
ತಮಿಳು ನಟ ಧನುಷ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಮತ್ತೆ ಬಲ ಬಂದಿದೆ.
ನಟ ಧನುಷ್ ರಾಜಕೀಯ ಎಂಟ್ರಿ? ಆಪ್ತ ಗೆಳೆಯ ಜಿ.ವಿ. ಪ್ರಕಾಶ್ ಹೇಳಿದ್ದೇನು?
ಆಡಿಯೋ ಲಾಂಚ್ ಮತ್ತು ಅಭಿಮಾನಿಗಳ ಸಭೆಗಳಿಗೆ ಮಾತ್ರ ಸೀಮಿತವಾಗದೆ, ಮತ್ತಷ್ಟು ಸಮಾಜಮುಖಿ ಹಾಗೂ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಧನುಷ್ ಸಲಹೆ ನೀಡಿದ್ದರು.
ತಮಿಳು ನಟ ಧನುಷ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಮತ್ತೆ ಬಲ ಬಂದಿದೆ. ಸಂಗೀತ ನಿರ್ದೇಶಕ ಹಾಗೂ ನಟ ಜಿ.ವಿ. ಪ್ರಕಾಶ್ ಕುಮಾರ್ ಅವರು ಧನುಷ್ ರಾಜಕೀಯಕ್ಕೆ ಬಂದರೆ ತಾವು ಸದಾ ಬೆಂಬಲಿಸುವುದಾಗಿ ಹೇಳಿರುವುದು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರು ಧನುಷ್ ರಾಜಕೀಯ ಪ್ರವೇಶಿಸಿದರೆ ಅವರನ್ನು ಬೆಂಬಲಿಸುತ್ತೀರಾ ಎಂದು ಜಿ.ವಿ. ಪ್ರಕಾಶ್ ಕುಮಾರ್ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಧನುಷ್ ತಮ್ಮ ಅತ್ಯಂತ ಆಪ್ತ ಸ್ನೇಹಿತರಲ್ಲಿ ಒಬ್ಬರು. ಸ್ನೇಹಿತನಾಗಿ ಅವರು ಯಾವುದೇ ನಿರ್ಧಾರ ಕೈಗೊಂಡರೂ ಬೆಂಬಲಿಸುವುದಾಗಿ ಹೇಳಿದ್ದಾರೆ.
ಧನುಷ್ ರಾಜಕೀಯಕ್ಕೆ ಪ್ರವೇಶಿಸಿದರೆ ತಾವು ಖಂಡಿತವಾಗಿಯೂ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಜಿ.ವಿ. ಪ್ರಕಾಶ್ ತಿಳಿಸಿದ್ದಾರೆ. ಅವರ ಈ ಹೇಳಿಕೆ ಧನುಷ್ ರಾಜಕೀಯ ಪ್ರವೇಶದ ಕುರಿತು ನಡೆಯುತ್ತಿರುವ ಚರ್ಚೆಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಅಭಿಮಾನಿಗಳಿಗೆ ಧನುಷ್ ನೀಡಿದ್ದ ಸಂದೇಶವೂ ಚರ್ಚೆಗೆ ಕಾರಣ
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಧನುಷ್ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಒಗ್ಗಟ್ಟಿನ ಶಕ್ತಿಯ ಬಗ್ಗೆ ಹೇಳಿದ್ದರು. ಒಂದೇ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುವುದರಲ್ಲಿ ದೊಡ್ಡ ಶಕ್ತಿ ಇದೆ. ಆ ಒಗ್ಗಟ್ಟಿಗೆ ಒಂದು ಉದ್ದೇಶ ನೀಡಬೇಕು ಎಂದು ಅವರು ಅಭಿಮಾನಿಗಳಿಗೆ ಕರೆ ನೀಡಿದ್ದರು.
ಆಡಿಯೋ ಲಾಂಚ್ ಮತ್ತು ಅಭಿಮಾನಿಗಳ ಸಭೆಗಳಿಗೆ ಮಾತ್ರ ಸೀಮಿತವಾಗದೆ, ಮತ್ತಷ್ಟು ಸಮಾಜಮುಖಿ ಹಾಗೂ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಧನುಷ್ ಸಲಹೆ ನೀಡಿದ್ದರು. ತಮ್ಮ ಸುತ್ತಮುತ್ತಲಿನ ಜನರು ಮತ್ತು ಕುಟುಂಬಗಳ ಅಗತ್ಯಗಳನ್ನು ಅರ್ಥಮಾಡಿಕೊಂಡು, ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿದ್ದರು.
ಅಭಿಮಾನಿಗಳ ಸಾಮಾಜಿಕ ಸೇವೆ ಬಗ್ಗೆ ಧನುಷ್ ಒತ್ತು
ಜನರಿಗಾಗಿ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂಬ ಧನುಷ್ ಅವರ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಜಿ.ವಿ. ಪ್ರಕಾಶ್ ಅವರ ಹೇಳಿಕೆಯೂ ಹೊರಬಂದಿರುವ ಹಿನ್ನೆಲೆಯಲ್ಲಿ ಧನುಷ್ ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡಬಹುದೇ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.
ಆದರೆ ಧನುಷ್ ಸ್ವತಃ ರಾಜಕೀಯ ಪ್ರವೇಶಿಸುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ ಸದ್ಯಕ್ಕೆ ಇದು ಅಭಿಮಾನಿಗಳು ಮತ್ತು ಚಿತ್ರರಂಗದಲ್ಲಿ ನಡೆಯುತ್ತಿರುವ ಊಹಾಪೋಹವಾಗಿಯೇ ಉಳಿದಿದೆ.
ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ಧನುಷ್
ಇದರ ನಡುವೆ ಧನುಷ್ ತಮ್ಮ ಸಿನಿಮಾ ವೃತ್ತಿಜೀವನದಲ್ಲೂ ಬ್ಯುಸಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ನಿರ್ದೇಶನದ ಚಿತ್ರದಲ್ಲಿ ಧನುಷ್ ನಟಿಸುವ ಸಾಧ್ಯತೆಯಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಚಿತ್ರದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಅಧಿಕೃತವಾಗಿ ಹೊರಬರಬೇಕಿದೆ.

