
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಜೂನ್ 4ಕ್ಕೆ ರೀ-ರಿಲೀಸ್ ಆಗುತ್ತಿದೆ.
ಉಪೇಂದ್ರ ಸಿನಿಮಾ ರೀ-ರಿಲೀಸ್ ! ಸರಿಯಾದ ಉತ್ತರ ಕೊಟ್ರೆ ಸಿಗುತ್ತೆ 1 ಕೋಟಿ ರೂ. ಬಹುಮಾನ
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಜೂನ್ 4ಕ್ಕೆ ರೀ-ರಿಲೀಸ್ ಆಗುತ್ತಿದ್ದು, ಸಿನಿಮಾ ನಂತರದ ಪ್ರಶ್ನೋತ್ತರದಲ್ಲಿ ಗೆದ್ದವರಿಗೆ 1 ಕೋಟಿ ರೂ. ಹಾಗೂ ಕಲೆಕ್ಷನ್ ಹಣ ಸಿಗಲಿದೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ವೃತ್ತಿಜೀವನದ ಮೈಲಿಗಲ್ಲು ಎನಿಸಿಕೊಂಡಿರುವ 'ಉಪೇಂದ್ರ' ಸಿನಿಮಾ ಇದೀಗ ಮತ್ತೆ ಬೆಳ್ಳಿಪರದೆಗೆ ಮರಳಲು ಸಜ್ಜಾಗಿದೆ. 'ಇಷ್ ಮೈರಾ ಪ್ರೊಡ್ಯೂಸರ್' ಕಂಪನಿಯ ಪರಮೇಶ್ವರ್ ಬಿ ಅವರು ಈ ಸೈಕಲಾಜಿಕಲ್ ಡ್ರಾಮಾ ಥ್ರಿಲ್ಲರ್ ಚಿತ್ರವನ್ನು ರಾಜ್ಯಾದ್ಯಂತ ಮರುಬಿಡುಗಡೆ ಮಾಡುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಒಂದು ಅಚ್ಚರಿಯ ಆಫರ್ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಉಪೇಂದ್ರ ಅವರ ಶೈಲಿಯಲ್ಲೇ ಕುತೂಹಲ ಕೆರಳಿಸುವಂತಹ ಹೊಸ ಪ್ರಯತ್ನಕ್ಕೆ ಕೈಹಾಕಿರುವುದಾಗಿ ತಿಳಿಸಿದರು. ಅಸಾಧ್ಯವಾದುದನ್ನು ಸಾಧ್ಯ ಮಾಡಿತೋರಿಸುವ ವಿಶ್ವಾಸದೊಂದಿಗೆ ಈ ಸಾಹಸಕ್ಕೆ ಅವರು ಮುಂದಾಗಿದ್ದಾರೆ.
ಈ ಯೋಜನೆಯ ಪ್ರಕಾರ, ಜೂನ್ 4ರಂದು ಸುಮಾರು 100 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಮರುಬಿಡುಗಡೆಯ ವಿಶೇಷವೆಂದರೆ, ಪ್ರತಿ ಪ್ರದರ್ಶನದ ನಂತರ 10 ನಿಮಿಷಗಳ ಕಾಲ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಸರಿಯಾದ ಉತ್ತರ ನೀಡುವ ಪ್ರೇಕ್ಷಕರಿಗೆ ಆ ನಿರ್ದಿಷ್ಟ ಶೋನ ಸಂಪೂರ್ಣ ಕಲೆಕ್ಷನ್ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಚಿತ್ರದ ಪ್ರದರ್ಶನ ಯಶಸ್ವಿಯಾಗಿ 25ನೇ ದಿನಕ್ಕೆ ತಲುಪಿದಾಗ, ಅಂದು ಸರಿಯಾದ ಉತ್ತರ ನೀಡುವ ಒಬ್ಬ ಅದೃಷ್ಟವಂತ ಪ್ರೇಕ್ಷಕನಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಬಹುಮಾನ ನೀಡುವ ಆಕರ್ಷಕ ಯೋಜನೆಯನ್ನು ಪರಮೇಶ್ವರ್ ಘೋಷಿಸಿದ್ದಾರೆ.
ಕನ್ನಡ ಚಿತ್ರರಂಗದ ಇತಿಹಾಸದ ಶ್ರೇಷ್ಠ ಚಿತ್ರಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಮತ್ತು ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಮೂಲಕ ಸಿಂಗಲ್ ಸ್ಕ್ರೀನ್ಗಳನ್ನು ಉಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಿನಿಮಾಗಳ ಕೊರತೆಯಿಂದ ಸೊರಗುತ್ತಿರುವ ಚಿತ್ರಮಂದಿರಗಳಿಗೆ ಜೀವ ತುಂಬುವುದು ಹಾಗೂ ಹೊಸ ಅಲೆಯ ಸಿನಿಮಾ ತಯಾರಕರಿಗೆ ಪ್ರೇರಣೆ ನೀಡುವುದು ಈ ನಿರ್ಧಾರದ ಹಿಂದಿನ ಆಶಯವಾಗಿದೆ.
ಮೂಲ ಚಿತ್ರದ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರು ಈ ಮರುಬಿಡುಗಡೆಗೆ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಉಪೇಂದ್ರ ಅವರು ಕೂಡ ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರೆ. ರವೀನಾ ಟಂಡನ್, ಪ್ರೇಮಾ ಮತ್ತು ದಾಮಿನಿ ಅಭಿನಯದ ಈ ಸೂಪರ್ ಹಿಟ್ ಚಿತ್ರವನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡಲು ಉಪ್ಪಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

