
ಕಾರ್ಗಿಲ್ ಯುದ್ಧದ ಹಿನ್ನೆಲೆಯ ‘ಆಪರೇಷನ್ ಸಫೇದ್ ಸಾಗರ್’ ವೆಬ್ ಸರಣಿ ಆಗಸ್ಟ್ 7ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ.
'ಆಪರೇಷನ್ ಸಫೇದ್ ಸಾಗರ್' ದೇಶಭಕ್ತಿ ಅಲ್ಲ, ಮಾನವೀಯತೆಯ ಕಥೆ: ಸಿದ್ಧಾರ್ಥ್
ಕಾರ್ಗಿಲ್ ಯುದ್ಧದ ಹಿನ್ನೆಲೆಯ ‘ಆಪರೇಷನ್ ಸಫೇದ್ ಸಾಗರ್’ ವೆಬ್ ಸರಣಿ ಆಗಸ್ಟ್ 7ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಸಿದ್ಧಾರ್ಥ್, ಜಿಮ್ಮಿ ಶೇರ್ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನೆಟ್ಫ್ಲಿಕ್ಸ್ನ ಹೊಸ ವೆಬ್ ಸಿರೀಸ್ ‘ಆಪರೇಷನ್ ಸಫೇದ್ ಸಾಗರ್’ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ವಾಯುಪಡೆ ನಡೆಸಿದ ಐತಿಹಾಸಿಕ ಕಾರ್ಯಾಚರಣೆಯನ್ನು ಆಧರಿಸಿದೆ. ಆಗಸ್ಟ್ 7ರಂದು ಬಿಡುಗಡೆಯಾಗಲಿರುವ ಈ ಸರಣಿಯಲ್ಲಿ ಸಿದ್ಧಾರ್ಥ್ ಮತ್ತು ಜಿಮ್ಮಿ ಶೇರ್ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೇಶಭಕ್ತಿಯನ್ನು ಕೇವಲ ಸಾಹಸಮಯ ದೃಶ್ಯಗಳ ಮೂಲಕವಲ್ಲ, ಯೋಧರ ಮಾನವೀಯ ಬದುಕಿನ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಇಬ್ಬರೂ ನಟರು ಹೇಳಿದ್ದಾರೆ.
ಈ ಸಿರೀಸ್ನಲ್ಲಿ ಸ್ಕ್ವಾಡ್ರನ್ ಲೀಡರ್ ಅಜಯ್ ಆಹುಜಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿದ್ಧಾರ್ಥ್, ನೈಜ ವ್ಯಕ್ತಿಯ ಪಾತ್ರ ನಿರ್ವಹಿಸುವ ಹೊಣೆಗಾರಿಕೆಯಿಂದ ಆರಂಭದಲ್ಲಿ ಹಿಂಜರಿದಿದ್ದಾಗಿ ಹೇಳಿದ್ದಾರೆ. ಆದರೆ ನಿರ್ಮಾಪಕರ ಪ್ರಾಮಾಣಿಕ ಉದ್ದೇಶ, ಆಳವಾದ ಸಂಶೋಧನೆ, ಭಾರತೀಯ ವಾಯುಪಡೆಯ ಬೆಂಬಲ ಮತ್ತು ಹುತಾತ್ಮರ ಕುಟುಂಬಗಳ ಅನುಮತಿ ದೊರೆತ ಬಳಿಕ ಈ ಯೋಜನೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ.
'ನೈಜತೆಗೆ ಹೆಚ್ಚು ಒತ್ತು' ಎಂದ ಜಿಮ್ಮಿ ಶೇರ್ಗಿಲ್
ವಿಂಗ್ ಕಮಾಂಡರ್ ಬಿ.ಎಸ್. ಧನೋವಾ ಪಾತ್ರದಲ್ಲಿ ನಟಿಸಿರುವ ಜಿಮ್ಮಿ ಶೇರ್ಗಿಲ್, ಸಿರೀಸನ್ನು ಸಾಧ್ಯವಾದಷ್ಟು ನೈಜತೆಗೆ ಹತ್ತಿರವಾಗಿ ರೂಪಿಸಲು ಭಾರತೀಯ ವಾಯುಪಡೆಯೇ ನಿರ್ದೇಶಕರಿಗೆ ಮಾರ್ಗದರ್ಶನ ನೀಡಿದೆ ಎಂದು ಹೇಳಿದ್ದಾರೆ. ವಿಭಿನ್ನ ರೀತಿಯಲ್ಲಿ ದೇಶಭಕ್ತಿಯನ್ನು ತೋರಿಸುವ ಸಿನಿಮಾಗಳಿಗೂ ಸ್ಥಾನವಿದೆ. ಆದರೆ ಕಥೆಯನ್ನು ಪ್ರಾಮಾಣಿಕವಾಗಿ ಹೇಳುವುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ 7ರಂದು ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್
ಅಭಿಜೀತ್ ಸಿಂಗ್ ಪರ್ಮಾರ್ ಮತ್ತು ಕುಶಲ್ ಶ್ರೀವಾಸ್ತವ ಕಥೆ ರಚಿಸಿರುವ ಈ ಸಿರೀಸ್ಗೆ ಓನಿ ಸೇನ್ ನಿರ್ದೇಶನ ನೀಡಿದ್ದಾರೆ. ಸಿದ್ಧಾರ್ಥ್, ಜಿಮ್ಮಿ ಶೇರ್ಗಿಲ್ ಜೊತೆಗೆ ಅಭಯ್ ವರ್ಮಾ, ಮಿಹಿರ್ ಅಹುಜಾ, ತಾರುಕ್ ರೈನಾ, ದಿಯಾ ಮಿರ್ಜಾ, ಪ್ರಾಜಕ್ತಾ ಕೋಲಿ, ಆದಿಲ್ ಹುಸೇನ್ ಮತ್ತು ಅಮೃತಾ ಬಾಗ್ಚಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

