
ಕರೂರು ಕಾಲ್ತುಳಿತ ಪ್ರಕರಣದ ವಿಚಾರಣೆಗೆ ನಟ ವಿಜಯ್ ದಳಪತಿ ಅವರಿಗೆ ಸಿಬಿಐ ಸಮನ್ಸ್ ನೀಡಿದೆ.
ನಟ ದಳಪತಿ ವಿಜಯ್ಗೆ ಸಂಕಷ್ಟಗಳ ಸರಮಾಲೆ: ಕರೂರು ಕಾಲ್ತುಳಿತ ಕೇಸ್ನಲ್ಲಿ ಮತ್ತೆ ಸಿಬಿಐ ಸಮನ್ಸ್
ಕಳೆದ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ರಾಜಕೀಯ ಪ್ರಚಾರದ ರ್ಯಾಲಿಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ಹಾಗೂ ಖ್ಯಾತ ನಟ ದಳಪತಿ ವಿಜಯ್ ಅವರು ಸದ್ಯ ವೃತ್ತಿಪರ ಹಾಗೂ ವೈಯಕ್ತಿಕ ಬದುಕಿನಲ್ಲಿ ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಅವರಿಗೆ ಮತ್ತೆ ಸಮನ್ಸ್ ಜಾರಿಗೊಳಿಸಿದೆ.
ಈ ಹಿಂದೆ ಜನವರಿ 10 ಮತ್ತು 19ರಂದು ಸಿಬಿಐ ವಿಚಾರಣೆಗೆ ವಿಜಯ್ ಹಾಜರಾಗಿದ್ದರು. ಇದೀಗ ತನಿಖಾ ಸಂಸ್ಥೆಗೆ ಲಭ್ಯವಾಗಿರುವ ಹೊಸ ಸಾಕ್ಷ್ಯಗಳ ಆಧಾರದ ಮೇಲೆ, ಹೆಚ್ಚಿನ ಸ್ಪಷ್ಟನೆಗಾಗಿ ಮಾರ್ಚ್ 10ರಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ 27ರಂದು ಕರೂರಿನ ವೇಲುಸ್ವಾಮಿಪುರಂನಲ್ಲಿ ನಡೆದಿದ್ದ ಟಿವಿಕೆ ರಾಜಕೀಯ ಪ್ರಚಾರದ ರ್ಯಾಲಿಯ ವೇಳೆ ಭೀಕರ ನೂಕುನುಗ್ಗಲು ಉಂಟಾಗಿ, 41 ಜನರು ಮೃತಪಟ್ಟು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯನ್ನು ಮೊದಲು ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿತ್ತು, ಆದರೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದ್ದು, ಘಟನೆಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಲಾಗಿದೆ.
ಭೀಕರ ಕಾಲ್ತುಳಿತದ ಕರಾಳ ನೆನಪು
ರಾಜಕೀಯ ಪ್ರವೇಶದ ಹುಮ್ಮಸ್ಸಿನಲ್ಲಿದ್ದ ವಿಜಯ್ ಅವರ ಭಾಷಣ ಕೇಳಲು ಜಮಾಯಿಸಿದ್ದ ಹತ್ತಾರು ಸಾವಿರ ಅಭಿಮಾನಿಗಳ ನಡುವೆ ಈ ದುರಂತ ಸಂಭವಿಸಿತ್ತು. ಘಟನೆಯ ಕುರಿತು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ವಿಜಯ್, ಘಟನೆಯಿಂದ ತಮಗೆ ಅತೀವ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದ ಅವರು, ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ್ದರು. ಆದಾಗ್ಯೂ, ವಿಜಯ್ ಅವರ ತಡವಾದ ಆಗಮನ ಮತ್ತು ಕಾರ್ಯಕ್ರಮದಲ್ಲಿದ್ದ ಭದ್ರತಾ ವೈಫಲ್ಯಗಳ ಕುರಿತು ತನಿಖಾ ಸಂಸ್ಥೆಗಳು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿವೆ.
ದಾಂಪತ್ಯ ಜೀವನದಲ್ಲೂ ಬಿರುಗಾಳಿ
ಒಂದೆಡೆ ಕಾನೂನು ಹೋರಾಟದ ಸುಳಿಯಲ್ಲಿ ಸಿಲುಕಿರುವ ವಿಜಯ್, ವೈಯಕ್ತಿಕ ಜೀವನದಲ್ಲೂ ಭಾರಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಬರೋಬ್ಬರಿ 26 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಅವರ ಪತ್ನಿ ಸಂಗೀತ ಸೊರ್ನಲಿಂಗಂ ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಫೆಬ್ರವರಿ 27ರಂದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವ ಅವರು, ನಟನಿಗೆ ಮತ್ತೊಬ್ಬ ನಟಿಯೊಂದಿಗೆ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತಾವು ಈಗ ವಾಸವಿರುವ ಮನೆಯಲ್ಲೇ ಮುಂದುವರಿಯಲು ಅನುಮತಿ ನೀಡಬೇಕೆಂದು ಕೋರಿ ಅವರು ಮಧ್ಯಂತರ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಈ ದಂಪತಿಗೆ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

