ಅಮೆರಿಕದಲ್ಲಿ ಪ್ರಿಯತಮೆಯ ಹತ್ಯೆ ಆರೋಪ; ಜರ್ಮನಿಯಲ್ಲಿ ಭಾರತೀಯ ವಿದ್ಯಾರ್ಥಿ ಬಂಧನ
x

ಮಹಿಳೆಯರಿಗೆ ಸುಳ್ಳು ಭರವಸೆ ನೀಡಿ ಚಿನ್ನ ಕಳವು ಮಾಡುತ್ತಿದ್ದ ಇಬ್ಬರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಅಮೆರಿಕದಲ್ಲಿ ಪ್ರಿಯತಮೆಯ ಹತ್ಯೆ ಆರೋಪ; ಜರ್ಮನಿಯಲ್ಲಿ ಭಾರತೀಯ ವಿದ್ಯಾರ್ಥಿ ಬಂಧನ

ಅಮೆರಿಕದ ಅರಿಜೋನಾದಲ್ಲಿ ಪ್ರಿಯತಮೆಯ ಹತ್ಯೆ ಆರೋಪ ಎದುರಿಸುತ್ತಿರುವ ಭಾರತೀಯ ವಿದ್ಯಾರ್ಥಿ ವರುಣ್ ಬಚ್ಚಿಗಾರಿಯನ್ನು ಜರ್ಮನಿಯಲ್ಲಿ ಬಂಧಿಸಲಾಗಿದೆ.


Click the Play button to hear this message in audio format

ಅಮೆರಿಕದ ಅರಿಜೋನಾದಲ್ಲಿ ತನ್ನ ಪ್ರಿಯತಮೆಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಜರ್ಮನಿಯಲ್ಲಿ ಬಂಧಿಸಲಾಗಿದೆ. ತವರು ದೇಶ ಭಾರತಕ್ಕೆ ತೆರಳುವ ಮಾರ್ಗದಲ್ಲಿ ಜರ್ಮನಿ ತಲುಪಿದ್ದ ವೇಳೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

20 ವರ್ಷದ ವರುಣ್ ಬಚ್ಚಿಗಾರಿ ಅರಿಜೋನಾ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಅನಾಲಿಟಿಕ್ಸ್ ವ್ಯಾಸಂಗ ಮಾಡುತ್ತಿದ್ದ. ಆಗಸ್ಟ್ 6ರಂದು ಟಕ್ಸನ್‌ನ ಅಪಾರ್ಟ್‌ಮೆಂಟ್‌ನಲ್ಲಿ 19 ವರ್ಷದ ಆತನ ಪ್ರಿಯತಮೆ ಜೂಲಿಸ್ಸಾ ರೂಬಿ ಸಲಾಜರ್ ಹತ್ಯೆಗೀಡಾಗಿದ್ದಾಳೆ ಎಂದು ಟಕ್ಸನ್ ಪೊಲೀಸ್ ಇಲಾಖೆ ತಿಳಿಸಿದೆ.

ಹತ್ಯೆ ಬಳಿಕ ವರುಣ್ ಟಕ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಜರ್ಮನಿಗೆ ವಿಮಾನ ಹತ್ತಿದ್ದ. ಅಲ್ಲಿಂದ ಭಾರತಕ್ಕೆ ಪ್ರಯಾಣ ಮುಂದುವರಿಸಲು ಆತ ಯೋಜಿಸಿದ್ದ ಎನ್ನಲಾಗಿದೆ. ಈ ನಡುವೆ ತನಿಖಾಧಿಕಾರಿಗಳು ವರುಣ್ ವಿರುದ್ಧ ಪ್ರಥಮ ದರ್ಜೆಯ ಕೊಲೆ ಮತ್ತು ಅಪಹರಣ ಆರೋಪದಡಿ ಬಂಧನ ವಾರಂಟ್ ಹೊರಡಿಸಿದ್ದರು.

ಜರ್ಮನಿ ತಲುಪುತ್ತಿದ್ದಂತೆ ಬಂಧನ

ಟಕ್ಸನ್ ಪೊಲೀಸ್ ಇಲಾಖೆ, ಎಫ್‌ಬಿಐನ ಟಕ್ಸನ್ ಕಚೇರಿ ಹಾಗೂ ಬರ್ಲಿನ್‌ನಲ್ಲಿರುವ ಎಫ್‌ಬಿಐ ಕಾನೂನು ವಿಭಾಗದ ಅಧಿಕಾರಿಗಳ ನಡುವೆ ನಡೆದ ಸಮನ್ವಯದ ಹಿನ್ನೆಲೆಯಲ್ಲಿ ವರುಣ್ ಜರ್ಮನಿ ತಲುಪುತ್ತಿದ್ದಂತೆ ಬಂಧಿಸಲಾಯಿತು. ಹೀಗಾಗಿ ಆತ ಭಾರತಕ್ಕೆ ತೆರಳುವುದನ್ನು ಅಧಿಕಾರಿಗಳು ತಡೆದಿದ್ದಾರೆ.

ಸದ್ಯ ವರುಣ್‌ನನ್ನು ಅರಿಜೋನಾಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಬಳಿಕ ಆತನನ್ನು ಪಿಮಾ ಕೌಂಟಿ ವಯಸ್ಕರ ಬಂಧನ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿಯ ಫೋನ್ ಬಳಸಿ ತಾಯಿಗೆ ಸಂದೇಶ?

