
ಹೈದರಾಬಾದ್ ನೀರಿನ ಅಭಾವದ ನಡುವೆ ಎಸ್.ಎಸ್. ರಾಜಮೌಳಿ ಅವರ 'ವಾರಣಾಸಿ' ಚಿತ್ರೀಕರಣಕ್ಕೆ 150 ಟ್ಯಾಂಕರ್ ನೀರು ನೀಡಲು ಜಲಮಂಡಳಿ ನಿರಾಕರಿಸಿದೆ.
ರಾಜಮೌಳಿ ‘ವಾರಣಾಸಿ’ ಚಿತ್ರಕ್ಕೆ ಶಾಕ್: 15 ಲಕ್ಷ ಲೀಟರ್ ನೀರು ಪೂರೈಕೆಗೆ ನಿರಾಕರಣೆ
ಹೈದರಾಬಾದ್ ನೀರಿನ ಅಭಾವದ ನಡುವೆ ಎಸ್.ಎಸ್. ರಾಜಮೌಳಿ ಅವರ 'ವಾರಣಾಸಿ' ಚಿತ್ರೀಕರಣಕ್ಕೆ 150 ಟ್ಯಾಂಕರ್ ನೀರು ನೀಡಲು ಜಲಮಂಡಳಿ ನಿರಾಕರಿಸಿದೆ. ಜನಸಾಮಾನ್ಯರ ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದ ಮಂಡಳಿ.
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ಅದ್ದೂರಿ ಚಿತ್ರ 'ವಾರಣಾಸಿ' ಚಿತ್ರೀಕರಣಕ್ಕೆ ಈಗ ನೀರಿನ ಅಭಾವದ ಬಿಸಿ ತಟ್ಟಿದೆ. ಹೈದರಾಬಾದ್ ನಗರದಲ್ಲಿ ತೀವ್ರ ಬೇಸಿಗೆಯಿಂದಾಗಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಚಿತ್ರತಂಡ ಕೇಳಿದ್ದ ಬೃಹತ್ ಪ್ರಮಾಣದ ನೀರನ್ನು ಪೂರೈಸಲು ಹೈದರಾಬಾದ್ ಮೆಟ್ರೋಪಾಲಿಟನ್ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸ್ಪಷ್ಟವಾಗಿ ನಿರಾಕರಿಸಿದೆ.
ಚಿತ್ರದ ಪ್ರಮುಖ ಅಂಡರ್ ವಾಟರ್ ಸಾಹಸ ದೃಶ್ಯಗಳ ಚಿತ್ರೀಕರಣಕ್ಕಾಗಿ ಹೈದರಾಬಾದ್ನ ಗಗನ್ಪಹಾಡ್ನಲ್ಲಿ ಬೃಹತ್ ಕೆರೆಯ ಮಾದರಿಯ ಸೆಟ್ ನಿರ್ಮಿಸಲಾಗಿದೆ. ಈ ಕೆರೆಯನ್ನು ತುಂಬಿಸಲು ಚಿತ್ರದ ನಿರ್ಮಾಣ ಸಂಸ್ಥೆಯಾದ ಶ್ರೀ ದುರ್ಗಾ ಆರ್ಟ್ಸ್, ಜಲಮಂಡಳಿಗೆ ಪತ್ರ ಬರೆದು ಒಟ್ಟು 150 ನೀರಿನ ಟ್ಯಾಂಕರ್ಗಳನ್ನು ಒದಗಿಸುವಂತೆ ಕೋರಿತ್ತು. ಪ್ರತಿ ಟ್ಯಾಂಕರ್ 10,000 ಲೀಟರ್ ಸಾಮರ್ಥ್ಯ ಹೊಂದಿದ್ದು, ಒಟ್ಟಾರೆಯಾಗಿ ಸುಮಾರು 15 ಲಕ್ಷ ಲೀಟರ್ ನೀರು ಚಿತ್ರೀಕರಣಕ್ಕೆ ಅಗತ್ಯವಿತ್ತು.
ಚಿತ್ರತಂಡವು ನೀರಿನ ವೆಚ್ಚ ಮತ್ತು ಸಾರಿಗೆ ವೆಚ್ಚವನ್ನು ಭರಿಸಲು ಸಿದ್ಧವಿದ್ದರೂ, ಜಲಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕೆ. ಅಶೋಕ್ ರೆಡ್ಡಿ ಅವರು ಈ ಮನವಿಯನ್ನು ತಿರಸ್ಕರಿಸಿದ್ದಾರೆ. ಹೈದರಾಬಾದ್ನಲ್ಲಿ ಪ್ರಸ್ತುತ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ಕುಡಿಯುವ ನೀರಿನ ಪೂರೈಕೆ ಮಾಡುವುದೇ ಆದ್ಯತೆಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೇವಲ ಸಿನಿಮಾ ಚಿತ್ರೀಕರಣಕ್ಕಾಗಿ ಇಷ್ಟೊಂದು ಬೃಹತ್ ಪ್ರಮಾಣದ ನೀರನ್ನು ವ್ಯಯ ಮಾಡುವುದು ಸರಿಯಲ್ಲ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
ಮೇ 18 ರಿಂದ ಈ ಪ್ರಮುಖ ದೃಶ್ಯಗಳ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಜಲಮಂಡಳಿಯ ಈ ನಿರ್ಧಾರದಿಂದಾಗಿ ರಾಜಮೌಳಿ ಅವರ ಯೋಜನೆಗೆ ಸದ್ಯಕ್ಕೆ ಅಡ್ಡಿಯಾಗಿದೆ. ಈಗ ಚಿತ್ರತಂಡ ಖಾಸಗಿ ನೀರಿನ ಟ್ಯಾಂಕರ್ಗಳ ಮೊರೆ ಹೋಗಬೇಕಿದೆ ಅಥವಾ ಮಳೆಗಾಲದವರೆಗೆ ಈ ಚಿತ್ರೀಕರಣವನ್ನು ಮುಂದೂಡಬೇಕಾದ ಅನಿವಾರ್ಯತೆ ಎದುರಾಗಿದೆ.
ಸುಮಾರು 1,400 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರವು 2027ರ ಏಪ್ರಿಲ್ನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.

