‘ನಾನು ಮಂಗಳೂರಿನ ಮಗ’: ನಾಳೆ ಕಡಲನಗರಿಗೆ ಶಾರುಖ್ ಖಾನ್ ಭೇಟಿ
x

‘ನಾನು ಮಂಗಳೂರಿನ ಮಗ’: ನಾಳೆ ಕಡಲನಗರಿಗೆ ಶಾರುಖ್ ಖಾನ್ ಭೇಟಿ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ಬಾದ್‌ಶಾ, ಕಿಂಗ್ ಖಾನ್ ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ನಗರಕ್ಕೆ ಭೇಟಿ ನೀಡಲಿದ್ದು, ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಮೂಡಿಸಿದೆ.

ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಈ ಭವ್ಯ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಶಾರುಖ್ ಖಾನ್ ಅವರನ್ನು ನೇರವಾಗಿ ಕಾಣುವ ಅವಕಾಶ ಸಿಗಲಿರುವುದರಿಂದ ಕರಾವಳಿ ಭಾಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

‘ನಾನು ಮಂಗಳೂರಿನ ಮಗ’ ಎಂದಿದ್ದ ಶಾರುಖ್

ಶಾರುಖ್ ಖಾನ್ ಅವರಿಗೆ ಮಂಗಳೂರು ವಿಶೇಷ ಭಾವನಾತ್ಮಕ ನಂಟು ಹೊಂದಿರುವ ನಗರವಾಗಿದೆ. ಹಲವು ಸಂದರ್ಭಗಳಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿರುವ ಅವರು, “ನಾನು ಮಂಗಳೂರಿನ ಮಗ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಶಾರುಖ್ ಅವರ ಅಜ್ಜ 1960ರ ದಶಕದಲ್ಲಿ ಮಂಗಳೂರು ಬಂದರಿನಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಶಾರುಖ್ ತಮ್ಮ ಬಾಲ್ಯದ ಕೆಲವು ವರ್ಷಗಳನ್ನು ಮಂಗಳೂರಿನಲ್ಲಿ ಕಳೆದಿದ್ದರು. ಅಜ್ಜಿಯ ಆರೈಕೆಯಲ್ಲಿ ಬೆಳೆದ ಆ ದಿನಗಳ ನೆನಪುಗಳನ್ನು ಅವರು ಹಲವು ವೇದಿಕೆಗಳಲ್ಲಿ ಸ್ಮರಿಸಿದ್ದಾರೆ.

ರೋಹನ್ ಕಾರ್ಪೊರೇಶನ್ ಕಾರ್ಯಕ್ರಮ

ರೋಹನ್ ಕಾರ್ಪೊರೇಶನ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶಾರುಖ್ ಖಾನ್, ಸಂಸ್ಥೆಯ ವಿಶೇಷ ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಂಜೆ 4 ಗಂಟೆಯಿಂದ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಹಾಗೂ ಆಹ್ವಾನಿತ ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೀಮಿತ ಸಂಖ್ಯೆಯ ಅತಿಥಿಗಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದ್ದರೂ, ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದ ಸ್ಥಳದ ಸುತ್ತಮುತ್ತ ಜಮಾಯಿಸುವ ನಿರೀಕ್ಷೆಯಿದೆ.

ಬಿಗಿ ಭದ್ರತೆ, ಟ್ರಾಫಿಕ್ ವ್ಯವಸ್ಥೆ

ಶಾರುಖ್ ಖಾನ್ ಆಗಮನದ ಹಿನ್ನೆಲೆಯಲ್ಲಿ ಅಡ್ಯಾರ್ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇರುವುದರಿಂದ ಸಂಚಾರ ವ್ಯವಸ್ಥೆಯ ಮೇಲೂ ವಿಶೇಷ ಗಮನ ಹರಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಶಾರುಖ್ ಖಾನ್ ಅವರ ಮಂಗಳೂರು ಭೇಟಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕರಾವಳಿ ಭಾಗದಲ್ಲಿ ‘ಕಿಂಗ್ ಖಾನ್’ ಆಗಮನದ ಸಂಭ್ರಮ ಮನೆ ಮಾಡಿದೆ. ಗುರುವಾರ ಮಂಗಳೂರು ನಗರ ಸಂಪೂರ್ಣವಾಗಿ ‘ಶಾರುಖ್ ಮಯ’ವಾಗುವ ನಿರೀಕ್ಷೆಯಿದೆ.

Read More
Next Story