
ಎಎಪಿ ತೊರೆದು ಬಿಜೆಪಿ ಸೇರಿದ ಸಂಸದ ರಾಘವ್ ಚಡ್ಡಾ ನಡೆಯನ್ನು ನಟ ಪ್ರಕಾಶ್ ರಾಜ್ ಕಟುವಾಗಿ ಟೀಕಿಸಿದ್ದಾರೆ.
Prakash Raj| "ಪೊಲೀಸ್ ಕೆಲಸ ಬಿಟ್ಟು ದಾವೂದ್ ಗ್ಯಾಂಗ್ ಸೇರ್ಪಡೆ": ಚಡ್ಡಾಗೆ ಪ್ರಕಾಶ್ ರಾಜ್ ಚಾಟಿ
ಎಎಪಿ ತೊರೆದು ಬಿಜೆಪಿ ಸೇರಿದ ಸಂಸದ ರಾಘವ್ ಚಡ್ಡಾ ನಡೆಯನ್ನು ನಟ ಪ್ರಕಾಶ್ ರಾಜ್ ಕಟುವಾಗಿ ಟೀಕಿಸಿದ್ದಾರೆ. ಇದನ್ನು ಪೊಲೀಸ್ ಕೆಲಸ ಬಿಟ್ಟು ಭೂಗತ ಲೋಕಕ್ಕೆ ಸೇರಿದಂತೆ ಎಂದು ಅವರು ಲೇವಡಿ ಮಾಡಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ದಿಢೀರ್ ಆಗಿ ಪಕ್ಷಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಾರ್ಟಿ ಸೇರಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಬಹುಭಾಷಾ ನಟ ಹಾಗೂ ರಾಜಕೀಯ ವಿಶ್ಲೇಷಕ ಪ್ರಕಾಶ್ ರಾಜ್ ಅವರು ತಮ್ಮದೇ ಶೈಲಿಯಲ್ಲಿ ರಾಘವ್ ಚಡ್ಡಾ ಕಾಲೆಳೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಪ್ರಕಾಶ್ ರಾಜ್, ಒಂದು "ನಾನು ಪೊಲೀಸ್ ಪಡೆಯನ್ನು ತೊರೆಯುತ್ತಿದ್ದೇನೆ ಮತ್ತು ದಾವೂದ್ ಇಬ್ರಾಹಿಂ ಗ್ಯಾಂಗ್ ಸೇರುತ್ತಿದ್ದೇನೆ" ಎಂದು ಹೇಳುವ ಮೂಲಕ ರಾಘವ್ ಚಡ್ಡಾ ನಡೆಯನ್ನು ವ್ಯಂಗ್ಯ ಮಾಡಿದ್ದಾರೆ. ಅಂದರೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವ 'ಪೊಲೀಸ್'ನಂತಿದ್ದ ಎಎಪಿ ಬಿಟ್ಟು, 'ಅಪರಾಧಿಗಳ ಗ್ಯಾಂಗ್'ನಂತೆ ಕಾಣುವ ಬಿಜೆಪಿ ಸೇರಿದ್ದಾರೆ ಎಂದು ಅವರು ಪರೋಕ್ಷವಾಗಿ ಕುಟುಕಿದ್ದಾರೆ.
ಶುಕ್ರವಾರದಂದು ರಾಘವ್ ಚಡ್ಡಾ ಸೇರಿ ಎಎಪಿಯ ಆರು ಸಂಸದರು ಅರವಿಂದ್ ಕೇಜ್ರಿವಾಲ್ ಅವರಿಗೆ ಕೈಕೊಟ್ಟು ಕೇಸರಿ ಪಡೆಗೆ ಸೇರ್ಪಡೆಯಾಗಿದ್ದರು. ಈ ದೊಡ್ಡ ಮಟ್ಟದ ಪಕ್ಷಾಂತರವು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಮಾಜ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, ಚಡ್ಡಾ ಅವರ ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಜಾಲತಾಣದಲ್ಲಿ ಪರ-ವಿರೋಧ ಚರ್ಚೆ:
ಪ್ರಕಾಶ್ ರಾಜ್ ಅವರ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಎರಡು ಗುಂಪುಗಳಾಗಿ ಚರ್ಚೆ ನಡೆಸುತ್ತಿದ್ದಾರೆ. ಕೆಲವರು ಪ್ರಕಾಶ್ ರಾಜ್ ಅವರ ಧೈರ್ಯ ಮತ್ತು ವಿಡಂಬನೆಯನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಓರ್ವ ಸಂಸದನನ್ನು ಭೂಗತ ಲೋಕದ ಡಾನ್ಗೆ ಹೋಲಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಡ್ಡಾ ಸಮರ್ಥನೆ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಘವ್ ಚಡ್ಡಾ, "ನಾನು ತಪ್ಪು ಪಕ್ಷದಲ್ಲಿದ್ದ ಸರಿಯಾದ ವ್ಯಕ್ತಿಯಾಗಿದ್ದೆ. ಎಎಪಿ ತನ್ನ ಮೂಲ ಸಿದ್ಧಾಂತಗಳಿಂದ ದೂರ ಸರಿದಿದೆ, ಹಾಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಂಡಿದ್ದಾರೆ.
ಎಎಪಿಗೆ ಬಹುದೊಡ್ಡ ಹೊಡೆತ
ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಘವ್ ಚಡ್ಡಾ, ತಾವು ಸೇರಿದಂತೆ ಎಎಪಿಯ 7 ರಾಜ್ಯಸಭಾ ಸಂಸದರು (ರಾಜ್ಯಸಭೆಯಲ್ಲಿನ ಪಕ್ಷದ ಒಟ್ಟು ಬಲದ ಮೂರನೇ ಎರಡರಷ್ಟು) ಭಾರತೀಯ ಸಂವಿಧಾನದ ನಿಯಮಗಳ ಪ್ರಕಾರ ಬಿಜೆಪಿಯಲ್ಲಿ ವಿಲೀನಗೊಳ್ಳುತ್ತಿರುವುದಾಗಿ ಘೋಷಿಸಿದರು. ರಾಘವ್ ಚಡ್ಡಾ, ಸಂದೀಪ್ ಪಾಠಕ್ ಅವರಲ್ಲದೆ ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ರಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಹಾಗೂ ಸ್ವಾತಿ ಮಲಿವಾಲ್ ಕೂಡ ಎಎಪಿ ತೊರೆದಿದ್ದಾರೆ.
ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಹಿನ್ನೆಲೆಯಲ್ಲಿ 2012ರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷಕ್ಕೆ, ಇದೀಗ ಪ್ರಮುಖ ನಾಯಕರುಗಳೇ ಪಕ್ಷ ತೊರೆದಿರುವುದು ಬಹುದೊಡ್ಡ ಹಿನ್ನಡೆಯಾಗಿದೆ.

