
ಮೂರು ದಿನಗಳ ಕಾಲ ಮಣ್ಣು-ಅವಶೇಷಗಳಡಿ ಸಿಲುಕಿದ್ದ ಆರು ವರ್ಷದ ಬಾಲಕಿಯ ಕ್ಷೀಣ ಧ್ವನಿ ರಕ್ಷಣಾ ಪಡೆಗೆ ಕೇಳಿಬಂದು, ಕೊನೆಗೂ ಆಕೆಯನ್ನು ಜೀವಂತವಾಗಿ ರಕ್ಷಿಸಲಾಗಿದೆ.
ನೇಪಾಳ ಪ್ರವಾಹ|ಅವಶೇಷದಡಿ ಕೇಳಿಬಂತು ಪುಟ್ಟ ದನಿ, 6 ವರ್ಷದ ಬಾಲಕಿ ಬದುಕುಳಿದಿದ್ದೇ ಪವಾಡ
ಅವಶೇಷಗಳ ನಡುವೆ ಮೂರು ದಿನ ಬದುಕಿಗಾಗಿ ಹೋರಾಡಿದ ಆರು ವರ್ಷದ ಬಾಲಕಿಯನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಮಗುವಿನ ಆರೋಗ್ಯ ಸ್ಥಿರವಾಗಿದೆ.
ನೇಪಾಳದ ರಾಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಡುವೆ ಹೃದಯ ಕಲುಕುವ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಮಣ್ಣು, ಕಲ್ಲು ಮತ್ತು ಅವಶೇಷಗಳಡಿ ಬರೋಬ್ಬರಿ ಮೂರು ದಿನಗಳ ಕಾಲ ಸಿಲುಕಿದ್ದ ಆರು ವರ್ಷದ ಬಾಲಕಿ ಕೊನೆಗೂ ಜೀವಂತವಾಗಿ ಪತ್ತೆಯಾಗಿದ್ದಾಳೆ. ಪ್ರವಾಹದ ಅಬ್ಬರದಲ್ಲಿ ತಿಮುರೆ ಗ್ರಾಮದ ಹಲವು ಪ್ರದೇಶಗಳು ನಾಶವಾಗಿದ್ದವು. ಎಲ್ಲೆಡೆ ಮಣ್ಣು ಮತ್ತು ಅವಶೇಷಗಳೇ ಕಾಣಿಸುತ್ತಿದ್ದವು. ಈ ನಡುವೆ ನಾಪತ್ತೆಯಾದವರಿಗಾಗಿ ರಕ್ಷಣಾ ಸಿಬ್ಬಂದಿ ನಿರಂತರವಾಗಿ ಶೋಧ ನಡೆಸುತ್ತಿದ್ದರು.
ಕತ್ತಲೆಯ ನಡುವೆ ಕೇಳಿಬಂತು ಕಿರು ಧ್ವನಿ
ಶುಕ್ರವಾರ ಸಂಜೆ ರಕ್ಷಣಾ ಸಿಬ್ಬಂದಿ ಅವಶೇಷಗಳ ನಡುವೆ ಹುಡುಕಾಟ ನಡೆಸುತ್ತಿದ್ದಾಗ, ಏಕಾಏಕಿ ಪುಟ್ಟ ಧ್ವನಿಯೊಂದು ಕೇಳಿಸಿತು. ಮೊದಲಿಗೆ ಅದು ಭ್ರಮೆಯೇ ಇರಬಹುದೆಂದು ಭಾವಿಸಿದ ಸಿಬ್ಬಂದಿ, ಮತ್ತೊಮ್ಮೆ ಗಮನಹರಿಸಿದಾಗ ಅದು ಬಾಲಕಿಯ ಧ್ವನಿ ಎಂಬುದು ಗೊತ್ತಾಯಿತು.
