
ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಐತಿಹಾಸಿಕ ಗುರುದ್ವಾರ ಧ್ವಂಸ: ಭಾರತದಿಂದ ಖಂಡನೆ!
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳ ಹಳೆಯ ಐತಿಹಾಸಿಕ ಗುರುದ್ವಾರವನ್ನು ಉದ್ಯಮಿಯೊಬ್ಬ ಧ್ವಂಸಗೊಳಿಸಿದ್ದು, ಸಿಖ್ ಸಮುದಾಯ ಪ್ರತಿಭಟನೆ ನಡೆಸಿದೆ. ಈ ಕೃತ್ಯವನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳ ಇತಿಹಾಸ ಹೊಂದಿದ್ದ ಪವಿತ್ರ ಗುರುದ್ವಾರವೊಂದನ್ನು ಸ್ಥಳೀಯ ಉದ್ಯಮಿಯೊಬ್ಬ ಅಕ್ರಮವಾಗಿ ಧ್ವಂಸಗೊಳಿಸಿದ್ದು, ಇದು ಅಲ್ಪಸಂಖ್ಯಾತ ಸಿಖ್ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಫಾರೂಕಾಬಾದ್ನಲ್ಲಿರುವ 'ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್' ಧ್ವಂಸಗೊಳಿಸಿರುವುದನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಇದು ಸಿಖ್ ಸಮುದಾಯದ ಪವಿತ್ರ ಧಾರ್ಮಿಕ ಕೇಂದ್ರದ ಮೇಲೆ ನಡೆದ ಉದ್ದೇಶಪೂರ್ವಕ ಮತ್ತು ಅತ್ಯಂತ ಖಂಡನೀಯ ಕೃತ್ಯ ಎಂದು ಭಾರತ ಹೇಳಿದೆ.
ಜೂನ್ 24ರ ರಾತ್ರಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಆಕ್ಷೇಪಣಾ ಪತ್ರ (NOC) ಪಡೆಯದೆಯೇ ಈ ಐತಿಹಾಸಿಕ ಗುರುದ್ವಾರವನ್ನು ನೆಲಸಮಗೊಳಿಸಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ತೀವ್ರ ಆಕ್ರೋಶ: ವಿದೇಶಾಂಗ ಇಲಾಖೆ ಹೇಳಿದ್ದೇನು?
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಘಟನೆಯ ಬಗ್ಗೆ ತಕ್ಷಣವೇ ತನಿಖೆ ನಡೆಸಿ, ಹಾನಿಗೊಳಗಾದ ಗುರುದ್ವಾರದ ಭಾಗಗಳನ್ನು ಪುನರ್ನಿರ್ಮಿಸುವಂತೆ ಇಸ್ಲಾಮಾಬಾದ್ಗೆ ಆಗ್ರಹಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ದೆಹಲಿ ಒತ್ತಾಯಿಸಿದೆ.
"ಪಾಕಿಸ್ತಾನದ ಫಾರೂಕಾಬಾದ್ನಲ್ಲಿ 125 ವರ್ಷಗಳ ಹಳೆಯ ಪವಿತ್ರ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಅನ್ನು ಧ್ವಂಸಗೊಳಿಸಿರುವ ವರದಿಗಳು ತೀವ್ರ ಆಘಾತ ತಂದಿವೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸ್ಥಳೀಯ ಅಧಿಕಾರಿಗಳು ಅಥವಾ ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಈ ಬಗ್ಗೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಗಂಭೀರ ಕಳವಳದ ವಿಷಯವಾಗಿದೆ," ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಮತ್ತು ಅವರ ಆರಾಧನಾ ಮಂದಿರಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ದುರದೃಷ್ಟಕರ ಎಂದು ಭಾರತ ವಿಷಾದಿಸಿದೆ. ಅಪರಾಧಿಗಳನ್ನು ತಕ್ಷಣವೇ ಕಾನೂನಿನ ಮುಂದೆ ತರಬೇಕು ಮತ್ತು ಅಲ್ಪಸಂಖ್ಯಾತರ ಮೇಲಿನ ಧಾರ್ಮಿಕ ಅಸಹಿಷ್ಣುತೆಗೆ ಪಾಕಿಸ್ತಾನ ಸರ್ಕಾರವು ಪೂರ್ಣವಿರಾಮ ಇಡಬೇಕು ಎಂದು ಭಾರತ ಆಗ್ರಹಿಸಿದೆ.
