
ಹಿರಿಯ ತಮಿಳು ನಿರ್ದೇಶಕ, ನಟ ಕೆ. ಭಾಗ್ಯರಾಜ್ ನಿಧನ
ಖ್ಯಾತ ತಮಿಳು ನಿರ್ದೇಶಕ ಹಾಗೂ ನಟ ಕೆ. ಭಾಗ್ಯರಾಜ್ ನಿಧನ
ಖ್ಯಾತ ತಮಿಳು ನಿರ್ದೇಶಕ ಹಾಗೂ ನಟ ಕೆ. ಭಾಗ್ಯರಾಜ್ (73) ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಇತ್ತೀಚೆಗಷ್ಟೇ ಹಿರಿಯ ಚಲನಚಿತ್ರ ನಿರ್ದೇಶಕ ಭಾರತಿರಾಜ ಅವರ ಅಗಲಿಕೆಯಿಂದ ಶೋಕದಲ್ಲಿದ್ದ ತಮಿಳು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಬಹುಮುಖ ಪ್ರತಿಭೆಯ ಹಿರಿಯ ನಿರ್ದೇಶಕ ಮತ್ತು ನಟ ಕೆ. ಭಾಗ್ಯರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮಿಳು ಸಿನೆಮಾ ಲೋಕಕ್ಕೆ ನೀಡಿದ ಅಪಾರ ಕೊಡುಗೆಯಿಂದಾಗಿ ದೇಶಾದ್ಯಂತ ಮನೆಮಾತಾಗಿದ್ದರು.
ತಮಿಳು ಚಿತ್ರರಂಗದಲ್ಲಿ ವಿಶಿಷ್ಟ ಕಥೆಗಾರ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಭಾಗ್ಯರಾಜ್ ಅವರು ಹಾಸ್ಯ, ಕೌಟುಂಬಿಕ ಡ್ರಾಮಾ, ಪ್ರೇಮಕಥೆ ಹಾಗೂ ಸಾಮಾಜಿಕ ಸಂದೇಶಗಳನ್ನು ಅತ್ಯಂತ ಸರಳವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಚಲನಚಿತ್ರಗಳು ಚಾಣಾಕ್ಷ ಚಿತ್ರಕಥೆ, ಸಾಮಾನ್ಯ ಮಧ್ಯಮ ವರ್ಗದ ಪಾತ್ರಗಳು, ಚುರುಕಾದ ಸಂಭಾಷಣೆ ಮತ್ತು ಭಾವನಾತ್ಮಕ ಕಥಾಹಂದರಕ್ಕೆ ಹೆಸರುವಾಸಿಯಾಗಿದ್ದವು. ದೈನಂದಿನ ಸಾಮಾನ್ಯ ಘಟನೆಗಳನ್ನೇ ಆಧರಿಸಿ ಅದ್ಭುತ ಸಿನಿಮಾಗಳನ್ನು ಸೃಷ್ಟಿಸುವ ಕಲೆ ಅವರಿಗೆ ಒಲಿದಿತ್ತು. ಬೆಳ್ಳಿತೆರೆಯ ಮೇಲೆ ಲೋಪದೋಷಗಳಿದ್ದರೂ ಜನರಿಗೆ ಆಪ್ತವಾಗುವಂತಹ ನಾಯಕನ ಪಾತ್ರಗಳನ್ನು ಸೃಷ್ಟಿಸಿ ಅವರು ಹೊಸ ಹಾದಿ ನಿರ್ಮಿಸಿದ್ದರು.
ಭಾಗ್ಯರಾಜ್ ಅವರು 1979ರಲ್ಲಿ ತೆರೆಕಂಡ 'ಸುವರಿಲ್ಲಾದ ಚಿತ್ರಂಗಳ್' ಚಿತ್ರದ ಮೂಲಕ ನಿರ್ದೇಶಕರಾಗಿ ಪಾದರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರು ಸುಧಾಕರ್ ಮತ್ತು ಸುಮತಿ ಅವರೊಂದಿಗೆ ಪ್ರಮುಖ ಪಾತ್ರದಲ್ಲೂ ನಟಿಸಿದ್ದರು. ಅವರ ವೃತ್ತಿಜೀವನದ ಅತ್ಯಂತ ಯಶಸ್ವಿ ಚಿತ್ರಗಳಾದ 'ಒರು ಕೈ ಓಸೈ', 'ಮೌನ ಗೀತಂಗಳ್', 'ಅಂದ 7 ನಾಟ್ಕಳ್', 'ಡಾರ್ಲಿಂಗ್, ಡಾರ್ಲಿಂಗ್, ಡಾರ್ಲಿಂಗ್', 'ಮುಂದಾನೈ ಮುಡಿಚು', 'ದಾವಣಿ ಕನವುಗಳ್', 'ಚಿನ್ನ ವೀಡು', 'ಎಂಗ ಚಿನ್ನ ರಾಸಾ' ಮತ್ತು 'ಅವಸರ ಪೊಲೀಸ್ 100' ಚಿತ್ರಗಳು ಇಂದಿಗೂ ಸಿನೆಮಾ ಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.
ಮೃತರು ಪತ್ನಿ ಹಾಗೂ ಹಿರಿಯ ನಟಿ ಪೂರ್ಣಿಮಾ ಜಯರಾಮ್, ಪುತ್ರಿ ಶರಣ್ಯಾ ಭಾಗ್ಯರಾಜ್ ಮತ್ತು ತಮಿಳು ಚಿತ್ರರಂಗದ ಖ್ಯಾತ ನಟರಾಗಿರುವ ಪುತ್ರ ಶಂತನು ಭಾಗ್ಯರಾಜ್ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

