭವಾದಾಗ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತರಾದ ನಂತರ, ಟೆಹ್ರಾನ್ನಲ್ಲಿ ತೀವ್ರ ಅಧಿಕಾರ ಹೋರಾಟ ನಡೆಯುತ್ತಿರುವುದೇ ಇಂದಿನ ಗೊಂದಲಕ್ಕೆ ಕಾರಣ ಎನ್ನಲಾಗಿದೆ.
ಹಾರ್ಮುಜ್ ಜಲಸಂಧಿ ಯಾರ ನಿಯಂತ್ರಣದಲ್ಲಿದೆ?
ಹಾರ್ಮುಜ್ ಜಲಸಂಧಿಯು ಈಗ ತನ್ನ ಏಕೈಕ ನಿಯಂತ್ರಣದಲ್ಲಿರಬೇಕು ಮತ್ತು ಈ ಮಾರ್ಗದಲ್ಲಿ ಚಲಿಸುವ ಹಡಗುಗಳು ಟೆಹ್ರಾನ್ಗೆ ಶುಲ್ಕ ಪಾವತಿಸಬೇಕು ಎಂದು ಇರಾನ್ ಪಟ್ಟು ಹಿಡಿದಿದೆ. ಇರಾನ್ನ ಬೆದರಿಕೆಯಿಂದ ಪಾರಾಗಲು, ಇರಾನ್ ಜಲಪ್ರದೇಶವನ್ನು ತಪ್ಪಿಸಿ ಒಮಾನ್ನ ಪ್ರಾದೇಶಿಕ ನೀರಿನ ಮೂಲಕ ದಕ್ಷಿಣ ಮಾರ್ಗದಲ್ಲಿ ಪ್ರಯಾಣಿಸುವಂತೆ ನಾವಿಕರಿಗೆ ಅಮೆರಿಕ ಸೂಚಿಸುತ್ತಿದೆ. ಬಾಹ್ಯ ಶಕ್ತಿಗಳು ಈ ಒಪ್ಪಂದದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರೆ ಅದು ಮಧ್ಯಂತರ ಒಪ್ಪಂದದ ಉಲ್ಲಂಘನೆಯಾಗಲಿದ್ದು, ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಿಶ್ವಸಂಸ್ಥೆಯ ಇರಾನ್ ರಾಯಭಾರಿ ಅಮೀರ್ ಸಯೀದ್ ಇರವಾನಿ ಎಚ್ಚರಿಸಿದ್ದಾರೆ.
ಜಾಗತಿಕ ಇಂಧನ ಬಿಕ್ಕಟ್ಟು
ಯುದ್ಧ ಆರಂಭವಾಗುವ ಮುನ್ನ ಜಗತ್ತಿನ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲದ ಐದನೇ ಒಂದು ಭಾಗ ಈ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಪ್ರಸ್ತುತ ಸಂಘರ್ಷದಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಒಂದು ಹಂತದಲ್ಲಿ ತೈಲ ಬೆಲೆ ಬ್ಯಾರೆಲ್ಗೆ 120 ಡಾಲರ್ಗಳ ಗರಿಷ್ಠ ಮಟ್ಟ ಮುಟ್ಟಿದ ನಂತರ ಈಗ ತೀವ್ರವಾಗಿ ಕುಸಿದಿದೆ.
ಇರಾನ್ ಪ್ರತೀಕಾರ
ಅಮೆರಿಕ ತನ್ನ ದಾಳಿಗಳನ್ನು ಕೊನೆಗೊಳಿಸಿದೆ ಎಂದು ಘೋಷಿಸಿದ ನಂತರವೂ ಇರಾನ್ನ ಹಲವು ಪ್ರದೇಶಗಳ ಮೇಲೆ ಭಾರಿ ವೈಮಾನಿಕ ದಾಳಿಗಳು ನಡೆದಿವೆ. ದಿವಂಗತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲೇ ದಕ್ಷಿಣ ಇರಾನ್ನಾದ್ಯಂತ ಈ ದಾಳಿಗಳು ನಡೆದಿದ್ದು, ಇದರ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಇದಕ್ಕೆ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ತಕ್ಷಣವೇ ಪ್ರತಿಕ್ರಿಯಿಸಿದ್ದು, ಮಧ್ಯಪ್ರಾಚ್ಯದಾದ್ಯಂತ ಬಹ್ರೇನ್, ಜೋರ್ಡಾನ್, ಕುವೈತ್ ಮತ್ತು ಕತಾರ್ ದೇಶಗಳನ್ನು ಗುರಿಯಾಗಿಸಿಕೊಂಡು ಭಾರಿ ಕ್ಷಿಪಣಿ ದಾಳಿ ನಡೆಸಿದೆ. ಕುವೈತ್ನಲ್ಲಿ ಕ್ಷಿಪಣಿಯೊಂದು ಅಪ್ಪಳಿಸಿ ಒಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಯುಎಸ್ ದಾಳಿಗೆ ಯುಎಇ ತೆರೆಮರೆಯಲ್ಲಿ ಸಹಕರಿಸುತ್ತಿದೆ ಎಂದು ಆರೋಪಿಸಿರುವ ಎಸ್ಮಾಯಿಲ್ ಕೌಸಾರಿ, "ಅಮೆರಿಕದೊಂದಿಗಿನ ಸಹಕಾರಕ್ಕಾಗಿ ಯುಎಇ ದೊಡ್ಡ ಬೆಲೆ ತೆರಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಶಾಂತಿಗಾಗಿ ಮುಂದುವರಿದ ರಾಜತಾಂತ್ರಿಕ ಪ್ರಯತ್ನಗಳು
ಯುದ್ಧದ ತೀವ್ರತೆಯನ್ನು ತಗ್ಗಿಸಲು ಮಧ್ಯಪ್ರಾಚ್ಯ ಹಾಗೂ ಏಷ್ಯಾದ ಮಿತ್ರರಾಷ್ಟ್ರಗಳು ರಾಜತಾಂತ್ರಿಕ ಮಾತುಕತೆಗಳನ್ನು ಚುರುಕುಗೊಳಿಸಿವೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ಕುರಿತು ಚರ್ಚಿಸಲು ಒಮಾನ್ ತಲುಪಿದ್ದಾರೆ. ಇರಾನ್ ಮತ್ತು ಒಮಾನ್ ನಡುವೆ ಶೀಘ್ರದಲ್ಲೇ ಸೂಕ್ತ ಪರಿಹಾರ ಸಿಗಲಿದೆ ಎಂದು ಟರ್ಕಿಶ್ ವಿದೇಶಾಂಗ ಸಚಿವ ಹಕನ್ ಫಿಡಾನ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆ
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಂಯಮ ಕಾಯ್ದುಕೊಳ್ಳುವಂತೆ ವಿನಂತಿಸಿದ್ದಾರೆ. ಈ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಗಲ್ಫ್ನಲ್ಲಿ ಅಮೆರಿಕದ ಮುಂದಿನ ನಡೆಗಳ ಕುರಿತು ಚರ್ಚಿಸಿದ್ದಾರೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, "ನಾವು ಇರಾನ್ ವಿರುದ್ಧ ಮತ್ತೆ ಕಣಕ್ಕಿಳಿಯಬೇಕಾಗಿ ಬಂದರೆ, ಈ ಬಾರಿ ಇನ್ನೂ ಹೆಚ್ಚಿನ ಬಲದೊಂದಿಗೆ ಹಿಂತಿರುಗುತ್ತೇವೆ" ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

