
ಸಾಂದರ್ಭಿಕ ಚಿತ್ರ
ವಯನಾಡ್ ಶಾಲಾ ಮಕ್ಕಳಲ್ಲಿ ‘ಶಿಗೆಲ್ಲಾ’ ಬ್ಯಾಕ್ಟೀರಿಯಾ ಭೀತಿ: ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ
ಜೂ. 7 ರಂದು ಪರೀಕ್ಷೆಗೆ ಕಳುಹಿಸಲಾಗಿದ್ದ ರಕ್ತ ಹಾಗೂ ಮಲದ ಮಾದರಿಗಳ ವರದಿಗಳು ಬಂದಿದ್ದು, ಇತ್ತೀಚಿನ ಪಾಸಿಟಿವ್ ಫಲಿತಾಂಶಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯ ಶಾಲೆಯೊಂದರ ವಿದ್ಯಾರ್ಥಿಗಳಲ್ಲಿ ಮತ್ತೊಂದು ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದೆ. ಶಾಲಾ ಮಕ್ಕಳಲ್ಲಿ ಹೊಸದಾಗಿ ಐದು 'ಶಿಗೆಲ್ಲಾ' ಬ್ಯಾಕ್ಟೀರಿಯಾ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಬಾಧಿತ ಮಕ್ಕಳ ಸಂಖ್ಯೆ ಎಂಟಕ್ಕೆ ತಲುಪಿದೆ. ಈ ಕುರಿತು ಆರೋಗ್ಯ ಸಚಿವ ಕೆ. ಮುರಳೀಧರನ್ ಮಾಹಿತಿ ನೀಡಿದ್ದು, ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.
ಜೂ. 7 ರಂದು ಪರೀಕ್ಷೆಗೆ ಕಳುಹಿಸಲಾಗಿದ್ದ ರಕ್ತ ಹಾಗೂ ಮಲದ ಮಾದರಿಗಳ ವರದಿಗಳು ಬಂದಿದ್ದು, ಇತ್ತೀಚಿನ ಪಾಸಿಟಿವ್ ಫಲಿತಾಂಶಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 5, 7, 8, 9 ಮತ್ತು 11 ವರ್ಷ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಪ್ರಸ್ತುತ ಸೋಂಕಿತ ಎಂಟು ಮಕ್ಕಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಜ್ಞರ ತಂಡದಿಂದ ಪರಿಶೀಲನೆ
ಸಾರ್ವಜನಿಕ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಡಾ. ಕೆ. ಪಿ. ರೀತಾ ನೇತೃತ್ವದ ರಾಜ್ಯಮಟ್ಟದ ತಜ್ಞರ ತಂಡವು ಕೊಲಿಯಾಡಿ ಮತ್ತು ಸುತ್ತಮುತ್ತಲಿನ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದೆ. ರೋಗ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಇಲಾಖೆಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳ ಜಂಟಿ ನೇತೃತ್ವದಲ್ಲಿ ಇಡೀ ಪ್ರದೇಶದಲ್ಲಿ ತೀವ್ರ ಜಾಗೃತಿ ಅಭಿಯಾನ ಮತ್ತು ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ, ಕುಡಿಯುವ ನೀರಿನ ಮೂಲಗಳನ್ನು ಸೋಂಕುರಹಿತಗೊಳಿಸಲು ವಿಶೇಷ 'ಕ್ಲೋರಿನೇಷನ್' ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ.
ಆರೋಗ್ಯ ಇಲಾಖೆಯ ಮನವಿ
ಸಾರ್ವಜನಿಕರು ಆರೋಗ್ಯ ಇಲಾಖೆ ಹೊರಡಿಸಿರುವ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೈಯಕ್ತಿಕ ಸ್ವಚ್ಛತೆ, ಆಹಾರ ಮತ್ತು ಪರಿಸರದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಯಾವುದೇ ವಿಳಂಬವಿಲ್ಲದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದ್ದಾರೆ.
ಸಂಪರ್ಕದ ಮೂಲಕ ಹರಡಿರುವ ಶಂಕೆ
"ಪರಸ್ಪರ ಸಂಪರ್ಕದ ಮೂಲಕ ಈ ಸೋಂಕು ಹರಡಿರಬಹುದು ಎಂಬ ಅನುಮಾನವಿದೆ, ಆದರೆ ಇದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ನಾನು ಮಂಗಳವಾರ ವಯನಾಡಿಗೆ ಭೇಟಿ ನೀಡಿದಾಗ 38 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ 12 ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಉಳಿದವರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ," ಮುನ್ನೆಚ್ಚರಿಕೆ ಕ್ರಮವಾಗಿ ಬಾಧಿತ ಮಕ್ಕಳ ಪೋಷಕರನ್ನೂ ಸಹ ಪ್ರತ್ಯೇಕ ವಾರ್ಡ್ಗಳಿಗೆ ಸ್ಥಳಾಂತರಿಸಲಾಗಿದೆ. ಬಾವಿ ನೀರಿನ ಮಾದರಿಗಳ ಪರೀಕ್ಷಾ ಫಲಿತಾಂಶಗಳು ಬಂದ ನಂತರವಷ್ಟೇ ಬಾಧಿತ ಶಾಲೆಯನ್ನು ಮರುಪ್ರಾರಂಭಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಏನಿದು ಶಿಗೆಲ್ಲಾ ಸೋಂಕು?
ಶಿಗೆಲ್ಲಾ ಎಂಬುದು ಒಂದು ಅಪಾಯಕಾರಿ ಬ್ಯಾಕ್ಟೀರಿಯಾದ ಸೋಂಕಾಗಿದ್ದು, ಇದು ತೀವ್ರ ಅತಿಸಾರ (ಭೇದಿ), ಜ್ವರ ಮತ್ತು ಹೊಟ್ಟೆ ಸೆಳೆತಕ್ಕೆ ಕಾರಣವಾಗುತ್ತದೆ. ಕಲುಷಿತ ಆಹಾರ, ಕಲುಷಿತ ನೀರು ಅಥವಾ ಸೋಂಕಿತ ವ್ಯಕ್ತಿಗಳ ನೇರ ಸಂಪರ್ಕದ ಮೂಲಕ ಇದು ಪ್ರಾಥಮಿಕವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.

