
ನಟ ಯುವ ರಾಜ್ಕುಮಾರ್ ಹುಟ್ಟುಹಬ್ಬದಂದೇ ಪತ್ನಿ ಶ್ರೀದೇವಿ ಭೈರಪ್ಪ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ
Yuva Rajkumar| ಯುವ ಬರ್ತ್ಡೇ ದಿನವೇ ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ಸ್ಫೋಟಕ ಪೋಸ್ಟ್
ನಟ ಯುವ ರಾಜ್ಕುಮಾರ್ ಹುಟ್ಟುಹಬ್ಬದಂದೇ ಪತ್ನಿ ಶ್ರೀದೇವಿ ಭೈರಪ್ಪ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಮಹಿಳೆಯರ ಹಕ್ಕು ಹಾಗೂ ವಿಚ್ಛೇದನ ಪ್ರಕರಣದ ಬಗ್ಗೆ ಅವರು ಆಘಾತಕಾರಿ ಸಂಗತಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನ ಯುವ ಸಾಮ್ರಾಟ ಯುವ ರಾಜ್ಕುಮಾರ್ ಅವರಿಗೆ ಇಂದು (ಏಪ್ರಿಲ್ 23) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸುತ್ತಿರುವಾಗಲೇ, ಇತ್ತ ಪತ್ನಿ ಶ್ರೀದೇವಿ ಭೈರಪ್ಪ ಅವರು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ದೊಡ್ಡ ಸಂಚಲನ ಮೂಡಿಸಿದೆ. ವಿಶೇಷ ಎಂದರೆ, ಪತಿಯ ಹುಟ್ಟುಹಬ್ಬದ ದಿನವೇ ಶ್ರೀದೇವಿ ಮಹಿಳಾ ಹಕ್ಕುಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಪರೋಕ್ಷವಾಗಿ ಯುವ ಅವರಿಗೆ ಟಾಂಗ್ ನೀಡಿದ್ದಾರೆ.
ಯುವ ಅವರ ಜೊತೆಗಿನ ಹಳೆಯ ಫೋಟೋವನ್ನೇ ಈ ಪೋಸ್ಟ್ಗೆ ಬಳಸಿಕೊಂಡಿರುವ ಶ್ರೀದೇವಿ, ಅದರ ಕೆಳಗೆ ಬರೆದಿರುವ ಸಾಲುಗಳು ಈಗ ಚರ್ಚೆಯ ವಿಷಯವಾಗಿದೆ. "ಮಹಿಳೆಯರೇ, ಸಮಯ ಮೀರುವ ಮುನ್ನ ನಿಮ್ಮ ಹಕ್ಕುಗಳ ಬಗ್ಗೆ ಎಚ್ಚೆತ್ತುಕೊಳ್ಳಿ" ಎಂದು ಹೇಳುವ ಮೂಲಕ ಅವರು ತಮ್ಮ ಹೋರಾಟದ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ. ಮದುವೆಯ ನಂತರ ಹೆಣ್ಣು ಮಕ್ಕಳು ಎದುರಿಸುವ ಸವಾಲುಗಳು ಮತ್ತು ಅವರ ಮೇಲೆ ಹೊರಿಸಲಾಗುವ ಸುಳ್ಳು ಆರೋಪಗಳ ಬಗ್ಗೆ ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಶ್ರೀದೇವಿ ಪೋಸ್ಟ್ನಲ್ಲಿ ಏನಿದೆ?
ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿರುವ ಶ್ರೀದೇವಿ, "ಸಮಯ ಮೀರುವ ಮುನ್ನ ನಿಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ. ನಾವು ಹೆಣ್ಣು ಮಕ್ಕಳನ್ನು ಕೇವಲ ಮದುವೆ ಮಾಡಿ ಮತ್ತೊಂದು ಮನೆಗೆ ಕಳುಹಿಸಲು ಸಿದ್ಧಪಡಿಸುತ್ತೇವೆಯೇ ಹೊರತು, ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವುದು ಬಹಳ ಕಡಿಮೆ. ಮುಖ್ಯವಾಗಿ ಪತ್ನಿಯರ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು ಪುರುಷರು ತಮ್ಮ ತಪ್ಪುಗಳಿಂದ ನುಣುಚಿಕೊಳ್ಳಲು ಬಳಸುವ ಒಂದು ಅಗ್ಗದ ತಂತ್ರ. ನ್ಯಾಯಾಲಯವು ಸಾಕ್ಷ್ಯಗಳನ್ನು ಕೇಳುತ್ತದೆಯೇ ಹೊರತು ಕಟ್ಟುಕಥೆಗಳನ್ನಲ್ಲ. ಮದುವೆಯಾದ ಮೇಲೂ ಅಕ್ರಮ ಸಂಬಂಧ ಹೊಂದುವುದು ಕಾನೂನುಬಾಹಿರವೇ ಹೊರತು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹೊಂದಿರುವುದು ಅಥವಾ ಸ್ವತಂತ್ರವಾಗಿ ಬದುಕುವುದು ತಪ್ಪಲ್ಲ ಎಂದು ಮಾರ್ಮಿಕವಾಗಿ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿಯೊಂದು ಗಾಯವೂ ಕಣ್ಣಿಗೆ ಕಾಣಿಸುವುದಿಲ್ಲ ಮತ್ತು ಪ್ರತಿಯೊಂದು ಮೌನಕ್ಕೂ ಒಂದು ಬೆಲೆ ಇರುತ್ತದೆ ಎಂದು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಒಂದೆಡೆ ಯುವ ರಾಜ್ಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ ಹರಿಯುತ್ತಿದ್ದರೆ, ಇನ್ನೊಂದೆಡೆ ಶ್ರೀದೇವಿ ಅವರ ಈ ಕಟು ವಾಸ್ತವದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಕಳೆದ ಜೂ.6ರಂದು ಯುವ ರಾಜ್ಕುಮಾರ್ ಅವರು ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಯುವ ಅವರ ಪತ್ನಿ ಶ್ರೀದೇವಿ ಭೈರಪ್ಪ ಅವರು ಮೂಲತಃ ಮೈಸೂರಿನವಾಗಿದ್ದು, ಇವರಿಬ್ಬರು ಸುಮಾರು 7ವರ್ಷಗಳಿಂದ ಪರಿಚಿತರು. 2019 ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಶ್ರೀದೇವಿ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೆ ಈ ಜೋಡಿಗೆ ಮನಸ್ತಾಪವಿದ್ದು, ಕಳೆದ ಆರು ತಿಂಗಳಿನಿಂದ ಈ ಜೋಡಿ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ. 2016ರಲ್ಲಿ ತೆರೆಕಂಡ ಯುವ ರಾಜ್ಕುಮಾರ್ ಅವರ ರನ್ ಆ್ಯಂಟನಿ ಚಿತ್ರದ ನಿರ್ಮಾಣದಲ್ಲಿ ಶ್ರೀದೇವಿ ಅವರು ಭಾಗಿಯಾಗಿದ್ದರು. ರನ್ ಆ್ಯಂಟನಿ ಪ್ರಮೋಷನ್ನಲ್ಲೂ ಶ್ರೀದೇವಿ ಭೈರಪ್ಪ ಅವರು ತೊಡಗಿಕೊಂಡಿದ್ದರು.

