
ಸಂಗೀತ ಲೋಕದ ಕರಾಳ ಮುಖ ಬಿಚ್ಚಿಟ್ಟ ಶ್ರೇಯಾ ಘೋಷಾಲ್
ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು 2013ಕ್ಕೂ ಮೊದಲು ಸಂಗೀತ ಉದ್ಯಮದಲ್ಲಿದ್ದ ಶೋಷಣೆ ಮತ್ತು ರಾಯಲ್ಟಿ ಹಕ್ಕಿನ ಹೋರಾಟದ ಬಗ್ಗೆ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದು ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದೆ. ರಾಜ್ ಶಮಾನಿ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಅವರು, 2013ಕ್ಕೂ ಮೊದಲು ಹಿನ್ನೆಲೆ ಗಾಯಕರು ಎದುರಿಸುತ್ತಿದ್ದ ಅವಮಾನ ಮತ್ತು ಸಂಭಾವನೆ ವಂಚನೆಯ ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮನವಾ ಲಾಗೆ, ತೇರಿ ಮೇರಿ, ಬರ್ಸೋ ರೇ ನಂತಹ ಸೂಪರ್ ಹಿಟ್ ಹಾಡುಗಳ ಹಿಂದೆ ಗಾಯಕರ ದೊಡ್ಡ ಹೋರಾಟವೇ ಇತ್ತು ಎಂಬ ಸತ್ಯ ಈಗ ಹೊರಬಿದ್ದಿದೆ.
2013ಕ್ಕೂ ಹಿಂದಿನ ಕಾಲಘಟ್ಟದಲ್ಲಿ ಸಂಗೀತ ಉದ್ಯಮವು ಗಾಯಕರ ಪಾಲಿಗೆ ಅತ್ಯಂತ ಶೋಷಣೆಯಿಂದ ಕೂಡಿತ್ತು ಎಂದು ಶ್ರೇಯಾ ವಿವರಿಸಿದ್ದಾರೆ. ಅಂದು ಗಾಯಕರಿಗೆ ಯಾವುದೇ ಅಧಿಕೃತ ಒಪ್ಪಂದ ಅಥವಾ ಕರಾರುಗಳಿರಲಿಲ್ಲ. ಎಷ್ಟೇ ದೊಡ್ಡ ಹಿಟ್ ಹಾಡುಗಳನ್ನು ನೀಡಿದರೂ ಅವರಿಗೆ ಸಿಗಬೇಕಾದ ಕ್ರೆಡಿಟ್ ಮತ್ತು ಸರಿಯಾದ ಸಂಭಾವನೆ ಸಿಗುತ್ತಿರಲಿಲ್ಲ. ಸಂಪೂರ್ಣ ಲಾಭವು ಕೇವಲ ಮ್ಯೂಸಿಕ್ ಲೇಬಲ್ ಮತ್ತು ನಿರ್ಮಾಪಕರ ಪಾಲಾಗುತ್ತಿತ್ತು. ಕಲಾವಿದರಿಗೆ ಸಿಗಬೇಕಾದ 'ರಾಯಲ್ಟಿ' ಹಕ್ಕಿನ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಈ ಅನಿಶ್ಚಿತತೆಯಿಂದಾಗಿ ಅನೇಕ ಪ್ರತಿಭಾವಂತ ಕಲಾವಿದರು ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೇಯಾ ಘೋಷಲ್ ಅವರ ಸಂದರ್ಶನ
ಈ ಅನ್ಯಾಯದ ವಿರುದ್ಧ 2013ರಲ್ಲಿ ಗಾಯಕರೆಲ್ಲರೂ ಒಗ್ಗೂಡಿ ಧ್ವನಿ ಎತ್ತಿದ್ದು ಒಂದು ಐತಿಹಾಸಿಕ ಬದಲಾವಣೆಗೆ ಕಾರಣವಾಯಿತು. ಈ ರಾಯಲ್ಟಿ ಹಕ್ಕಿನ ಹೋರಾಟವು ಅಂದು ಚಿತ್ರರಂಗವನ್ನೇ ಇಬ್ಬಾಗ ಮಾಡಿತ್ತು. ಹಕ್ಕುಗಳಿಗಾಗಿ ಹೋರಾಡಿದ ಕಲಾವಿದರು ಅನೇಕ ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು ಮತ್ತು ವೃತ್ತಿಜೀವನದಲ್ಲಿ ಹಿನ್ನಡೆ ಅನುಭವಿಸಿದರು. ಆ ಸಮಯವು ಅತ್ಯಂತ ನೋವಿನಿಂದ ಕೂಡಿದ್ದರೂ, ಗಾಯಕರ ಅಸ್ತಿತ್ವಕ್ಕಾಗಿ ಅದು ಅನಿವಾರ್ಯವಾಗಿತ್ತು. ಇದೇ ಸಮಯದಲ್ಲಿ 'ಆಶಿಕಿ 2' ನಂತಹ ಸಿನಿಮಾಗಳು ಬಂದು ಗಾಯಕರಿಗೆ ಹೊಸ ಆಶಾಕಿರಣ ನೀಡಿದವು ಎಂದು ಶ್ರೇಯಾ ವಿವರಿಸಿದರು.
