ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿದರು ಯಶ್?
x

ನಟ ಯಶ್ ‘ರಾಮಾಯಣ’ ಚಿತ್ರದಲ್ಲಿ ರಾಮನ ಬದಲಿಗೆ ರಾವಣನ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.

ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿದರು ಯಶ್?

‘ರಾಮಾಯಣ’ ಚಿತ್ರದ ಸಹ ನಿರ್ಮಾಪಕರಲ್ಲೊಬ್ಬರಾಗಿರುವ ಯಶ್ ಅವರಿಗೆ ತಮಗೆ ಬೇಕಾದ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಹೀಗಿದ್ದರೂ ಅವರು ರಾವಣನ ಪಾತ್ರವನ್ನೇ ಆಯ್ಕೆ ಮಾಡಿಕೊಂಡಿರುವ ಹಿಂದಿನ ಕಾರಣವನ್ನು ಅವರು ವಿವರಿಸಿದ್ದಾರೆ.


Click the Play button to hear this message in audio format

ಸ್ಯಾಂಡಲ್‌ವುಡ್‌ ನಟ ಯಶ್ ಸದ್ಯ ‘ರಾಮಾಯಣ’ ಮತ್ತು ‘ಟಾಕ್ಸಿಕ್’ ಚಿತ್ರಗಳ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಜತ್ ಶರ್ಮಾ ನಡೆಸಿಕೊಡುವ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ‘ರಾಮಾಯಣ’ ಚಿತ್ರದಲ್ಲಿ ರಾಮನ ಬದಲಿಗೆ ರಾವಣನ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.

‘ರಾಮಾಯಣ’ ಚಿತ್ರದ ಸಹ ನಿರ್ಮಾಪಕರಲ್ಲೊಬ್ಬರಾಗಿರುವ ಯಶ್ ಅವರಿಗೆ ತಮಗೆ ಬೇಕಾದ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಹೀಗಿದ್ದರೂ ಅವರು ರಾವಣನ ಪಾತ್ರಕ್ಕೆ ಒಪ್ಪಿಕೊಂಡಿರುವುದು ಕುತೂಹಲ ಮೂಡಿಸಿತ್ತು.

‘ರಾಮನ ಒಳ್ಳೆಯ ಗುಣ ತೋರಿಸಲು ರಾವಣನ ಕೆಡುಕು ಬೇಕು’

ತಮ್ಮ ಪಾತ್ರದ ಆಯ್ಕೆಯನ್ನು ಸಮರ್ಥಿಸಿಕೊಂಡ ಯಶ್, ರಾಮನ ಸರ್ವಗುಣಗಳನ್ನು ಪರಿಣಾಮಕಾರಿಯಾಗಿ ತೋರಿಸಬೇಕಾದರೆ ರಾವಣನ ಕೆಡುಕನ್ನೂ ಅಷ್ಟೇ ಬಲವಾಗಿ ತೋರಿಸಬೇಕಾಗುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ತಮ್ಮಿಂದ ಆ ಪಾತ್ರವನ್ನು ಅತ್ಯುತ್ತಮವಾಗಿ ತೋರಿಸಲು ಸಾಧ್ಯ ಎಂಬ ಆತ್ಮವಿಶ್ವಾಸವನ್ನೂ ಯಶ್ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಪಾತ್ರವನ್ನೂ ತಾನು ಮಾಡಿದಾಗ ಅದನ್ನು ಅತ್ಯುತ್ತಮವಾಗಿ ನಿರ್ವಹಿಸುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

‘ನನ್ನ ಸ್ಟಾರ್‌ಡಮ್‌ಗಿಂತ ಸಿನಿಮಾ ಮುಖ್ಯ’