ಕ್ಷಣವೂ ತಡಮಾಡದೆ ಸಿಬ್ಬಂದಿ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸಲು ಆರಂಭಿಸಿದರು. ಪ್ರತಿಯೊಂದು ಕ್ಷಣವೂ ಆತಂಕದಿಂದ ಕೂಡಿತ್ತು. ಕೊನೆಗೂ ಅವಶೇಷಗಳ ನಡುವೆ ಸಿಲುಕಿದ್ದ ಆರು ವರ್ಷದ ಮನೀಷಾ ಮಗರಳನ್ನು ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಮೂರು ದಿನಗಳ ಬಳಿಕ ಕಂಡ ಬೆಳಕು
ಮೂರು ದಿನಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಬಾಲಕಿ ಬದುಕುಳಿದಿರುವುದು ರಕ್ಷಣಾ ತಂಡಕ್ಕೂ ದೊಡ್ಡ ಅಚ್ಚರಿಯಾಯಿತು. ಆಕೆಯನ್ನು ಹೊರತೆಗೆದ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ನಂತರ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಕಠ್ಮಂಡುವಿಗೆ ಕರೆದೊಯ್ಯಲು ಅಧಿಕಾರಿಗಳು ಮುಂದಾದರು.
ಮಳೆ ಅಡ್ಡಿ- ಹೆಲಿಕಾಪ್ಟರ್ ಹಾರಾಟಕ್ಕೆ ತಡೆ
ಶುಕ್ರವಾರ ರಾತ್ರಿ ಪ್ರತಿಕೂಲ ಹವಾಮಾನ ಹಾಗೂ ಕಡಿಮೆ ಗೋಚರತೆಯಿಂದಾಗಿ ಹೆಲಿಕಾಪ್ಟರ್ ಹಾರಾಟ ಸಾಧ್ಯವಾಗಲಿಲ್ಲ. ಹೀಗಾಗಿ ಬಾಲಕಿಯನ್ನು ಅಲ್ಲಿಯೇ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಯಿತು. ಶನಿವಾರ ಹವಾಮಾನ ಸ್ವಲ್ಪ ಸುಧಾರಿಸಿದ ಬಳಿಕ ಬಾಲಕಿಯನ್ನು ಕಠ್ಮಂಡುವಿಗೆ ಏರ್ಲಿಫ್ಟ್ ಮಾಡಲಾಯಿತು. ಸದ್ಯ ಆಕೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಭಾರಿ ಮಳೆಯಿಂದ ಭೋತೆ ಕೋಶಿ ನದಿ ಉಕ್ಕಿ ಹರಿದ ಪರಿಣಾಮ ತಿಮುರೆ ಸೇರಿದಂತೆ ರಾಸುವಾ ಜಿಲ್ಲೆಯ ಹಲವು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿದ್ದವು. ಅನೇಕ ಮನೆಗಳು ಹಾಗೂ ಕಟ್ಟಡಗಳು ಹಾನಿಗೊಳಗಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಇಂತಹ ಭೀಕರ ದುರಂತದ ನಡುವೆ ಮೂರು ದಿನಗಳ ಬಳಿಕ ಅವಶೇಷಗಳೊಳಗಿಂದ ಬಾಲಕಿಯೊಬ್ಬಳು ಜೀವಂತವಾಗಿ ಹೊರಬಂದಿರುವುದು ಕುಟುಂಬದವರಿಗಷ್ಟೇ ಅಲ್ಲ, ಇಡೀ ರಕ್ಷಣಾ ತಂಡಕ್ಕೆ ಭರವಸೆಯ ಕ್ಷಣವಾಗಿದೆ. ಬಾಲಕಿಯನ್ನು ರಕ್ಷಿಸಿದ ಬಳಿಕ ಪೊಲೀಸರು ಆಕೆಯ ಸಂಪೂರ್ಣ ಗುರುತು ಹಾಗೂ ಕುಟುಂಬದ ಸದಸ್ಯರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