ಇಂದು ಪರಿಸ್ಥಿತಿ ಮೊದಲಿನಂತಿಲ್ಲ, ಕಲಾವಿದರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದೆ. ಸ್ವತಂತ್ರವಾಗಿ ಬೆಳೆಯುತ್ತಿರುವ ಗಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೇಯಾ, ಈಗಿನ ಕಾಲದಲ್ಲಿ ಪಾರದರ್ಶಕತೆ ಹೆಚ್ಚುತ್ತಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ಯಾವುದೇ ಒಬ್ಬ ಸೃಜನಶೀಲ ಕಲಾವಿದನಿಗೆ ಗೌರವ ಮತ್ತು ನ್ಯಾಯಯುತ ಸಂಭಾವನೆ ಸಿಗುವುದು ಅವರ ಹಕ್ಕು ಎಂದು ಶ್ರೇಯಾ ಘೋಷಾಲ್ ತಿಳಿಸಿದ್ದಾರೆ.
ಗಾಯಕಿ ಶ್ರೇಯಾ ಘೋಷಾಲ್ ಅವರ ಪ್ರತಿಭೆ ಮೊದಲು ಹೊರಬಂದಿದ್ದು ಝೀ ಟಿವಿಯ ಪ್ರಸಿದ್ಧ ರಿಯಾಲಿಟಿ ಶೋ 'ಸರಿಗಮಪ' ಮೂಲಕ. 1996ರಲ್ಲಿ ಇದರ ಚಿಲ್ಡ್ರನ್ ಸ್ಪೆಷಲ್ ಎಪಿಸೋಡ್ನಲ್ಲಿ ವಿಜೇತರಾದ ಇವರು, ನಂತರ 2000ರಲ್ಲಿ ನಡೆದ ಸೀಸನ್ನಲ್ಲೂ ಪ್ರಶಸ್ತಿ ಗೆದ್ದರು. ಆ ಕಾರ್ಯಕ್ರಮದಲ್ಲಿ ಶ್ರೇಯಾ ಅವರ ಗಾಯನಕ್ಕೆ ಮಾರುಹೋದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ತಮ್ಮ 'ದೇವದಾಸ್' ಚಿತ್ರದ ಮೂಲಕ ಬಾಲಿವುಡ್ಗೆ ದೊಡ್ಡ ಬ್ರೇಕ್ ನೀಡಿದರು. ಈ ಚಿತ್ರದ 'ಬೈರಿ ಪಿಯಾ' ಮತ್ತು 'ಡೋಲಾ ರೇ ಡೋಲಾ' ಹಾಡುಗಳು ಶ್ರೇಯಾ ಅವರಿಗೆ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟವು.
ಕನ್ನಡ ಚಿತ್ರರಂಗದೊಂದಿಗೆ ಅನುಬಂಧ
ಶ್ರೇಯಾ ಘೋಷಾಲ್ ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಇಲ್ಲಿಯವರೆಗೆ ಅವರು 300ಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿದ್ದಾರೆ. 'ಮುಂಗಾರು ಮಳೆ' ಚಿತ್ರದ "ಅರಳುತ್ತಿರು ಜೀವದ ಗೆಳೆಯ", 'ಮಿಲನ' ಚಿತ್ರದ "ಮಳೆ ನಿಂತು ಹೋದ ಮೇಲೆ", 'ಸಂಜು ವೆಡ್ಸ್ ಗೀತಾ' ಚಿತ್ರದ "ಗಗನವೇ ಬಾಗಿ", ಮತ್ತು 'ರಾಬರ್ಟ್' ಚಿತ್ರದ "ಕಣ್ಣು ಹೊಡಿಯಾಕ" ಅವರ ಕೆಲವು ಸಾರ್ವಕಾಲಿಕ ಹಿಟ್ ಹಾಡುಗಳು. ಅಷ್ಟೇ ಅಲ್ಲದೆ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆಯಲ್ಲಿ ಇವರು ಹಾಡಿದ ಹಲವಾರು ಹಾಡುಗಳು ಕನ್ನಡಿಗರ ನೆಚ್ಚಿನ ಮೆಲೋಡಿಗಳಾಗಿವೆ.