‘ರಾಮಾಯಣ’ ಚಿತ್ರದಲ್ಲಿ ತಮ್ಮ ಸ್ಟಾರ್‌ಡಮ್‌ಗಿಂತ ಕಥೆ ಮತ್ತು ಪಾತ್ರಗಳಿಗೆ ಆದ್ಯತೆ ನೀಡಲಾಗಿದೆ ಎಂದು ಯಶ್ ಹೇಳಿದ್ದಾರೆ. ಚಿತ್ರದ ತಂಡದಲ್ಲಿರುವ ಎಲ್ಲರೂ ತಮ್ಮ ಅಹಂಕಾರವನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದಾರೆ. ಇದು ತನ್ನೊಬ್ಬನ ಸ್ಟಾರ್‌ಡಮ್ ಅಥವಾ ಇಮೇಜ್‌ಗೆ ಸಂಬಂಧಿಸಿದ ಸಿನಿಮಾ ಅಲ್ಲ. ಅತ್ಯುತ್ತಮ ಪ್ರತಿಭೆಗಳು ಒಂದಾಗಿ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಯಶ್ ತಿಳಿಸಿದ್ದಾರೆ.

ರಾವಣನನ್ನು ತೆರೆ ಮೇಲೆ ನೋಡಿದಾಗ ಪ್ರೇಕ್ಷಕರಿಗೆ ಆತನ ವಿರುದ್ಧ ಬಲವಾದ ಭಾವನೆ ಮೂಡಬೇಕು. ಅಂದಾಗಲೇ ರಾಮನ ಪಾತ್ರದ ಶಕ್ತಿ ಮತ್ತು ಒಳಿತೂ ಪರಿಣಾಮಕಾರಿಯಾಗಿ ಕಾಣಿಸುತ್ತದೆ ಎಂದು ಯಶ್‌ ತಿಳಿಸಿದ್ದಾರೆ.

‘ರಾಮಾಯಣ’ ಪ್ರತಿಯೊಬ್ಬರಿಗೂ ವಿಭಿನ್ನ ಕಲ್ಪನೆ

ತಮ್ಮ ಬಾಲ್ಯದಲ್ಲಿ ತಾತನಿಂದ ರಾಮಾಯಣದ ಕಥೆಗಳನ್ನು ಕೇಳುವಾಗ ತಮ್ಮದೇ ಆದ ಕಲ್ಪನೆ ಇತ್ತು ಎಂದು ಯಶ್ ಹೇಳಿದ್ದಾರೆ. ಬಳಿಕ ದೂರದರ್ಶನ ಮತ್ತು ಸಿನಿಮಾಗಳಲ್ಲಿ ರಾಮಾಯಣವನ್ನು ನೋಡಿದಾಗ ತಮ್ಮ ಕಲ್ಪನೆ ಬದಲಾಗುತ್ತಾ ಬಂದಿತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ರಾಮಾಯಣ ಭಾರತೀಯರ ಸಾಂಸ್ಕೃತಿಕ ನೆನಪಿನ ಭಾಗವಾಗಿರುವುದರಿಂದ, ಇಂತಹ ಕಥೆಯನ್ನು ಸಿನಿಮಾದಲ್ಲಿ ಹೇಳುವುದು ಸವಾಲಿನ ಕೆಲಸ ಎಂದು ಯಶ್ ಹೇಳಿದ್ದಾರೆ. ಮನರಂಜನೆಯ ಅಂಶವನ್ನು ಉಳಿಸಿಕೊಳ್ಳುವುದರ ಜೊತೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

4,000 ಕೋಟಿ ರೂ. ಬಜೆಟ್‌ನಲ್ಲಿ ‘ರಾಮಾಯಣ’

‘ರಾಮಾಯಣ’ ಚಿತ್ರವನ್ನು ಸುಮಾರು 4,000 ಕೋಟಿ ರೂ. ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಈ ಚಿತ್ರವನ್ನು ವಿಶ್ವದ ಅತಿ ದೊಡ್ಡ ಸಿನಿಮಾಗಳ ಮಟ್ಟದಲ್ಲಿ ನಿರ್ಮಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಮೊದಲ ಭಾಗವು 2026ರ ಅಕ್ಟೋಬರ್‌ನಲ್ಲಿ ದೀಪಾವಳಿಗೂ ಮುನ್ನ ವಿಶ್ವದಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಎರಡನೇ ಭಾಗವು 2027ರ ದೀಪಾವಳಿ ವೇಳೆಗೆ ತೆರೆಗೆ ಬರಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Read More
Next Story