ಬಾಹುಬಲಿಯ ಶಿವಗಾಮಿ ಪಾತ್ರ ಶ್ರೀದೇವಿಗೆ ಯಾಕೆ ಮಿಸ್ಸಾಯ್ತು? ರಾಜಮೌಳಿ ಕೊಟ್ಟ ಕಾರಣ ಏನು ಗೊತ್ತಾ?
x

ದೀಪಿಕಾ ಪಡುಕೋಣೆ ಮತ್ತು ಸಂದೀಪ್ ರೆಡ್ಡಿ ವಂಗಾ ನಡುವಿನ ‘ಸ್ಪಿರಿಟ್’ ಚಿತ್ರದ ವಿವಾದದ ನಡುವೆ ಶ್ರೀದೇವಿ ಹಾಗೂ ರಾಜಮೌಳಿ ನಡುವಿನ ಈ ಹಳೆಯ ಘಟನೆ ಮತ್ತೆ ಚರ್ಚೆಗೆ ಬಂದಿದೆ.

ಬಾಹುಬಲಿಯ ಶಿವಗಾಮಿ ಪಾತ್ರ ಶ್ರೀದೇವಿಗೆ ಯಾಕೆ ಮಿಸ್ಸಾಯ್ತು? ರಾಜಮೌಳಿ ಕೊಟ್ಟ ಕಾರಣ ಏನು ಗೊತ್ತಾ?

ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರು ಶಿವಗಾಮಿ ಪಾತ್ರಕ್ಕೆ ಹಿರಿಯ ನಟಿ ಶ್ರೀದೇವಿಯನ್ನು ಆಯ್ಕೆ ಮಾಡಲು ಬಯಸಿದ್ದರು. ಆದರೆ ಕಾರಣಾಂತರಗಳಿಂದ ಆ ಪಾತ್ರವನ್ನು ರಮ್ಯಾ ಕೃಷ್ಣನ್‌ ಮಾಡಬೇಕಾಯಿತು. ಈ ಬಗ್ಗೆ ಸ್ವತಃ ರಾಜಮೌಳಿ ಮಾತನಾಡಿದ್ಧಾರೆ.


Click the Play button to hear this message in audio format

ಪ್ರಭಾಸ್ ನಟನೆಯ ‘ಬಾಹುಬಲಿ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಆದರೆ ಈ ಚಿತ್ರಕ್ಕೆ ನಟಿಯೊಬ್ಬರ ಆಯ್ಕೆಯ ವಿಚಾರವೂ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರು ಶಿವಗಾಮಿ ಪಾತ್ರಕ್ಕೆ ಹಿರಿಯ ನಟಿ ಶ್ರೀದೇವಿಯನ್ನು ಆಯ್ಕೆ ಮಾಡಲು ಬಯಸಿದ್ದರು. ಆದರೆ ಮಾತುಕತೆ ಫಲಿಸದ ಕಾರಣ ಆ ಪಾತ್ರಕ್ಕೆ ರಮ್ಯಾ ಕೃಷ್ಣನ್‌ ಅವರನ್ನು ಆಯ್ಕೆ ಮಾಡಲಾಗಿತ್ತು.

ಶ್ರೀದೇವಿ ಬೇಡಿಕೆಗಳ ಬಗ್ಗೆ ರಾಜಮೌಳಿ ಹೇಳಿದ್ದೇನು?

ಶ್ರೀದೇವಿ ಚಿತ್ರದಿಂದ ಹೊರಗುಳಿದ ಬಳಿಕ ರಾಜಮೌಳಿ ಅವರು ಸಂದರ್ಶನವೊಂದರಲ್ಲಿ ನಟಿಯ ಕಡೆಯಿಂದ ಹಲವು ಬೇಡಿಕೆಗಳು ಬಂದಿದ್ದವು ಎಂದು ಹೇಳಿದ್ದರು. ತಮ್ಮ ತಂಡದವರಿಗೆ ಪ್ರತ್ಯೇಕವಾಗಿ ಹೋಟೆಲ್‌ನ ಸಂಪೂರ್ಣ ಒಂದು ಫ್ಲೋರ್‌, ಸುಮಾರು 8ರಿಂದ 10 ಕೋಟಿ ರೂ. ಸಂಭಾವನೆ ಹಾಗೂ ತಮ್ಮೊಂದಿಗೆ ಬರುವ ತಂಡಕ್ಕಾಗಿ 10 ಬಿಸಿನೆಸ್ ಕ್ಲಾಸ್ ವಿಮಾನ ಟಿಕೆಟ್‌ಗಳನ್ನು ಕೇಳಲಾಗಿತ್ತು ಎಂದು ಅವರು ಹೇಳಿದ್ದರು.