ಪಾಕಿಸ್ತಾನದಲ್ಲಿ ಸಿಖ್ ಸಮುದಾಯದ ಪ್ರತಿಭಟನೆ
ಲಾಹೋರ್ನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಫಾರೂಕಾಬಾದ್ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಉದ್ಯಮಿಯೊಬ್ಬ ಅಕ್ರಮವಾಗಿ ಗುರುದ್ವಾರವನ್ನು ನೆಲಸಮಗೊಳಿಸಿದ್ದಾನೆ. ಸ್ಥಳೀಯ ಸಿಖ್ ಸಮುದಾಯದವರು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸುವವರೆಗೂ ಅಲ್ಲಿನ ಇಲಾಖೆಗಳು ಈ ಬಗ್ಗೆ ಗಮನ ಹರಿಸಿರಲಿಲ್ಲ ಎನ್ನಲಾಗಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಇದರ ಬೆನ್ನಲ್ಲೇ, ಪಂಜಾಬ್ ಪ್ರಾಂತ್ಯದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ರಮೇಶ್ ಸಿಂಗ್ ಅರೋರಾ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಸಿಖ್ಖರ ಅಹವಾಲುಗಳನ್ನು ಆಲಿಸಿದ ಸಚಿವರು, ಧ್ವಂಸಗೊಂಡಿರುವ ಗುರುದ್ವಾರವನ್ನು ತಕ್ಷಣವೇ ಪುನಃಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಧಾರ್ಮಿಕ ಸಂಸ್ಥೆಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಮರ್ಯಮ್ ನವಾಜ್ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
'ಗುರುದ್ವಾರ ಕುಸಿಯುವ ಸ್ಥಿತಿಯಲ್ಲಿತ್ತು' ಎಂದ ಸ್ಥಳೀಯ ವರ್ತಕರು
ಇನ್ನೊಂದೆಡೆ, ಸರ್ಕಾರದ ಪುನರ್ನಿರ್ಮಾಣ ಯೋಜನೆಗೆ ಸ್ಥಳೀಯ ಮುಸ್ಲಿಂ ವರ್ತಕರು ಮತ್ತು ನಿವಾಸಿಗಳು ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಸುಮಾರು 80 ವರ್ಷಗಳಿಂದ ಈ ಗುರುದ್ವಾರದ ಆವರಣವು ಯಾರು ಇಲ್ಲದೆ ಕುಸಿಯುವ ಸ್ಥಿತಿಯಲ್ಲಿತ್ತು ಎಂದು ಅವರು ಹೇಳಿದ್ದಾರೆ. ಈ ಅವಧಿಯಲ್ಲಿ ಹಲವು ಕುಟುಂಬಗಳು ಅಲ್ಲಿ ನೆಲೆಸಿದ್ದು, ಹಲವಾರು ಅಂಗಡಿಗಳು ತಲೆಯೆತ್ತಿವೆ.
ಈಗ ದಿಢೀರ್ ಆಗಿ ಜಾಗವನ್ನು ತೆರವುಗೊಳಿಸಿದರೆ ಹತ್ತಾರು ಕುಟುಂಬಗಳು ಬೀದಿಗೆ ಬೀಳಲಿವೆ. ಆದ್ದರಿಂದ ತೆರವು ಕಾರ್ಯಾಚರಣೆ ಅನಿವಾರ್ಯವಾದರೆ, ಅಲ್ಲಿ ವಾಸಿಸುತ್ತಿರುವ ಜನರಿಗೆ ಪರ್ಯಾಯ ವಸತಿ ಮತ್ತು ಜೀವನೋಪಾಯದ ಅವಕಾಶಗಳನ್ನು ಸರ್ಕಾರ ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

