
ಪೆದ್ದಿ ಚಿತ್ರದ ಗೆಲುವಿನ ನಂತರ ಬಾಲಿವುಡ್ ಮತ್ತು ಪ್ರಾದೇಶಿಕ ನಿರ್ದೇಶಕರತ್ತ ಮುಖ ಮಾಡಿರುವ ರಾಮ್ ಚರಣ್,
ಪೆದ್ದಿ ಗೆಲುವಿನ ಬೆನ್ನಲ್ಲೇ ಪ್ಯಾನ್ ಇಂಡಿಯಾ ಚಿತ್ರಗಳಿಗೆ ರಾಮ್ ಚರಣ್ ಕಣ್ಣು
ಪೆದ್ದಿ ಚಿತ್ರದ ಭರ್ಜರಿ ಗೆಲುವಿನ ನಂತರ ನಟ ರಾಮ್ ಚರಣ್ ಬಾಲಿವುಡ್ ಹಾಗೂ ಪ್ರಾದೇಶಿಕ ನಿರ್ದೇಶಕರ ಜೊತೆ ಕೆಲಸ ಮಾಡಲು ಸಜ್ಜಾಗಿದ್ದು, ತಾವು ಕೇವಲ ಭಾರತೀಯ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.
ಬುಚ್ಚಿ ಬಾಬು ಸನಾ ನಿರ್ದೇಶನದ ತಮ್ಮ ಇತ್ತೀಚಿನ ಕ್ರೀಡಾ ಆಧಾರಿತ ಆಕ್ಷನ್ ಡ್ರಾಮಾ 'ಪೆದ್ದಿ' ಚಿತ್ರದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಟಾಲಿವುಡ್ ಸ್ಟಾರ್ ರಾಮ್ ಚರಣ್, ಇದೀಗ ಭಾರತದಾದ್ಯಂತ ಇರುವ ವಿವಿಧ ಪ್ರಾದೇಶಿಕ ಮತ್ತು ಬಾಲಿವುಡ್ ನಿರ್ದೇಶಕರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸಿನಿಮಾಗಳನ್ನು ಭಾಷೆಯ ಆಧಾರದ ಮೇಲೆ ವಿಂಗಡಿಸಲು ಇಷ್ಟಪಡುವುದಿಲ್ಲ ಮತ್ತು ಇಡೀ ಚಿತ್ರರಂಗವನ್ನು ಒಂದೇ ಉದ್ಯಮವಾಗಿ ನೋಡಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಮಗೆ ಹಿಂದಿ ಸಿನಿಮಾ ಅಥವಾ ತೆಲುಗು ಸಿನಿಮಾ ಎಂಬ ಭೇದ ಗೊತ್ತಿಲ್ಲ ಎಂದು ಹೇಳಿರುವ ಅವರು, ತಾವು ಮಾಡುತ್ತಿರುವುದು ಕೇವಲ ಭಾರತೀಯ ಸಿನಿಮಾ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಮುಂಬೈ, ಬಂಗಾಳ ಹಾಗೂ ತಮಿಳುನಾಡಿನ ನಿರ್ದೇಶಕರ ಜೊತೆ ಸೇರಿ ಚಿತ್ರ ಮಾಡಲು ಇಚ್ಛಿಸುವುದಾಗಿ ರಾಮ್ ಚರಣ್ ಬಹಿರಂಗಪಡಿಸಿದ್ದಾರೆ. ಭಾಷೆಯ ಗಡಿಗಳನ್ನು ಮೀರಿ ಎಲ್ಲರೊಂದಿಗೂ ಕೆಲಸ ಮಾಡಲು ತಾವು ಸಿದ್ಧರಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ 2013 ರಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ 'ಜಂಜೀರ್' ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದ ಚರಣ್, ಆ ನಂತರ ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ 'ಯೆಂಟಮ್ಮ' ಹಾಡಿನಲ್ಲಿ ವಿಶೇಷವಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಇದೀಗ ಜಾಹ್ನವಿ ಕಪೂರ್ ಹಾಗೂ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಪೆದ್ದಿ' ಚಿತ್ರದ ಯಶಸ್ಸಿನ ನಂತರ, ರಾಮ್ ಚರಣ್ ತಮ್ಮ ಸಿನಿಮೀಯ ಪಯಣವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದಾರೆ.