ಇಷ್ಟೊಂದು ಖರ್ಚು ಮಾಡುವುದು ಚಿತ್ರದ ದೃಷ್ಟಿಯಿಂದ ಸೂಕ್ತವಲ್ಲ ಎಂದು ರಾಜಮೌಳಿ ಅಭಿಪ್ರಾಯಪಟ್ಟಿದ್ದರು. ಅಲ್ಲದೆ, ಶ್ರೀದೇವಿ ತೆರೆಯ ಮೇಲೆ ತುಂಬಾ ಸೂಕ್ಷ್ಮವಾಗಿ ನಟಿಸುತ್ತಾರೆ. ಶಿವಗಾಮಿ ಪಾತ್ರಕ್ಕೆ ಅದು ಸೂಕ್ತವಾಗುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದರು.

ರಾಜಮೌಳಿ ಹೇಳಿಕೆಯಿಂದ ಶ್ರೀದೇವಿಗೆ ಬೇಸರ

ರಾಜಮೌಳಿ ಅವರ ಹೇಳಿಕೆಯಿಂದ ಶ್ರೀದೇವಿ ತೀವ್ರವಾಗಿ ಬೇಸರಗೊಂಡಿದ್ದರು. ತಮ್ಮ ಮೇಲೆ ಹೊರಿಸಲಾದ ಆರೋಪಗಳು ಸಂಪೂರ್ಣ ಆಧಾರರಹಿತ ಎಂದು ಅವರು ಹೇಳಿದ್ದರು. ನಿರ್ಮಾಪಕರು ತಮ್ಮ ಬಗ್ಗೆ ತಪ್ಪು ಮಾಹಿತಿಯನ್ನು ರಾಜಮೌಳಿಗೆ ನೀಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದ ಶ್ರೀದೇವಿ, ಸಾರ್ವಜನಿಕವಾಗಿ ಈ ರೀತಿಯ ವಿಚಾರಗಳನ್ನು ಚರ್ಚಿಸಿರುವುದು ನೋವುಂಟು ಮಾಡಿದೆ ಎಂದಿದ್ದರು.

ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ತಾವು ಇಂತಹ ಬೇಡಿಕೆಗಳನ್ನು ಇಟ್ಟಿದ್ದರೆ ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದೂ ಅವರು ಹೇಳಿದ್ದರು.

ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡ ರಾಜಮೌಳಿ

ವಿವಾದದ ಬಳಿಕ ರಾಜಮೌಳಿ ಕೂಡ ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಖಾಸಗಿ ಮಾತುಕತೆಯ ವಿವರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಬಾರದಿತ್ತು. ಹಾಗೆ ಮಾಡಿದ್ದು ತಮ್ಮ ತಪ್ಪು ಎಂದು ಅವರು ಒಪ್ಪಿಕೊಂಡಿದ್ದರು.

ಬೋನಿ ಕಪೂರ್ ನೀಡಿದ ಮತ್ತೊಂದು ವಿವರಣೆ

ಶ್ರೀದೇವಿ ನಿಧನದ ಹಲವು ವರ್ಷಗಳ ಬಳಿಕ ಅವರ ಪತಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಈ ವಿವಾದದ ಬಗ್ಗೆ ಮಾತನಾಡಿದ್ದರು. ನಿರ್ಮಾಪಕ ಶೋಬು ಯರ್ಲಗಡ್ಡ ಅವರು ಶ್ರೀದೇವಿ ಇಂತಹ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ರಾಜಮೌಳಿಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಬೋನಿ ಕಪೂರ್ ಹೇಳಿದ್ದರು.

ಶ್ರೀದೇವಿ ಕಡೆಯಿಂದ ಇದ್ದದ್ದು ಒಂದೇ ಪ್ರಮುಖ ಬೇಡಿಕೆ. ತಮ್ಮ ಮಕ್ಕಳಿಗೆ ರಜೆಯಿರುವ ಸಂದರ್ಭದಲ್ಲಿ ಚಿತ್ರದ ಪ್ರಮುಖ ಚಿತ್ರೀಕರಣವನ್ನು ನಿಗದಿಪಡಿಸಬೇಕು ಎಂಬುದಾಗಿತ್ತು ಎಂದು ಅವರು ವಿವರಿಸಿದ್ದರು.

‘ಸ್ಪಿರಿಟ್’ ವಿವಾದದ ನಡುವೆ ಮತ್ತೆ ಮುನ್ನೆಲೆಗೆ ಬಂದ ಹಳೆಯ ಘಟನೆ

ದೀಪಿಕಾ ಪಡುಕೋಣೆ ಮತ್ತು ಸಂದೀಪ್ ರೆಡ್ಡಿ ವಂಗಾ ನಡುವಿನ ‘ಸ್ಪಿರಿಟ್’ ಚಿತ್ರದ ವಿವಾದದ ನಡುವೆ ಶ್ರೀದೇವಿ ಹಾಗೂ ರಾಜಮೌಳಿ ನಡುವಿನ ಈ ಹಳೆಯ ಘಟನೆ ಮತ್ತೆ ಚರ್ಚೆಗೆ ಬಂದಿದೆ. ನಟಿಯರ ಸಂಭಾವನೆ, ಕೆಲಸದ ಅವಧಿ ಅಥವಾ ವೈಯಕ್ತಿಕ ಬೇಡಿಕೆಗಳು ವಿವಾದವಾದಾಗ ಮಾತ್ರ ಅವುಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತದೆ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

Read More
Next Story