ತನಿಖಾಧಿಕಾರಿಗಳ ಪ್ರಕಾರ, ಹತ್ಯೆಯ ಬಳಿಕ ವರುಣ್ ಸಲಾಜರ್‌ನ ಮೊಬೈಲ್ ಫೋನ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ತೆಗೆದುಕೊಂಡಿದ್ದಾನೆ. ಬಳಿಕ ಆಕೆಯ ತಾಯಿಗೆ ಸರಣಿ ಸಂದೇಶಗಳನ್ನು ಕಳುಹಿಸಿ, ತಾನೇ ಸಲಾಜರ್ ಎಂಬಂತೆ ವರ್ತಿಸಿ ಹತ್ಯೆಯ ವಿಚಾರ ಮುಚ್ಚಿಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಈ ಸಂದೇಶಗಳು ಸಲಾಜರ್ ಕುಟುಂಬದ ಸದಸ್ಯರಲ್ಲಿ ಅನುಮಾನ ಮೂಡಿಸಿವೆ. ಕುಟುಂಬದವರು ಆಕೆಯ ಸುರಕ್ಷತೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಆಕೆಯ ಅಪಾರ್ಟ್‌ಮೆಂಟ್‌ಗೆ ತೆರಳಿ ಮೃತದೇಹ ಪತ್ತೆಹಚ್ಚಿದ್ದಾರೆ.

ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆ

ಆಗಸ್ಟ್ 6ರಂದು ಸಂಜೆ ಸುಮಾರು 4 ಗಂಟೆ ವೇಳೆಗೆ ಹೃದಯ ಸ್ತಂಭನದ ಕುರಿತು ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ಟಕ್ಸನ್ ಅಗ್ನಿಶಾಮಕ ಸಿಬ್ಬಂದಿ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಅಲ್ಲಿ ಸಲಾಜರ್ ನೆಲದ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

ಆಕೆಯ ಕುತ್ತಿಗೆಯಲ್ಲಿ ಉಸಿರುಗಟ್ಟಿಸಿರುವ ಗುರುತುಗಳು ಹಾಗೂ ಗೀರುಗಳು ಕಂಡುಬಂದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪ್ರಕರಣದ ತನಿಖೆ ಆರಂಭಗೊಂಡಿತ್ತು.

ತನಿಖೆಯ ವೇಳೆ ಮಾತನಾಡಿದ ಕೆಲ ಸಾಕ್ಷಿಗಳು ವರುಣ್ ಮತ್ತು ಸಲಾಜರ್ ನಡುವಿನ ಸಂಬಂಧದಲ್ಲಿ ಈ ಹಿಂದೆಯೂ ಸಮಸ್ಯೆಗಳಿದ್ದವು ಎಂದು ಹೇಳಿರುವುದಾಗಿ ಬಂಧನ ವಾರಂಟ್‌ನಲ್ಲಿ ಉಲ್ಲೇಖಿಸಲಾಗಿದೆ. 2025ರ ಕೊನೆಯಲ್ಲಿ ವರುಣ್‌ನಿಂದ ದೂರವಾಗಿದ್ದ ಸಲಾಜರ್, ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದಳು ಎಂದು ಸಾಕ್ಷಿಗಳು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಸಂಬಂಧ ವರುಣ್ ವಿರುದ್ಧ ಈ ಹಿಂದೆ ಅರಿಜೋನಾ ವಿಶ್ವವಿದ್ಯಾಲಯದ ಪೊಲೀಸ್ ಇಲಾಖೆ ಹಲ್ಲೆ ಪ್ರಕರಣವೊಂದನ್ನೂ ತನಿಖೆ ನಡೆಸಿತ್ತು ಎನ್ನಲಾಗಿದೆ.

ಹಲವು ಸಾಕ್ಷಿಗಳು ವರುಣ್‌ನ ಹಿಂದಿನ ಹಿಂಸಾತ್ಮಕ ವರ್ತನೆಗಳ ಬಗ್ಗೆ ಆರೋಪಗಳನ್ನು ಮಾಡಿದ್ದು, ಮತ್ತೊಬ್ಬ ಸಾಕ್ಷಿ ಪಾರ್ಟಿಯೊಂದರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದಾಳೆ. ಆದರೆ ಈ ಆರೋಪದ ಬಗ್ಗೆ ತಾನು ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಆಕೆ ತಿಳಿಸಿದ್ದಾಳೆ.

ಅರಿಜೋನಾಗೆ ಹಸ್ತಾಂತರಕ್ಕೆ ಸಿದ್ಧತೆ

ಹತ್ಯೆ ನಡೆದ ಸಂದರ್ಭದಲ್ಲಿ ವರುಣ್‌ನ ವಲಸೆ ಸ್ಥಿತಿ ಕಾನೂನುಬದ್ಧವಾಗಿತ್ತು. ಇದೇ ವೇಳೆ ಆತ ಅರಿಜೋನಾ ವಿಶ್ವವಿದ್ಯಾಲಯದಿಂದ ಹೊರಹಾಕಲ್ಪಟ್ಟಿದ್ದಾನೆ ಎಂಬ ವರದಿಗಳೂ ಇವೆ. ಪ್ರಕರಣದಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಾಗಿ ವರುಣ್‌ನನ್ನು ಜರ್ಮನಿಯಿಂದ ಅರಿಜೋನಾಗೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಹತ್ಯೆ ಆರೋಪಗಳ ಕುರಿತು ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.

Read More
Next Story